ಸಚಿವ ಸ್ಥಾನ ಸಸ್ಪೆನ್ಸ್, ಚೀನಾ ಟಿವಿಗೆ ಬ್ರೇಕ್: ಇಲ್ಲಿದೆ ಆ. 01ರ ಟಾಪ್ 10 ಸುದ್ದಿ!
ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿರುವ ಚಿನ್ನದ ಮೇಲೆ ಸರ್ಕಾರ ಕಣ್ಣಿಟ್ಟಿದ್ದರೆ, ಅತ್ತ ಚೀನಾಗೆ ಪಾಠ ಕಲಿಸಲು ಟಿವಿಗಳ ಆಮದಿಗೆ ಬ್ರೇಕ್ ಹಾಕಿದೆ. ಈ ನಡುವೆ ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಇನ್ನು ಅತ್ತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಂಬಂಧ ಹಲವಾರು ವಿಚಾರಗಳು ಬೆಳಕಿಗೆ ಬರಲಾರಂಭಿಸಿದ್ದು, ಇತ್ತ ಸೋನು ಸೂದ್ ಮೂವರು ಅನಾಥ ಮಕ್ಕಳನ್ನು ದತ್ತು ಪಡೆದಿದ್ದಾರೆ. ಇಲ್ಲಿದೆ ನೋಡಿ ಆಗಸ್ಟ್ 1, 2020ರ ಟಾಪ್ ಹತ್ತು ಸುದ್ದಿಗಳು
ನಿಮ್ಮ ಚಿನ್ನದ ಮೇಲೆ ಕೇಂದ್ರ ಸರ್ಕಾರ ಕಣ್ಣು..!
5 ವರ್ಷದ ಹಿಂದೆ ಮನೆ ಮನೆಗಳಲ್ಲಿ ಮತ್ತು ದೇಗುಲಗಳಲ್ಲಿ ಬಳಕೆಯಾಗದೇ ಉಳಿದ ಚಿನ್ನವನ್ನು ಬ್ಯಾಂಕ್ನಲ್ಲಿ ಠೇವಣಿ ಇಟ್ಟು ಬಡ್ಡಿ ನೀಡುವ ಯೋಜನೆ ರೂಪಿಸಿದ್ದ ಕೇಂದ್ರ ಸರ್ಕಾರ, ಇದೀಗ ಮತ್ತೊಮ್ಮೆ ಜನರ ಚಿನ್ನದ ಮೇಲೆ ಕಣ್ಣು ಇಟ್ಟಿದೆ. ಆದರೆ ಈ ಬಾರಿ ಸರ್ಕಾರದ ಗಮನ ಹರಿದಿರುವುದು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಚಿನ್ನದ ದಾಸ್ತಾನಿನ ಮೇಲೆ.
ಕರುನಾಡಿನಲ್ಲಿ ನೆಲೆಸಲು ಬಯಸಿದ್ದ ನಟ ಸುಶಾಂತ್!
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಚಿತ್ರೋದ್ಯಮ ತೊರೆದು ಕರ್ನಾಟಕದ ಕೊಡಗಿನಲ್ಲಿ ರೈತನಾಗಿ ನೆಲೆಯೂರಲು ಬಯಸಿದ್ದರು. ಆದರೆ ಅವರ ಪ್ರೇಯಸಿಯಾಗಿದ್ದ ನಟಿ ರಿಯಾ ಚಕ್ರವರ್ತಿ ಇದಕ್ಕೆ ಅಡ್ಡಿಪಡಿಸಿದ್ದರು ಎಂದು ಸುಶಾಂತ್ ತಂದೆ ಆರೋಪಿಸಿದ್ದಾರೆ.
ಮತ್ತೊಂದು ಪಂಚ್: ಚೀನಾದಿಂದ ಟೀವಿ ಆಮದಿಗೂ ಬ್ರೇಕ್..!
ಚೀನಾದಿಂದ ಆಮದು ಮಾಡಿಕೊಳ್ಳುವ ಒಂದೊಂದೇ ಉತ್ಪನ್ನವನ್ನು ನಿಷೇಧಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಆ ದೇಶದಿಂದ ಟೀವಿ ಸೆಟ್ಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ನಿರ್ಬಂಧ ವಿಧಿಸಿದೆ. ಈ ಕುರಿತು ವಿದೇಶ ವ್ಯಾಪಾರಗಳ ಮಹಾನಿರ್ದೇಶನಾಲಯ (ಡಿಜಿಎಫ್ಟಿ) ಗುರುವಾರ ಆದೇಶ ಹೊರಡಿಸಿದ್ದು, ಟೀವಿ ಸೆಟ್ಗಳ ಆಮದನ್ನು ‘ಮುಕ್ತ’ ವಿಭಾಗದಿಂದ ‘ನಿರ್ಬಂಧಿತ’ ವಿಭಾಗಕ್ಕೆ ಸೇರ್ಪಡೆ ಮಾಡಿದೆ. ಅಂದರೆ, ಇನ್ನು ಮುಂದೆ ಯಾವುದೇ ದೇಶದಿಂದ ಟೀವಿ ಸೆಟ್ಗಳನ್ನು ಆಮದು ಮಾಡಿಕೊಳ್ಳುವುದಿದ್ದರೆ ಡೀಲರ್ಗಳು ಡಿಜಿಎಫ್ಟಿಯಿಂದ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಇದು ಮೇಕ್ ಇನ್ ಇಂಡಿಯಾಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ ಎಂದು ಹೇಳಲಾಗಿದೆ.
