2024ರ ಸಿವಿಲ್ ಸರ್ವೀಸ್ ಟಾಪರ್ ಹಾಗೂ ಎಸ್‌ಡಿಎಂ ಅಧಿಕಾರಿಯಾದ ಕಾಜಲ್ ಮೀನಾ, ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ 60 ಸಾವಿರ ಲಂಚ ಸ್ವೀಕರಿಸುವಾಗ ರಾಜಸ್ಥಾನದ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅವರೊಂದಿಗೆ ಇಬ್ಬರು ಸಹಾಯಕರೂ ಬಂಧಿತರಾಗಿದ್ದು, ಕಚೇರಿಯಿಂದ 4 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಭ್ರಷ್ಟಾಚಾರ ನಿಗ್ರಹ ದಳದ ಗಾಳಕ್ಕೆ ಬಿದ್ದ ರಾಜಸ್ಥಾನದ ಎಸ್‌ಡಿಎಂ ಮತ್ತು ಸಿಬ್ಬಂದಿ.

2024ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಟಾಪರ್ ಆಗಿ ಆಯ್ಕೆಯಾಗಿ ಬಳಿಕ ನಾಗರಿಕ ಸೇವೆಗೆ ಸೇರಿದ ಉಪ ವಿಭಾಗೀಯ ಅಧಿಕಾರಿಯೊಬ್ಬರು 60 ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ರಾಜಸ್ಥಾನದ ಭ್ರಷ್ಟ್ರಾಚಾರ ನಿಗ್ರಹದಳವು ನಡೆಸಿದ ಕಾರ್ಯಾಚರಣೆಯಲ್ಲಿ ಎಸ್‌ಡಿಎಂ ಅಧಿಕಾರಿ ಕಾಜಲ್ ಮೀನಾ ಕ್ಲಾರ್ಕ್‌ಗಳಾದ ದಿನೇಶ್‌ ಕುಮಾರ್ ಸೈನಿ ಹಾಗೂ ಹಿರಿಯ ಸಹಾಯಕ ಪ್ರವೀಣ್ ಧಕಡ್ ಎಂಬುವವರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಾಲೀಕರಿಂದ ಇವರು ಒಂದು ಲಕ್ಷ ರೂಪಾಯಿ ಲಂಚ ಕೇಳಿದ್ದು, 60 ಸಾವಿರ ಸ್ವೀಕರಿಸುವ ವೇಳೆ ರಾಜಸ್ಥಾನದ ಎಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ರಾಜಸ್ಥಾನದ ಕರೌಲಿ ಜಿಲ್ಲೆಯ ನಡೌತಿ ಎಂಬ ಪ್ರದೇಶದಲ್ಲಿ ಎಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಯ ವೇಳೆ ಎಸ್‌ಡಿಎಂ ಕಚೇರಿಯಲ್ಲಿದ್ದ 4 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಭೂ ವಿವಾದ ಇತ್ಯರ್ಥಕ್ಕೆ ಲಂಚ ಕೇಳಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ.

ಜಂಟಿಯಾಗಿ ನಿರ್ವಹಿಸಲ್ಪಡುತ್ತಿದ್ದ ಕುಟುಂಬದ ಆಸ್ತಿಯೊಂದನ್ನು ಅದರ ಮಾಲೀಕರ ನಡುವೆ ಪಾಲು ಮಾಡುವುದಕ್ಕೆ ಆರಂಭದಲ್ಲಿ ಎಸ್‌ಡಿಎಂ ಅಧಿಕಾರಿ 1 ಲಕ್ಷ ಲಂಚ ಕೇಳಿದ್ದಾರೆ. ಆದರೆ ನಂತರ ಮಾತುಕತೆ ನಡೆಸಿ ಒಂದು ಲಕ್ಷವನ್ನು 60 ಸಾವಿರಕ್ಕೆ ಇಳಿಸಲಾಗಿತ್ತು. ಈ ಬಗ್ಗೆ ದೂರು ಬಂದ ನಂತರ ಸವಾಯ್‌ ಮದೋಪುರದ ಎಸಿಬಿ ಅಧಿಕಾರಿಗಳು ದೂರಿಗೆ ಸಂಬಂಧಿಸಿದಂತೆ ಲಂಚ ಕೇಳುವುದಕ್ಕೆ ದೂರವಾಣಿ ಕರೆ ಹಾಗೂ ಇತರ ಸಾಕ್ಷ್ಯಗಳನ್ನು ಖಚಿಪಡಿಸಿಕೊಂಡು ಎಸ್‌ಡಿಎಂ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯಲು ಬಲೆ ಬೀಸಿದ್ದಾರೆ. ಹಾಗೆಯೇ ರೆಡ್‌ಹ್ಯಾಂಡ್ ಆಗಿ ಅವರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

60 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಎಸ್‌ಡಿಎಂ ಕಾಜಲ್ ಮೀನಾ!

