Asianet Suvarna News Asianet Suvarna News

ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿರೋ ಭಿಂದ್ರನ್‌ವಾಲೆ 2.0 ಅಮೃತ್ ಪಾಲ್ ಸಿಂಗ್ ಏಳು ಬೀಳು ಹೀಗಿದೆ..

ಸ್ವಯಂ ಘೋಷಿತ ಬೋಧಕನಾಗಿದ್ದ ಅಮೃತ್ ಪಾಲ್ ಸಿಂಗ್ ಸಂಧು ಅಮೃತಸರ ಜಿಲ್ಲೆಯ, ಜಲ್ಲು ಪುರ್ ಖೈರಾ ಗ್ರಾಮದ ನಿವಾಸಿಯಾಗಿದ್ದ. ಶನಿವಾರ ಬೆಳಗಿನಿಂದಲೇ ಪೊಲೀಸರು ಅಮೃತ್ ಪಾಲ್ ಸಿಂಗ್ ಮತ್ತು ಆತನ ಸಹಚರರಿಗಾಗಿ ಹುಡುಕಾಟ ಆರಂಭಿಸಿದ್ದರು. ಪೊಲೀಸರು ಅವನ ಆರು ಆತ್ಮೀಯರನ್ನು ಬಂಧಿಸಿದ್ದರು.

bhindranwale 2 0 amritpal singh history operation bluestar effect on government ash
Author
First Published Mar 20, 2023, 4:59 PM IST

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕಳೆದ ತಿಂಗಳು, ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಒಂದು ವೇಳೆ ಸಿಖ್ಖರನ್ನು ಚೆನ್ನಾಗಿ ನಡೆಸಿಕೊಳ್ಳದೇ ಹೋದರೆ, ಈ ಹಿಂದೆ ಅಮೃತಸರದ ಸ್ವರ್ಣಮಂದಿರ ಸಂಕೀರ್ಣದಲ್ಲಿ ಆಪರೇಷನ್ ಬ್ಲೂ ಸ್ಟಾರ್ ನಡೆಸಿ, ಜರ್ನೇಲ್ ಸಿಂಗ್ ಭಿಂದ್ರನ್‌ವಾಲೆ ಅವರನ್ನು ಕೊಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನುಭವಿಸಿದ ಪರಿಸ್ಥಿತಿಯನ್ನೇ ಎದುರಿಸಬೇಕಾದೀತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಚ್ಚರಿಕೆ ನೀಡಿದ್ದರು.

ಅದಾಗಿ ತಿಂಗಳ ನಂತರ, ಮಾರ್ಚ್ 18ರ ಶನಿವಾರದಂದು ಆನ್‌ಲೈನ್ ಮಾಧ್ಯಮಗಳು 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ, ಅಮೃತ್ ಪಾಲ್ ಸಿಂಗ್ ಬಂಧನವಾಗಿದೆ ಎಂಬ ಸುದ್ದಿಗಳನ್ನು ಹರಡತೊಡಗಿದವು. ಸ್ವಯಂ ಘೋಷಿತ ಬೋಧಕನಾಗಿದ್ದ ಅಮೃತ್ ಪಾಲ್ ಸಿಂಗ್ ಸಂಧು ಅಮೃತಸರ ಜಿಲ್ಲೆಯ, ಜಲ್ಲು ಪುರ್ ಖೈರಾ ಗ್ರಾಮದ ನಿವಾಸಿಯಾಗಿದ್ದ. ಶನಿವಾರ ಬೆಳಗಿನಿಂದಲೇ ಪೊಲೀಸರು ಅಮೃತ್ ಪಾಲ್ ಸಿಂಗ್ ಮತ್ತು ಆತನ ಸಹಚರರಿಗಾಗಿ ಹುಡುಕಾಟ ಆರಂಭಿಸಿದ್ದರು. ಪೊಲೀಸರು ಅವನ ಆರು ಆತ್ಮೀಯರನ್ನು ಬಂಧಿಸಿದ್ದರು.

