ಮಧ್ಯಪ್ರದೇಶದ ಇಂದೋರ್‌ನಲ್ಲಿ, ಏರ್‌ಬಿಎನ್‌ಬಿಗೆ ಪೆಂಟ್‌ಹೌಸ್‌ ಬಾಡಿಗೆ ನೀಡುವುದನ್ನು ವಿರೋಧಿಸಿದ್ದಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ವೊಬ್ಬರನ್ನು  ಕಾರು ಹತ್ತಿಸಿ ಕೊಲೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ತಂದೆ-ಮಗನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕಾರು ಹತ್ತಿಸಿ ಮಹಿಳೆ ಕೊಲೆ

ಇಂದೋರ್: ವಸತಿ ಸಂಕೀರ್ಣದಲ್ಲಿದ್ದ ಪೆಂಟ್‌ಹೌಸ್‌ನ್ನು ಏರ್ ಬಿಎನ್‌ಬಿಗೆ ಬಾಡಿಗೆ ನೀಡುವುದನ್ನು ವಿರೋಧಿಸಿದ್ದಕ್ಕೆ ಕಾರು ಹತ್ತಿಸಿ ಮಹಿಳೆಯ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಹಾಗೂ ಇಬ್ಬರು ಮಕ್ಕಳ ತಾಯಿಯಾಗಿರುವ ಶಂಪಾ ಪಾಂಡೆ ಅವರನ್ನು ಕಾರು ಹತ್ತಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬುಧವಾರ ರಾತ್ರಿ ವಾಹನ ಡಿಕ್ಕಿಯಾಗಿ ಅವರು ಸಾವನ್ನಪ್ಪಿದ್ದರು.

ಇಂದೋರ್‌ನ ಶಿವ ವಾಟಿಕಾ ಸ್ಮೃತಿ ಎನ್‌ಕ್ಲೇವ್‌ನಲ್ಲಿ ಘಟನೆ

ಇಂದೋರ್‌ನ ಶಿವ ವಾಟಿಕಾ ಸ್ಮೃತಿ ಎನ್‌ಕ್ಲೇವ್‌ನ ನಿವಾಸಿಗಳು, ಸುರಕ್ಷತಾ ಕಾರಣಗಳಿಂದಾಗಿ, ಕಟ್ಟಡದ ಏಳನೇ ಮಹಡಿಯಲ್ಲಿರುವ ಪೆಂಟ್‌ಹೌಸ್ ಅನ್ನು ಏರ್‌ಬಿಎನ್‌ಬಿಗೆ ನೀಡುವುದಕ್ಕೆ ಬಹಳ ಸಮಯದಿಂದ ವಿರೋಧ ವ್ಯಕ್ತಪಡಿಸಿದ್ದರು. ನಾವು ಎರಡು ತಿಂಗಳ ಹಿಂದೆ ಇಲ್ಲಿಗೆ ಸ್ಥಳಾಂತರಗೊಂಡೆವು ಮತ್ತು ಅಂದಿನಿಂದ ನಾವು ಇತರ ಮನೆ ಮಾಲೀಕರೊಂದಿಗೆ ವಸತಿ ಆಸ್ತಿಯನ್ನು ವ್ಯವಹಾರಕ್ಕಾಗಿ ಬಳಸುವುದರ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ. ಅಪರಿಚಿತರು ಕಟ್ಟಡದ ಒಳಗೆ ಮತ್ತು ಹೊರಗೆ ಬರುವುದರಿಂದ, ವಿಶೇಷವಾಗಿ ತಡರಾತ್ರಿಯಲ್ಲಿ ನಮಗೆ ಸುರಕ್ಷಿತ ಭಾವನೆ ಇಲ್ಲ ಎಂಬ ಕಾರಣಕ್ಕೆ ಇದ್ದನ್ನು ವಿರೋಧಿಸಲಾಗುತ್ತಿದೆ ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.

ಈ ದೀರ್ಘಕಾಲದ ವಿವಾದಕ್ಕೆ ಅಂತ್ಯ ಹಾಡುವ ಉದ್ದೇಶದೊಂದಿಗೆ ನಿವಾಸಿಗಳು ಭಾನುವಾರ ಪೆಂಟ್‌ಹೌಸ್‌ನ ಮಾಲೀಕ ಕುಲದೀಪ್ ಚೌಧರಿ ಅವರೊಂದಿಗೆ ಸಭೆ ನಡೆಸಿದ್ದಾರೆಂದು ವರದಿಯಾಗಿದೆ. ಆದರೆ, ಬುಧವಾರ, ಆಸ್ತಿಯನ್ನು ಮತ್ತೆ ಬಾಡಿಗೆಗೆ ನೀಡಿದಾಗ, ನಿವಾಸಿಗಳು ಪೆಂಟ್‌ಹೌಸ್‌ಗೆ ವಿದ್ಯುತ್ ಕಡಿತಗೊಳಿಸಲು ನಿರ್ಧರಿಸಿದರು. ಇದಕ್ಕೆ ಪ್ರತೀಕಾರವಾಗಿ, ಚೌಧರಿ ಎಲ್ಲರ ಮನೆಗೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದರು ಇದರ ಪರಿಣಾಮವಾಗಿ ಮಾತಿನ ಚಕಮಕಿ ಮತ್ತು ಪರಸ್ಪರ ನಿಂದನೆ ನಡೆದಿದೆ.

