ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಚೀತಾ ಪತನ, ಇಬ್ಬರು ಪೈಲಟ್ಗಳ ಸಾವು!
ಭಾರತೀಯ ಸೇನೆ ನೀಡಿರುವ ಮಾಹಿತಿಯ ಪ್ರಕಾರ, ಚೀತಾ ಹೆಲಿಕಾಪ್ಟರ್ನ ಅವಶೇಷಗಳು ಅರುಣಾಚಲ ಪ್ರದೇಶದ ಪೂರ್ವದ ಮಂಡಲ ಪ್ರದೇಶದ ಬಳಿಯ ಬಾಂಗ್ಲಾಜಾಪ್ ಬಳಿ ಪತ್ತೆಯಾಗಿವೆ.
ನವದೆಹಲಿ (ಮಾ. 16):ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಭಾರತೀಯ ಸೇನೆಯ ಏವಿಯೇಷನ್ ಚೀತಾ ಹೆಲಿಕಾಪ್ಟರ್ ಗುರುವಾರ ಪತನಗೊಂಡಿದ್ದು, ಇಬ್ಬರು ಪೈಲಟ್ಗಳು ಸಾವು ಕಂಡಿದ್ದಾರೆ. ಬೆಳಗ್ಗೆ 9:15ರ ಸುಮಾರಿಗೆ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡಿದೆ ಎಂದು ವರದಿಯಾಗಿದೆ. ಸೇನೆಯ ಪ್ರಕಾರ, ಹೆಲಿಕಾಪ್ಟರ್ ಬೋಮ್ಡಿಲಾದ ಪಶ್ಚಿಮದ ಮಂಡಲ ಬಳಿ ಪತನಗೊಂಡಿದೆ ಎಂದು ತಿಳಿಸಲಾಗಿದೆ. ಸೇನೆ, ಎಸ್ಎಸ್ಬಿ ಮತ್ತು ಐಟಿಬಿಪಿಯ ಐದು ತಂಡಗಳನ್ನು ರಕ್ಷಣೆಗೆ ನಿಯೋಜಿಸಲಾಗಿತ್ತು. ಪರ್ವತ ಪ್ರದೇಶಗಳಲ್ಲಿ ಸೇನಾಪಡೆಗಳಿಗೆ ಚೇತಕ್ ಹಾಗೂ ಚೀತಾ ಹೆಲಿಕಾಪ್ಟರ್ಗಳು ಜೀವಸೆಲೆಯಾಗಿ ರೂಪುಗೊಂಡಿದ್ದರೂ, ಐಎಎಫ್ ಹಾಗೂ ಭಾರತೀಯ ಸೇನೆಯಲ್ಲಿ ಬಹಳ ವರ್ಷಗಳಿಂದ ಇದು ಸೇವೆ ಸಲ್ಲಿಸುತ್ತಿದೆ. ಇವುಗಳ ಬದಲಿಗೆ ಅತ್ಯಾಧುನಿಕವಾದ ಹೆಲಿಕಾಪ್ಟರ್ಗಳ ಅಗತ್ಯವಿದೆ ಎಂದು ಸೇನೆ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಪ್ರಸ್ತುತ ಸುಮಾರು 200 ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ಗಳು ಸೇವೆಯಲ್ಲಿವೆ. ಕಳೆದ ತಿಂಗಳು, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಸೇನೆಯು ತನ್ನ ಒಟ್ಟಾರೆ ಯುದ್ಧ ವಿಮಾನಯಾನ ಪ್ರೊಫೈಲ್ ಅನ್ನು ಹೆಚ್ಚಿಸುವ ಭಾಗವಾಗಿ ಭವಿಷ್ಯದಲ್ಲಿ ಸುಮಾರು 95 ಲಘು ಯುದ್ಧ ಹೆಲಿಕಾಪ್ಟರ್ಗಳು ಮತ್ತು 110 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ಗಳನ್ನು (LUH) ಸೇನೆಗೆ ಸೇರಿಸಲು ಎದುರು ನೋಡುತ್ತಿರುವುದಾಗಿ ಹೇಳಿದ್ದರು.
“ಭಾರತೀಯ ಸೇನೆ, ಎಸ್ಎಸ್ಬಿ ಮತ್ತು ಐಟಿಬಿಪಿಯ ಐದು ಸರ್ಚ್ ಪಾರ್ಟಿಗಳನ್ನು ತಕ್ಷಣವೇ ಪ್ರಾರಂಭ ಮಾಡಿತ್ತು. ವಿಮಾನದ ಅವಶೇಷಗಳು ಮಂಡಲದ ಪೂರ್ವ ಬಾಂಗ್ಲಾಜಾಪ್ ಗ್ರಾಮದ ಬಳಿ ಪತ್ತೆಯಾಗಿವೆ. ಅಪಘಾತದಲ್ಲಿ ಹೆಲಿಕಾಪ್ಟರ್ನ ಪೈಲಟ್ ಮತ್ತು ಸಹ ಪೈಲಟ್ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಲು ವಿಷಾದವಾಗುತ್ತಿದೆ”ಎಂದು ಕೋಲ್ಕತ್ತಾದ ಸೈನ್ಯದ ಪೂರ್ವ ಕಮಾಂಡ್ ಪೈಲಟ್ಗಳ ಸಾವು ಖಚಿತಪಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಹಾಗೂ ಮೇಜರ್ ಎ.ಜಯಂತ್ ಈ ದುರಂತದಲ್ಲಿ ಸಾವು ಕಂಡಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ಗಳು ನಾಪತ್ತೆ..!
ಮಧ್ಯಾಹ್ನ 12.30ರ ಸುಮಾರಿಗೆ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅನ್ನು ಗ್ರಾಮಸ್ಥರು ಮೊದಲಿಗೆ ಕಂಡಿದ್ದಾರೆ. ಆ ವೇಳೆ ಅದು ಉರಿಯುತ್ತಲೇ ಇತ್ತು. ವಿಶೇಷ ತನಿಖಾ ಕೋಶದ (SIC) ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್ಬೀರ್ ಸಿಂಗ್, ಹೆಲಿಕಾಪ್ಟರ್ ಅಪಘಾತಕ್ಕೀಡಾದ ಪ್ರದೇಶವು ಮೊಬೈಲ್ ಸಂಪರ್ಕವನ್ನು ಹೊಂದಿಲ್ಲ ಮತ್ತು ಐದು ಮೀಟರ್ಗಿಂತಲೂ ಕಡಿಮೆ ಗೋಚರತೆ ಇದ್ದು, ಹವಾಮಾನವು ಅತ್ಯಂತ ಮಂಜಿನಿಂದ ಕೂಡಿದೆ ಎಂದು ಹೇಳಿದರು.