ಖಲಿಸ್ತಾನ ಹೋರಾಟದ ನೇತೃತ್ವದ ವಹಿಸಿದ ಅಮೃತ್ ಪಾಲ್ ಸಿಂಗ್ ಯಾರು?

ಪೊಲೀಸರು ಅಮೃತ್ ಪಾಲ್‌ನನ್ನು ಜಲಂಧರ್ - ಮೋಗಾ - ಬರ್ನಾಲಾ - ಸಿರ್ಸಾ ರಾಷ್ಟ್ರೀಯ ಹೆದ್ದಾರಿ 703ರ ಶಾಕೋಟ್ ಎಂಬಲ್ಲಿ ಸುತ್ತುವರೆದಿದ್ದರು ಎನ್ನಲಾಗಿತ್ತು. ಪಂಜಾಬಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾನುವಾರ ಮಧ್ಯಾಹ್ನ 12 ಗಂಟೆಯ ತನಕ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಪಂಜಾಬ್ ಪೊಲೀಸರು ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡರು. ಒಂದಷ್ಟು ಜನ ಅಮೃತ್ ಪಾಲ್ ಸಹಚರರು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ವೀಡಿಯೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅಮೃತ್ ಪಾಲ್ ಕಾರಿನಲ್ಲಿ ಕುಳಿತಿದ್ದು, ಆತನ ಸಹಚರನೊಬ್ಬ ಪೊಲೀಸರು 'ಭಾಯ್ ಸಾಬ್' ಹಿಂದೆ ಬಿದ್ದಿದ್ದಾರೆ ಎನ್ನುತ್ತಿದ್ದ.

ಆದರೆ ಭಾನುವಾರ ಬೆಳಗಿನ ವೇಳೆಗಾಗಲೇ ಪತ್ರಿಕೆಗಳು ಇದಕ್ಕೆ ವ್ಯತಿರಿಕ್ತವಾದ ವರದಿಗಳನ್ನು ಪ್ರಕಟಿಸಿದ್ದವು. ಅವುಗಳು ಪೊಲೀಸರ ಹೇಳಿಕೆಗಳನ್ನು ಆಧರಿಸಿ, ಅಮೃತ್ ಪಾಲ್ ಶಾಕೋಟ್ - ಮೆಹತ್‌ಪುರ ಪ್ರದೇಶದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಶನಿವಾರ ತಪ್ಪಿಸಿಕೊಂಡಿದ್ದು, ಆತನ ಏಳು ಸಹಚರರು ಬಂಧಿಸಲ್ಪಟ್ಟಿದ್ದಾರೆ ಎಂದು ವರದಿ ಮಾಡಿದ್ದವು. ಜಲಂಧರ್, ನವಾನ್ ಶಹರ್, ಫಜಿ಼ಲ್‌ಕಾ, ಮುಕ್ತ್‌ಸರ್, ಹಾಗೂ ಫರೀದ್‌ಕೋಟ್ ಸೇರಿದಂತೆ ಪಂಜಾಬಿನ ಹಲವು ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂದು ಮೊಬೈಲ್ ಅಂತರ್ಜಾಲ, ಎಸ್ಎಂಎಸ್, ಹಾಗೂ ಡಾಂಗಲ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. 

ಇದನ್ನು ಓದಿ: ಪರಾರಿಯಾದ ಖಲಿಸ್ತಾನಿ ನಾಯಕ ಅಮೃತ್‌ಪಾಲ್‌ ಸಿಂಗ್: ಪಂಜಾಬ್‌ ಹೈ ಅಲರ್ಟ್‌..!

ಭಾನುವಾರವೂ ಅಮೃತ್ ಪಾಲ್ ಸಿಂಗ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ್ದರಿಂದ ಸತತ ಎರಡನೇ ದಿನವೂ ಇದೇ ಪರಿಸ್ಥಿತಿ ಮುಂದುವರಿಯಿತು. ಆತನ ಮರ್ಸಿಡಿಸ್‌ ಕಾರನ್ನು ಪೊಲೀಸರು ಅಟ್ಟಿಸಿಕೊಂಡು ಬರುತ್ತಿದ್ದರಿಂದ ಅಮೃತ್ ಪಾಲ್ ಅವರಿಂದ ತಪ್ಪಿಸಿಕೊಳ್ಳಲು ಆ ಸಣ್ಣಗಿನ ರಸ್ತೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವಾಹನ ಬದಲಾಯಿಸಿಕೊಂಡಿರುವ ಸಾಧ್ಯತೆಗಳಿದ್ದವು.

