ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತಿರುವನಂತಪುರಂಗೆ ರಹಸ್ಯ ಭೇಟಿ ನೀಡಿದ್ದರು. ಈ ವೇಳೆ, ಅವರು ಸ್ಥಳೀಯ ಬೇಕರಿಯೊಂದರಲ್ಲಿ ಚಿಪ್ಸ್ ಖರೀದಿಸಿದ್ದಾರೆ. ಮಫ್ತಿಯಲ್ಲಿದ್ದ ಭದ್ರತಾ ಸಿಬ್ಬಂದಿ ಜೊತೆ ಸಾಮಾನ್ಯರಂತೆ ಬಂದ ದೋವಲ್, ಅಂಗಡಿಯಿಂದ ವಾಪಸ್ ಹೋಗುವ ವಿಡಿಯೋ ಈಗ ವೈರಲ್ ಆಗಿದೆ.
ತಿರುವನಂತಪುರಂ (ಫೆ.5): ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ತಿರುವನಂತಪುರಂಗೆ ರಹಸ್ಯವಾಗಿ ಭೇಟಿ ನೀಡಿದ್ದ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಡೋವಲ್ ಅವರು VSSCಗೆ ಬಂದು, ಸಭೆಗಳಲ್ಲಿ ಭಾಗವಹಿಸಿ ವಾಪಸ್ ಹೋಗಿದ್ದು ಕೇರಳ ರಾಜ್ಯದ ಗುಪ್ತಚರ ಇಲಾಖೆಗೂ ತಿಳಿದಿರಲಿಲ್ಲ. ಇದೀಗ, ಅಜಿತ್ ದೋವಲ್ ಅವರು ನಗರದ ಪ್ರಸಿದ್ಧ ಬೇಕರಿಯೊಂದಕ್ಕೂ ಭೇಟಿ ನೀಡಿದ್ದ ವಿಷಯ ಬಹಿರಂಗವಾಗಿದೆ.
ತಿರುವನಂತರಪುರದ ಪಳವಂಗಾಡಿಯ 'ಮಹಾ ಚಿಪ್ಸ್' ಎಂಬ ಅಂಗಡಿಗೆ ಅಜಿತ್ ದೋವಲ್ ಭೇಟಿ ನೀಡಿದ್ದರು. ಮಫ್ತಿಯಲ್ಲಿದ್ದ ಭದ್ರತಾ ಸಿಬ್ಬಂದಿ ಜೊತೆ ತೀರಾ ಸಾಮಾನ್ಯವಾಗಿ ಬೇಕರಿಗೆ ಬಂದ ದೋವಲ್, ಚಿಪ್ಸ್ ಖರೀದಿಸಿ ವಾಪಸ್ ಹೋಗುವ ವಿಡಿಯೋ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜನವರಿ 22 ಮತ್ತು 23ರಂದು ಅಜಿತ್ ಡೋವಲ್ ತಿರುವನಂತಪುರಂನಲ್ಲಿದ್ದರು. ಈ ಪೈಕಿ ಒಂದು ದಿನ, ಬೆಳಗ್ಗೆ ಸುಮಾರು 8 ಗಂಟೆಗೆ ಅವರು ಪಳವಂಗಾಡಿಯ ಮಹಾ ಚಿಪ್ಸ್ ಅಂಗಡಿಗೆ ಬಂದಿದ್ದರು. ಭದ್ರತಾ ಸಿಬ್ಬಂದಿ ಜೊತೆ ಅಂಗಡಿಯೊಳಗೆ ಬಂದು, ಚಿಪ್ಸ್ ಖರೀದಿಸಿ ಹೋಗುವುದು ವಿಡಿಯೋದಲ್ಲಿ ಕಾಣಿಸುತ್ತದೆ.