ಇದನ್ನೂ ಓದಿ: ರಕ್ಷಕನೇ ಭಕ್ಷಕನಾದಾಗ: ತನಗೆ ಪ್ರತಿವರ್ಷ ರಾಖಿ ಕಟ್ಟುತ್ತಿದ್ದ ವಿಧವೆಯನ್ನೇ ಕೊಂದ ಪಾಪಿ

ಕುಲದೀಪ್ ಚೌಧರಿ ತಮ್ಮ ಮಗನನ್ನು' ಆ ಜಾವೋ, ಆಜ್ ಇಂಕಾ ಮಾಮ್ಲಾ ಸೆಟಲ್ ಕರ್ನಾ ಹೈ ' (ಬಾ, ನಾವು ಇದನ್ನು ಇಂದು ಇತ್ಯರ್ಥಪಡಿಸಬೇಕು) ಎಂದು ಕರೆದಿದ್ದರು ಎಂದು ನಿವಾಸಿಯೊಬ್ಬರು ನೆನಪಿಸಿಕೊಂಡಿದ್ದಾರೆ. ಕುಲದೀಪ್ ಚೌಧರಿ ಅವರ ಮಗ ಮೋನಿಶ್ ಎಷ್ಟು ಆಕ್ರಮಣಕಾರಿಯಾಗಿದ್ದನೆಂದರೆ, ಅವನು ತನ್ನ ವಾಹನವನ್ನು ಜನರಿಗೆ ಡಿಕ್ಕಿ ಹೊಡೆದು ನಂತರ ಸೊಸಯಟಿಯ ದ್ವಾರಕ್ಕೂ ಡಿಕ್ಕಿ ಹೊಡೆದು ಅದನ್ನು ಮುರಿದು ಹೊರ ಹೋಗಿದ್ದಾನೆ.

ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವಂತೆ, ಕುಲ್‌ದೀಪ್ ಪುತ್ರ ಮೋನಿಶ್ ತನ್ನ ಸ್ವಿಫ್ಟ್ ಕಾರನ್ನು ಹೊರತೆಗೆದು ಭದ್ರತಾ ಸಿಬ್ಬಂದಿಯ ಪತ್ನಿಗೆ ಡಿಕ್ಕಿ ಹೊಡೆದನು, ಆಕೆ ನೆಲಕ್ಕೆ ಬಿದ್ದಾಗ ಜನರು ಆಕೆಗೆ ಎದ್ದು ಪಕ್ಕಕ್ಕೆ ಸರಿಯಲು ಸಹಾಯ ಮಾಡುತ್ತಿದ್ದಂತೆ, ಮೋನಿಶ್ ಕಾರನ್ನು ಮತ್ತೊಂದು ರೌಂಡ್ ತಿರುಗಿಸಿ ಟೆಕ್ಕಿ ಶಂಪಾ ಪಾಂಡೆಗೆ ಡಿಕ್ಕಿ ಹೊಡೆದು ಅವರ ಮೇಲೆ ಕಾರು ಚಲಾಯಿಸಿದ್ದಾನೆ. ಕೂಡಲೇ ಸಂಪಾ ಪಾಂಡೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಶಂಪಾಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ, ಅವರಿಗೆ ತಮ್ಮ ತಾಯಿ ಸತ್ತಿದ್ದಾರೆಂದು ತಿಳಿದಿಲ್ಲ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: 5 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಆಸ್ಪತ್ರೆ ಮೇಲಿಂದ ಬಿದ್ದು ಸಾವು

ಪೊಲೀಸರು ಇಬ್ಬರು ಆರೋಪಿಗಳಾದ ಕುಲ್‌ದೀಪ್ ಚೌಧರಿ ಮತ್ತು ಅವರ ಮಗ ಮೋನಿಶ್ ಅವರನ್ನು ಬಂಧಿಸಿದ್ದಾರೆ. ನಾವು ಈ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ತಂದೆ ಮತ್ತು ಮಗನನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಲಸುಡಿಯಾದ ಪಟ್ಟಣ ನಿರೀಕ್ಷಕ ತಾರೇಶ್ ಸೋನಿ ಹೇಳಿದ್ದಾರೆ. ಚೌಧರಿ ಕಟ್ಟಡದಲ್ಲಿ ಮೂರರಿಂದ ನಾಲ್ಕು ಪೆಂಟ್‌ಹೌಸ್‌ಗಳನ್ನು ಹೊಂದಿದ್ದು, ಅವುಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕಬೇಕೆಂದು ನೆರೆಹೊರೆಯವರ ಮನೆಯವರು ಒತ್ತಾಯಿಸಿದ್ದಾರೆ. ಇತ್ತ ಮಾಧ್ಯಮಗಳು ಏಳನೇ ಮಹಡಿಯಲ್ಲಿರುವ ಪೆಂಟ್‌ಹೌಸ್‌ಗೆ ಭೇಟಿ ನೀಡಿದಾಗ, ಹೊರಗಿನ ಟೆರೇಸ್‌ನಲ್ಲಿ ಖಾಲಿ ಬಿಯರ್ ಬಾಟಲಿಗಳು ಬಿದ್ದಿರುವುದು ಕಂಡು ಬಂದಿದೆ.