ತಂದೆ ಮಗನ ಲಾಕಪ್ ಡೆತ್, 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ತೆರೆದಿದ್ದಾರೆ ಎಂದು ತಂದೆ ಮಗನ ಅರೆಸ್ಟ್ ಮಾಡಲಾಗಿತ್ತು. 

ಚೆನ್ನೈ (ಏ.06) ಕೋವಿಡ್ ಲಾಕ್‌ಡೌನ್ ವೇಳೆ ಅಂಗಡಿ ತೆರೆದಿದ್ದಾರೆ ಎಂಬ ಕಾರಣಕ್ಕೆ ತಂದೆ ಹಾಗೂ ಮಗನ ಇಬ್ಬರನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ ಪೊಲೀಸರು ಅತ್ಯಂತ ಕ್ರೂರವಾಗಿ ಥಳಿಸಿದ್ದರು. ಇದರ ಪರಿಣಾಮ ತಂದೆ ಹಾಗೂ ಮಗ ಇಬ್ಬರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಕೋರ್ಟ್ ಇದೀಗ ಐತಿಹಾಸಿಕ ತೀರ್ಪು ನೀಡಿದೆ. ಅತ್ಯಂತ ಕ್ರೂರವಾಗಿ ಥಳಿಸಿ ಸಾವಿಗೆ ಕಾರಣರಾದ 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಮಧುರೈ ಜಿಲ್ಲಾ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.

Add Asianetnews Kannada as a Preferred SourcegooglePreferred

ಅಪರೂಪದಲ್ಲಿ ಅಪರೂಪದ ಪ್ರಕರಣ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಕಸ್ಟಡಿ ಸಾವಿನ ಪ್ರಕರಣದಲ್ಲಿ ಮಧುರೈ ಜಿಲ್ಲಾ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ ಆರೋಪಿಗಳಾದ ಒಂಬತ್ತು ಪೊಲೀಸರಿಗೂ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಇದೊಂದು 'ಅಪರೂಪದಲ್ಲಿ ಅಪರೂಪದ ಪ್ರಕರಣ' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 'ಭವಿಷ್ಯದಲ್ಲಿ ಇಂತಹ ಕಸ್ಟಡಿ ಸಾವುಗಳು ಮರುಕಳಿಸಬಾರದು, ಅದಕ್ಕೆ ಈ ಶಿಕ್ಷೆ ಒಂದು ಎಚ್ಚರಿಕೆಯಾಗಬೇಕು ಎಂದು ಕೋರ್ಟ್ ಹೇಳಿದೆ.

ಜೀವಾವಧಿ ಶಿಕ್ಷೆ ಸಾಕಾಗಾವುದಿಲ್ಲ

ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಸಾಕಾಗುವುದಿಲ್ಲ, ಎಲ್ಲರೂ ಸಮಾನ ಅಪರಾಧಿಗಳು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 'ಯಾರು ಹೆಚ್ಚು ಹಿಂಸೆ ನೀಡಿದರು ಎಂಬ ಪ್ರಶ್ನೆ ಇಲ್ಲಿ ಅಪ್ರಸ್ತುತ' ಎಂದು ಕೋರ್ಟ್ ಹೇಳಿದೆ. ಶಿಕ್ಷೆಗೊಳಗಾದವರಲ್ಲಿ ಒಬ್ಬ ಇನ್ಸ್‌ಪೆಕ್ಟರ್, ಇಬ್ಬರು ಸಬ್‌-ಇನ್ಸ್‌ಪೆಕ್ಟರ್‌ಗಳು, ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು ನಾಲ್ವರು ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ. ಈ ಕೃತ್ಯದ ನೇತೃತ್ವ ವಹಿಸಿದ್ದ ಇನ್ಸ್‌ಪೆಕ್ಟರ್ ಶ್ರೀಧರ್‌ಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 2 ಬಾರಿ ಗಲ್ಲು ಶಿಕ್ಷೆ ಮತ್ತು 84 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

2020ರ ಜೂನ್ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ಪೊಲೀಸರು ಮರದ ವ್ಯಾಪಾರಿ ಜಯರಾಜ್ ಮತ್ತು ಅವರ ಮಗ ಬೆನಿಕ್ಸ್‌ರನ್ನು ವಶಕ್ಕೆ ಪಡೆದಿದ್ದರು. ನಂತರ ಪೊಲೀಸ್ ಠಾಣೆಯಲ್ಲಿ ಇಡೀ ರಾತ್ರಿ ಆರೋಪಿ ಪೊಲೀಸರು ಇಬ್ಬರ ಮೇಲೂ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ರಾತ್ರಿ ಇಡೀ ಒಬ್ಬರ ಮೇಲೊಬ್ಬರು ಪೊಲೀಸ್ ಇವರಿಬ್ಬರ ಮೇಲೆ ಹಲ್ಲೆ ಮಾಡಿದ್ದರು. ಪೊಲೀಸರ ಆಕ್ರೋಶಗಳನ್ನು ಅಮಾಯಕರ ಮೇಲೆ ತೋರಿಸಿದ್ದರು.

ಪೊಲೀಸರ ಸತತ ಹಾಗೂ ತೀವ್ರ ದಾಳಿಯಿಂದ ತಂದೆ ಹಾಗೂ ಮಗ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಮರು ದಿನ ಪೊಲೀಸ್ ಠಾಣೆಗೆ ತೆರಳಿದ ಕುಟುಂಬಸ್ಥರು ಆಘಾತಗೊಂಡಿದ್ದರು. ರಂಪಾಟ ಮಾಡಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 22 ರಂದು ತಂದೆ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಜೂನ್ 23ರಂದು ಮಗ ಮೃತಪಟ್ಟಿದ್ದ. ವೈದ್ಯಕೀಯ ವರದಿಯಲ್ಲಿ ತಂದೆ ಹಾಗೂ ಮಗ ಇಬ್ಬರು ಚಿತ್ರಹಿಂಸೆಯಿಂದ ಸಾವನ್ನಪ್ಪಿದ್ದರು ಅನ್ನೋದು ಸ್ಪಷ್ಟವಾಗಿತ್ತು. ಇತ್ತ ಚಾರ್ಜ್‌ಶೀಟ್‌ನಲ್ಲಿ ಪೊಲೀಸರ ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ಕುರಿತು ಉಲ್ಲೇಖಿಸಲಾಗಿತ್ತು.