ಅಧಿಕಾರ ಮತ್ತು ಐಶ್ವರ್ಯದ ಹಾದಿ

ಭಗವಂತ್ ಮಾನ್ ನೇತೃತ್ವದ ಸರ್ಕಾರ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಪೂರಕ ಪರಿಸ್ಥಿತಿ ನಿರ್ಮಾಣ ಮಾಡುವಂತಿದ್ದರೂ, ಪಂಜಾಬಿನಾದ್ಯಂತ ಅಸಮಾಧಾನ ಭುಗಿಲೇಳುತ್ತಿದೆ. ಆಪ್ ಸರ್ಕಾರ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಹಗುರವಾಗಿ ಪರಿಗಣಿಸಿದ್ದು, ಅದರ ಓಲೈಕೆ ರಾಜಕಾರಣ ಪೊಲೀಸ್ ಇಲಾಖೆಯನ್ನು ಈ ಮೂಲಭೂತವಾದಿಗಳ ವಿರುದ್ಧ ಶಕ್ತಿಹೀನವಾಗಿಸಿದೆ. 30 ವರ್ಷ ಹರೆಯದ ಅಮೃತ್ ಪಾಲ್ ಸಿಂಗ್, 1984ರ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಮೃತಪಟ್ಟ, ಖಲಿಸ್ತಾನ ಪ್ರತ್ಯೇಕ ರಾಷ್ಟ್ರಕ್ಕಾಗಿ ಆಗ್ರಹಿಸಿದ್ದ ಜರ್ನೇಲ್ ಸಿಂಗ್ ಭಿಂದ್ರನ್‌ವಾಲೆ ಅವರ ಬೋಧನೆ ಮತ್ತು ವಸ್ತ್ರ ವಿನ್ಯಾಸವನ್ನು ಅನುಕರಿಸುತ್ತಾ, ಕಳೆದ ಆರು ತಿಂಗಳ ಅವಧಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ. ಆತ ತನ್ನ ಮೂಲಭೂತವಾದಿ ಬೋಧನೆಗಳಿಂದ, ಭಾಷಣಗಳಿಂದ ಖಲಿಸ್ತಾನಿ ಹೋರಾಟದ ಪರವಾಗಿ ಜನಾಭಿಪ್ರಾಯ ಮೂಡಿಸತೊಡಗಿದ್ದ.

ಇದನ್ನೂ ಓದಿ: ಒನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಉಡಾವಣೆಗೊಳಿಸಲಿರುವ ಇಸ್ರೋ: ವಿಶೇಷತೆ ಹೀಗಿದೆ..

ಕಳೆದ ವರ್ಷ ಅಮೃತ್ ಪಾಲ್ ತನ್ನ ಕುಟುಂಬದ ಸಾಗಾಣಿಕಾ ವ್ಯವಹಾರವನ್ನು ಬಿಟ್ಟು, ಭಾರತಕ್ಕೆ ಮರಳಿ, ಅನುಮಾನಾಸ್ಪದ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ನಟ ದೀಪ್ ಸಿಧು ಆರಂಭಿಸಿದ್ದ ವಾರಿಸ್ ಪಂಜಾಬ್ ದೇ ಸಂಸ್ಥೆಯ ನೇತೃತ್ವ ವಹಿಸಿಕೊಂಡಿದ್ದ. ಆ ಸಂಘಟನೆ ಪಂಜಾಬಿನ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸಾಮಾಜಿಕ ವಿಚಾರಗಳಿಗೆ ಹೋರಾಡುವ ಉದ್ದೇಶ ಹೊಂದಿತ್ತು.

