ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ ಆದೇಶದಂತೆ ರಾಜ್ಯ ಸರ್ಕಾರವು ಡಿವೈಎಸ್ಪಿ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯು ಎಎಸ್ಪಿ ಹುದ್ದೆಯ ಮುಂಬಡ್ತಿ ವಿಚಾರವಾಗಿ ನೇರ ನೇಮಕಾತಿ ಮತ್ತು ಮುಂಬಡ್ತಿ ಅಧಿಕಾರಿಗಳ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪಿಆರ್ ಅಧಿಕಾರಿಗಳು ಇದು ಅವೈಜ್ಞಾನಿಕವೆಂದು ವಾದಿಸಿದರೆ, ಡಿಆರ್ ಅಧಿಕಾರಿಗಳು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ವರದಿ: ಗಿರೀಶ್ ಮಾದೇನಹಳ್ಳಿ
ಬೆಂಗಳೂರು: ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ ಆದೇಶ ಮೇರೆಗೆ ಸಿವಿಲ್ ಪೊಲೀಸ್ ಉಪಾಧೀಕ್ಷಕರ (ಡಿವೈಎಸ್ಪಿ) ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ ಬೆನ್ನಲ್ಲೇ ಇಲಾಖೆಯಲ್ಲಿ ಪರ-ವಿರೋಧ ದನಿ ಕೇಳಿ ಬಂದಿದೆ. ಇದು ಎಎಸ್ಪಿ ಹುದ್ದೆ ಮುಂಬಡ್ತಿ ವಿಚಾರವಾಗಿ ನೇರ ನೇಮಕಾತಿ (ಡಿಆರ್) ಹಾಗೂ ಮುಂಬಡ್ತಿ (ಪಿಆರ್) ಡಿವೈಎಸ್ಪಿಗಳ ನಡುವೆ ಮತ್ತೊಂದು ಹೋರಾಟಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಜ್ಯೇಷ್ಠತಾ ಪಟ್ಟಿ ಅವೈಜ್ಞಾನಿಕವಾಗಿದ್ದು, ನಮಗೆ ಅನ್ಯಾಯವಾಗಿದೆ ಎಂದು ಪಿಆರ್ ಹೇಳಿದರೆ, ಐತಿಹಾಸಿಕ ಪ್ರಮಾದವನ್ನು ಸರ್ಕಾರ ತಿದ್ದಿದೆ ಎಂದು ಡಿಆರ್ ಪ್ರತಿಪಾದಿಸಿದೆ.
3 ವರ್ಷಗಳಿಂದ ಸೇವಾ ಹಿರಿತನ ಆಧಾರದ ಮೇರೆಗೆ ಹೆಚ್ಚುವರಿ ಅಧೀಕ್ಷಕ (ನಾನ್ ಐಪಿಎಸ್) ಹುದ್ದೆಗೆ ಪದೋನ್ನತಿ ವಿಚಾರವಾಗಿ ನೇರ ಮತ್ತು ಮುಂಬಡ್ತಿ ಡಿವೈಎಸ್ಪಿಗಳ ಮಧ್ಯೆ ತಿಕ್ಕಾಟ ನಡೆದಿದೆ. ಕಾನೂನು ಸಮರದ ಬಳಿಕ ಜ್ಯೇಷ್ಠತಾ ಪಟ್ಟಿ ಪ್ರಕಟಿಸುವಂತೆ ಕೆಎಟಿ ಆದೇಶಿಸಿತ್ತು. ಕೆಎಟಿ ಆದೇಶ ಹಿನ್ನೆಲೆಯಲ್ಲಿ ಡಿವೈಎಸ್ಪಿ ಜ್ಯೇಷ್ಠತಾ ಪಟ್ಟಿ ರಚನೆಗೆ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಕೆ.ಚಿನ್ನಮಾರಯ್ಯ ಅವರನ್ನು ಸಲಹೆಗಾರರನ್ನಾಗಿ ಸರ್ಕಾರ ನೇಮಿಸಿತ್ತು. ಒಂದು ವರ್ಷ ಅಳೆದು ತೂಗಿ ಈಗ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಈ ಪಟ್ಟಿಗೆ ಆಕ್ಷೇಪವಿಲ್ಲದೆ 15 ದಿನಗಳಲ್ಲಿ ಸಲ್ಲಿಸುವಂತೆಯೂ ಸರ್ಕಾರ ಸೂಚಿಸಿದೆ.
