Asianet Suvarna News Asianet Suvarna News

ಮಂಗಳೂರು: ಡೆಂಘೀ ಆಯ್ತು; ಈಗ ಇಲಿಜ್ವರ, ಹುಷಾರು..!

ಡೆಂಘೀ ಜ್ವರದಿಂದ ಜನ ತತ್ತರಿಸುತ್ತಿದ್ದರೆ ಇದೀಗ ಇಲಿ ಜ್ವರ ಹರಡುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಮಂಗಳೂರು ನಗರವೊಂದರಲ್ಲೇ ಜುಲೈ ತಿಂಗಳಲ್ಲಿ ಇಲಿಜ್ವರದ 17 ಪ್ರಕರಣಗಳು ದಾಖಲಾಗಿವೆ. ವ್ಯಾಪಕವಾಗಿ ಹರಡುತ್ತಿರುವುದರಿಂದ ಎಚ್ಚರಿಕೆ ಅಗತ್ಯ ಎಂದು ಜಿಲ್ಲಾ ರೋಗ ಸರ್ವೇಕ್ಷೇಣಾಧಿಕಾರಿ ಡಾ. ಪ್ರವೀಣ್‌ ಕುಮಾರ್‌ ಸಿ.ಎಚ್‌. ಎಚ್ಚರಿಸಿದ್ದಾರೆ.

17 Rat fever cases found in Mangalore
Author
Bangalore, First Published Sep 5, 2019, 1:59 PM IST

ಮಂಗಳೂರು(ಸೆ.05): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲಿ ಜ್ವರ (ಲೆಪ್ಟೋಸ್ಪೈರೋಸಿಸ್‌) ಪತ್ತೆ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ರೋಗ ಸರ್ವೇಕ್ಷೇಣಾಧಿಕಾರಿ ಡಾ. ಪ್ರವೀಣ್‌ ಕುಮಾರ್‌ ಸಿ.ಎಚ್‌. ಎಚ್ಚರಿಸಿದ್ದಾರೆ.

ಮಂಗಳೂರು ನಗರವೊಂದರಲ್ಲೇ ಜುಲೈ ತಿಂಗಳಲ್ಲಿ ಇಲಿಜ್ವರದ 17 ಪ್ರಕರಣಗಳು ದಾಖಲಾಗಿವೆ. ಈ ಸೋಂಕು ಒಂದೇ ನಿಗದಿತ ಸ್ಥಳದಿಂದ ವರದಿಯಾಗುತ್ತಿಲ್ಲ. ಬದಲಾಗಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಇಲಿಜ್ವರ ಲೆಪ್ಟೋಸ್ಪೈರ ಎಂಬ ಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ರೋಗ. ಈ ರೋಗಾಣು ಪ್ರಾಣಿಗಳ ಮೂತ್ರದಲ್ಲಿದ್ದು, ಇಂತಹ ಸೋಂಕು ದೇಹವನ್ನು ಸೇರಿ ಮನುಷ್ಯರಿಗೆ ಕಾಯಿಲೆ ಹರಡುತ್ತದೆ. ಕ್ರಮಬದ್ಧವಾದ ಚಿಕಿತ್ಸೆಯಿಂದ ಈ ಸೋಂಕನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಹೃದಯ, ಶ್ವಾಸಕೋಶ, ಮೂತ್ರಪಿಂಡ ಸೋಂಕು ಬಹಳ ವಿರಳವಾಗಿದ್ದರೂ ಅವುಗಳಲ್ಲಿ ಸೋಂಕು ಕಾಣಿಸಿಕೊಂಡರೆ ತೀವ್ರ ವಿಳಂಬದ ಚಿಕಿತ್ಸೆಯಿಂದ ದುಷ್ಪರಿಣಾಮವಾಗಬಹುದು ಎಂದವರು ತಿಳಿಸಿದ್ದಾರೆ.

ಏನೇನು ಎಚ್ಚರ ವಹಿಸಬೇಕು?:

ಸ್ನಾನ ಮತ್ತು ಕುಡಿಯಲು ಉಪಯೋಗಿಸುವ ನೀರಿನಲ್ಲಿ ಪ್ರಾಣಿಗಳ ಮೂತ್ರ ಸೇರದಂತೆ ನೀರಿನ ಶೇಖರಣಾ ತೊಟ್ಟಿಗಳಿಗೆ ಭದ್ರವಾಗಿ ಮುಚ್ಚಳ ಹಾಕಬೇಕು. ಕೊಳ, ಹೊಂಡ ನಿಂತ ನೀರಿನಲ್ಲಿ ಸ್ನಾನ ಮಾಡಬಾರದು ಹಾಗೂ ಸೇವಿಸಬಾರದು. ಆಹಾರ ಪದಾರ್ಥಗಳು, ಹಣ್ಣು ತರಕಾರಿಗಳು ಇಲಿಗಳಿಗೆ ಸಿಗದಂತೆ ದಾಸ್ತಾನು ಮಾಡಬೇಕು. ಮನೆ, ಗೋದಾಮು, ಅಂಗಡಿ, ಚರಂಡಿ, ಹೊಲ, ಗದ್ದೆ, ಪರಿಸರದಲ್ಲಿ ಇಲಿಗಳು ವಾಸಮಾಡದಂತೆ ಹಾಗೂ ಸಂತಾನ ವೃದ್ಧಿಯಾಗದಂತೆ ಬಿಲ, ಕಿಂಡಿಗಳನ್ನು ಮುಚ್ಚಬೇಕು. ಪರಿಸರ ಸ್ವಚ್ಛವಾಗಿದ್ದರೆ ರೋಗ ಹರಡುವ ಸಾಧ್ಯೆಗಳು ಕಡಿಮೆ. ಪಾದರಕ್ಷೆ ಧರಿಸಬೇಕು ಎಂದು ತಿಳಿಸಿದ್ದಾರೆ.