ಫೆಬ್ರವರಿ 24, 2023ರಂದು ಓರ್ವ ವ್ಯಕ್ತಿ ಅಮೃತಸರ ನಗರದ ಹೊರವಲಯದ ಅಜ್ನಾಲಾ ಪೊಲೀಸ್ ಠಾಣೆಯಲ್ಲಿ ಅಮೃತ್ ಪಾಲ್ ಸಹಚರರು ತನ್ನನ್ನು ಅಪಹರಿಸಿ, ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದ. ಅಮೃತ್ ಪಾಲ್ ಮತ್ತು ಆತನ ಆರು ಸಹಚರರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆತನ ಆತ್ಮೀಯನಾದ ಲವ್ ಪ್ರೀತ್ ಸಿಂಗ್ ತೂಫಾನ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅಮೃತ್ ಪಾಲ್ ಪಂಜಾಬ್ ಪೊಲೀಸರಿಗೆ ಈ ದೂರನ್ನು ಹಿಂತೆಗೆದುಕೊಳ್ಳಲು ಅಂತಿಮ ಗಡುವು ನೀಡಿದ್ದ. 

ಇದನ್ನೂ ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

ಪೊಲೀಸರು ಅವನು ಹೇಳಿದಂತೆ ಮಾಡದಿದ್ದಾಗ, ಅಮೃತ್ ಪಾಲ್ ಸಹಚರರು ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಅವರು ಬ್ಯಾರಿಕೇಡ್‌ಗಳನ್ನು ತಳ್ಳಿ, ದೊಣ್ಣೆ, ಖಡ್ಗ, ಬಂದೂಕುಗಳಿಂದ ದಾಳಿ ನಡೆಸಿ, ಸ್ವರಕ್ಷಣೆಗಾಗಿ ಗುರು ಗ್ರಂಥ ಸಾಹಿಬ್ ಹಿಡಿದು, ಲವ್ ಪ್ರೀತ್‌ನನ್ನು ಬಿಡಿಸಲು ಯತ್ನಿಸಿದ್ದರು.

ಮರುಕಳಿಸುತ್ತಿರುವ ಇತಿಹಾಸ

ಕಳೆದ ತಿಂಗಳು ಅಮೃತ್ ಪಾಲ್ ಸಿಂಗ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಸಿಖ್ಖರನ್ನು ಸರಿಯಾಗಿ ನಡೆಸಿಕೊಳ್ಳದೇ ಹೋದರೆ, ಈ ಹಿಂದೆ ಅಮೃತಸರದ ಸ್ವರ್ಣಮಂದಿರ ಸಂಕೀರ್ಣದಲ್ಲಿ ಆಪರೇಷನ್ ಬ್ಲೂ ಸ್ಟಾರ್ ನಡೆಸಿ, ಜರ್ನೇಲ್ ಸಿಂಗ್ ಭಿಂದ್ರನ್‌ವಾಲೆ ಅವರನ್ನು ಕೊಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನುಭವಿಸಿದ ಪರಿಸ್ಥಿತಿಯನ್ನೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎದುರಿಸಬೇಕಾದೀತು ಎಂದಿದ್ದ.

