ಪುಣೆಯಲ್ಲಿ ಹೊಸದಾಗಿ ನಿರ್ಮಿಸಿದ ಹಡಪ್ಸರ್–ಮುಂಧ್ವಾ ರಸ್ತೆಯು, ಕೇವಲ ನಾಲ್ಕೇ ದಿನದಲ್ಲಿ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದೆ. ಈ ಕಳಪೆ ಕಾಮಗಾರಿಯಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿದ್ದು, ಪುಣೆ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ (ಜು.5): ಮಹಾರಾಷ್ಟ್ರದಲ್ಲಿ ಪುಣೆಯಲ್ಲಿ ಹೊಸದಾಗಿ ರಸ್ತೆ ನಿರ್ಮಿಸಿ ಡಾಂಬರ್ ಹಾಕುವ ಕೆಲಸ ಮುಗಿಸಿದ ಕೇವಲ ನಾಲ್ಕೇ ದಿನದಲ್ಲಿ ನಿನ್ನೆ ಸುರಿದ ಮಳೆಗೆ ರಸ್ತೆಯ ತುಂಬಾ ಹೊಂಡ-ಗುಂಡಿಗಳು ಬಿದ್ದಿರುವುದು ಮಹಾರಾಷ್ಟ್ರದಾದ್ಯಂತ ರಸ್ತೆಯ ಗುಣಮಟ್ಟದ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಹಳೆ ರಸ್ತೆ ಮಳೆಗೆ ಗುಂಡಿ ಬಿದ್ದಿದೆ ಎನ್ನಬಹುದು ಆದರೆ ರಸ್ತೆ ನಿರ್ಮಿಸಿ ಕೇವಲ ವಾರದೊಳಗೆ ಸುರಿದ ಒಂದು ಮಳೆಗೆ ರಸ್ತೆ ಈ ಪ್ರಮಾಣದಲ್ಲಿ ಗುಂಡಿ ಬಿದ್ದಿದೆ ಎಂದರೆ ಇದು ಯಾವ ರೀತಿ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸಿರಹುದು ಎಂದು ಪ್ರಶ್ನೆಗಳು ಕೇಳಿಬಂದಿವೆ.
ಹಡಪ್ಸರ್-ಮುಂಧ್ವಾ ರಸ್ತೆ:
ಹಡಪ್ಸರ್–ಮುಂಧ್ವಾ ರಸ್ತೆಯ ಒಂದು ಭಾಗದಲ್ಲಿ ಡಾಂಬರ್ ಹಾಕಿ ಕೆಲವೇ ದಿನಗಳಾಗಿವೆ. ಈಗ ಈ ರಸ್ತೆ ಪ್ರಯಾಣ ಮಾಡಲು ಯೋಗ್ಯವಲ್ಲದ ರೀತಿ ರಸ್ತೆ ಮೇಲೆ ಗುಂಡಿಗಳು ತುಂಬಿವೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸುವುದು ಅಪಾಯಕಾರಿ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹೊಸದಾಗಿ ನಿರ್ಮಿಸಿದ ರಸ್ತೆ ಇಷ್ಟು ಹಾಳಾಗುವುದು ಹೇಗೆ ಸಾಧ್ಯ? ಒಂದೋ ಕಾಮಗಾರಿ ಗುಣಮಟ್ಟ ಸರಿಯಾಗಿಲ್ಲ. ಬೇಕಾಬಿಟ್ಟಿಯಾಗಿ ನಿರ್ಮಿಸಿ ಮೇಲೆ ಡಾಂಬರ್ ಹಾಕಿರುವ ಸಾಧ್ಯತೆ ಹೆಚ್ಚಿದೆ. ರಸ್ತೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಹೀಗಾಗಿ ತಕ್ಷಣ ಈ ಬಗ್ಗೆ ತನಿಖೆ ಮಾಡಿ, ರಸ್ತೆ ಆದಷ್ಟು ಬೇಗ ದುರಸ್ತಿ ಮಾಡುವಂತೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಪುಣೆ ಮಹಾನಗರ ಪಾಲಿಕೆ ವಿರುದ್ಧ ಕಿಡಿ
ಈ ಘಟನೆ ಬಳಿಕ ಪುಣೆ ಮಹಾನಗರ ಪಾಲಿಕೆ (PMC) ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಮಳೆಗಾಲಕ್ಕೂ ಮುನ್ನ ನಡೆದ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಬೇಕೆಂದು ಒತ್ತಾಯಿಸಲಾಗಿದೆ