ಮುಂಬಡ್ತಿ ಡಿವೈಎಸ್ಪಿಗಳ ವಾದವೇನು?
1 ಎಎಸ್ಪಿ ಪದೋನ್ನತಿ ಸಲುವಾಗಿ 2021ರಲ್ಲಿ ಸರ್ಕಾರ ಸಿದ್ಧಪಡಿಸಿದ್ದ ಜ್ಯೇಷ್ಠತಾ ಪಟ್ಟಿ ವಿರೋಧಿಸಿ ನೇರ ನೇಮಕಾತಿ ಡಿವೈಎಸ್ಪಿಗಳು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, 2012ರಿಂದ 17ವರೆಗಿನ ಪಟ್ಟಿಯನ್ನು ರೀಡೂ ಮಾಡುವಂತೆಯೂ ಒತ್ತಾಯಿಸಿದ್ದರು. ಇನ್ನೊಂದೆಡೆ ಹೈಕೋರ್ಟ್ನಲ್ಲೂ ಇದನ್ನು ಪ್ರಶ್ನಿಸಿದ್ದರು. ಆದರೆ ಪ್ರಕರಣದಲ್ಲಿ ಪ್ರತಿವಾದಿಗಳಾಗಿ ಮುಂಬಡ್ತಿ ಡಿವೈಎಸ್ಪಿಗಳಾದ ನಮ್ಮನ್ನು ಪರಿಗಣಿಸಲಿಲ್ಲ. ಈ ವಿಷಯ ತಿಳಿದು ನಾವೂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದೆವು.
2. ಕೆಎಟಿ ಆದೇಶದ ಮೇರೆಗೆ ಸರ್ಕಾರ ಜ್ಯೇಷ್ಠತಾ ತಾತ್ಕಾಲಿಕ ಪಟ್ಟಿಗೆ ರಾಜ್ಯಪತ್ರ ಹೊರಡಿಸಿದೆ. ಇದು ಸಂಪೂರ್ಣವಾಗಿ ಅವೈಜ್ಞಾನಿಕ.
3ನಿವೃತ್ತ ಹಿರಿಯ ಅಧಿಕಾರಿಗಳಾದ ಗೋಪಾಲ್.ಬಿ.ಹೊಸೂರು, ಪಿ.ಎಚ್.ಪೂಜಾರ್, ಶ್ರೀಕಂಠಯ್ಯ ಹಾಗೂ ಐಜಿಪಿ ರವಿಕಾಂತೇಗೌಡ ಸೇರಿ 360 ಅಧಿಕಾರಿಗಳ ಮುಂಬಡ್ತಿ ಸಂಬಂಧಿಸಿದ ದಾಖಲೆಗಳಿಲ್ಲ ಎಂದು ಉಲ್ಲೇಖಿಸಿದೆ. ಅವರು ನಿವೃತ್ತಿ ವೇತನ ಪಡೆದಿದ್ದಾರೆ. ಹೆಸರಾಂತ ಅಧಿಕಾರಿಗಳ ಕಡತಗಳೇ ಇಲ್ಲವೆಂದರೆ ಏನರ್ಥ?
