ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ, ನೀರಿನ ಮಟ್ಟದ ಬಗ್ಗೆ ಮಾಹಿತಿ ಪಡೆದರು. ಆರಂಭದಲ್ಲಿ ಮಳೆ ಕೊರತೆಯಿಂದ ಆತಂಕವಿದ್ದರೂ, ಇತ್ತೀಚಿನ ಉತ್ತಮ ಮಳೆಯಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದ ಅವರು, ಕೊಡಗಿನಲ್ಲಿನ ಅತಿವೃಷ್ಟಿಯ ಸಂಕಷ್ಟಗಳ ಬಗ್ಗೆಯೂ ಗಮನ ಸೆಳೆದರು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.05): ರಾಜ್ಯ ಸರ್ಕಾರದಿಂದ ತುರ್ತಾಗಿ ನೇಮಿಸಲಾದ ಬರ ಹಾಗೂ ನೆರೆ ವೀಕ್ಷಣೆಗೆ ಕೊಡಗು ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಕೊಡಗು ಜಿಲ್ಲೆಯ ಏಕೈಕ ಜಲಾಶಯ ಹಾರಂಗಿಯನ್ನು ವೀಕ್ಷಿಸಿದರು. ನಂತರ ಮಾತನಾಡಿ, ಕಾವೇರಿ ತುಂಬಿದರೆ ಮಂಡ್ಯದಿಂದ ತಮಿಳುನಾಡಿನವರೆಗೂ ಸಮೃದ್ಧಿ. ಆದರೆ, ಕಳೆದ 15 ದಿನಗಳ ಹಿಂದಿನ ಸ್ಥಿತಿ ಆತಂಕಕಾರಿ ಆಗಿದ್ದು, ಇದೀಗ ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನಲ್ಲಿರುವ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಎಷ್ಟು ನೀರಿನ ಸಂಗ್ರಹವಿದೆ, ಎಷ್ಟು ಸಂಗ್ರಹವಾಗಬೇಕಾಗಿತ್ತು. ಎಷ್ಟು ನೀರನ್ನು ಹೊರಗೆ ಹರಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಜಲಾಶಯದಲ್ಲಿಯೇ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಒಂದು ವಾರದ ಹಿಂದೆ ಮಳೆಯ ಪರಿಸ್ಥಿತಿ ನೋಡಿದರೆ ಆತಂಕ ಪಡುವಂತೆ ಇತ್ತು. ಕರ್ನಾಟಕದ ಅರ್ಧ ಭಾಗಕ್ಕೆ ನೀರುಣಿಸುವ ಕಾವೇರಿ ಮಾತೆ ಒಡಲು ಇದು. ಜನರ ಬಾಯಾರಿಕೆಯಿಂದ ಹಿಡಿದು ಅನ್ನ ಆಹಾರವನ್ನು ಕೊಡುವುದು ಕಾವೇರಿ. ಆದರೆ ಕುಡಿಯುವುದಕ್ಕೂ ನೀರಿಲ್ಲ ಎನ್ನುವ ಸ್ಥಿತಿ ಇತ್ತು. ಆದರೆ ಕಳೆದ ಒಂದು ಹತ್ತು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆಆರ್ ಎಸ್ ಜಲಾಶಯಕ್ಕೆ ಇದುವರೆಗೆ 104 ಅಡಿ ತುಂಬಿದೆ ಅಷ್ಟೇ. ಕೆ ಆರ್ ಎಸ್ ತುಂಬಲು ಇನ್ನು 20 ಅಡಿ ತುಂಬಬೇಕು. ಕಾವೇರಿ ಮಾತೆ ಮುನಿಯದೆ ಇರುವಂತೆ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.
