80 ವರ್ಷದ, ಎರಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಜೊತೆ ಅಸಂವೇದನಾಶೀಲತೆಯಿಂದ ನಡೆದುಕೊಂಡಿದ್ದ ಇಂಡಿಗೋ ಕಂಪನಿಗೆ ದಂಡ ವಿಧಿಸಲಾಗಿದೆ. ನೋವಿನಲ್ಲೇ ಪ್ರಯಾಣ ಬೆಳೆಸಿದ್ದ ಮಹಿಳೆಗೆ ಪರಿಹಾರ ಸಿಕ್ಕಿದೆ.
ಇಂಡಿಗೋ ವಿಮಾನ ಕಂಪನಿ ಸಿಬ್ಬಂದಿ ವೃದ್ಧ ಮಹಿಳೆ ನೋವಿಗೆ ಸ್ಪಂದಿಸಿರಲಿಲ್ಲ. ವೃದ್ಧ ಮಹಿಳೆಗೆ ಎರಡು ಶಸ್ತ್ರಚಿಕಿತ್ಸೆ ಆಗಿದ್ರಿಂದ ಅವರು ವಿಮಾನದ ಮೊದಲ ಸೀಟಿನಲ್ಲಿ ಕುಳಿತುಕೊಳ್ಳಲು ಸೀಟ್ ಬುಕ್ ಮಾಡಿದ್ರು. ಆದ್ರೆ 28ನೇ ಸಾಲಿನಲ್ಲಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯದ ಮೊರೆ ಹೋಗಿದ್ದ ವೃದ್ಧೆಗೆ ಈಗ ನ್ಯಾಯ ಸಿಕ್ಕಿದೆ.
ಏನಾಗಿತ್ತು?
ಈ ಘಟನೆ ಡಿಸೆಂಬರ್ 2023ರಲ್ಲಿ ನಡೆದಿತ್ತು. ಕರ್ನಾಟಕದ ನಿವಾಸಿ ಅನ್ಸು ಎ. ಅಮೀನ್ ಬೆಂಗಳೂರಿನಿಂದ ಅಹಮದಾಬಾದ್ಗೆ ಇಂಡಿಗೋ ವಿಮಾನವನ್ನು ಬುಕ್ ಮಾಡಿದ್ದರು. ಅವರಿಗೆ 80 ವರ್ಷ ವಯಸ್ಸಾಗಿದ್ದು, ಎರಡು ಶಸ್ತ್ರಚಿಕಿತ್ಸೆ ನಡೆದಿತ್ತು. ವಿಮಾನ ಪ್ರಯಾಣ ಸುಖಕರವಾಗಿರಲಿ ಎನ್ನುವ ಕಾರಣಕ್ಕೆ ಮುಂದಿನ ಸಾಲಿನ ಸೀಟನ್ನು ವಿನಂತಿಸಿದ್ದರು. ಅದಕ್ಕೆ ಹೆಚ್ಚುವರಿ ಶುಲ್ಕವನ್ನು ಪಾವತಿಸಿದ್ದರು . ವೀಲ್ಚೇರ್ ಸಹ ಕೇಳಿದ್ದರು. ಪ್ರೀಮಿಯಂ ಸೀಟಿಗಾಗಿ ಅವರು ಒಟ್ಟು 13,906 ರೂಪಾಯಿ ಪಾವತಿ ಮಾಡಿದ್ದರು. ಅವರಿಗೆ ಸೀಟು 1B ನೀಡಲಾಗಿತ್ತು. ಆದ್ರೆ ವಿಮಾನ ಏರುತ್ತಿದ್ದಂತೆ ಎಲ್ಲ ಬದಲಾಯ್ತು.
ಭಾರತದ ವಿದೇಶಿ ಸಾಲ ಭಾರಿ ಜಂಪ್; 72 ಲಕ್ಷ ಕೋಟಿಗೆ ದೇಶದ ಸಾಲ, ಒಂದೇ ವರ್ಷದಲ್ಲಿ 2.51 ಲಕ್ಷ ಕೋಟಿ ಏರಿಕೆ!
ವಿಮಾನ ಸಿಬ್ಬಂದಿ ಅವರನ್ನು 28ನೇ ಸೀಟಿಯಲ್ಲಿ ಕುಳಿಸಿದ್ರು. 28 ನೇ ಸಾಲಿನಲ್ಲಿ 28B ಸೀಟಿನಲ್ಲಿ ಕುಳಿತುಕೊಳ್ಳಬೇಕಾಯ್ತು. ಇದು ಕೊನೆ ಆಯ್ಕೆ, ಬೇರೆ ದಾರಿ ಇಲ್ಲ ಅಂತ ಸಿಬ್ಬಂದಿ ಹೇಳಿದ್ದರು. ಈ ಸೀಟ್ ತುಂಬಾ ಚಿಕ್ಕದಾಗಿತ್ತಲ್ಲದೆ, ಇಬ್ಬರ ಮಧ್ಯೆ ಕುಳಿತು ಪ್ರಯಾಣ ಬೆಳೆಸೋದು ಕಷ್ಟವಾಗಿತ್ತು. ನೋವಿನಲ್ಲಿಯೇ ಅನ್ಸು ವಿಮಾನ ಪ್ರಯಾಣ ಮುಗಿಸಿದ್ದರು.
