ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು, ಸನಾತನ ಧರ್ಮವು ಶಾಶ್ವತವಾಗಿದ್ದು ಅದನ್ನು ಯಾರೂ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಬದ್ಧ ವೈರಿ ಪಾಕಿಸ್ತಾನದೊಂದಿಗೆ ಮಾತುಕತೆಯ ದ್ವಾರ ಸದಾ ತೆರೆದಿರಬೇಕು. ಜನರ ನಡುವಿನ ಸಂಪರ್ಕದಿಂದ ಸಂಬಂಧ ಸುಧಾರಿಸಬೇಕು' ಅಚ್ಚರಿ ಹೇಳಿಕೆ!

ಸನಾತನ ಶಾಶ್ವತ, ಅಳಿಸಲು ಆಗದು

ನವದೆಹಲಿ (ಮೇ.13): ಸನಾತನ ಧರ್ಮದ ನಿರ್ಮೂಲನೆ ಕುರಿತ ಉದಯನಿಧಿ ಸ್ಟಾಲಿನ್‌ಗೆ ತಿರುಗೇಟು ನೀಡಿರುವ ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ‘ಸನಾತನವು ಶಾಶ್ವತ. ಅವರು ಹೇಳಿದ ಮಾತ್ರಕ್ಕೆ ಅಳಿದುಹೋಗದು’ ಎಂದಿದ್ದಾರೆ. ಪಿಟಿಐ ಜತೆಗಿನ ಸಂದರ್ಶನದಲ್ಲಿ ಮಾತನಾಡುತ್ತಾ, ‘ಬೆಳಕು ಅಥವಾ ನೆರಳು ಬೇಡ ಎಂದು ನನಗನ್ನಿಸಿದರೆ ಅವು ಮಾಯವಾಗುವುದಿಲ್ಲ. ಹಾಗೆಯೇ ಯಾರೋ(ಉದಯನಿಧಿ) ಬಯಸಿದರೆಂದು ಅದು ಇಲ್ಲವಾಗದು. ಸನಾತನವು ಈ ದೇಶದ ಆತ್ಮ. ಅದು ಧಾರ್ಮಿಕ ಆಚರಣೆಯಾಗಿರದೆ ವಿಶ್ವಾದ್ಯಂತ ವ್ಯಾಪಿಸಿರುವ ಮೌಲ್ಯಗಳಾಗಿವೆ’ ಎಂದು ಹೊಸಬಾಳೆ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಪಾಕ್‌ ಜತೆ ಮಾತುಕತೆ ದ್ವಾರ ತೆರೆದಿರಬೇಕು

ನವದೆಹಲಿ: ಬದ್ಧ ವೈರಿಯಾಗಿರುವ ಪಾಕಿಸ್ತಾನದ ಜತೆ ಮಾತುಕತೆಗೆ ದ್ವಾರ ಸದಾ ಮುಕ್ತವಾಗಿರಬೇಕು ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದ್ದಾರೆ.

‘ಪಾಕ್‌ ಸೇನೆ ಮತ್ತು ಉನ್ನತ ನಾಯಕತ್ವದಲ್ಲಿ ಭಾರತ ನಂಬಿಕೆಯನ್ನೇ ಕಳೆದುಕೊಂಡಿದೆ. ಇದನ್ನು ಸರಿಪಡಿಸಲು ಜನರ ನಡುವೆ ನೇರ ಸಂಪರ್ಕ ಏರ್ಪಡುವುದು ಅಗತ್ಯ. ರಾಜತಾಂತ್ರಿಕ ಮಾರ್ಗಗಳಲ್ಲಿ ಸಂಬಂಧ ಸುಧಾರಣೆ ಯತ್ನಗಳು ಆಗಿವೆ. ಭಾರತ ಮತ್ತು ಪಾಕ್‌ ಒಂದೊಮ್ಮೆ ಒಂದೇ ರಾಷ್ಟ್ರವಾಗಿದ್ದು, ಸಾಂಸ್ಕೃತಿಕ ಸಂಬಂಧವನ್ನೂ ಹೊಂದಿವೆ. ಹೀಗಿರುವಾಗ, ನಾಗರಿಕ ಸಮಾಜದ ಸಂಬಂಧಗಳು ಕೆಲಸ ಮಾಡುತ್ತವೆ ಎಂದು ನಂಬಿದ್ದೇನೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.