ಇದನ್ನೂ ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

ಜಲಿಯನ್ ವಾಲಾಬಾಗ್ (ಎಪ್ರಿಲ್ 13, 1919) ಹತ್ಯಾಕಾಂಡ ನಡೆಸಿದ ಮೈಕೆಲ್ ಡಯರ್ ನನ್ನು ಲಂಡನ್ನಿನ ವೆಸ್ಟ್ ಮಿನಿಸ್ಟರ್‌ನ ಕಾಕ್ಸ್‌ಟನ್ ಹಾಲ್‌ನಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ಸೆಂಟ್ರಲ್ ಏಷ್ಯನ್ ಸೊಸೈಟಿ (ಈಗ ರಾಯಲ್ ಸೊಸೈಟಿ ಫಾರ್ ಏಷ್ಯನ್ ಅಫೇರ್ಸ್) ಜಂಟಿ ಸಭೆಯಲ್ಲಿ ಮಾರ್ಚ್ 13, 1940ರಂದು ಸಿಖ್ ಕ್ರಾಂತಿಕಾರಿ ಊಧಮ್ ಸಿಂಗ್ ಗುಂಡಿಟ್ಟು ಹತ್ಯೆಗೈದಿದ್ದ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಬ್ರಿಟಿಷರು ಬಹುತೇಕ 400 ಭಾರತೀಯರನ್ನು ಕೊಂದು, 1,200ಕ್ಕೂ ಹೆಚ್ಚು ಜನರನ್ನು ಕೊಂದಿದ್ದರು. ಉಧಮ್ ಸಿಂಗ್ ಆ ಘಟನೆ ನಡೆದ 21 ವರ್ಷಗಳ ಬಳಿಕ ಸೇಡು ತೀರಿಸಿಕೊಂಡಿದ್ದ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಂದರ್ಭದಲ್ಲಿ ಪಂಜಾಬಿನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಡಯರ್ ಘಟನೆಗೆ ಜವಾಬ್ದಾರ ಎನ್ನಲಾಗಿತ್ತು.

ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!

ಆಪರೇಷನ್ ಬ್ಲೂಸ್ಟಾರ್ (ಜೂನ್ 6, 1984) ನಲ್ಲಿ ಹತನಾದ ಭಿಂದ್ರನ್‌ವಾಲೆ

ಆಪರೇಷನ್ ಬ್ಲೂಸ್ಟಾರ್ ಮಿಲಿಟರಿ ಕಾರ್ಯಾಚರಣೆಯನ್ನು 1984ರ ಜೂನ್ 1ರಿಂದ ಜೂನ್ 8ರ ತನಕ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಆದೇಶದಂತೆ ನಡೆಸಲಾಯಿತು. ಈ ಕಾರ್ಯಾಚರಣೆ ದಮ್‌ದಾಮಿ ತಕ್ಸಾಲ್ ನಾಯಕ ಜರ್ನೇಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಆತನ ಸಹಚರರನ್ನು ಸ್ವರ್ಣ ಮಂದಿರದಿಂದ ಹೊರತರಲು ನಡೆಸಲಾಗಿತ್ತು. ಈ ಕಾರ್ಯಾಚರಣೆಯನ್ನು ಜಗತ್ತಿನಾದ್ಯಂತ ಸಿಖ್ಖರು ಪ್ರತಿಭಟಿಸಿ, ಅಮಾನವೀಯ ಕಾರ್ಯಾಚರಣೆ ಎಂದೂ ಕರೆದಿದ್ದರು. ಇದರ ಪರಿಣಾಮವಾಗಿ ಭಕ್ತಾದಿಗಳೂ ಸೇರಿದಂತೆ 492 ನಾಗರಿಕರು, 136 ಸೈನಿಕರು ಮೃತಪಟ್ಟು, 220 ಜನ ಗಾಯಗೊಂಡರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ (ಅಕ್ಟೋಬರ್ 31, 1984)

ಇಂದಿರಾ ಗಾಂಧಿಯವರನ್ನು ನಂ. 1, ಸಫ್ದರ್‌ಜಂಗ್ ರಸ್ತೆ, ನವದೆಹಲಿಯ ಅವರ ನಿವಾಸದಲ್ಲಿ ಹತ್ಯೆ ಮಾಡಲಾಯಿತು. ಅವರನ್ನು ಅವರ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಅವರು ಹತ್ಯೆಗೈದಿದ್ದರು. ಆ ದಿನ ಬೆಳಗ್ಗೆ 9:20ರ ವೇಳೆಗೆ ಇಂದಿರಾ ಗಾಂಧಿಯವರು ಬ್ರಿಟಿಷ್ ನಟ ಪೀಟರ್ ಉಸ್ತಿನೋವ್ ನಡೆಸಲಿದ್ದ ಸಂದರ್ಶನದಲ್ಲಿ ಭಾಗವಹಿಸಲು ಹೊರಡುತ್ತಿದ್ದರು. ಅವರು ಪಕ್ಕದ ಅಕ್ಬರ್ ರಸ್ತೆಯ ಕಚೇರಿಯ ಕಡೆ ಉದ್ಯಾನದ ಮೂಲಕ ನಡೆಯುತ್ತಿದ್ದರು. ಅವರು ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಕಾಯುತ್ತಿದ್ದ ಗೇಟ್ ದಾಟುತ್ತಿದ್ದಂತೆ ಅವರ ಮೇಲೆ ಗುಂಡಿನ ದಾಳಿ ನಡೆಸಲಾಯಿತು.

ಇದನ್ನೂ ಓದಿ:  ಕೊಡಗಿನ ವೀರ ಯೋಧರು: ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡವರಿಗೊಂಡು ನಮನ

ಬಿಯಾಂತ್ ತನ್ನ .38 ರಿವಾಲ್ವರ್‌ನಿಂದ ಇಂದಿರಾ ಗಾಂಧಿಯವರ ಹೊಟ್ಟೆಗೆ ಮೂರು ಸುತ್ತು ಗುಂಡು ಹಾರಿಸಿದ್ದ. ಸತ್ವಂತ್ ತನ್ನ ಸ್ಟರ್ಲಿಂಗ್ ಸಬ್ ಮೆಷಿನ್ ಗನ್‌ನಿಂದ ಬಿದ್ದ ಇಂದಿರಾ ಗಾಂಧಿಯವರಿಗೆ 30 ಸುತ್ತು ಗುಂಡು ಹಾರಿಸಿದ. ಅವರಿಬ್ಬರೂ ತಮ್ಮ ಆಯುಧಗಳನ್ನು ನೆಲಕ್ಕೆಸೆದರು. ಬಿಯಾಂತ್ "ನಾನು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇ‌ನೆ. ನೀವೇನು ಮಾಡಬೇಕೋ ಅದನ್ನು ಮಾಡಿ" ಎಂದಿದ್ದ. ಮುಂದಿನ ಕೆಲ ನಿಮಿಷಗಳಲ್ಲಿ ಗಡಿ ಭದ್ರತಾ ಪಡೆಯ ಪೊಲೀಸರು ಆತನನ್ನು ಹಿಡಿದು, ಕೊಂದುಹಾಕಿದ್ದರು. ಓಡಿ ಹೋಗಲು ಯತ್ನಿಸಿದ್ದ, ತೀವ್ರವಾಗಿ ಗಾಯಗೊಂಡಿದ್ದ ಸತ್ವಂತ್‌ನನ್ನು ಬಂಧಿಸಲಾಯಿತು. ಸತ್ವಂತ್ ಮತ್ತು ಆತನ ಸಹಚರ ಕೆಹರ್ ಸಿಂಗ್‌ರನ್ನು 1989ರಲ್ಲಿ ಗಲ್ಲಿಗೇರಿಸಲಾಯಿತು.

ಜನರಲ್ ಎ ಎಸ್ ವೈದ್ಯ ಹತ್ಯೆ (ಆಗಸ್ಟ್ 10, 1986)

31 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಲು ಇನ್ನು ಕೆಲ ಸಮಯ ಬಾಕಿ ಇದ್ದ ಜನರಲ್  ಎ.ಎಸ್. ವೈದ್ಯ ಅವರಿಗೆ ಅವರ ಸಿಬ್ಬಂದಿ ಸಿಖ್ ಬಂಡುಕೋರರ ಬೆದರಿಕೆ ಪತ್ರಗಳನ್ನು ಪ್ರತಿ ದಿನ ಎನ್ನುವಂತೆ ನೀಡುತ್ತಿದ್ದರು. ಬಂಡುಕೋರರ ಆಪರೇಷನ್ ಬ್ಲೂಸ್ಟಾರ್ ನೇತೃತ್ವ ವಹಿಸಿದ್ದಕ್ಕಾಗಿ ಅವರನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಸುತ್ತಿದ್ದರು. ಅದಕ್ಕೆ ವೈದ್ಯ ಓರ್ವ ಸೈನಿಕನಂತೆಯೇ ಪ್ರತಿಕ್ರಿಯಿಸಿದ್ದರು. "ನಾನು ಎರಡು ಯುದ್ಧಗಳನ್ನು ನೋಡಿದ್ದೇನೆ. ಅಪಾಯದಿಂದ ನಾನು ಓಡಿ ಹೋಗಲು ಸಾಧ್ಯವಿಲ್ಲ. ಯಾವುದಾದರೂ ಗುಂಡು ನನ್ನನ್ನು ಹೊಡೆಯಬೇಕೆಂದು ಬರೆದಿದ್ದರೆ, ಅದರಲ್ಲಿ ನನ್ನ ಹೆಸರಿದ್ದರೆ, ಅದು ಬಂದೇ ಬರುತ್ತದೆ" ಎಂದಿದ್ದರು.

ಆಗಸ್ಟ್ 10ರ ಬೆಳಗ್ಗೆ, ಒಂದು ಹೊಚ್ಚ ಹೊಸ ಇಂಡ್ ಸುಜುಕಿ ಬೈಕ್ ಜನರಲ್ ಕಾರ್ ಕಡೆ ಬಂತು. ಅವರು ಒಂದು ಮೂಲೆಯಲ್ಲಿ ಕಾರ್ ನಿಧಾನಗೊಳಿಸುತ್ತಿದ್ದಂತೆ ಒಂದು ಕಪ್ಪು ಜಾಕೆಟ್ ಹಾಕಿಕೊಂಡಿದ್ದ ಕೈ ಅವರೆಡೆ ಸಾಗಿ, ಅವರ ತಲೆಗೆ ಗುಂಡು ಹಾರಿಸಿತು. ಮೊದಲ ಗುಂಡು ಅವರ ಬುರುಡೆಯನ್ನು ಚೂರು ಮಾಡಿ, ಮೆದುಳು ಮತ್ತೆ ವಾಸಿಯಾಗದಂತೆ ಘಾಸಿ ಮಾಡಿತ್ತು. ಎರಡನೇ ಗುಂಡು ಅವರ ಮೆದುಳಿಗೆ ಹೊಕ್ಕಿತ್ತು. ಬಳಿಕ ಮೂರನೇ ಗುಂಡು ಅವರ ಭುಜಕ್ಕೆ ಹೊಕ್ಕಿತ್ತು. ಅವರ ಪತ್ನಿ ಭಾನುಮತಿಯವರ ಕತ್ತಿಗೆ ತೀವ್ರ ಗಾಯವಾಗಿತ್ತು. ಅವರು ಮೃತಪಟ್ಟ ಪತಿಯ ತಲೆ ಹಿಡಿದುಕೊಂಡು ಎಚ್ಚರಿಸಲು ಪ್ರಯತ್ನಿಸುತ್ತಿದ್ದರು. ಅವರ ಅಂಗರಕ್ಷಕ ರಾಮಚಂದ್ರ ಕ್ಷೀರ ಸಾಗರ್ ಪ್ರತಿಕ್ರಿಯಿಸಲೂ ಸಾಧ್ಯವಾಗದೆ, ಗರಬಡಿದಂತೆ ಹಿಂದಿನ ಆಸನದಲ್ಲಿ ಕುಳಿತಿದ್ದರು.

ಆಪರೇಷನ್ ಬ್ಲೂಸ್ಟಾರ್ ಇನ್ನೊಂದು ಸೇಡು ತೀರಿಸಿಕೊಂಡಿತ್ತು

ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಅಧಿಕಾರ ವರ್ಗ ಈ ಬಾರಿ ಪರಿಸ್ಥಿತಿಯನ್ನು ಅತ್ಯಂತ ನಾಜೂಕಾಗಿ, ಜಾಗರೂಕತೆಯಿಂದ ನಿಭಾಯಿಸುವುದು ಉತ್ತಮವಾಗಿದೆ.

Follow Us:
Download App:
  • android
  • ios