ಆರಂಭದ ದಿನಗಳಲ್ಲಿ ಮದ್ರಾಸ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಪತ್ಯವಿತ್ತು. 1952ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದಾಗ, ಚಾಣಕ್ಯ ರಾಜಾಜಿ (ಸಿ. ರಾಜಗೋಪಾಲಚಾರಿ) ಸಿಎಂ ಆದರು. ಆದರೆ, ಅವರ 'ಕುಲ ಕಲ್ವಿತ್' ಯೋಜನೆಗೆ ಭಾರಿ ವಿರೋಧ ವ್ಯಕ್ತವಾದಾಗ, ಅಧಿಕಾರ ಬಿಟ್ಟುಕೊಡಬೇಕಾಯಿತು. ಅಲ್ಲಿಗೆ ಶುರುವಾಗಿದ್ದೇ ಕೆ. ಕಾಮರಾಜ್ ಯುಗ! ಮುಂದೇನಾಯ್ತು ನೋಡಿ..

ತಮಿಳುನಾಡಿನ ಸಿಂಹಾಸನ ಯಾರೆಲ್ಲರ ಪಾಲಾಗಿತ್ತು? ರಾಜಾಜಿಯಿಂದ ಸ್ಟಾಲಿನ್ ವರೆಗೆ: 'ದಳಪತಿ' ಮುರಿಯಲಿದ್ದಾರಾ ಕರುಣಾನಿಧಿ ದಾಖಲೆ?

ತಮಿಳುನಾಡು ರಾಜಕೀಯ ಅಂದ್ರೆ ಅದು ಬರಿ ರಾಜಕೀಯ ಅಲ್ಲ, ಅದೊಂದು ಬೆಳ್ಳಿತೆರೆಯ ರೋಚಕ ಕಥೆಗಿಂತ ಕಡಿಮೆ ಇಲ್ಲ! ಇಲ್ಲಿ ಆಡಳಿತ ಮತ್ತು ಸಿನಿಮಾ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸ್ವಾತಂತ್ರ್ಯದ ನಂತರದ ದಿನಗಳಿಂದ ಹಿಡಿದು ಇಂದಿನ ದಳಪತಿ ವಿಜಯ್ ಅವರ ಎಂಟ್ರಿ ವರೆಗೆ, ತಮಿಳುನಾಡಿನ ಸಿಎಂ ಗದ್ದುಗೆ ಹಲವು ದಿಗ್ಗಜರ ಏಳುಬೀಳುಗಳಿಗೆ ಸಾಕ್ಷಿಯಾಗಿದೆ. ಹಾಗಾದರೆ, ಈ 'ತಮಿಳಿಗರ' ಹೃದಯವನ್ನು ಅತಿ ಹೆಚ್ಚು ಕಾಲ ಆಳಿದ ಆ 'ಮಹಾರಾಜ' ಯಾರು? ಬನ್ನಿ, ಇತಿಹಾಸದ ಪುಟಗಳನ್ನು ತಿರುವಿ ಹಾಕೋಣ!

ಕಾಂಗ್ರೆಸ್ ಹವಾ ಮತ್ತು ಕಾಮರಾಜ್ ಎಂಬ 'ಕಿಂಗ್ ಮೇಕರ್'!

