Asianet Suvarna News Asianet Suvarna News

ನಿರ್ಮಾಣ ಹಂತದಲ್ಲಿದ್ದ ಸೇತುವೆ ದಿಢೀರ್ ಕುಸಿತ : ದೊಡ್ಡ ಅನಾಹುತದಿಂದ ಕಾರ್ಮಿಕರು ಜಸ್ಟ್ ಮಿಸ್‌..!

ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ  ನಿರ್ಮಾಣ ಹಂತದಲ್ಲಿದ್ದ ಭಾರಿ ಗಾತ್ರ ಸೇತುವೆಯೊಂದು ದಿಢೀರ್ ಕುಸಿದು ಬಿದ್ದಿದ್ದು, ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಈ ದೊಡ್ಡ ಅನಾಹುತದಿಂದ ಕ್ಷಣದಲ್ಲಿ ಪಾರಾಗಿದ್ದಾರೆ.  

under construction bridge Collapsed in odisha workers just miss from the big disaster akb
Author
First Published Mar 16, 2023, 5:47 PM IST

ಭುವನೇಶ್ವರ: ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ  ನಿರ್ಮಾಣ ಹಂತದಲ್ಲಿದ್ದ ಭಾರಿ ಗಾತ್ರ ಸೇತುವೆಯೊಂದು ದಿಢೀರ್ ಕುಸಿದು ಬಿದ್ದಿದ್ದು, ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಈ ದೊಡ್ಡ ಅನಾಹುತದಿಂದ ಕ್ಷಣದಲ್ಲಿ ಪಾರಾಗಿದ್ದಾರೆ.  ವರದಿಗಳ ಪ್ರಕಾರ, ಗೋಬರಿ ನದಿಯ (Gobari river) ದಕ್ಷಿಣ ಭಾಗದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ಕೇಂದ್ರಪಾರ ಬಸ್ ಟರ್ಮಿನಲ್ ಅನ್ನು  ತಿನಿಮುಹಾನಿ (Tinimuhani) ನಗರದೊಂದಿಗೆ  ಸಂಪರ್ಕಿಸುವುದಕ್ಕಾಗಿ ಈ ಸೇತುವೆ ನಿರ್ಮಿಸಲಾಗುತ್ತಿತ್ತು. ಈ ಸೇತುವೆ ನಿರ್ಮಾಣ ಕಾರ್ಯದಲ್ಲಿ ಹಲವು ಕಾರ್ಮಿಕರು ತೊಡಗಿದ್ದು, ಬುಧವಾರ ಬೆಳಗ್ಗೆ ಈ ಸೇತುವೆ ಬಿದ್ದಾಗ ಕೂದಲೆಳೆ ಅಂತರದಿಂದ ಈ ಅನಾಹುತದಿಂದ ಪಾರಾಗಿದ್ದಾರೆ.  ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳದ ಬಗ್ಗೆ ವರದಿಯಾಗಿಲ್ಲ.

ಪಿಡಬ್ಲ್ಯುಡಿಯಿಂದ ನಿರ್ಮಿಸಲಾಗುತ್ತಿದ್ದ ಈ ಸೇತುವೆಗಾಗಿ ಮಂಗಳವಾರ ಸಂಜೆ ಕಂಬಗಳ ಮೇಲೆ ಸ್ಲ್ಯಾಬ್ ಹಾಕಿದ ಕೇವಲ 14 ಗಂಟೆಗಳಲ್ಲಿ ಇದು ಕುಸಿದು ಬಿದ್ದಿದೆ ಎಂದು ವರದಿಯಾಗಿದೆ. ನಿರ್ಮಾಣವಾಗುತ್ತಿರುವಾಗಲೇ ಸೇತುವೆ ಕುಸಿದು ಬಿದ್ದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಇಲಾಖೆಯ ಕಳಪೆ ಕಾಮಗಾರಿಯೇ ನೇರ ಕಾರಣ ಎಂದು ಆರೋಪಿಸಿದ್ದಾರೆ.

