ಕೊಪ್ಪಳ ಜಿಲ್ಲೆಯ ಕುಕನೂರು ಬಳಿ ಪೈಪ್ಲೈನ್ ಕಾಲುವೆಯಲ್ಲಿ ಎರಡು ಕೊಳೆತ ಮತ್ತು ಸುಟ್ಟ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ರುದ್ರೇಶ್ ಗಂಗಾವತಿ ಮತ್ತು ರವಿ ರಾಮಣ್ಣ ತಟ್ಟಿ ಎಂದು ಗುರುತಿಸಲಾಗಿದ್ದು, ಪೊಲೀಸರು ಇದು ಕೊಲೆ ಎಂದು ಶಂಕಿಸಿ ತನಿಖೆ ನಡೆಸುತ್ತಿದ್ದಾರೆ.
ಕೊಪ್ಪಳ: ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಸಮೀಪ ಭೀಕರ ಘಟನೆ ಬೆಳಕಿಗೆ ಬಂದಿದ್ದು, ಕೊಳೆತ ಹಾಗೂ ಸುಟ್ಟ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕೊಪ್ಪಳ ರಸ್ತೆಯ ಪಕ್ಕದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಪೈಪ್ಲೈನ್ ಅಳವಡಿಸಲು ತೋಡಲಾಗಿದ್ದ ಕಾಲುವೆಯಲ್ಲಿ ಈ ಮೃತದೇಹಗಳು ಪತ್ತೆಯಾಗಿವೆ. ಸ್ಥಳೀಯರು ದುರ್ಗಂಧ ಬರುತ್ತಿರುವುದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ, ಕಾಲುವೆಯೊಳಗೆ ಕೊಳೆತ ಸ್ಥಿತಿಯಲ್ಲಿದ್ದ ಎರಡು ಶವಗಳು ಕಂಡುಬಂದವು. ತಕ್ಷಣವೇ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಯಿತು.
ನಾಲ್ಕು ರಿಂದ ಐದು ದಿನಗಳ ಹಿಂದೆ ಈ ಇಬ್ಬರನ್ನು ಹ*ತ್ಯೆ ಮಾಡಿರುವ ಶಂಕೆ
ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು ನಾಲ್ಕು ರಿಂದ ಐದು ದಿನಗಳ ಹಿಂದೆ ಈ ಇಬ್ಬರನ್ನು ಹ*ತ್ಯೆ ಮಾಡಿ, ಬಳಿಕ ಶವಗಳನ್ನು ಇಲ್ಲಿ ತಂದು ಎಸೆದು ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದು, ಕೆಲವು ಭಾಗಗಳಲ್ಲಿ ಸುಟ್ಟ ಗುರುತುಗಳೂ ಕಾಣಿಸಿಕೊಂಡಿರುವುದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ.
ಮೃತರ ಗುರುತು ಪತ್ತೆ
ಪರಿಶೀಲನೆ ಬಳಿಕ, ಮೃತರನ್ನು ಕುಕನೂರು ಪಟ್ಟಣದ ನಿವಾಸಿಗಳಾದ ರುದ್ರೇಶ್ ಗಂಗಾವತಿ (23) ಮತ್ತು ರವಿ ರಾಮಣ್ಣ ತಟ್ಟಿ (32) ಎಂದು ಗುರುತಿಸಲಾಗಿದೆ. ಇವರಿಬ್ಬರಿಗೂ ಏನು ಕಾರಣಕ್ಕೆ ಹ*ತ್ಯೆ ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘಟನಾ ಸ್ಥಳಕ್ಕೆ ಕುಕನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು, ಹತ್ಯೆಗೆ ಕಾರಣಗಳೇನು? ಆರೋಪಿಗಳು ಯಾರು? ಎಂಬುದನ್ನು ಪತ್ತೆಹಚ್ಚಲು ವಿವಿಧ ಕೋಣಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಈ ದಾರುಣ ಘಟನೆ ಪ್ರದೇಶದ ಜನರಲ್ಲಿ ಭಯ ಹಾಗೂ ಆಕ್ರೋಶ ಉಂಟುಮಾಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