ಮಂಗಳೂರು: ಡೆಂಘೀ ಜ್ವರಕ್ಕೆ ಯುವಕ ಬಲಿ

ಕಲುಷಿತ ನೀರು ಮನುಷ್ಯರ ದೇಹ ಸಂಪರ್ಕ ಹೊಂದಿದಾಗ ಶರೀರದಲ್ಲಿ ಇರಬಹುದಾದ ಗಾಯಗಳ ಮೂಲಕ ರೋಗಾಣು ದೇಹವನ್ನು ಪ್ರವೇಶಿಸುತ್ತದೆ. ಅಲ್ಲದೆ ಬಾಯಿ, ಮೂಗು ಮತ್ತು ಕಣ್ಣುಗಳ ಒಳಭಾಗದ ಮೂಲಕವೂ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇದೆ. ರೋಗಾಣು ದೇಹ ಸೇರಿದ 4ರಿಂದ 19 ದಿನಗಳಲ್ಲಿ ಇಲಿಜ್ವರದ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಎಚ್‌1ಎನ್‌1 ಭಯ ಬೇಡ:

ಜಿಲ್ಲೆಯಲ್ಲಿ ಎಚ್‌1ಎನ್‌1 ಕೂಡ ಜನಸಾಮಾನ್ಯರನ್ನು ಬಾಧಿಸುತ್ತಿದೆ. ಆದರೆ ಇದರ ಬಗ್ಗೆ ಭಯ ಅನಗತ್ಯ. ಬದಲಾಗಿ ಎಚ್ಚರ ಅಗತ್ಯ ಎಂದು ಡಾ. ಪ್ರವೀಣ್‌ ಕುಮಾರ್‌ ತಿಳಿಸಿದರು.

ಡೆಂಘೀ ಇಳಿಮುಖ:

ಕಳೆದ ಐದು ದಿನಗಳಿಂದ ಡೆಂಘೀ ರೋಗಕ್ಕೆ ಸಂಬಂಧಿಸಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. 2019ರ ಜನವರಿಯಿಂದ ಆಗಸ್ಟ್‌ವರೆಗೆ ಒಟ್ಟು 957 ಡೆಂಘೀ ಖಚಿತ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 1,341 ಮಲೇರಿಯಾ ಪ್ರಕರಣಗಳು ವರದಿಯಾಗಿವೆ ಎಂದು ಕೀಟಜನ್ಯ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್‌ ತಿಳಿಸಿದರು. ಜಿಲ್ಲೆಯಲ್ಲಿ ಪತ್ತೆಯಾದ ಡೆಂಘೀ ಪ್ರಕರಣಗಳಲ್ಲಿ ಶೇ.60ರಷ್ಟುಪಾಲಿಕೆ ವ್ಯಾಪ್ತಿಯಲ್ಲಿ ಕಂಡುಬಂದಿದ್ದರೆ, ಮಲೇರಿಯಾ ಪ್ರಕರಣಗಳಲ್ಲಿ ಶೇ. 90ರಷ್ಟುಮನಪಾ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ ಎಂದರು.

ಮಂಗಳೂರು: ಕಡಬ, ಪುತ್ತೂರಿನಲ್ಲಿ 95 ಡೆಂಘೀ ಪ್ರಕರಣ..!

ಇಲಿಜ್ವರ ಲಕ್ಷಣಗಳೇನು?

ಜ್ವರ, ಮಾಂಸ ಖಂಡಗಳ ನೋವು, ತಲೆನೋವು, ವಾಂತಿ ಬೇಧಿ ಮತ್ತು ಹೊಟ್ಟೆನೋವು, ಕೆಲವು ರೋಗಿಗಳಲ್ಲಿ ಪಿತ್ತ ಕಾಮಾಲೆ ಲಕ್ಷಣಗಳೂ ಕಂಡುಬರುವ ಸಾಧ್ಯತೆ ಇದೆ. ಬಾಯಿ, ಮೂಗು ರಕ್ತದಲ್ಲಿ ರಕ್ತಸ್ರಾವ ಆಗಬಹುದು. ಮೂತ್ರಪಿಂಡ ಸೋಂಕು ಉಂಟಾಗಿ ಮೂತ್ರ ವಿಸರ್ಜನೆ ಕಡಿಮೆಯಾಗಬಹುದು. ಹೃದಯದ ಸೋಂಕು ಉಂಟಾಗಬಹುದು.

Follow Us:
Download App:
  • android
  • ios