"ರಾಷ್ಟ್ರೀಯ ಭದ್ರತಾ ಸಲಹೆಗಾರರು ಬರುತ್ತಾರೆಂದು ನಮಗೆ ತಿಳಿದಿರಲಿಲ್ಲ. ಅವರು ಬಂದು ಹೋದ ನಂತರ ಸಿಸಿಟಿವಿ ದೃಶ್ಯಗಳನ್ನು ನೋಡಿದಾಗಲೇ ಆ ವ್ಯಕ್ತಿ ಯಾರೆಂದು ಗೊತ್ತಾಗಿದ್ದು," ಎಂದು ಅಂಗಡಿ ಸಿಬ್ಬಂದಿ ಹೇಳಿದ್ದಾರೆ.
ಸಾಮಾನ್ಯ ವ್ಯಕ್ತಿಯಂತೆ ಬಂದಿದ್ದರು
"ಅವರು ಚಿಪ್ಸ್ ಕೊಳ್ಳಲು ಬಂದಿದ್ದರು. ಎಲ್ಲವನ್ನೂ ನೋಡಿದರು. ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬಂದರು. ಸಾಮಾನ್ಯವಾಗಿ ನಾವು 9 ಗಂಟೆಗೆ ಅಂಗಡಿ ತೆರೆಯುತ್ತೇವೆ, ಆದರೆ ಶಬರಿಮಲೆ ಸೀಸನ್ ಆಗಿದ್ದರಿಂದ ಆ ಸಮಯದಲ್ಲಿ 8 ಗಂಟೆಗೆ ತೆರೆದಿದ್ದೆವು. ಬಹುಶಃ ಇದನ್ನರಿತೇ ಅವರು ಆ ಸಮಯಕ್ಕೆ ಬಂದಿರಬಹುದು. ಆಗ ಹೆಚ್ಚು ಜನಸಂದಣಿ ಇರಲಿಲ್ಲ. ಪ್ರಕಾಶ್ ರಾಜ್, ಓಂ ಪುರಿ ಅವರಂತಹ ಅನೇಕ ಗಣ್ಯರು ಇಲ್ಲಿಗೆ ಬಂದಿದ್ದಾರೆ. ವಿವಿಐಪಿಗಳು, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖರು ಬರುತ್ತಾರೆ. ಆದರೆ, ಅಜಿತ್ ದೋವಲ್ ಅವರೇ ಬರುತ್ತಾರೆಂದು ನಾವು ಊಹಿಸಿರಲಿಲ್ಲ," ಎಂದು ಸಿಬ್ಬಂದಿ ತಮ್ಮ ಅಚ್ಚರಿಯನ್ನು ಹಂಚಿಕೊಂಡಿದ್ದಾರೆ.
ಪಿಎಸ್ಎಲ್ವಿಯ ಸರಣಿ ವೈಫಲ್ಯಗಳ ಬಗ್ಗೆ ತನಿಖೆ ನಡೆಸಲು ಅಜಿತ್ ಡೋವಲ್ ತಿರುವನಂತಪುರಂಗೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಅವರು ಈ ಜವಾಬ್ದಾರಿ ಹೊತ್ತಿದ್ದರು. ತಿರುವನಂತಪುರದ ತುಂಬಾದಲ್ಲಿರುವ ವಿಎಸ್ಎಸ್ಸಿಗೆ ಭೇಟಿ ನೀಡಿ, ವಿಜ್ಞಾನಿಗಳನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಿದ್ದರು. ದೆಹಲಿಗೆ ಹಿಂದಿರುಗಿದ ನಂತರ, ದೋವಲ್ ಅವರು ಪಿಎಸ್ಎಲ್ವಿ ವೈಫಲ್ಯಗಳ ಕುರಿತ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವೈಫಲ್ಯಗಳ ಹಿಂದೆ ಯಾವುದೇ ವಿಧ್ವಂಸಕ ಕೃತ್ಯವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ವೈಫಲ್ಯಕ್ಕೆ ಕಾರಣವಾದ ಅಂಶಗಳನ್ನು ದೋವಲ್ ವಿಶ್ಲೇಷಿಸಿದ್ದು, ಅದನ್ನು ಆಧರಿಸಿ ಕೆಲವು ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.


