ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಕೋಲ್ಕತ್ತಾ: ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕ ಬ್ಲೂಟುಥ್ ಆರೋಪಿಯ ಸುಳಿವು ನೀಡಿದೆ, ಕೋಲ್ಕತ್ತಾ ಪೊಲೀಸ್ ಇಲಾಖೆಯಲ್ಲಿ ನಾಗರಿಕ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್ ಎಂಬಾತನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಈ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಕೋಲ್ಕತ್ತಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 

Add Asianetnews Kannada as a Preferred SourcegooglePreferred

ಆಗಸ್ಟ್ 9ರ ಶುಕ್ರವಾರ, ಕೋಲ್ಕತ್ತಾದ ಆರ್‌ ಜಿ ಕಾರ್‌ ಸರ್ಕಾರಿ ವೈದ್ಯಕೀಯ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ 2ನೇ ವರ್ಷದ ವೈದ್ಯಕೀಯ ಸ್ನಾತಕೋತ್ತರ ಪದವಿ ಓದುತ್ತಿದ್ದ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಸಾಬೀತಾಗಿತ್ತು. ಘಟನೆ ಖಂಡಿಸಿ ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳ ರಾಜ್ಯದಾದ್ಯಂತ ವೈದ್ಯರು ಸೇವೆ ಸ್ಥಗಿತಗೊಳಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಇದಾದ ನಂತರ ಪ್ರಕರಣದ ತನಿಖೆಗೆ 7 ಜನರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. ಈ ತಂಡ ರಚನೆಯಾದ ಆರು ಗಂಟೆಯೊಳಗೆ ಪೊಲೀಸರು 33 ವರ್ಷದ ಶಂಕಿತನ್ನು ಬಂಧಿಸಿದ್ದಾರೆ. 

ಮಗುವೆಂದೂ ನೋಡದೇ ಪೈಶಾಚಿಕ ಕೃತ್ಯ: 4 ವರ್ಷದ ಬಾಲಕಿಯ ಅತ್ಯಾಚಾರವೆಸಗಿ ಕೊಲೆ

ಅಂದು ನಡೆದಿದ್ದೇನು?

  • ಮಧ್ಯರಾತ್ರಿಯ ನಂತರ ಸಂತ್ರಸ್ತೆ ವೈದ್ಯ ಹಾಗೂ ನಾಲ್ವರು ಸಹೋದ್ಯೋಗಿಗಳು ಆಹಾರ ಆರ್ಡರ್ ಮಾಡಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದ ಆಟ ನೋಡುತ್ತಾ ಸೆಮಿನಾರ್ ರೂಮ್‌ನಲ್ಲಿ ಊಟ ಮಾಡಿದ್ದಾರೆ. 
  • ಊಟದ ನಂತರ ಆಕೆಯ ಸಹೋದ್ಯೋಗಿಗಳು ಅಲ್ಲಿಂದ ಹೋಗಿದ್ದಾರೆ. ರೂಮ್‌ನಲ್ಲೇ ಉಳಿದ ಆಕೆ ತಮ್ಮ ಅಧ್ಯಯನ ಮುಂದುವರೆಸಿದ್ದಾರೆ. ರಾತ್ರಿ 3 ಗಂಟೆ ಸುಮಾರಿಗೆ ಆಕೆ ಅಲ್ಲೇ ನಿದ್ದೆಗೆ ಜಾರಿದ್ದಾಳೆ. 
  • 4 ಗಂಟೆ ಸುಮಾರಿಗೆ ಆರೋಪಿ ಈ ಸೆಮಿನಾರ್ ರೂಮ್ ಪ್ರವೇಶಿಸಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ. ಆದರೆ ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ.
  • ಮುಂಜಾನೆ 7.30ರ ಸುಮಾರಿಗೆ ಅದೇ ಸೆಮಿನಾರ್‌ ಹಾಲ್‌ನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. 

ಮರಣೋತ್ತರ ಪರೀಕ್ಷೆಯಲ್ಲಿ ಏನಿದೆ? 

ಶುಕ್ರವಾರ ರಾತ್ರಿ ವೈದ್ಯೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, 31 ವರ್ಷದ ವೈದ್ಯಯ ಮೇಲೆ ಕೊಲೆಯಾಗುವುದಕ್ಕೂ ಮೊದಲು ಅತ್ಯಾಚಾರ ನಡೆಸಿರುವುದು ಸಾಬೀತಾಗಿದೆ. ದೇಹದ ವಿವಿಧ ಭಾಗಗಳಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ. ಕಣ್ಣು ಹಾಗೂ ಮುಖದ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡಿವೆ. ದೇಹವ ವಿವಿಧ ಭಾಗಗಗಲ್ಲಿ ಪರಚಿದ ಉಗುರಿನಿಂದ ಗೀರಿದ ಗುರುತುಗಳು, ಖಾಸಗಿ ಭಾಗದಲ್ಲಿ ರಕ್ತಸ್ರಾವ ಆಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿದೆ. 

ಬಾಲಕರಲ್ಲ ಇವರು ರಾಕ್ಷಸರು... ಶಾಲೆಗೆ ಹೋಗೋ ಮಕ್ಕಳಿಂದ ಇದೆಂಥಾ ಪೈಶಾಚಿಕ ಕೃತ್ಯ

ಆರೋಪಿ ಸಂಜಯ್ ರಾಯ್ ಯಾರು?