ಯಾರಿಗೆ ಸಚಿವ ಸ್ಥಾನ? ಯಾರಿಗೆ ಕೊಕ್? ಎಲ್ಲವೂ ಫುಲ್ ಸಸ್ಪೆನ್ಸ್.....!
ಸಂಪುಟ ವಿಸ್ತರಣೆಯೋ ಸಂಪುಟ ಪುನಾರಚನೆಯೋ ಎಂಬ ಗೊಂದಲದ ಚರ್ಚೆಯ ನಡುವೆ ಸಂಪುಟ ವಿಸ್ತರಣೆ ಶೀಘ್ರದಲ್ಲಿ ನಡೆಯುತ್ತದೆ ಎಂಬ ಸುದ್ದಿ ಕೇಳಿಬರುತ್ತಿದೆ. 34 ಸ್ಥಾನಗಳ ಪೈಕಿ ಬಾಕಿ ಉಳಿದಿರುವ 6 ಸ್ಥಾನಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವ ನಿಟ್ಟಿನಲ್ಲಿ ಬಿಎಸ್ವೈ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ.
ಮದ್ಯ ಸಿಗದೇ ಸ್ಯಾನಿಟೈಸರ್ ಸೇವಿಸಿ 10 ಮಂದಿ ದುರ್ಮರಣ..!
ಮದ್ಯಕ್ಕೆ ಬದಲಾಗಿ ಕೆಲ ದಿನಗಳಿಂದ ಹ್ಯಾಂಡ್ ಸ್ಯಾನಿಟೈಸರ್ ಸೇವಿಸುತ್ತಿದ್ದ 10 ಗ್ರಾಮಸ್ಥರು ಸಾವಿಗೀಡಾದ ಘಟನೆ ಆಂಧ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ, ಮದ್ಯದ ಅಂಗಡಿಗಳು ಬಂದ್ ಆಗಿವೆ. ಆದರೆ, ಮದ್ಯದ ದಾಸರಾಗಿದ್ದ ಜಿಲ್ಲೆಯ ಕುರಿಚೇಡು ಗ್ರಾಮದ 10 ಜನರು ಕೆಲ ದಿನಗಳಿಂದ ಸ್ಯಾನಿಟೈಸರ್ಗೆ ನೀರು ಮತ್ತು ತಂಪುಪಾನೀಯ ಬೆರಸಿ ಸೇವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಕೈಕೊಟ್ಟು ಎಲ್ಲರೂ ಸಾವನ್ನಪ್ಪಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕನ್ನಡದಲ್ಲಿ ಪ್ರಚಾರ!
ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಮತದಾರರ ಓಲೈಕೆಗೆ ಹಾಲಿ ಅಧ್ಯಕ್ಷ ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಎಂಬ ಘೋಷಣೆ ಮಾಡುತ್ತಿರುವ ಬೆನ್ನಲ್ಲೇ, ಅವರ ಪ್ರತಿಸ್ಪರ್ಧಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಕನ್ನಡ ಸೇರಿದಂತೆ ಭಾರತದ 14 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಏಕಾಏಕಿ ಕುಸಿದ ಕ್ರೇನ್: 10 ಮಂದಿ ಸಾವು, ಓರ್ವನ ಸ್ಥಿತಿ ಗಂಭೀರ!
ಇತ್ತೀಚೆಗಷ್ಟೇ ವಿಷಾನಿಲ ಸೋರಿಕೆಯಿಂದ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದ ವಿಶಾಖಪಟ್ಟಣಂನಲ್ಲಿ ಮತ್ತೊಂದು ದುರಂತ ಸಂಭಿಸಿದೆ. ಕ್ರೇನ್ ಕುಸಿದು ಬಿದ್ದ ಪರಿಣಾಮ ಕನಿಷ್ಟ ಹತ್ತು ಮಂದಿ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಇಲ್ಲಿನ ಹಿಂದೂಸ್ತಾನ್ ಷಿಪ್ ಯಾರ್ಡ್ ಲಿಮಿಟೆಡ್ ಘಟಕದಲ್ಲಿ ಈ ದುರಂತ ಸಂಭವಿಸಿದೆ.
