26 ಪ್ರವಾಸಿಗರ ಬಲಿ ಪಡೆದ ಪಹಲ್ಗಾಮ್‌ ದಾಳಿಯ ನಂತರದ ಮೊದಲ ಮನ್ ಕೀ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಭಯೋತ್ಪಾದನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.

ನವದೆಹಲಿ: 26 ಪ್ರವಾಸಿಗರ ಬಲಿ ಪಡೆದ ಪಹಲ್ಗಾಮ್‌ ದಾಳಿಯ ನಂತರದ ಮೊದಲ ಮನ್ ಕೀ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಭಯೋತ್ಪಾದನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಇತ್ತೀಚಿನ ದಾಳಿಯು ಭಯೋತ್ಪಾದಕರ ಹೆಚ್ಚುತ್ತಿರುವ ಹತಾಶೆಯ ಸಂಕೇತವಾಗಿದೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ತಾನು ಆಳವಾಗಿ ಅನುಭವಿಸುತ್ತಿರುವುದಾಗಿ ಅವರು ಹೇಳಿದರು. 

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಮೋದಿ, ಕಾಶ್ಮೀರ ಅಭಿವೃದ್ಧಿ ಕಾಣುತ್ತಿತ್ತು, ಆದರೆ ಉಗ್ರರು ಅದನ್ನು ನಾಶ ಮಾಡಿದರು. ಭಯೋತ್ಪಾದನೆಯ ವಿರುದ್ಧದ ನಮ್ಮ ಈ ಯುದ್ಧದಲ್ಲಿ, ದೇಶದ ಐಕ್ಯತೆ ಮತ್ತು 140 ಕೋಟಿ ಭಾರತೀಯರ ಒಗ್ಗಟ್ಟು ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಏಕತೆಯೇ ಭಯೋತ್ಪಾದನೆಯ ವಿರುದ್ಧದ ನಮ್ಮ ನಿರ್ಣಾಯಕ ಹೋರಾಟಕ್ಕೆ ಶಕ್ತಿಯಾಗಿದೆ, ಆಧಾರವಾಗಿದೆ. ಈ ಸವಾಲನ್ನು ಎದುರಿಸಲು ನಾವು ನಮ್ಮ ಸಂಕಲ್ಪವನ್ನು ಬಲಪಡಿಸಬೇಕು. ನಾವು ಒಂದು ರಾಷ್ಟ್ರವಾಗಿ ಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಈ ಭಯೋತ್ಪಾದಕ ದಾಳಿಯ ನಂತರ ಇಡೀ ದೇಶವು ಒಂದೇ ಧ್ವನಿಯಲ್ಲಿ ಹೇಗೆ ಮಾತನಾಡುತ್ತಿದೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಇದನ್ನೂ ಓದಿ:ಭಾರತ ಬಿಡಲು ಇಂದೇ ಕೊನೆ ದಿನ : 3 ದಿನಗಳಲ್ಲಿ ತೆರಳಿದ ಪಾಕಿಗಳ ಸಂಖ್ಯೆ ಕೇವಲ 450

ಪಹಲ್ಗಾಮ್ ದುರಂತಕ್ಕೆ ಬಲಿಯಾದ ಸಂತ್ರಸ್ತರ ಕುಟುಂಬಗಳೊಂದಿಗೆ ತಾವಿರುವುದಾಗಿ ಹೇಳಿದ ಮೋದಿ, ಭಾರತವು ಭಯೋತ್ಪಾದನೆಯ ವಿರುದ್ಧ ಸಂಪೂರ್ಣ ಶಕ್ತಿಯಿಂದ ಹೋರಾಡುವುದನ್ನು ಮುಂದುವರಿಸುತ್ತದೆ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವು ನಮ್ಮ ನೋವು ಕೂಡ, ಭಯ ಮತ್ತು ಹಿಂಸೆಯನ್ನು ಹರಡಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ರಾಷ್ಟ್ರವು ಒಗ್ಗಟ್ಟಿನಿಂದ ಇರಬೇಕೆಂದು ಪ್ರಧಾನಿ ಒತ್ತಾಯಿಸಿದರು.

