ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಮುಜರಾಯಿ ಇಲಾಖೆಯ ಸಹಾಯಕ ಕಮೀಷನರ್ ಕಲಿಂಗಿರಿ ಶಾಂತಿ ಅವರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ, ಚಿನ್ನಾಭರಣ, ಮತ್ತು ನಗದು ಪತ್ತೆಯಾಗಿದೆ.
ಮುಜರಾಯಿ ಇಲಾಖೆ ಅಧಿಕಾರಿಗೆ ಎಸಿಬಿ ಶಾಕ್
ವಿಜಯವಾಡ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಭ್ರಷ್ಟಾಚಾರ ವಿರೋಧಿ ದಳವು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ್ದು, ಅಲ್ಲಿ ಕೋಟ್ಯಂತರ ಮೊತ್ತದ ಆಸ್ತಿ ಪತ್ತೆ ಮಾಡಿದ್ದಾರೆ. ಮುಜರಾಯಿ ಇಲಾಖೆಯ ಸಹಾಯಕ ಕಮೀಷನರ್ ಕಲಿಂಗಿರಿ ಶಾಂತಿ ಅಕ್ರಮವಾಗಿ ಬರೋಬರಿ ಆಸ್ತಿ ಮಾಡಿದ್ದಾರೆ ಎಂಬ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಆಧರಿಸಿ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಏಪ್ರಿಲ್ 7 ರಂದು ರಾಜ್ಯದ ಹಲವು ಕಡೆಗಳಲ್ಲಿ ಇರುವ ಅವರ ಆಸ್ತಿಗಳ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಭಾರಿ ಮೊತ್ತದ ಅಕ್ರಮ ಆಸ್ತಿ ಮಾಡಿರುವುದು ಕಂಡು ಬಂದಿದ್ದು, ಆಕೆಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ವಿಜಯವಾಡದ ಆಂಧ್ರ ಪ್ರದೇಶ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಶಾಂತಿ ಅವರ ನಿವಾಸ, ಅವರ ತಾಯಿಗೆ ಸೇರಿದ ಬಟ್ಟೆ ಅಂಗಡಿ ಮತ್ತು ಅವರ ಸಹೋದರಿಯ ನಿವಾಸ ಸೇರಿದಂತೆ ರಾಜ್ಯಾದ್ಯಂತ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ವಿಶಾಖಪಟ್ಟಣಂನಲ್ಲಿರುವ ಮತ್ತೊಂದು ಆಸ್ತಿಯಲ್ಲೂ ಶೋಧ ನಡೆಸಲಾಗಿದೆ.
ನಾಲ್ಕು ಕಡೆ ಎಸಿಬಿ ಮಿಂಚಿನ ದಾಳಿ, ಕೋಟ್ಯಂತರ ರೂಪಾಯಿ ಆಸ್ತಿ ಪತ್ತೆ!
ಈ ಶೋಧ ಕಾರ್ಯದ ಸಮಯದಲ್ಲಿ ಎಸಿಬಿ ತನಿಖಾಧಿಕಾರಿಗಳು ಹಲವಾರು ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ವಿಶಾಖಪಟ್ಟಣಂನಲ್ಲಿರುವ ವಸತಿ ಫ್ಲಾಟ್, ವಿಜಯವಾಡದಲ್ಲಿರುವ ಜಿ+2 ಶ್ರೇಣಿಯ ಕಟ್ಟಡ, ಸುಮಾರು 770 ಗ್ರಾಂ ಚಿನ್ನಾಭರಣಗಳು, ಸುಮಾರು 3 ಕಿಲೋಗ್ರಾಂಗಳಷ್ಟು ಬೆಳ್ಳಿ ವಸ್ತುಗಳು, 1.15 ಲಕ್ಷ ರೂ. ನಗದು ಮತ್ತು ಸುಮಾರು 3 ಲಕ್ಷ ರೂ. ಬ್ಯಾಂಕ್ ಠೇವಣಿಗಳಿಗೆ ಸಂಬಂಧಿಸಿದ ವಿವರಗಳನ್ನು ಎಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇವುಗಳ ಜೊತೆಗೆ ವೋಕ್ಸ್ವ್ಯಾಗನ್ ಪೋಲೋ ಕಾರು, ಮೋಟಾರ್ಸೈಕಲ್, ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2020 ರಲ್ಲಿ ಆಂಧ್ರಪ್ರದೇಶ ಸಾರ್ವಜನಿಕ ಸೇವಾ ಆಯೋಗದ (Andhra Pradesh Public Service Commission) ಮೂಲಕ ಈ ಹುದ್ದೆಗೆ ನೇನೇಮಕಗೊಂಡಿದ್ದ ಶಾಂತಿ, ವಿಶಾಖಪಟ್ಟಣಂ ಮತ್ತು ವಿಜಯವಾಡ ಎರಡೂ ಕಡೆಯೂ ಸೇವೆ ಸಲ್ಲಿಸಿದ್ದರು. ಅಧಿಕಾರಿಗಳ ಪ್ರಕಾರ, ಅವರು ಜುಲೈ 2024 ರಿಂದ ಮಾರ್ಚ್ 2026 ರವರೆಗೂ ಅಮಾನತುಗೊಂಡಿದ್ದರು ಮತ್ತು ಅಧಿಕಾರಿಗಳ ದಾಳಿಯ ಸಮಯದಲ್ಲಿ ಹೊಸ ನಿಯೋಜನೆಗಾಗಿ ಕಾಯುತ್ತಿದ್ದರು ಎಂದು ತಿಳಿದು ಬಂದಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2) ಮತ್ತು ಸೆಕ್ಷನ್ 13(1)(b) ಅಡಿಯಲ್ಲಿ ಎಸಿಬಿ ಪೊಲೀಸರು ಈ ಭ್ರಷ್ಟ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕಾಯ್ದೆಯಡಿ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು, ಸರ್ಕಾರಿ ಉದ್ಯೋಗಿಗಳು ತಮ್ಮ ಕಾನೂನುಬದ್ಧ ಆದಾಯಕ್ಕೆ ಮೀರಿ ಆಸ್ತಿ ಮಾಡಿರುವುದು ಕಂಡುಬಂದರೆ ಪ್ರಕರಣ ದಾಖಲಿಸಬಹುದಾಗಿದೆ. ಬಂಧನದ ನಂತರ ಶಾಂತಿಯನ್ನು ವಿಜಯವಾಡದಲ್ಲಿರುವ ಎಸಿಬಿ ಪ್ರಕರಣಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಏಪ್ರಿಲ್ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ನಂತರ ಅವರನ್ನು ಜಿಲ್ಲಾ ಜೈಲಿಗೆ ಸ್ಥಳಾಂತರಿಸಲಾಗಿದೆ.


