Statehood for Ladakh: ಲಡಾಖ್‌ಗೆ ರಾಜ್ಯ ಸ್ಥಾನಮಾನಕ್ಕಾಗಿ ನಡೆದ ಪ್ರತಿಭಟನೆು ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಪೊಲೀಸ್ ವ್ಯಾನ್ ಮತ್ತು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ.

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಬಿಜೆಪಿ ಕಚೇರಿಗೆ ಪೊಲೀಸ್ ವ್ಯಾನ್‌ಗೆ ಬೆಂಕಿ

ಲೇಹ್: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಲೇಹ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನ ಹಿಂಸಾಚಾರಕ್ಕೆ ಇಳಿದ ಪರಿಣಾಮ ಘಟನಾ ಸ್ಥಳದಲ್ಲಿ ಪರಿಸ್ಥಿತಿ ಭುಗಿಲೆದ್ದಿದೆ. ಪ್ರತಿಭಟನಾಕಾರರು ಲೇಹ್‌ನ ಬಿಜೆಪಿ ಕಚೇರಿಗೆ ಹಾಗೂ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಲ್ಲದೇ ಕಲ್ಲು ತೂರಾಟ ನಡೆಸಿದ ಪರಿಣಾಮ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಚಕಮಕಿ ನಡೆದಿದೆ. ಕಳೆದ ಕೆಲ ವಾರಗಳಿಂದಲೂ ಇಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ ಇಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಪೊಲೀಸ್ ವಾಹನಗಳಿಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹ

ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಹಾಗೂ 6ನೇ ಶೆಡ್ಯೂಲ್ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಕಳೆದ 14 ದಿನಗಳಿಂದ ಇಲ್ಲಿ ಪರಿಸರವಾದಿ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರಿಗೆ ಬೆಂಬಲ ವ್ಯಕ್ತಪಡಿಸಿ ಲೇಹ್ ಅಪೆಕ್ಸ್ ಬಾಡಿ (LAB)ಸಂಘಟನೆಯ ಯುವ ವಿಭಾಗವು ಈ ಪ್ರತಿಭಟನೆಗೆ ಕರೆ ನೀಡಿತು.

ಲಡಾಖ್‌ಗೆ ರಾಜ್ಯ ಸ್ಥಾನಮಾನದ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 20 ರಂದು, ಕೇಂದ್ರ ಗೃಹ ಸಚಿವಾಲಯ (MHA) ಲಡಾಖ್ ನಾಯಕರೊಂದಿಗೆ ಮಾತುಕತೆ ಪುನರಾರಂಭಿಸುವುದಾಗಿ ಘೋಷಿಸಿತ್ತು. ಇದರ ಮುಂದಿನ ಸುತ್ತಿನ ಮಾತುಕತೆ ಅಕ್ಟೋಬರ್ 6 ರಂದು ನಿಗದಿಯಾಗಿದೆ. ಆದರೆ ಇದರ ನಡುವೆ ಪ್ರತಿಭಟನೆ ಭುಗಿಲೆದ್ದಿದೆ.

ಇದನ್ನೂ ಓದಿ: ಹಾವು ಹಿಡಿಯಲು ಬಂದವನನ್ನೇ ಬಂಧಿಯಾಗಿಸಿದ ಹೆಬ್ಬಾವು

ಲಡಾಖ್‌ನಲ್ಲಿ ಲೇಹ್ ಅಪೆಕ್ಸ್ ಬಾಡಿ(LAB)ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA)ಅಡಿಯಲ್ಲಿ ರಾಜಕೀಯ ಶಕ್ತಿಗಳು ರಾಜ್ಯ ಸ್ಥಾನಮಾನ ಮತ್ತು ಆರನೇ ಶೆಡ್ಯೂಲ್ ಸ್ಥಾನಮಾನವನ್ನು ಒತ್ತಾಯಿಸಿ ನಡೆದ ಸುದೀರ್ಘ ಪ್ರತಿಭಟನೆಗಳ ನಂತರ ಕೇಂದ್ರ ಗೃಹ ಸಚಿವಾಲಯವು 2023ರ ಜನವರಿ ಜನವರಿ 2ರಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಿತ್ತು. ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ರಚನೆಯಾದ ಎಲ್‌ಎಬಿ ಮತ್ತು ಕೆಡಿಎಯ ಜಂಟಿ ನಾಯಕತ್ವ ಮತ್ತು ಸಮಿತಿಯ ನಡುವಿನ ಕೊನೆಯ ಸುತ್ತಿನ ಮಾತುಕತೆಗಳು ಮೇ 27 ರಂದು ನಡೆದಿವೆ. ಇದು ಲಡಾಖ್‌ನಲ್ಲಿ ನಿವಾಸ ನೀತಿಯನ್ನು ಪರಿಚಯಿಸಲು ಕಾರಣವಾಯಿತು. ಅಂದಿನಿಂದ ಯಾವುದೇ ಮಾತುಕತೆಗಳು ನಡೆದಿಲ್ಲ.