ತುಕ್ಕು ಹಿಡಿದ ಸೇತುವೆಗೆ ಬಣ್ಣ ಬಳಿದು ನಾಟಕ: Bridge Collapse ದೇವರಿಚ್ಛೆ ಎಂದ ಕಂಪನಿ ಮ್ಯಾನೇಜರ್

ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರೊಬ್ಬರು ಮಾತನಾಡಿದ್ದು, ತಿನಿಮುಹಾನಿಯಿಂದ ಕೇಂದ್ರಪಾರ ಬಸ್ ನಿಲ್ದಾಣ ಸಂಪರ್ಕಿಸುವುದಕ್ಕಾಗಿ ಬೈಪಾಸ್ ನಿರ್ಮಿಸಲು ಈ ಸೇತುವೆ ನಿರ್ಮಾಣಕ್ಕೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಸೇತುವೆಯ ಟೆಂಡರ್ ಅನ್ನು ಎಆರ್‌ಎಸ್ಎಸ್‌  ನಿರ್ಮಾಣ ಕಂಪನಿ ತೆಗೆದುಕೊಂಡಿದ್ದು, ಕಳಪೆ ಕಾಮಗಾರಿ ಪರಿಣಾಮ ಈ ಅನಾಹುತವಾಗಿದೆ ಎಂದರು.  ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿದ್ದಕ್ಕೆ ನಾನು ದೇವರಿಗೆ ಹಲವು ಬಾರಿ ಕೃತಜ್ಞತೆ ಸಲ್ಲಿಸುತ್ತೇನೆ. ಉದ್ಘಾಟನೆಯ ನಂತರ ಅನಾಹುತ ಸಂಭವಿಸಿದ್ದರೆ ಪ್ರಾಣಹಾನಿಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. 

ಮತ್ತೊಬ್ಬ ಸ್ಥಳೀಯ ಫಕೀರ್ ಚರಣ್ ಖಾತುವಾ (Fakir Charan Khatua) ಮಾತನಾಡಿ, 'ಕೇಂದ್ರಪಾರ ನಿವಾಸಿಗಳಿಗೆ ತೊಂದರೆಯಾಗುವಂತೆ ಈ ಸೇತುವೆಯನ್ನು ಗುಣಮಟ್ಟವಿಲ್ಲದ ವಸ್ತುಗಳಿಂದ ನಿರ್ಮಿಸಲಾಗಿದೆ. ಕಾಮಗಾರಿಯ ಗುಣಮಟ್ಟ ಕಳಪೆಯಾಗಿದ್ದು, ಸ್ಲ್ಯಾಬ್‌ನ ಭಾರಕ್ಕೆ ಪಿಲ್ಲರ್‌ಗಳು ಕುಸಿದಿವೆ. ಈ ಬಗ್ಗೆ ಮುಖ್ಯ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು. ಉಳಿದಿರುವ ಎಲ್ಲಾ ಕಂಬಗಳನ್ನು ಕಿತ್ತುಹಾಕಿ ಕಾಮಗಾರಿಯನ್ನು ಮೊದಲಿನಿಂದ ಆರಂಭಿಸಬೇಕು ಎಂದು  ಅವರು ಆಗ್ರಹಿಸಿದ್ದಾರೆ. 

Morbi Accident: 'ಜಾಸ್ತಿ ಜಾಣತನ ತೋರಿಸ್ಬೇಡಿ..' ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ಛೀಮಾರಿ!

ಘಟನೆಗೆ ಸಂಬಂಧಿಸಿದಂತೆ ಕೇಂದ್ರಪಾರ ಜಿಲ್ಲಾಧಿಕಾರಿ (Kendrapara Collector) ಅಮೃತ್ ರಿತುರಾಜ್ (Amrit Rituraj) ಮಾತನಾಡಿ, ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಮುಖ್ಯ ಸೇತುವೆಗೆ ಯಾವುದೇ ಹಾನಿಯಾಗಿಲ್ಲ. ಗುತ್ತಿಗೆದಾರರು ಮುಖ್ಯ ಸೇತುವೆಯ ಮೇಲೆ ಗರ್ಡರ್ ಹಾಕುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಗುತ್ತಿಗೆದಾರರ ಕೆಲವು ಕಾರ್ಯಾಚರಣೆಯ ದೋಷದಿಂದ ಅದು ಕುಸಿದಿದೆ. ವಿವರವಾದ ವರದಿ ಬಂದ ನಂತರ ಈ ಸಂಬಂಧ ತನಿಖೆ ನಡೆಸಲಾಗುವುದು ಎಂದರು. 

Gujarat Bridge Collapse: ಗೋಡೆ ಗಡಿಯಾರ ಕ್ರಾಂತಿ ಮಾಡಿದ ಅಜಂತಾ ಕಂಪನಿ ಎಡವಟ್ಟು

Follow Us:
Download App:
  • android
  • ios