ಎಎಸ್ಪಿ ಮುಂಬಡ್ತಿಗೆ ಶೇ.20 ನೇರ ನೇಮಕಾತಿ, ಶೇ.80 ರಷ್ಟು ಮುಂಬಡ್ತಿ ಡಿವೈಎಸ್ಪಿಗಳನ್ನು ಪರಿಗಣಿಸುವಂತೆ ಸಿ ಆ್ಯಂಡ್ ರೂಲ್ ಇದೆ. ಹುದ್ದೆ ಖಾಲಿಯಾದ ದಿನವೇ ಮುಂಬಡ್ತಿ ಡಿವೈಎಸ್ಪಿಗಳು ಪದೋನ್ನತಿಗೆ ಅರ್ಹರಾಗುತ್ತೇವೆ. ಆದರೆ ಇಲಾಖೆಗೆ ಸೇರಿದ ದಿನಾಂಕ ಆಧರಿಸಿ ನೇರ ನೇಮಕಾತಿ (ಡಿಆರ್) ಡಿವೈಎಸ್ಪಿಗಳನ್ನು ಅದಕ್ಕೆ ಪರಿಗಣಿಸಲಾಗುತ್ತದೆ.
4. ಕಾಲಕಾಲಕ್ಕೆ ಪರಿಷ್ಕರಣೆಗೊಂಡು ಖಾಲಿ ಹುದ್ದೆಗಳಿಗೆ ಮುಂಬಡ್ತಿ ಸಿಗುತ್ತದೆ. 2015ರಲ್ಲೇ ನಾವು ಕನ್ಫರ್ಮ್ Bಡಿವೈಎಸ್ಪಿಗಳು\B. ಆದರೆ ಅವರು 2017ರಲ್ಲಿ ಡಿವೈಎಸ್ಪಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇದೀಗ ಮೂರೂವರೆ ದಶಕಗಳ ಸೇವಾನುಭವ ಹೊಂದಿರುವ ನಮ್ಮ ಮೇಲೆ ಅವರನ್ನು ತಂದು ಕೂರಿಸುವ ಪ್ರಯತ್ನ ನಡೆದಿದೆ. ಇಲ್ಲಿ ನೈಸರ್ಗಿಕ ನ್ಯಾಯದ ಸ್ಪಷ್ಟನೆ ಉಲ್ಲಂಘನೆ ಆಗಿದೆ.
5. ಕೆಎಟಿ ಆದೇಶ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ಹಿಂದೆ ನಮ್ಮನ್ನು 27-11-23ರಿಂದಲೇ ಮುಂಬಡ್ತಿಗೆ ಪರಿಗಣಿಸುವಂತೆ ಕೆಎಟಿ ಆದೇಶಿಸಿತ್ತು. ಹೀಗಿದ್ದರೂ ಕೆಲವರ ಲಾಬಿಗೆ ಸರ್ಕಾರ ಮಣಿದಂತೆ ಕಾಣುತ್ತದೆ.
ನೇರ ನೇಮಕಾತಿ ಡಿವೈಎಸ್ಪಿಗಳ ಪ್ರತಿವಾದೇನು?
ಜ್ಯೇಷ್ಠತಾ ಪಟ್ಟಿಯಲ್ಲಿ ಸರ್ಕಾರ ನ್ಯಾಯ ಪಾಲಿಸಿದೆ. ಹಲವು ವರ್ಷಗಳ ತಪ್ಪುಗಳನ್ನು ಸರಿಪಡಿಸಿದೆ. ಕಾಲಕಾಲಕ್ಕೆ ಪದೋನ್ನತಿಯಲ್ಲಿ ನೇರನೇಮಕಾತಿ ಹಾಗೂ ಮುಂಬಡ್ತಿ ಡಿವೈಎಸ್ಪಿಗಳ ಅನುಪಾತ ಬದಲಾವಣೆಯಾಗಿದೆ. ಅಂತೆಯೇ 66-33, 50-50 ಹಾಗೂ 80-20 ಪ್ರಮಾಣದಲ್ಲಿ ನಡೆದಿದೆ. ಇದರ ಪರಿಣಾಮ ಪೊಲೀಸ್ ಇಲಾಖೆಗೆ ಈವರೆಗೆ ಕೇವಲ 200 ಮಂದಿ ಮಾತ್ರ ನೇರ ನೇಮಕಾತಿ ಡಿವೈಸ್ಪಿಗಳು ಆಯ್ಕೆಯಾಗಿದ್ದಾರೆ.