ಇದನ್ನೂ ಓದಿ: ಡಿಸಾಸ್ಟರ್ ಸಿನಿಮಾಗಳಂತೆ ಕಾರುಗಳು ಚಲಿಸುತ್ತಿದ್ದಂತೆ ಬಾಯ್ತರೆದ ಭೂಮಿ: 50 ಅಡಿ ಆಳಕ್ಕೆ ಬಿದ್ದ ಕಾರುಗಳು

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾರ್ಗಿಲ್ ಡೆಮಾಕ್ರಟಿಕ್ ಫ್ರಂಟ್‌ನ ನಾಯಕ ಸಜದ್ ಕಾರ್ಗಿಲಿ, ಲೇಹ್‌ನಲ್ಲಿ ಏನೇ ನಡೆಯುತ್ತಿದ್ದರೂ ಅದು ದುರದೃಷ್ಟಕರ. ಒಂದು ಕಾಲದಲ್ಲಿ ಶಾಂತಿಯುತವಾಗಿದ್ದ ಲಡಾಖ್, ಈಗ ಸರ್ಕಾರದ ವಿಫಲ ಕೇಂದ್ರಾಡಳಿತ ಪ್ರದೇಶದ ಪ್ರಯೋಗದಿಂದಾಗಿ ಅಲ್ಲಿ ಹತಾಶೆ ಮತ್ತು ಅಭದ್ರತೆ ಆವರಿಸಿದೆ. ಜವಾಬ್ದಾರಿ ಸರ್ಕಾರದ ಮೇಲಿದೆ. ಲಡಾಖ್‌ಗೆ ರಾಜ್ಯ ಸ್ಥಾನಮಾನವನ್ನು ನೀಡುವುದರ ಬಗ್ಗೆ ಸಂವಾದವನ್ನು ಪುನರಾರಂಭಿಸಿ, ಸಂವೇದನಾಶೀಲವಾಗಿ ವರ್ತಿಸಿ ಮತ್ತು ಲಡಾಖ್‌ನ ರಾಜ್ಯತ್ವ ಮತ್ತು ಆರನೇ ಶೆಡ್ಯೂಲ್ ಬೇಡಿಕೆಯನ್ನು ವಿಳಂಬವಿಲ್ಲದೆ ಪೂರೈಸಿ. ಅಲ್ಲದೆ ಜನರು ಈ ವಿಚಾರವಾಗಿ ಶಾಂತಿಯುತವಾಗಿ ಮತ್ತು ದೃಢವಾಗಿ ಉಳಿಯಬೇಕೆಂದು ನಾನು ಮನವಿ ಮಾಡುತ್ತೇನೆ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

Scroll to load tweet…

ಪ್ರತಿಭಟನೆ ಹಿಂಸೆಗೆ ತಿರುಗಿದ ಬೆನ್ನಲೇ ಉಪವಾಸ ಸತ್ಯಾಗ್ರಹ ಹಿಂಪಡೆದ ವಾಂಗ್‌ಚುಕ್

ಈ ನಡುವೆ ಪ್ರತಿಭಟನೆ ಹಿಂಸಾಚಾರದ ರೂಪ ತಳೆಯುತ್ತಿದ್ದಂತೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರವಾದಿ ವಾಂಗ್‌ಚುಕ್ ಅವರು ತಮ್ಮ ಈ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ. ಲೇಹ್‌ನಲ್ಲಿ ತುಂಬಾ ದುಃಖಕರ ಘಟನೆಗಳು ನಡೆದಿವೆ. ಶಾಂತಿಯುತ ಮಾರ್ಗದ ನನ್ನ ಸಂದೇಶ ಇಂದು ವಿಫಲವಾಗಿದೆ. ದಯವಿಟ್ಟು ಈ ಅಸಂಬದ್ಧತೆಯನ್ನು ನಿಲ್ಲಿಸುವಂತೆ ನಾನು ಯುವಕರಲ್ಲಿ ಮನವಿ ಮಾಡುತ್ತೇನೆ. ಇದು ನಮ್ಮ ಉದ್ದೇಶಕ್ಕೆ ಹಾನಿ ಮಾಡುತ್ತದೆ ಎಂದು ವಾಂಗ್‌ಚುಕ್ ಎಕ್ಸ್‌ನಲ್ಲಿ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಸ್ನೇಹಿತರೇ ನಮ್ಮ ಪ್ರತಿಭಟನೆಯ 15 ನೇ ದಿನವಾದ ಇಂದು, ಲೇಹ್‌ನಲ್ಲಿ ಭಾರಿ ಪ್ರಮಾಣದಲ್ಲಿ ಹಿಂಸಾಚಾರ ನಡೆದಿರುವುದು ಅತ್ಯಂತ ದುಃಖಕರವಾಗಿದೆ. ನಿನ್ನೆ, 35 ದಿನಗಳಿಂದ ಉಪವಾಸ ಮಾಡುತ್ತಿದ್ದವರಲ್ಲಿ ಇಬ್ಬರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಇದು ಜನರನ್ನು ಕೋಪಗೊಳಿಸಿತು ಮತ್ತು ಲೇಹ್‌ನಲ್ಲಿ ಬಂದ್‌ಗೆ ಕರೆ ನೀಡಲಾಯಿತು. ಸಾವಿರಾರು ಯುವಕರು ಬೀದಿಗಿಳಿದರು ಎಂದು ಅವರು ಹೇಳಿದರು.

ಇದನ್ನೂ ಓದಿ: ಸ್ವಾಮೀಜಿಯಿಂದಲೇ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ: ಕೇಸ್ ದಾಖಲಾಗುತ್ತಿದ್ದಂತೆ ಚೈತನ್ಯಾನಂದ ಸರಸ್ವತಿ ನಾಪತ್ತೆ

ಅಲ್ಲದೇ ಈ ಪ್ರತಿಭಟನೆಯನ್ನು ಅವರು ನೇಪಾಳದಲ್ಲಿ ಜೇನ್ ಝಿ ಸಮುದಾಯ ನಡೆಸಿದ ಪ್ರತಿಭಟನೆಗೆ ಹೋಲಿಸಿದ್ದಾರೆ. ಅವರು(ಯುವಕರು) ಐದು ವರ್ಷಗಳಿಂದ ನಿರುದ್ಯೋಗಿಗಳಾಗಿದ್ದಾರೆ. ಯುವಕರನ್ನು ನಿರುದ್ಯೋಗಿಗಳಾಗಿ ಇಡುವುದು ಮತ್ತು ಅವರ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಸಿದುಕೊಳ್ಳುವುದು ಅಶಾಂತಿಗೆ ಕಾರಣವಾಗುತ್ತದೆ ಎಂದು ನಾನು ವರ್ಷಗಳಿಂದ ಹೇಳುತ್ತಿದ್ದೇನೆ. ಹಲವಾರು ಸಮಸ್ಯೆಗಳಿವೆ ಆದರೆ ನಾನು ಅವುಗಳ ಬಗ್ಗೆ ನಂತರ ಮಾತನಾಡುತ್ತೇನೆ ಎಂದು ವಾಂಗ್‌ಚುಕ್ ಹೇಳಿದ್ದಾರೆ. ಲಡಾಖ್ ಈ ಹಿಂದೆ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿತ್ತು. ಆದರೆ 2019 ರ ಆಗಸ್ಟ್ 5ರಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದೆ. ಅದೇ ಸಮಯದಲ್ಲಿ, ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದೆ.

Scroll to load tweet…

Scroll to load tweet…