ಕಾರ್ಗಿಲ್ ಯುದ್ಧದ ಹೀರೋ, ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಥಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ನೇಮಕಗೊಂಡಿದ್ದಾರೆ. 5
ನವದೆಹಲಿ (ಸೆ.2): 1999ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಡೆದ ಆಪರೇಷನ್ ಸಫೇದ್ ಸಾಗರ್ನ ಹೀರೋ, 2025ರಲ್ಲಿ ನಡೆದ ಆಪರೇಷನ್ ಸಿಂದೂರ್ ಸಮಯದಲ್ಲಿ ವೆಸ್ಟರ್ನ್ ಏರ್ ಕಮಾಂಡ್ ಮುನ್ನಡೆಸಿದ್ದ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ರಾಮ ಮಂದಿರದ ಮೊಟ್ಟಮೊದಲ ಸಿಇಒ ಆಗಿ ನೇಮಕವಾಗಿದ್ದಾರೆ.
ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಥಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಅತ್ಯುನ್ನತ ಮತ್ತು ಜವಾಬ್ದಾರಿಯುತ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದ ಬರೋಬ್ಬರಿ 5,000ಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳ ಪಟ್ಟಿಯಿಂದ ಜೀತೇಂದ್ರ ಮಿಶ್ರಾ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ.
ಭಾರತೀಯ ವಾಯುಪಡೆಯಲ್ಲಿ (IAF) ಸುದೀರ್ಘ ಹಾಗೂ ಅತ್ಯಂತ ಗೌರವಾನ್ವಿತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಜೀತೇಂದ್ರ ಮಿಶ್ರಾ ಅವರು ಹಲವು ಪ್ರಮುಖ ಮತ್ತು ಕಾರ್ಯತಾಂತ್ರಿಕ ಕಮಾಂಡಿಂಗ್ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಹೊಂದಿದ್ದಾರೆ. ವಿಶೇಷವಾಗಿ, ಭಾರತೀಯ ಸಶಸ್ತ್ರ ಪಡೆಗಳ ಪ್ರಮುಖ ಸಮರ ಕಾರ್ಯಾಚರಣೆಯಾದ 'ಆಪರೇಷನ್ ಸಿಂಧೂರ್' (Operation Sindoor) ಸಮಯದಲ್ಲಿ ಅವರು ವಾಯುಪಡೆಯ ಅತ್ಯಂತ ನಿರ್ಣಾಯಕ 'ವೆಸ್ಟರ್ನ್ ಕಮಾಂಡ್'ನ (Western Command) ಮುಖ್ಯಸ್ಥರಾಗಿ ಯಶಸ್ವಿ ಸಾರಥ್ಯ ವಹಿಸಿದ್ದರು. ಅಯೋಧ್ಯೆಯ ಭವ್ಯ ರಾಮಮಂದಿರದ ಸಂಕೀರ್ಣ, ಮೂಲಸೌಕರ್ಯ, ಭಕ್ತಾದಿಗಳ ನಿರ್ವಹಣೆ ಹಾಗೂ ಟ್ರಸ್ಟ್ನ ಬೃಹತ್ ಯೋಜನೆಗಳನ್ನು ಅತ್ಯಂತ ದಕ್ಷತೆ ಮತ್ತು ಶಿಸ್ತಿನಿಂದ ಮುನ್ನಡೆಸಲು ವಾಯುಪಡೆಯ ಹಿರಿಯ ಅಧಿಕಾರಿಯ ಸೇವಾ ಅನುಭವ ಮತ್ತು ಆಡಳಿತಾತ್ಮಕ ಪಟುತ್ವವು ಯೋಗ್ಯವಾಗಿದೆ ಎಂದು ಪರಿಗಣಿಸಿ ಟ್ರಸ್ಟ್ ಈ ಮಹತ್ವದ ನಿರ್ಧಾರ ತಳೆದಿದೆ.
38 ವರ್ಷಗಳ ಸುದೀರ್ಘ ವಾಯುಪಡೆ ಸೇವೆ
ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರು ಡಿಸೆಂಬರ್ 1986ರಲ್ಲಿ ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಿ ಸೇವೆಗೆ ಸೇರಿದರು. ಸುದೀರ್ಘ 38 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ ಅವರು ಮೇ 2026ರಲ್ಲಿ ಸೇವೆಯಿಂದ ನಿವೃತ್ತರಾದರು. ವಾಯುಪಡೆಯಲ್ಲಿ ಹಲವು ಪ್ರಮುಖ ಕಮಾಂಡಿಂಗ್ ಹುದ್ದೆಗಳನ್ನು ವಹಿಸಿಕೊಂಡಿದ್ದ ಮಿಶ್ರಾ, ಪ್ರಮುಖ ಸಮರ ಕಾರ್ಯಾಚರಣೆಯಾದ 'ಆಪರೇಷನ್ ಸಿಂಧೂರ್' ಸಮಯದಲ್ಲಿ ವೆಸ್ಟರ್ನ್ ಕಮಾಂಡ್ ಮುಖ್ಯಸ್ಥರಾಗಿದ್ದರು.
ಅವರು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA), ಬೆಂಗಳೂರಿನ ಏರ್ ಫೋರ್ಸ್ ಟೆಸ್ಟ್ ಪೈಲಟ್ಸ್ ಸ್ಕೂಲ್, ಯುಎಸ್ಎಯ ಏರ್ ಕಮಾಂಡ್ ಅಂಡ್ ಸ್ಟಾಫ್ ಕಾಲೇಜ್ ಮತ್ತು ಯುಕೆ ಯ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ದೇಣಿಗೆ ಕಳವು ವಿವಾದ ಮತ್ತು ಆಡಳಿತಾತ್ಮಕ ಬದಲಾವಣೆ
ಅಯೋಧ್ಯೆಯಲ್ಲಿ ವರದಿಯಾದ ದೇಣಿಗೆ ಕಳವು ಪ್ರಕರಣದ ನಂತರ ರಾಮಮಂದಿರ ಟ್ರಸ್ಟ್ನಲ್ಲಿ ಮಾಡಲಾದ ಸಾಂಸ್ಥಿಕ ಮತ್ತು ರಚನಾತ್ಮಕ ಬದಲಾವಣೆಗಳ ಭಾಗವಾಗಿ ಏರ್ ಮಾರ್ಷಲ್ ಮಿಶ್ರಾ ಅವರ ನೇಮಕಾತಿ ನಡೆದಿದೆ. ದೇಣಿಗೆ ಎಣಿಕೆ ಕಾರ್ಯಕ್ಕೆ ಸಂಬಂಧಿಸಿದ ಎಂಟು ಜನರನ್ನು ಈ ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿದೆ. ಈ ವಿವಾದದ ಕಾವಿನ ಬೆನ್ನಲ್ಲೇ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.