100 ಮಂದಿಯನ್ನು ಸಾಯಿಸಿ ಮೊಸಳೆಗೆ ತಿನ್ನಿಸಿದ ಸೀರಿಯಲ್ ಕಿಲ್ಲರ್ ಡಾಕ್ಟರ್!
ಜೀವ ಕಾಪಾಡುವಂತಹ ವೃತ್ತಿಯಲ್ಲಿದ್ದುಕೊಂಡು ಜನರನ್ನು ಕರುಣೆ ಇಲ್ಲದೆ ಸಾಯಿಸಿದ ರಾಕ್ಷಸ ದೇವೇಂದ್ರ ಶರ್ಮಾ ಕುರಿತು ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ. ಸೀರಿಯಲ್ ಕಿಲ್ಲರ್ ಡಾಕ್ಟರ್ ದೇವೇಂದ್ರ ಶರ್ಮಾ ವಿಚಾರಣೆ ವೇಳೆ ಮೊದಲ ಐವತ್ತು ಕೊಲೆಗಳ ಬಳಿಕ ಎಷ್ಟು ಹತ್ಯೆ ಮಾಡಿದ್ದೇನೆಂಬುವುದನ್ನು ಲೆಕ್ಕವಿಡುವುದನ್ನೇ ಮರೆತಿದ್ದೆ ಎಂದಿದ್ದರು. ಆದರೀಗ ತಾನು ಸರಿ ಸುಮಾರು ನೂರು ಮಂದಿಯನ್ನು ಸಾಯಿಸಿರುವುದಾಗಿ ಒಪಪ್ಇಕೊಂಡಿದ್ದು, ಇವರಲ್ಲಿ ಅಧಿಕ ಮಂದಿಯನ್ನು ಉತ್ತರ ಪ್ರದೇಶದನಾಲೆಯೊಂದರಲ್ಲಿ ಇರುವ ಮೊಸಳೆಗಳಿಗೆ ತಿನ್ನಿಸಿರುವಿದಾಗಿ ಹೇಳಿಕೊಂಡಿದ್ದಾರೆ.
'ಅವರಿನ್ನು ಅನಾಥರಲ್ಲ': ಹೆತ್ತವರ ಕಳೆದುಕೊಂಡ 3 ಮಕ್ಕಳ ದತ್ತು ಪಡೆದ ಸೋನು ಸೂದ್!
ಲಾಕ್ಡೌನ್ ಸಂದರ್ಭದಲ್ಲಿ ಅಲ್ಲಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ತವರುನಾಡಿಗೆ ಸುರಕ್ಷಿತವಾಗಿ ತಲುಪಿಸಿದ, ಅನಾಥ ಹಾಗೂ ಬಡವರ ಹಸಿವು ನೀಗಿಸಿದ ರಿಯಲ್ ಲೈಫ್ ಹೀರೋ ಸೋನು ಸೂದ್ ಇದೀಗ ಮತ್ತೆ ಸದ್ದು ಮಾಡಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ಉದ್ಯೋಗ ಕಳೆದುಕೊಂಡು ತರಕಾರಿ ಮಾರಾಟ ಮಾಡುತ್ತಿದ್ದ ಇಂಜಿನಿಯರಿಂಗ್ ಕಲಿತಿದ್ದ ಯುವತಿಗೆ ಕೆಲಸ ಕೊಡಿಸಿದ್ದ ಸೋನು, ಇದೀಗ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಮೂವರು ಮಕ್ಕಳನ್ನು ದತ್ತು ಪಡೆದಿದ್ದಾರೆ.
ಕನ್ನಡಿಗ ಸೃಷ್ಟಿಸಿದ ಕುತೂಹಲಕರ ಆ್ಯಪ್ ಕೂ; ಅಪ್ರಮೇಯ ರಾಧಾಕೃಷ್ಣ ಅವರ ಬ್ರಿಲಿಯಂಟ್ ಐಡಿಯಾ!
ಕೂ ಬೇರೆ ಸೋಷಲ್ ಮೀಡಿಯಾಗಳಿಗೂ ಇರುವ ಮುಖ್ಯ ವ್ಯತ್ಯಾಸ ಅಂದರೆ ಇದರಲ್ಲಿ ಸಂಪೂರ್ಣ ಕನ್ನಡಮಯ ಪರಿಸರ ಇರುತ್ತೆ, ಜಗತ್ತಿನಾದ್ಯಂತದ ಕನ್ನಡಿಗರು ಒಂದೇ ಪ್ಲಾಟ್ಫಾಮ್ರ್ ಮೂಲಕ ಕನೆಕ್ಟ್ ಆಗಬಹುದು. ಈ ಕನ್ನಡದ ಪ್ಲಾಟ್ಫಾಮ್ರ್ ಅನ್ನು 1 ಕೋಟಿ ಜನರಿಗೆ ತಲುಪಿಸುವ ಗುರಿ ಇದರ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರದು.