ಅಮೃತಪಾಲ್ ಸಿಂಗ್ ಅವರ 6 - 7 ಏಳು ಮಂದಿ ಬಂದೂಕುಧಾರಿಗಳು ಸೇರಿದ್ದಾರೆ ಎಂದು ಜಲಂಧರ್ ಪೊಲೀಸ್ ಕಮಿಷನರ್ ಕುಲದೀಪ್ ಸಿಂಗ್ ಚಾಹಲ್ ತಿಳಿಸಿದ್ದಾರೆ. ಹಾಗೂ, ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಹಣಕಾಸು ವ್ಯವಹಾರ ನೋಡಿಕೊಳ್ತಿದ್ದ ದಲ್ಜೀತ್ ಸಿಂಗ್ ಕಲ್ಸಿಯನ್ನು ಸಹ ಹರಿಯಾಣದ ಗುರ್ಗಾಂವ್‌ನಿಂದ ಬಂಧಿಸಲಾಗಿದೆ.

ಹೊಸದಿಲ್ಲಿ/ಅಮೃತಸರ: ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ನಿನ್ನೆಯ ವರದಿಗಳು ಹೇಳಿದ್ದವು. ಆದರೆ, ಆತ ನಿಜಕ್ಕೂ ಇನ್ನೂ ಪೊಲೀಸರ ಬಲೆಗೆ ಬಿದ್ದೇ ಇಲ್ಲ. ಹೌದು, ಆತ ಪಂಜಾಬ್ ಪೊಲೀಸರಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಲಂಧರ್‌ನಲ್ಲಿ ನಿನ್ನೆ ಸಂಜೆ ಮೋಟಾರ್‌ಸೈಕಲ್‌ನಲ್ಲಿ ವೇಗವಾಗಿ ಹೋಗುತ್ತಿದ್ದ ಅಮೃತಪಾಲ್ ಸಿಂಗ್ ಅವರನ್ನು ಹಿಡಿಯಲು ಬೃಹತ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದವು. ಆತನ 'ವಾರಿಸ್ ಪಂಜಾಬ್ ದೇ' ಸಂಘಟನೆಯ 78 ಸದಸ್ಯರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಹಲವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೆ, ಪೊಲೀಸರು ಬಂಧಿಸಿದವರಲ್ಲಿ ಅಮೃತಪಾಲ್ ಸಿಂಗ್ ಅವರ 6 - 7 ಏಳು ಮಂದಿ ಬಂದೂಕುಧಾರಿಗಳು ಸೇರಿದ್ದಾರೆ ಎಂದು ಜಲಂಧರ್ ಪೊಲೀಸ್ ಕಮಿಷನರ್ ಕುಲದೀಪ್ ಸಿಂಗ್ ಚಾಹಲ್ ತಿಳಿಸಿದ್ದಾರೆ. ಹಾಗೂ, ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಹಣಕಾಸು ವ್ಯವಹಾರ ನೋಡಿಕೊಳ್ತಿದ್ದ ದಲ್ಜೀತ್ ಸಿಂಗ್ ಕಲ್ಸಿಯನ್ನು ಸಹ ಹರಿಯಾಣದ ಗುರ್ಗಾಂವ್‌ನಿಂದ ಬಂಧಿಸಲಾಗಿದೆ.

ಇದನ್ನು ಓದಿ: ಖಲಿಸ್ತಾನ ಹೋರಾಟದ ನೇತೃತ್ವದ ವಹಿಸಿದ ಅಮೃತ್ ಪಾಲ್ ಸಿಂಗ್ ಯಾರು?

7 ಜಿಲ್ಲೆಗಳ ಸಿಬ್ಬಂದಿಯನ್ನು ಒಳಗೊಂಡ ರಾಜ್ಯ ಪೊಲೀಸರ ವಿಶೇಷ ತಂಡವು ನಿನ್ನೆ ಜಲಂಧರ್‌ನ ಶಾಕೋಟ್ ತಾಲೂಕಿಗೆ ತೆರಳುತ್ತಿದ್ದಾಗ ಖಲಿಸ್ತಾನಿ ನಾಯಕನ ಬೆಂಗಾವಲು ಪಡೆಯನ್ನು ಹಿಂಬಾಲಿಸಿತ್ತು. ಆದರೆ, ಭಯೋತ್ಪಾದಕ ಭಿಂದ್ರನ್‌ವಾಲೆಯ ಅನುಯಾಯಿ ಎಂದು ಹೇಳಿಕೊಳ್ಳುವ ಅಮೃತಪಾಲ್‌ ಸಿಂಗ್, ಮೋಟಾರ್‌ಸೈಕಲ್‌ನಲ್ಲಿ ಪೊಲೀಸರ ಬಲೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಪೊಲೀಸರು ಅವರನ್ನು ಬೆನ್ನಟ್ಟುತ್ತಿದ್ದಾರೆ ಎಂದು ಅವರ ಸಹಾಯಕರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವಿಡಿಯೋಗಳನ್ನು ಹಂಚಿಕೊಂಡ ನಂತರ ಅಧಿಕಾರಿಗಳು ಹಲವಾರು ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದರು ಮತ್ತು ರಾಜ್ಯದಲ್ಲಿ ಇಂಟರ್ನೆಟ್ ಹಾಗೂ ಎಸ್‌ಎಂಎಸ್‌ ಸೇವೆಗಳನ್ನು ಸ್ಥಗಿತಗೊಳಿಸಿದರು. ಮತ್ತು ಶಾಕೋಟ್‌ನಲ್ಲಿ ಅವರ ಬೆಂಬಲಿಗರನ್ನು ಒಟ್ಟುಗೂಡಿಸಿದ್ದರು. 
ಈ ಮಧ್ಯೆ, ಸಾಮಾಜಿಕ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡುವುದನ್ನು ತಡೆಯಲು ರಾಜ್ಯದಲ್ಲಿ ಸೋಮವಾರ ಮಧ್ಯಾಹ್ನದವರೆಗೆ ಇಂಟರ್ನೆಟ್ ಅಮಾನತು ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೃತಸರದ ಅಮೃತಪಾಲ್ ಸಿಂಗ್ ಅವರ ಹಳ್ಳಿಯಾದ ಜಲ್ಲುಪುರ್ ಖೈರಾ ಹೊರಗೆ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಇನ್ನು, ಶಾಂತಿ ಕಾಪಾಡುವಂತೆ ಮತ್ತು ಯಾವುದೇ ನಕಲಿ ವಿಡಿಯೊಗಳನ್ನು ಹಂಚಿಕೊಳ್ಳಬೇಡಿ ಎಂದು ಪೊಲೀಸರು ನಾಗರಿಕರನ್ನು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗನ್‌, ಖಡ್ಗ, ಆಯುಧ ಹಿಡಿದು ಖಲಿಸ್ತಾನಿ ಬೆಂಬಲಿಗರ ದಾಂಧಲೆ: ಅಮೃತಸರದಲ್ಲಿ ಠಾಣೆ ಮೇಲೆ ದಾಳಿ

ಮಾರ್ಚ್ 2 ರಂದು ನಡೆದ ಸಭೆಯಲ್ಲಿ ಅಮೃತಪಾಲ್ ಸಿಂಗ್ ಅವರನ್ನು ಬಂಧಿಸುವ ಯೋಜನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಶನಿವಾರ ಪೊಲೀಸರು ಆತನನ್ನು ಬಂಧಿಸಲು ಹೊರಡುವ ಮೊದಲು ಕೇಂದ್ರ ಸರ್ಕಾರ ಹೆಚ್ಚುವರಿ ಪಡೆಗಳನ್ನು ಪಂಜಾಬ್‌ಗೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.

ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರು ಅವರ ಸಹಾಯಕರೊಬ್ಬರ ಬಿಡುಗಡೆಗಾಗಿ ಕತ್ತಿಗಳು ಮತ್ತು ಬಂದೂಕುಗಳೊಂದಿಗೆ ಪೊಲೀಸ್ ಠಾಣೆಗೆ ನುಗ್ಗಿದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ. ಆ ವೇಳೆ ಘರ್ಷಣೆಯಲ್ಲಿ 6 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಘಟನೆಯ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆ ಪಂಜಾಬ್ ಸರ್ಕಾರ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು.