Pythons Deadly Grip: ಹಾವು ಹಿಡಿಯಲು ಬಂದು ಹೆಬ್ಬಾವಿನ ಬಿಗಿ ಹಿಡಿತದಲ್ಲಿ ಬಂಧಿಯಾದ ಉರಗ ರಕ್ಷಕನನ್ನು ಗ್ರಾಮಸ್ಥರೇ ನಂತರ ರಕ್ಷಿಸಿದಂತಹ ಘಟನೆ ಉತ್ತರಪ್ರದೇಶದ ಮುಜಾಫರ್‌ಪುರದಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾವು ಹಿಡಿಯಲು ಬಂದವನನ್ನೇ ಬಂಧಿಯಾಗಿಸಿದ ಹೆಬ್ಬಾವು

ಮುಜಾಫರ್‌ನಗರ: ಹಾವು ಹಿಡಿಯಲು ಬಂದವನನ್ನೇ ಗ್ರಾಮಸ್ಥರು ಹಾವಿನಿಂದ ರಕ್ಷಿಸಬೇಕಾದಂತಹ ಸ್ಥಿತಿ ನಿರ್ಮಾಣವಾದಂತಹ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಭಾನುವಾರ ಸಂಜೆ ಮುಜಾಫರ್‌ನಗರ ಜಿಲ್ಲೆ ಪಂಚಾಲ್‌ನ ಸಾಥೇಡಿ ಎಂಬಲ್ಲಿ ಮೋನು ಎಂಬುವರಿಗೆ ಸೇರಿದ ಟೈರ್ ಪಂಕ್ಚರ್ ಅಂಗಡಿಯಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡಿತ್ತು. ಹಾವು ನೋಡಿ ಭಯಗೊಂಡ ಅಲ್ಲಿನ ಜನ ಹಾವುಗಳನ್ನು ಹಿಡಿಯುವುದಕ್ಕೆ ಪ್ರಸಿದ್ಧರಾಗಿರುವ ಸ್ಥಳಿಯ ವ್ಯಕ್ತಿ ಪ್ರವೀಣ್ ಪಂಚಲ್ ಅವರಿಗೆ ಕರೆ ಮಾಡಿ ಹಾವು ಹಿಡಿಯುವಂತೆ ಮನವಿ ಮಾಡಿದರು. ಅದರಂತೆ ಸ್ಥಳಕ್ಕೆ ಆಗಮಿಸಿದ ಪ್ರವೀಣ್ ಅವರು ಈ ಭಾರಿ ಗಾತ್ರದ 20 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಆದರೆ ತಾವು ಹಿಡಿದ ಈ ಹೆಬ್ಬಾವನ್ನು ಜನರಿಗೆ ತೋರಿಸುವ ವೇಳೆ ಈ ಹೆಬ್ಬಾವು ಪ್ರವೀಣ್ ಅವರ ಕೈಗಳನ್ನು ಸುತ್ತಿಕೊಂಡು ಬಿಡಿಸಿಕೊಳ್ಳಲಾಗದಂತೆ ಹಿಡಿತ ಬಿಗಿಗೊಳಿಸಿದೆ.