ಕ್ಲಾರ್ಕ್‌ಗಳಿಗೆ 10 ಸಾವಿರ ಹಾಗೂ ಎಸ್‌ಡಿಎಂ ಅಧಿಕಾರಿಗೆ 50 ಸಾವಿರ ಸೇರಿದಂತೆ ಒಟ್ಟು 60 ಸಾವಿರ ರೂಪಾಯಿ ಲಂಚವನ್ನು ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. ನಂತರ ಕಚೇರಿಯಲ್ಲಿ ಪರಿಶೀಲನೆ ನಡೆಸಿದಾಗ ಒಟ್ಟು 4 ಲಕ್ಷ ಮೌಲ್ಯದ ನಗದು ಹಣ ಆರೋಪಿಗಳ ಬಳಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಸಿಬಿ ನಿರ್ದೇಶಕ ಗೋವಿಂದ ಗುಪ್ತ ದಾಳಿ ವಿಚಾರವನ್ನು ಖಚಿತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧವೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ಗಳಡಿ ಔಪಚಾರಿಕ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ

ಎಸಿಬಿಯ ಅಡಿಷನ್‌ ಎಸ್ಪಿ ಗ್ಯಾನ್ ಸಿಂಗ್ ಮಾತನಾಡಿ, ನಡೌತಿ ಎಸ್‌ಡಿಎಂ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಭೂಮಿಯನ್ನು ಮಾಲೀಕರ ಮಧ್ಯೆ ಪಾಲು ಮಾಡುವುದಕ್ಕೆ ಲಂಚ ಕೇಳುತ್ತಿದ್ದಾರೆ ಎಂದು ದೂರುಗಳು ಬಂದಿದ್ದವು. ಈ ಹಿನ್ನೆಲೆ ಪರಿಶೀಲನೆ ನಡೆಸಿ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎಸ್‌ಡಿಎಂ ಅಧಿಕಾರಿಗಳ ತಿಂಗಳ ವೇತನ ಎಷ್ಟು?

ಎಸ್‌ಡಿಎಂ ಅಧಿಕಾರಿಗಳಿಗೆ ಪ್ರತಿ ತಿಂಗಳ ವೇತನ 75,000 ದಿಂದ 1,00,000 ದವರೆಗೆ ಇರುತ್ತದೆ. 7ನೇ ವೇತನ ಆಯೋಗದ ಅಡಿಯಲ್ಲಿ ಗ್ರೂಪ್ ಎ ಅಧಿಕಾರಿಯಾಗಿಅವರು ₹56,100 ಮೂಲ ವೇತನವನ್ನು ಪಡೆಯುತ್ತಾರೆ, ಜೊತೆಗೆ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಮತ್ತು ಸಾರಿಗೆ ಭತ್ಯೆ (TA) ಸೇರಿ ಅವರ ವೇತನ 75,000 ದಿಂದ 1,00,000 ದವರೆಗೆ ಇರುತ್ತದೆ ಹೀಗಿದ್ದು, ಜನರ ಸೇವೆ ಮಾಡುವುದಕ್ಕೆ ಪರೀಕ್ಷೆ ಬರೆದು ಆಯ್ಕೆಯಾಗಿರುವ ಈ ಉನ್ನತ ಮಟ್ಟದ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟು ಜನಸಾಮಾನ್ಯರ ಜೀವ ಹಿಂಡುತ್ತಿರುವುದು ನೋಡಿದರೆ ಇವರಿಗೆ ಯಾವ ಕಾನೂನಿನ ಭಯ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ: ಒಂದೇ ದಿನ ಮೂವರು ರೇ*ಪಿಸ್ಟ್‌ಗಳಿಗೆ ಮರಣದಂಡನೆ