ತೀವ್ರ ಮಳೆಯಾದರೆ ಕೆಳಗಿನವರಿಗೆ ಸಂಭ್ರಮ, ಕೊಡಗಿನವರಿಗಲ್ಲ
ನಾವು ಸಚಿವರಾದ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾದಂತೆ ನಾನು ಬರ ಮತ್ತು ನೆರೆ ವೀಕ್ಷಣೆಗೆ ಬಂದಿದ್ದೇನೆ. ಆದರೆ ಸದ್ಯ ಕೊಡಗಿನಲ್ಲಿ ಉತ್ತಮ ಮಳೆ ಆಗಿದೆ. ತಡವಾಗಿ ಮಾನ್ಸೂನ್ ಆರಂಭವಾಯಿತು, ಇದರಿಂದ ಒಂದಷ್ಟು ಸಮಸ್ಯೆಯೂ ಆಗಿದೆ. ಇದಕ್ಕಾಗಿಯೇ ಸಿಎಂ ಸೂಚನೆಯಂತೆ ನಾನು ಸಚಿವನಾಗುತ್ತಿದ್ದಂತೆ ಕೊಡಗು ಜಿಲ್ಲೆಗೆ ಬಂದಿದ್ದೇನೆ. ಕಾವೇರಿ ತುಂಬಿದರೆ ಮಂಡ್ಯದಿಂದ ಹಿಡಿದು ತಮಿಳುನಾಡಿನವರೆಗೆ ಸಮೃದ್ಧಿ ಇರುತ್ತದೆ. ತೀವ್ರ ಮಳೆಯಾದರೆ ತಳಭಾಗದಲ್ಲಿ ಇರುವ ಸಂಭ್ರಮ ಕೊಡಗಿನಲ್ಲಿ ಇರುವುದಿಲ್ಲ. ಇಲ್ಲಿ ಆ ಮಳೆಯ ಸಂಕಷ್ಟವನ್ನು ಇಲ್ಲಿನ ಜನರು ಅನುಭವಿಸುತ್ತಾರೆ. ಇಲ್ಲಿಗೆ ಮೂಲಭೂತ ಸೌಕರ್ಯಕ್ಕೆ ತೀವ್ರ ಹಾನಿಯಾಗುತ್ತದೆ. ಇದರ ವರದಿಯನ್ನು ಡಿಸಿಎಂ ಆಗಿರುವ ಕಂದಾಯ ಸಚಿವರಿಗೆ ನೀಡುತ್ತೇನೆ ಎಂದು ಕೊಡಗಿನ ಹಾರಂಗಿಯಲ್ಲಿ ಸಚಿವ ನರೇಂದ್ರ ಸ್ವಾಮಿ ಹೇಳಿದ್ದಾರೆ.
ಮೂಲ ಸಮಸ್ಯೆ ಪರಿಹಾರಕ್ಕೆ ಕೈಹಾಕಿದ ಸಚಿವರು:
ಇನ್ನು ಸಚಿವರಾಗಿ ಕೊಡಗು ಜಿಲ್ಲೆಗೆ ನೆರೆ-ಬರ ವೀಕ್ಷಣೆಗೆ ಆಗಮಿಸಿದ ಮೊದಲ ಭೇಟಿಯಲ್ಲೇ ಸಚಿವ ನರೇಂದ್ರಸ್ವಾಮಿ ಅವರು, ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದರೆ ಗುಡ್ಡ ಕುಸಿತದಂತಹ ಭೀತಿ, ರಸ್ತೆ ಸಂಪರ್ಕಗಳ ಕಡಿತ, ಮನೆ ಕುಸಿತ ಹಾಗೂ ನೆರೆಯಿಂದಾಗುವ ಇತರೆ ಹಾನಿಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಮಳೆಯಿಂದ ಜನರು ಅನುಭವಿಸುವ ಸಮಸ್ಯೆ ಗುರುತಿಸಿ ಪರಿಹಾರ ಕಾರ್ಯ ಕೈಗೊಳ್ಳುವ ಭವರಸೆ ನೀಡಿದ್ದು, ಸ್ಥಳೀಯರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.


