ತೀರ್ಥಹಳ್ಳಿಯ ಮೇಗರವಳ್ಳಿಯಲ್ಲಿ ವಿದೇಶಿ ಬೆಕ್ಕು ಮತ್ತು ನಾಡಿನ ಬೆಕ್ಕಿನ ನಡುವಿನ ಜಗಳ, ಅವುಗಳ ಮಾಲೀಕರ ನಡುವೆ ದೊಡ್ಡ ಹೊಡೆದಾಟಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಎರಡೂ ಕುಟುಂಬಗಳು ಪರಸ್ಪರ ದೂರು ದಾಖಲಿಸಿ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ವಿದೇಶಿ ಬೆಕ್ಕು, ನಾಡಿನ ಬೆಕ್ಕಿನ ಚೆಲ್ಲಾಟ
ಮನೆಯವರಿಗೆ ಪೀಕಲಾಟ
ತೀರ್ಥಹಳ್ಳಿ(ಶಿವಮೊಗ್ಗ (ಜೂ.4): ಬೆಕ್ಕುಗಳ ನಡುವೆ ಜಗಳವಾಗಿದ್ದಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಮಂಗಳವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದಿದೆ.
ನಾಗಪಾತ್ರಿ ರಾಜಶೇಖರ್(Nagapatri Rajashekhar) ಅವರಿಗೆ ಸೇರಿದ್ದ ವಿದೇಶಿ ಬೆಕ್ಕಿಗೆ ನಾಗರಾಜ ಅವರ ಮನೆಯ ಬೆಕ್ಕು ಕಚ್ಚಿದ ವಿಚಾರದಲ್ಲಿ ಎರಡು ಮನೆಯವರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿದೆ. ಘಟನೆಯಲ್ಲಿ ನಾಗಪಾತ್ರಿ ರಾಜಶೇಖರ್ ಮತ್ತು ನೆರೆಮನೆಯ ಮೇಘನಾ ಎಂಬ ಯುವತಿಗೆ ಪೆಟ್ಟು ಬಿದ್ದಿದ್ದು ಇಬ್ಬರನ್ನೂ ಪಟ್ಟಣದ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ 20 ಜನರ ವಿರುದ್ಧ ದೂರು ದಾಖಲಾಗಿದೆ.
ನಾಗಪಾತ್ರಿ ರಾಜಶೇಖರ ಅವರು 16 ಜನರ ವಿರುದ್ಧ ದೂರು ನೀಡಿದ್ದಾರೆ. ಇದರ ಪ್ರತಿಯಾಗಿ ನಾಗರಾಜ ಅವರೂ 4 ಮಂದಿ ವಿರುದ್ಧ ದೂರು ನೀಡಿದ್ದಾರೆ. ಘಟನೆ ಸಂಬಂಧ ನಾಗರಾಜ ಎಂಬುವವರನ್ನು ಪೊಲೀಸರು ಬಂಧಿಸಿದ್ದು ಉಳಿದವರು ತಪ್ಪಿಸಿಕೊಂಡಿದ್ದಾರೆ. ಘಟನೆ ಸಂಬಂಧ 2 ಮನೆಯವರ ವಿರುದ್ಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