ಹಾವಿನಿಂದ ಉರಗ ರಕ್ಷಕನ ರಕ್ಷಿಸಿದ ಗ್ರಾಮಸ್ಥರು

ನಂತರ ಹಾವನ್ನು ಹಿಡಿಯುವಂತೆ ಪ್ರವೀಣ್ ಅವರನ್ನು ಕರೆಸಿದ್ದ ಗ್ರಾಮಸ್ಥರೇ ಎಲ್ಲರೂ ಸೇರಿ ಹಾವಿನ ಹಿಡಿತದಿಂದ ಪ್ರವೀಣ್ ಅವರನ್ನು ರಕ್ಷಿಸಿದ್ದಾರೆ. ಹಾವಿನ ಬಿಗಿ ಹಿಡಿತಕ್ಕೆ ಸಿಲುಕಿದ ಪ್ರವೀಣ್ ಪಂಚಾಲ್ ಅವರ ಕೈಗಳು ಕೆಲ ನಿಮಿಷದಲ್ಲೇ ಕೆಂಪು ಬಣ್ಣಕ್ಕೆ ತಿರುಗಿದ್ದು, ಊದಿಕೊಳ್ಳಲು ಆರಂಭಿಸಿದೆ. ಇದರಿಂದ ಅಲ್ಲಿ ಸೇರಿದ ಜನ ಆತಂಕಗೊಂಡಿದ್ದರು. ಆದರೂ ಧೈರ್ಯವಾಗಿ ಮುಂದೆ ಬಂದ ಗ್ರಾಮಸ್ಥರು ಹಾವಿನ ಹಿಡಿತದಿಂದ ಪ್ರವೀಣ್ ಪಂಚಲ್ ಅವರನ್ನು ಬಿಡಿಸಿ ರಕ್ಷಣೆ ಮಾಡಿದ್ದಾರೆ. ನಂತರ ಸಮೀಪದ ಕಾಲುವೆಯ ಬಳಿ ಪಂಚಲ್ ಅವರು ಹಾವನ್ನು ಬಿಡುಗಡೆ ಮಾಡಿದ್ದಾರೆ. ಹೆಬ್ಬಾವನ್ನು ಪ್ರವೀಣ್ ಪಂಚಲ್ ಅವರು ಸೆರೆಹಿಡಿಯುವುದರಿಂದ ಹಿಡಿದು ಗ್ರಾಮಸ್ಥರು ಪಂಚಲ್‌ ಅವರನ್ನು ಹೆಬ್ಬಾವಿನ ಹಿಡಿತದಿಂದ ಬಿಡಿಸುವವರೆಗಿನ ಸಂಪೂರ್ಣ ದೃಶ್ಯವನ್ನು ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಲಾಗಿದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಮುಜಾಫರ್‌ನಗರ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ರಾಜೀವ್ ಕುಮಾರ್, ಜನರು ತಾವಾಗಿಯೇ ಹಾವುಗಳನ್ನು ಕೆಣಕಲು ಹೋಗಬಾರದು ಎಂದು ಹೇಳಿದರು. ಮನೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಹಾವು ಕಂಡುಬಂದರೆ, ಜನರು ದೂರವಿದ್ದು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂಬುದು ನನ್ನ ಸಲಹೆ. ನಮ್ಮಲ್ಲಿ ನಾಲ್ಕು ವಲಯಗಳಲ್ಲಿ ಸಾಕಷ್ಟು ಉಪಕರಣಗಳಿವೆ ಮತ್ತು ನಮ್ಮ ತರಬೇತಿ ಪಡೆದ ಸಿಬ್ಬಂದಿ ಮಾಹಿತಿ ತಲುಪಿದ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಸರಿಯಾದ ಪರಿಕರಗಳಿಲ್ಲದೆ ಹಾವುಗಳನ್ನು ನಿರ್ವಹಿಸುವುದು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಅಪಾಯಕಾರಿ ಎಂದು ಅವರು ತಿಳಿಸಿದರು.

ಹೆಬ್ಬಾವುಗಳಲ್ಲಿ ವಿಷವಿಲ್ಲದಿದ್ದರೂ ಜೀವಕ್ಕೆ ಮಾರಕ:

ಹೆಬ್ಬಾವುಗಳು ಹೆಚ್ಚು ವಿಷಕಾರಿಯಲ್ಲದಿರಬಹುದು, ಅವುಗಳ ಸ್ನಾಯುಗಳ ಬಲವು ಬಹಳ ಅಗಾಧವಾಗಿದ್ದು, ಹಾವುಗಳು ಹಿಡಿತ ಬಿಗಿಗೊಳಿಸಿದರೆ ಜೀವಕ್ಕೆ ಮಾರಕವಾಗಬಹುದು. ವಿಶೇಷವಾಗಿ ಮಕ್ಕಳನ್ನು ಹೆಬ್ಬಾವಿನ ಸಮೀಪದಿಂದ ದೂರವಿಡಬೇಕು. ಎಲ್ಲಿಯಾದರೂ ಕಂಡುಬಂದರೆ, ತಕ್ಷಣ ನಮಗೆ ತಿಳಿಸಿ ಮತ್ತು ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಕುಮಾರ್ ಹೇಳಿದರು. ಘಟನೆಯಲ್ಲಿ ಪ್ರವೀಣ್ ಅವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಆದರೆ ತಜ್ಞರ ಸಹಾಯವಿಲ್ಲದೆ ಹಾವುಗಳ ಮುಖಾಮುಖಿ ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಸರೀಸೃಪಗಳನ್ನು ನಿಭಾಯಿಸಲು ಪ್ರಯತ್ನಿಸುವ ಬದಲು ಅಧಿಕಾರಿಗಳಿಗೆ ಮಾಹಿತಿ ನೀಡುವುದು ಭಾಗಿಯಾಗಿರುವ ಎಲ್ಲರಿಗೂ ಸುರಕ್ಷಿತ ಆಯ್ಕೆಯಾಗಿದೆ ಎಂದು ಅರಣ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ: ಡಿಸಾಸ್ಟರ್ ಸಿನಿಮಾಗಳಂತೆ ಕಾರುಗಳು ಚಲಿಸುತ್ತಿದ್ದಂತೆ ಬಾಯ್ತರೆದ ಭೂಮಿ: 50 ಅಡಿ ಆಳಕ್ಕೆ ಬಿದ್ದ ಕಾರುಗಳು

ಇದನ್ನೂ ಓದಿ: ಸ್ವಾಮೀಜಿಯಿಂದಲೇ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ: ಕೇಸ್ ದಾಖಲಾಗುತ್ತಿದ್ದಂತೆ ಚೈತನ್ಯಾನಂದ ಸರಸ್ವತಿ ನಾಪತ್ತೆ

ಇದನ್ನೂ ಓದಿ: ಎರಡು ಕೈಗಳಿಲ್ಲ, ಕಾಲ್ಗಳಿಲ್ಲ, ಆದರೂ ಡ್ರಮ್ ಬಾರಿಸಲು ಯತ್ನಿಸಿದ ಪುಟ್ಟ ಕಂದ: ಭಾವುಕಳಾದ ಅಮ್ಮ