ತಮಗಾದ ಸಮಸ್ಯೆ ಹೇಳಿಕೊಂಡ ಅನ್ಸು 80,000 ರೂಪಾಯಿ ಪರಿಹಾರ ಕೋರಿ ಇಂಡಿಗೋಗೆ ಕಾನೂನು ಸೂಚನೆ ಕಳುಹಿಸಿದ್ದರು. ಆದ್ರೆ ಸಂಸ್ಥೆ ವಿನಂತಿಯನ್ನು ನಿರ್ಲಕ್ಷಿಸಿತು. ನಂತರ ಅವರು ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿದ್ದರು. ಅನ್ಸು ಪ್ರೀಮಿಯಂ ಸೀಟನ್ನು ಬುಕ್ ಮಾಡಿದ್ದನ್ನು ಇಂಡಿಗೋ ಒಪ್ಪಿಕೊಂಡಿತು. ಆದ್ರೆ ವಿಮಾನದಲ್ಲಿ ಆಡಿಟ್ ತಂಡವಿತ್ತು, ಅವರಿಗೆ ಮುಂದಿನ ಸಾಲಿನ ಎರಡು ಸೀಟುಗಳನ್ನು ಕಾಯ್ದಿರಿಸಲಾಗಿದೆ. ಆದ್ದರಿಂದ, ಅವರನ್ನು 28 ನೇ ಸಾಲಿಗೆ ಸ್ಥಳಾಂತರಿಸಲಾಯಿತು ಎಂಬ ಕಾರಣ ಹೇಳಿತ್ತು.
ಮೌಂಟ್ ಎವರೆಸ್ಟ್ನಲ್ಲಿ ಯೋಧನ 'ಗ್ರೀನ್ ಬೂಟ್' ರಹಸ್ಯ ಬಯಲು;
ಪರ- ವಿರೋಧ ವಾದ ಆಲಿಸಿದ ಗ್ರಾಹಕ ನ್ಯಾಯಾಲಯವು, ಪ್ರೀಮಿಯಂ ಸೀಟು ಕಾಯ್ದಿರಿಸಲು ಅವರು ಹೆಚ್ಚುವರಿ ಹಣವನ್ನು ಪಾವತಿಸಿದ್ದರು. ಆದ್ರೆ ಅವರನ್ನು 28 ನೇ ಸಾಲಿನ ಮಧ್ಯದ ಸೀಟಿನಲ್ಲಿ ಕುಳಿಸಲಾಗಿದೆ. ಇದು ಅವರಿಗೆ ಅನಾನುಕೂಲತೆಯನ್ನುಂಟುಮಾಡಿದೆ. ಆದ್ದರಿಂದ, ಅವರಿಗೆ 8,000 ಪರಿಹಾರ ನೀಡಬೇಕೆಂದು ತೀರ್ಪು ನೀಡಿತ್ತು. ಈ ತೀರ್ಪಿನಿಂದ ತೃಪ್ತಿಗೊಳ್ಳದ ಅನ್ಸು ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗವನ್ನು ಸಂಪರ್ಕಿಸಿದ್ದರು. ಅಲ್ಲಿ ಅವರಿಗೆ 55,000 ರೂಪಾಯಿ ನೀಡುವಂತೆ ಸೂಚನೆ ನೀಡಲಾಗಿದೆ.
ರಾಜ್ಯ ಆಯೋಗದ ನ್ಯಾಯಾಂಗ ಸದಸ್ಯ ರವಿಶಂಕರ್ ಮತ್ತು ಸದಸ್ಯೆ ಸುನಿತಾ ಸಿ. ಬೇಗವಾಡಿ ಅವರ ಪೀಠವು ಈ ವಿಷಯವನ್ನು ಆಲಿಸಿ, ತೀರ್ಪು ನೀಡಿದೆ. ಪರಿಹಾರದ ಮೊತ್ತವಾಗಿ 50,000 ಸಾವಿರ ಹಾಗೂ ಮೊಕದ್ದಮೆ ವೆಚ್ಚಗಳಿಗಾಗಿ 5,000 ನೀಡುವಂತೆ ಆದೇಶ ನೀಡಿದೆ.