ಆರೋಪಿ ಸಂಜಯ್ ರಾಯ್ ಕೋಲ್ಕತ್ತಾ ಪೊಲೀಸ್‌ ವಿಭಾಗದ ವಿಪತ್ತು ನಿರ್ವಹಣಾ ತಂಡಕ್ಕೆ 2019ರಲ್ಲಿ ನಾಗರಿಕ ಸ್ವಯಂಸೇವಕನಾಗಿ ಸೇರ್ಪಡೆಯಾಗಿದ್ದ. ನಂತರ ಪ್ರಭಾವ ಬಳಸಿಕೊಂಡು ಕೋಲ್ಕತ್ತಾ ಪೊಲೀಸ್‌ ವಿಭಾಗದ ಕಲ್ಯಾಣ ವಿಭಾಗಕ್ಕೆ ನಿಯೋಜನೆಗೊಂಡಿದ್ದ. ಆದರೆ ಕೋಲ್ಕತ್ತಾ ಪೊಲೀಸ್ ವಿಭಾಗದ 4ನೇ ಬೆಟಾಲಿಯನ್ ಆವರಣದಲ್ಲಿಯೇ ತನ್ನ ಕಾರ್ಯಕ್ಷೇತ್ರ ಮಾಡಲು ಆತ ತನಗಿದ್ದ ಪ್ರಭಾವಿ ಸಂಪರ್ಕಗಳನ್ನು ಬಳಸಿಕೊಂಡಿದ್ದ. ಇದಾದ ನಂತರ ಆತನಿಗೆ, ಈಗ ಘಟನೆ ನಡೆದ ಆರ್‌ಜಿ ಕಾರ್ ಆಸ್ಪತ್ರೆ ಆವರಣದಲ್ಲಿ ಸೇವೆ ಮಾಡುವುದಕ್ಕೆ ಆ ಪ್ರಭಾವಿ ಸಂಘ ಸಹಾಯ ಮಾಡಿತ್ತು ಎಂದು ವರದಿ ಆಗಿದೆ. ಅಲ್ಲದೇ ಆರ್‌ಜಿ ಕಾರ್ ಆಸ್ಪತ್ರೆ ಆವರಣದಲ್ಲಿ ಹಲವು ಸಂದರ್ಭಗಳಲ್ಲಿ ಕೆಲಸ ಮಾಡುವುದಕ್ಕೆ ಆತನಿಗೆ ಅವಕಾಶ ಸಿಕ್ಕಿತ್ತು. ಹೀಗಾಗಿ ಆತನಿಗೆ ಆಸ್ಪತ್ರೆಯ ಎಲ್ಲಾ ವಿಭಾಗಕ್ಕೂ ಸುಲಭವಾಗಿ ಪ್ರವೇಶ ಸಿಕ್ಕಿತ್ತು. 

ಸುಳಿವು ನೀಡಿದ ತುಂಡಾದ ಬ್ಲೂಟುಥ್

  • ಎಲ್ಲಾ ಅಪರಾಧ ಪ್ರಕರಣಗಳಲ್ಲಿ ಸಣ್ಣ ಕೂದಲು ಸಿಕ್ಕರೂ ಆರೋಪಿಯ ಪತ್ತೆ ಮಾಡುವ ಪೊಲೀಸರಿಗೆ ಈ ಪ್ರಕರಣದಲ್ಲಿ ಆರೋಪಿಯ ತುಂಡಾದ ಬ್ಲೂಟುಥ್ ಘಟನೆ ನಡೆದ ಆಸ್ಪತ್ರೆಯ ತುರ್ತು ಚಿಕಿತ್ಸಾ ಕಟ್ಟಡದ ಸೆಮಿನಾರ್‌ ಕೋಣೆಯಲ್ಲಿ ಸಿಕ್ಕಿತ್ತು. 
  • ಇದರ ಜೊತೆಗೆ ಆಸ್ಪತ್ರೆಯ ಸಿಸಿಟಿವಿಯೂ ಕೂಡ ಈತ ಬ್ಲೂಟುಥ್ ಇಯರ್ ಫೋನ್ ಅನ್ನು ತನ್ನ ಕತ್ತಲ್ಲಿ ಹಾಕಿಕೊಂಡು ಎಮರ್ಜೆನ್ಸಿ ಕಟ್ಟಡಕ್ಕೆ ಬೆಳಗ್ಗೆ 4 ಗಂಟೆ ವೇಳೆಗೆ ಬಂದಿದ್ದನ್ನು ತೋರಿಸಿತ್ತು. 
  • ಇದಾದ 40 ನಿಮಿಷದ ನಂತರ ಆರೋಪಿ ಕಟ್ಟಡದಿಂದ ಹೊರಗೆ ಹೋಗಿದ್ದ, ಈ ವೇಳೆ ಆತನ ಕತ್ತಿನಲ್ಲಿ ಇಯರ್ ಫೋನ್ ಇರಲಿಲ್ಲ, ಈ ಬ್ಲೂಟುಥ್ ಡಿವೈಸ್ ನಂತರದಲ್ಲಿ ಈತನ ಸೆಲ್‌ಫೋನ್‌ಗೆ ಕನೆಕ್ಟ್ ಆಯ್ತು.
  • ಒಟ್ಟಿನಲ್ಲಿ ರಕ್ಷಣೆಗಿದ್ದವನೇ ರಾಕ್ಷಸೀಯ ಕೃತ್ಯ ಮೆರೆದಿದ್ದು, ಬೇರೆಯವರ ಜೀವ ಉಳಿಸುವ ಕೆಲಸ ಮಾಡುತ್ತಿದ್ದ ಯುವ ವೈದ್ಯೆಯನ್ನು ಬಲಿ ಪಡೆದಿದ್ದಾನೆ.