ಕಸ್ತೂರಿ ರಂಗನ್ ನಿಧನಕ್ಕೆ ಸಂತಾಪ
ಇದೇ ವೇಳೆ ಈ ವಾರ ನಿಧನರಾದ ಇಸ್ರೋದ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ ಅವರಿಗೆ ಪ್ರಧಾನಿ ಗೌರವ ಸಲ್ಲಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಲ್ಲಿ ಡಾ. ಕೆ. ಕಸ್ತೂರಿರಂಗನ್ ಪ್ರಮುಖ ಪಾತ್ರ ವಹಿಸಿದ್ದಾರೆ. ದೇಶಕ್ಕೆ ಅವರ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆಗಳು ಯಾವಾಗಲೂ ಸ್ಮರಣೀಯ. ನಾನು ಅವರಿಗೆ ನನ್ನ ಗೌರವ ಸಲ್ಲಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

ಬಾಹ್ಯಾಕಾಶ ಕ್ಷೇತ್ರದ ಸಾಧನೆಗೆ ಶ್ಲಾಘನೆ
ಭಾರತ ಈಗ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಮಾರ್ಪಟ್ಟಿದೆ ಒಂದೇ ಕಾರ್ಯಾಚರಣೆಯಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ನಾವು ವಿಶ್ವ ದಾಖಲೆಯನ್ನು ನಿರ್ಮಿಸಿದ್ದೇವೆ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವೂ ನಮ್ಮದಾಗಿದೆ. ಭಾರತವು ಮಂಗಳ ಕಕ್ಷೆಯ ಕಾರ್ಯಾಚರಣೆಯನ್ನು ಸಹ ಪ್ರಾರಂಭಿಸಿದೆ ಎಂದು ದೇಶದ ವಿಜ್ಞಾನ ಹಾಗೂ ಬಾಹ್ಯಾಕಾಶ ಸಂಶೋಧನೆಯ ಬಗ್ಗೆಯೂ ಪ್ರಧಾನಿ ಅಭಿಮಾನ ವ್ಯಕ್ತಪಡಿಸಿದ್ದಾರೆ. 

ಮಯನ್ಮಾರ್ ಭೂಕಂಪದಲ್ಲಿ ಆಪರೇಷನ್ ಬ್ರಹ್ಮ:
ಕಾರ್ಯಕ್ರಮದಲ್ಲಿ ಅವರು ಮ್ಯಾನ್ಮಾರ್ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕಂಪದ ಬಗ್ಗೆಯೂ ಮಾತನಾಡಿದರು. ಕಳೆದ ತಿಂಗಳು ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದ ಭಯಾನಕ ಚಿತ್ರಗಳನ್ನು ನೀವು ನೋಡಿರಬೇಕು. ಭೂಕಂಪವು ಅಲ್ಲಿ ಬಹಳಷ್ಟು ವಿನಾಶವನ್ನುಂಟುಮಾಡಿದೆ. ಅದಕ್ಕಾಗಿಯೇ ಭಾರತ ಮಯನ್ಮಾರ್‌ಗೆ ನೆರವಿಗಾಗಿ 'ಆಪರೇಷನ್ ಬ್ರಹ್ಮ'ವನ್ನು ಪ್ರಾರಂಭಿಸಿತು. ಈ 'ಆಪರೇಷನ್ ಬ್ರಹ್ಮ' ಮೂಲಕ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಮಾನವೀಯತೆಗೆ ಸೇವೆ ಸಲ್ಲಿಸುವ ವಿಷಯ ಬಂದಾಗಲೆಲ್ಲಾ, ಭಾರತ ಯಾವಾಗಲೂ ಮುಂಚೂಣಿಯಲ್ಲಿದೆ ಮತ್ತು ಯಾವಾಗಲೂ ಮುಂಚೂಣಿಯಲ್ಲಿರುತ್ತದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ:3 ದಿನದಲ್ಲಿ 6 ಉಗ್ರರ ಮನೆ ಪುಡಿ: ಬೆಂಬಲಿಗರಿಗೂ ಶಾಕ್‌: ಮನೆ ಮನೆ ಹುಡುಕಾಟ ತೀವ್ರ

ಇತ್ತ ಪಹಲ್ಗಾಮ್ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದು, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ಭರದಿಂದ ಸಾಗಿದೆ. ಪಹಲ್ಗಾಮ್ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದವರ ಹುಡುಕಾಟ ಮುಂದುವರಿದಿದ್ದು, ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.