ಮುಂಬಡ್ತಿ ಸಲುವಾಗಿ ತಪ್ಪು ಮಾಹಿತಿ ನೀಡಿ ಅವೈಜ್ಞಾನಿಕವಾಗಿ 360 ಖಾಲಿ ಹುದ್ದೆಗಳನ್ನು ಸೃಜಿಸಲಾಗಿತ್ತು. ಹೀಗಾಗಿ ಮುಂಬಡ್ತಿ ಡಿವೈಎಸ್ಪಿಗಳಿಗೆ ಪದೋನ್ನತಿ ಸುಲಭವಾಗಿದೆ. ಅಲ್ಲದೆ ಒಬ್ಬರ ಹೆಸರಿನಲ್ಲಿ ಮೂರ್ನಾಲ್ಕು ಬಾರಿ ಖಾಲಿ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಈ ರೀತಿ ಈವರೆಗೆ 360 ಹುದ್ದೆಗಳು ಖಾಲಿಯಾಗಿ ಮುಂಬಡ್ತಿಯಲ್ಲಿ ತುಂಬಲಾಗಿದೆ.
ಕೆಎಟಿ, ಹೈಕೋರ್ಟ್ ಹಾಗೂ ಗೃಹ ಇಲಾಖೆಯ ಎಲ್ಲರಿಂದಲೂ ನಮ್ಮ ಪರವಾದ ಆದೇಶ ಬಂದಿದೆ. ಈ ಸಮಿತಿಗಳ ಶಿಫಾರಸು ಆಧರಿಸಿ ಜ್ಯೇಷ್ಠತಾ ಪಟ್ಟಿ ರೂಪಿಸಲಾಗಿದೆ. ಮತ್ತೆ ನ್ಯಾಯಾಲಯಕ್ಕೆ ಹೋದರೆ ನಾವು ಹೋರಾಡುತ್ತೇವೆ.
ಪ್ರಸುತ್ತ ಎಎಸ್ಪಿ ಹುದ್ದೆಯಲ್ಲಿರುವರೆಗೆ ಅಧಿಕಾರಿಗಳನ್ನು ಹಿಂಬಡ್ತಿ ನೀಡುವಂತೆ ನಾವು ಒತ್ತಾಯಿಸುವುದಿಲ್ಲ. ಐಪಿಎಸ್ ಬಡ್ತಿಗೆ ಅಡ್ಡಿ ಆಗಬಾರದು. 9 ವರ್ಷಗಳಿಂದ ಡಿವೈಎಸ್ಪಿ ಹುದ್ದೆಯಲ್ಲೇ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಐದು ವರ್ಷಕ್ಕೆಲ್ಲ ಎಎಸ್ಪಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಈ ಅನ್ಯಾಯ ಸರಿಪಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ.
ಯಾರು ಈ ಡಿಆರ್-ಪಿಆರ್?
ಡಿಆರ್- ಕೆಪಿಎಸ್ಸಿ ಮೂಲಕ ಡಿವೈಎಸ್ಪಿ ಹುದ್ದೆಗೆ ಆಯ್ಕೆಯಾದವರು.
ಪಿಆರ್- ಪಿಎಸ್ಐ ಹುದ್ದೆಗೆ ನೇಮಕಗೊಂಡು ಬಳಿಕ ಸೇವಾ ಹಿರಿತನ ಆಧಾರದ ಮೇರೆಗೆ ಡಿವೈಎಸ್ಪಿ ಪದವಿಗೇರಿದವರು.


