ಡಿಎಂಕೆ ನಾಯಕ ಜೆ. ಜಯಬಾಲನ್, ಪ್ರಧಾನಿ ನರೇಂದ್ರ ಮೋದಿಯನ್ನು "ಮುಗಿಸಿದರೆ" ಮಾತ್ರ ತಮಿಳುನಾಡು ಉದ್ದಾರವಾಗಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ದ್ವೇಷ ಭಾಷಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಾಯಕನ ಬಂಧನಕ್ಕೆ ಒತ್ತಾಯಿಸಿದೆ.
ಚೆನ್ನೈ (ನ.19): ಪ್ರಧಾನಿ ನರೇಂದ್ರ ಮೋದಿ ಅವರನ್ನು "ಮುಗಿಸಿದರೆ" ಮಾತ್ರ ತಮಿಳುನಾಡು ಉದ್ದಾರವಾಗಲಿದೆ ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತೆಂಕಸಿ ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಜೆ. ಜಯಬಾಲನ್ ಬುಧವಾರ ಹೇಳಿದ್ದು, ಇದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ತೆಂಕಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಜಯಬಾಲನ್ ಅವರ ಭಾಷಣವನ್ನು ಭಾರತೀಯ ಜನತಾ ಪಕ್ಷ (BJP) ತೀವ್ರವಾಗಿ ಖಂಡಿಸಿದೆ. ಆಡಳಿತಾರೂಢ DMK ದ್ವೇಷ ಭಾಷಣವನ್ನು ಸಾಮಾನ್ಯ ಎನ್ನುವಂತೆ ಮಾಡುತ್ತಿದೆ ಮತ್ತು ನಾಯಕರು ಪ್ರಧಾನಿ ವಿರುದ್ಧ ಬೆದರಿಕೆ ಹಾಕುವ ದ್ವೇಷದ ವಾತಾವರಣವನ್ನು ಬೆಳೆಸುತ್ತಿದೆ ಎಂದು ಅದು ಆರೋಪಿಸಿದೆ.
ವಿಡಿಯೋದಲ್ಲಿ, ಜಯಬಾಲನ್, "(ಪ್ರಧಾನಿ) ಮೋದಿ ನಿಮ್ಮ ಮತಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. ಅವನು ಮತ್ತೊಬ್ಬ ನರಕಾಸುರ (ಹಿಂದೂ ಪುರಾಣದ ರಾಕ್ಷಸ). ಅವನನ್ನು ಮುಗಿಸಿದರೆ ಮಾತ್ರ ತಮಿಳುನಾಡು ಸುಧಾರಿಸುತ್ತದೆ" ಎಂದು ತಮಿಳಿನಲ್ಲಿ ಹೇಳಿದ್ದಾರೆ. ಡಿಎಂಕೆ ನಾಯಕರಾದ ಶಂಕರನ್ಕೋವಿಲ್ ಶಾಸಕ ಇ. ರಾಜಾ ಮತ್ತು ತೆಂಕಸಿ ಸಂಸದೆ ರಾಣಿ ಶ್ರೀಕುಮಾರ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡದ ಜಯಬಾಲನ್
ಈ ವಿಚಾರವಾಗಿ ಜಯಬಾಲನ್ ಅವರನ್ನು ಸಂಪರ್ಕಿಸಿದಾಗ, ಅವರು ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಡಿಎಂಕೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
5,000 ರೈತರು ಭಾಗವಹಿಸುವ ನಿರೀಕ್ಷೆಯಿರುವ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆಯನ್ನು ಉದ್ಘಾಟಿಸಲು ಮೋದಿ ಕೊಯಮತ್ತೂರಿಗೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಈ ಹೇಳಿಕೆ ದಾಖಲಾಗಿತ್ತು. ಸಾವಯವ ಕೃಷಿಯನ್ನು ಅಭ್ಯಾಸ ಮಾಡುವ ರೈತರೊಂದಿಗೆ ಮೋದಿ ಸಂವಹನ ನಡೆಸಿದ್ದರು ಮತ್ತು 10 ವಿಶೇಷ ರೈತರನ್ನು ಸನ್ಮಾನಿಸಿದರು. ಇದೇ ವೇಳೇ 9 ಕೋಟಿ ರೈತರಿಗೆ 18,000 ಕೋಟಿ ರೂ.ಗಳ ಪಿಎಂ-ಕಿಸಾನ್ ಕಂತನ್ನು ಬಿಡುಗಡೆ ಮಾಡಿದರು.
ಬಿಜೆಪಿ ಆಕ್ರೋಶ
ಡಿಎಂಕೆ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್, ಮೋದಿಗೆ ಜೀವ ಬೆದರಿಕೆ ಹಾಕಿರುವ ಡಿಎಂಕೆ ನಾಯಕನನ್ನು ರಾಜ್ಯ ಸರ್ಕಾರ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ಜಯಬಾಲನ್ ಅವರ ಭಾಷಣವು ಡಿಎಂಕೆ ಆಡಳಿತದಲ್ಲಿ ಬೆಳೆಯುತ್ತಿರುವ "ದ್ವೇಷ ತುಂಬಿದ ಉಗ್ರವಾದ"ವನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು: "ಇದು ಡಿಎಂಕೆ ಆಡಳಿತದಲ್ಲಿ ಬೆಳೆಯುತ್ತಿರುವ ಕಾನೂನುಬಾಹಿರತೆ, ಇಲ್ಲಿ ನಾಯಕರು ಪ್ರಧಾನಿಯ ವಿರುದ್ಧ ಕೊಲೆ ಬೆದರಿಕೆ ಹಾಕಲು ಧೈರ್ಯ ಮಾಡುತ್ತಾರೆ." ಎಂದಿದ್ದಾರೆ.


