ಈ ವರ್ಷ ಮುಂಗಾರು ಮಾರುತಗಳು ವಾಡಿಕೆಗಿಂತ ಮುಂಚಿತವಾಗಿ ಆಗಮಿಸುವ ಸಾಧ್ಯತೆಯಿದೆ. ಯುರೋಪ್ ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಾರ, ಮೇ 17ರಂದು ಅಂಡಮಾನ್ ಮತ್ತು ಮೇ 25ರ ಸುಮಾರಿಗೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದ್ದು, ದಕ್ಷಿಣ ಭಾರತಕ್ಕೆ ಬಿಸಿಲಿನಿಂದ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.
ನವದೆಹಲಿ: ದೇಶದ ಕೃಷಿ ಮತ್ತು ಆರ್ಥಿಕತೆಯ ಮೂಲವಾದ ಮುಂಗಾರು ಮಾರುತಗಳುಈ ವಾರದ ಕೊನೆಯಲ್ಲಿ (ಮೇ 17) ದಕ್ಷಿಣ ಬಂಗಾಳದ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್, ನಿಕೋಬಾರ್ ದ್ವೀಪಗಳಿಗೆ ಆಗಮಿಸುವ ಸಾಧ್ಯತೆಯಿದೆ. ವಾಡಿಕೆಯಂತೆ ಇದು ಮೇ 22ಕ್ಕೆ ಅಂಡಮಾನ್ ಪ್ರವೇಶಿಸುತ್ತದೆ. ಆದರೆ ಈ ಬಾರಿ ಸುಮಾರು 5-6 ದಿನ ಮುಂಚಿತವಾಗಿ ಆಗಮಿಸಲಿದೆ. ಸಾಮಾನ್ಯವಾಗಿ ಜೂ.1ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುತ್ತದೆ. ಈ ಮೂಲಕ 4 ತಿಂಗಳ ಮಳೆಗಾಲ ಆರಂಭವಾಗುತ್ತದೆ.

ಈ ವರ್ಷ ಮೇ 25ಕ್ಕೇ ಕೇರಳಕ್ಕೆ ಮುಂಗಾರು ಆಗಮನ?
ತಿರುವನಂತಪುರಂ: ‘ವಾಡಿಕೆಯಂತೆ ಕೇರಳಕ್ಕೆ ಜೂ.1ರ ಸುಮಾರಿಗೆ ಆರಂಭವಾಗುತ್ತಿದ್ದ ಮಾನ್ಸೂನ್ ಈ ವರ್ಷ ಮೇ ಕೊನೆಯ ವಾರದಲ್ಲೇ (ಮೇ.25-ಜೂ.1) ಆರಂಭವಾಗಲಿದ್ದು, ಬಿಸಿಲಿನ ಧಗೆಗೆ ಬೇಸತ್ತಿರುವ ದಕ್ಷಿಣ ಭಾರತಕ್ಕೆ ಶೀಘ್ರವಾಗಿ ತಂಪೆರೆಯಲಿದೆ’ ಎಂದು ಯುರೋಪ್ ಹವಾಮಾನ ಮುನ್ಸೂಚನೆ ಕೇಂದ್ರ ಹೇಳಿದೆ.
ದಕ್ಷಿಣ-ಪೂರ್ವ ಅರಬ್ಬೀ ಸಮುದ್ರದಲ್ಲಿ ಬಲವಾದ ಪಶ್ಚಿಮ ಗಾಳಿಗಳು ರೂಪುಗೊಳ್ಳುವುದರಿಂದ ಕೇರಳ ಮತ್ತು ದಕ್ಷಿಣ ತಮಿಳುನಾಡು ಪ್ರದೇಶಗಳಿಗೆ ಹೆಚ್ಚಿನ ತೇವಾಂಶವುಂಟಾಗಬಹುದು. ಇದು ಸಾಧ್ಯವಾದರೆ, ಕೇರಳದಲ್ಲಿ ಮಾನ್ಸೂನ್ ಮೇ 25ರಷ್ಟು ಮುಂಚಿತವಾಗಿ ಆರಂಭವಾಗಬಹುದು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೇ 17ರಿಂದ 25ರ ನಡುವೆ, ದಕ್ಷಿಣ ಭಾರತಕ್ಕೆ ಮೇ ಕೊನೆಯ ವೇಳೆಗೆ ಮಾನ್ಸೂನ್ ತಲುಪುವ ನಿರೀಕ್ಷೆ ಇದೆ. ಕೇರಳ ಮತ್ತು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಮೇ 25ರಿಂದ ಜೂ.1ರವರೆಗೆ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.