ಆರಂಭದ ದಿನಗಳಲ್ಲಿ ಮದ್ರಾಸ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಪತ್ಯವಿತ್ತು. 1952ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದಾಗ, ಚಾಣಕ್ಯ ರಾಜಾಜಿ (ಸಿ. ರಾಜಗೋಪಾಲಚಾರಿ) ಸಿಎಂ ಆದರು. ಆದರೆ, ಅವರ 'ಕುಲ ಕಲ್ವಿತ್' ಯೋಜನೆಗೆ ಭಾರಿ ವಿರೋಧ ವ್ಯಕ್ತವಾದಾಗ, ಅಧಿಕಾರ ಬಿಟ್ಟುಕೊಡಬೇಕಾಯಿತು. ಅಲ್ಲಿಗೆ ಶುರುವಾಗಿದ್ದೇ ಕೆ. ಕಾಮರಾಜ್ ಯುಗ! ಸತತ 9 ವರ್ಷಗಳ ಕಾಲ ಮೂರು ಬಾರಿ ಮುಖ್ಯಮಂತ್ರಿಯಾಗಿ ತಮಿಳುನಾಡನ್ನು ಮುನ್ನಡೆಸಿದ ಇವರು, ಇಂದಿಗೂ ತಮಿಳು ಜನರ ಪಾಲಿನ ಆದರ್ಶ ನಾಯಕ.

ದ್ರಾವಿಡ ಕ್ರಾಂತಿ ಮತ್ತು ಅಣ್ಣಾ ಅಬ್ಬರ!

1967ರಲ್ಲಿ ತಮಿಳುನಾಡು ರಾಜಕೀಯಕ್ಕೆ ದೊಡ್ಡ ತಿರುವು ಸಿಕ್ಕಿತು. ಅಣ್ಣಾದೊರೈ ನೇತೃತ್ವದ ಡಿಎಂಕೆ ರಾಷ್ಟ್ರೀಯ ಪಕ್ಷಗಳ ಬೇರನ್ನೇ ಅಲುಗಾಡಿಸಿ ಅಧಿಕಾರಕ್ಕೆ ಬಂತು. ಇವರ ಕಾಲದಲ್ಲೇ 'ಮದ್ರಾಸ್' ರಾಜ್ಯಕ್ಕೆ 'ತಮಿಳುನಾಡು' ಎಂದು ನಾಮಕರಣ ಮಾಡಲಾಯಿತು. ಆದರೆ, ಕೇವಲ ಎರಡು ವರ್ಷಕ್ಕೆ ಕ್ಯಾನ್ಸರ್‌ನಿಂದ ಅಣ್ಣಾ ನಿಧನರಾದದ್ದು ದೊಡ್ಡ ದುರಂತ.

ಕರುಣಾನಿಧಿ Vs ಎಂಜಿಆರ್: ಮಹಾಯುದ್ಧ!

ಅಣ್ಣಾ ನಂತರ ಬಂದವರು ಕರುಣಾನಿಧಿ. ತಮಿಳುನಾಡು ಇತಿಹಾಸದಲ್ಲಿ ಅತಿ ಹೆಚ್ಚು ಕಾಲ, ಅಂದರೆ ಬರೋಬ್ಬರಿ 5 ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದವರು ಇದೇ ಮುತ್ತುವೇಲ್ ಕರುಣಾನಿಧಿ. ಆದರೆ, ಇವರ ಮಿತ್ರನಾಗಿದ್ದ ಸಿನಿಮಾ ಸೂಪರ್ ಸ್ಟಾರ್ ಎಂ.ಜಿ. ರಾಮಚಂದ್ರನ್ (MGR) ಡಿಎಂಕೆಯಿಂದ ಹೊರಬಂದು ಎಐಎಡಿಎಂಕೆ ಎಂಬ ಹೊಸ ಪಕ್ಷ ಕಟ್ಟಿ ಇತಿಹಾಸ ಸೃಷ್ಟಿಸಿದರು. ಸಾಯುವವರೆಗೂ ಅಂದರೆ ಸುಮಾರು 10 ವರ್ಷಗಳ ಕಾಲ ಎಂಜಿಆರ್ ತಮಿಳುನಾಡಿನ 'ಅನ್ ಕ್ರೌನ್ಡ್ ಕಿಂಗ್' ಆಗಿದ್ದರು.

ಅಮ್ಮನ ದರ್ಬಾರ್ ಮತ್ತು ಕರುಣಾನಿಧಿ ಆಟ!

ಎಂಜಿಆರ್ ನಂತರ ಬಂದವರು ತಮಿಳಿಗರ ಪ್ರೀತಿಯ 'ಅಮ್ಮ' ಜಯಲಲಿತಾ. 6 ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಜಯಲಲಿತಾ, ಜೈಲು ಪಾಲಾದರೂ ಮತ್ತೆ ಫೀನಿಕ್ಸ್‌ನಂತೆ ಎದ್ದು ಬಂದು ಅಧಿಕಾರ ಹಿಡಿಯುತ್ತಿದ್ದರು. ಇವರು ಮತ್ತು ಕರುಣಾನಿಧಿ ನಡುವಿನ ರಾಜಕೀಯ ಸಮರ ತಮಿಳುನಾಡಿನಲ್ಲಿ ದಶಕಗಳ ಕಾಲ 'ಮ್ಯೂಸಿಕಲ್ ಚೇರ್' ಆಟದಂತೆ ನಡೆದಿತ್ತು.

ಈಗ ಸ್ಟಾಲಿನ್ ಕಾಲ.. ಮುಂದೆ ದಳಪತಿಯ ಸರದಿ?

ಜಯಲಲಿತಾ ನಿಧನದ ನಂತರ ಇಪಿಎಸ್ ಸ್ವಲ್ಪ ಕಾಲ ಆಡಳಿತ ನಡೆಸಿದರು. ಆದರೆ 2021ರಲ್ಲಿ ಕರುಣಾನಿಧಿ ಪುತ್ರ ಎಂ. ಕೆ. ಸ್ಟಾಲಿನ್ ಭಾವುಕವಾಗಿ "ನಾನು ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್..." ಎಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಂದೆಯ ಪರಂಪರೆಯನ್ನು ಮುಂದುವರಿಸಿದರು.

ಈಗ ಪ್ರಶ್ನೆ ಇರೋದು ಒಂದೇ—ಕರುಣಾನಿಧಿ ಅವರ ಅತಿ ಹೆಚ್ಚು ಕಾಲದ ಆಡಳಿತದ ದಾಖಲೆಯನ್ನು ಮುರಿಯುವ ತಾಕತ್ತು ಇರೋದು ಯಾರಿಗೆ? ಈಗಷ್ಟೇ ರಾಜಕೀಯ ಅಖಾಡಕ್ಕೆ ಧುಮುಕಿರುವ 'ದಳಪತಿ' ವಿಜಯ್ ಮೇಲೆ ಎಲ್ಲರ ಕಣ್ಣಿದೆ. ಸಿನಿಮಾ ರಂಗದಲ್ಲಿ ಕರುಣಾನಿಧಿ ಸ್ಕ್ರಿಪ್ಟ್ ಬರೆಯುತ್ತಿದ್ದರೆ, ಎಂಜಿಆರ್ ತೆರೆಯ ಮೇಲೆ ಮಿಂಚುತ್ತಿದ್ದರು. ಈಗ ವಿಜಯ್ ಸಿನಿಮಾ ಸ್ಟಾರ್ ಆಗಿ ಬಂದು ಕರುಣಾನಿಧಿಯಂತೆ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಗೆದ್ದಿದ್ದಾರೆ. ದಳಪತಿ ವಿಜಯ್ ಅವರು ಕರುಣಾನಿಧಿಯಂತೆ ಐದು ಬಾರಿ ಸಿಎಂ ಆಗಿ ಇತಿಹಾಸ ಬರೆಯುತ್ತಾರಾ? ಅಥವಾ ಹೊಸ ದಾಖಲೆ ನಿರ್ಮಿಸುತ್ತಾರಾ? ಎಂಬುದು ಸದ್ಯದ ಕುತೂಹಲ!

ತಮಿಳುನಾಡಿನ ಈ ರಾಜಕೀಯ ಪಯಣದಲ್ಲಿ ಸದ್ಯಕ್ಕೆ ಕರುಣಾನಿಧಿಯೇ ನಂಬರ್ 1 ಶೂಟರ್!