ಜಮ್ಮುಕಾಶ್ಮೀರದ ಕುಪ್ವಾರಾದಲ್ಲಿ ಕರ್ತವ್ಯದಲ್ಲಿದ್ದ 22 ವರ್ಷದ ಸೇನಾ ಕ್ಯಾಪ್ಟನ್ ಅಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉತ್ತರ ಪ್ರದೇಶದ ನಿವಾಸಿಯಾಗಿದ್ದ ಇವರು ಪೋಷಕರ ಏಕೈಕ ಪುತ್ರರಾಗಿದ್ದು, ಇತ್ತೀಚೆಗಷ್ಟೇ ಕ್ಯಾಪ್ಟನ್ ಆಗಿ ಬಡ್ತಿ ಪಡೆದಿದ್ದರು. ಅವರ ಹಠಾತ್ ಸಾವು ಗ್ರಾಮದಲ್ಲಿ ಶೋಕವನ್ನುಂಟುಮಾಡಿದೆ.
22 ವರ್ಷದ ಯೋಧ ಹೃದಯಾಘಾತಕ್ಕೆ ಬಲಿ
ಇತ್ತೀಚೆಗೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚಾಗ್ತಾ ಇದೆ. ದಿನ ದೈಹಿಕ ವ್ಯಾಯಾಮ ಮಾಡುವ ಚೆನ್ನಾಗಿ ಊಟ ತಿಂಡಿ ಮಾಡುವ ಆರೋಗ್ಯವಂತ ಯುವಕರೇ ಹಠಾತ್ ಆಗಿ ಬದುಕಿಗೆ ಗುಡ್ ಬಾಯ್ ಹೇಳುತ್ತಿದ್ದಾರೆ. ಅದೇ ರೀತಿ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಕೇವಲ 22ರ ಹರೆಯದ ಕ್ಯಾಪ್ಟನ್ ಒಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಜಮ್ಮುಕಾಶ್ಮೀರದ ಕುಪ್ವಾರಾದಲ್ಲಿ ಕರ್ತವ್ಯದಲ್ಲಿದ್ದಾಗಲೇ ಉಸಿದು ಬಿದ್ದು ಅವರು ಸಾವನ್ನಪ್ಪಿದ್ದಾರೆ. 20 ರಜಪೂತ ರೈಫಲ್ಸ್ನ ಕ್ಯಾಪ್ಟನ್ ಅಮನ್ ಸಾವನ್ನಪ್ಪಿದ ಯೋಧ.
ಕುಸಿದು ಬಿದ್ದ ಅವರಿಗೆ ಸೇನೆಯ ವೈದ್ಯಕೀಯ ಅಧಿಕಾರಿ ಪ್ರಥಮ ಚಿಕಿತ್ಸೆ ನೀಡಿ ಕೂಡಲೇ ಶ್ರೀನಗರದ 92 ಬೇಸ್ ಆಸ್ಪತ್ರೆಗೆ ವಿಮಾನದ ಮೂಲಕ ಕರೆದೊಯ್ಯಲಾಗಿತ್ತು. ಆದರೆ ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಪ್ರಯಾಗರಾಜ್ನ ರಕ್ಷಣಾ ಪಿಆರ್ಒ, ವಿಂಗ್ ಕಮಾಂಡರ್ ದೇಬರ್ತೊ ಧಾರ್ ಹೇಳಿದ್ದಾರೆ. ಉತ್ತರ ಪ್ರದೇಶದ ಕುಶಿನಗರದ ನಿವಾಸಿಯಾಗಿದ್ದು, ಪೋಷಕರ ಏಕೈಕ ಪುತ್ರನಾಗಿದ್ದರು.
ಇವರು ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಕಳೆದೊಂದು ವರ್ಷದಿಂದ ಕರ್ತವ್ಯದಲ್ಲಿದ್ದರು. ಕ್ಯಾಪ್ಟನ್ ಅಮನ್ ಅವರ ಪೋಷಕರಾದರ ತಂದೆ ಯಶವಂತ್ ಸಿಂಗ್ ಹಾಗೂ ತಾಯಿ ವಿಭಾ ಅವರ ಏಕೈಕ ಪುತ್ರ ಅವರ ತಂದೆ ಯಶವಂತ್ ಖಾಸಗಿ ವಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪ್ರಸ್ತುತ ವಾರಣಾಸಿಯಲ್ಲಿ ವಾಸಿಸುತ್ತಿದ್ದಾರೆ. ಅಮನ್ ಅವಿವಾಹಿತರಾಗಿದ್ದರು. ಅವರ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಸೋದರಸಂಬಂಧಿಗಳು ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
ಅಮನ್ ಗೋರಖ್ಪುರದ ಹಾಲ್ಮಾರ್ಕ್ ವರ್ಲ್ಡ್ ಶಾಲೆಯಲ್ಲಿ ಇಂಟರ್ಮೀಡಿಯೇಟ್ವರೆಗೆ ಓದಿ ಗಾಜಿಯಾಬಾದ್ನಲ್ಲಿ ಬಿಟೆಕ್ (ಸಿವಿಲ್ ಎಂಜಿನಿಯರಿಂಗ್) ಗೆ ಪ್ರವೇಶ ಪಡೆದರು. ಮೊದಲ ಸೆಮಿಸ್ಟರ್ ನಂತರ ಅವರು ತಾಂತ್ರಿಕ ಪ್ರವೇಶ ಯೋಜನೆ (TES) ಮೂಲಕ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾದರು. ಎರಡು ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಅವರು ಇತ್ತೀಚೆಗೆ ಕ್ಯಾಪ್ಟನ್ ಆಗಿ ಬಡ್ತಿ ಪಡೆದಿದ್ದರು. ಬಾಲ್ಯದಿಂದಲೂ ಅವರು ಅಧ್ಯಯನದಲ್ಲಿ ಮುಂದಿದ್ದು, ಮತ್ತು ಉನ್ನತ ಹುದ್ದೆಯಲ್ಲಿ ರಾಷ್ಟ್ರ ಸೇವೆ ಮಾಡಲು ಬಯಸಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.
ಇದನ್ನೂ ಓದಿ: ಒಂದು ಸರ್ಕಾರಿ ಭೇಟಿಗೆ ಅಂಡರ್ ಗಾರ್ಮೆಂಟ್ ಸೇರಿ ನೂರೆಂಟು ಬೇಡಿಕೆ ಇಟ್ಟ BSNL ಅಧಿಕಾರಿ: ತನಿಖೆಗೆ ಆದೇಶಿಸಿದ ಸಚಿವರು
ಅವರ ಹಠಾತ್ ಸಾವು ಕುಶಿ ಜಿಲ್ಲೆ ಹಾಗೂ ಅವರ ಗ್ರಾಮವಾದ ಹಟ್ನಲ್ಲಿ ಶೋಕಕ್ಕೆ ಕಾರಣವಾಗಿದೆ. ಕ್ಯಾಪ್ಟನ್ ನಿಧನಕ್ಕೆ ಚಿನಾರ್ ಕಾರ್ಪ್ಸ್ ಆಫ್ ನಾರ್ತರ್ನ್ ಕಮಾಂಡ್ ಕೂಡ ಸಂತಾಪ ಸೂಚಿಸಿದೆ. ಸೇನೆಯು ಕ್ಯಾಪ್ಟನ್ ಅವರ ತ್ಯಾಗವನ್ನು ಗೌರವಿಸುತ್ತದೆ. ನಾವು ದುಃಖಿತ ಕುಟುಂಬದೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ಎಂದು ಚಿನಾರ್ ಕಾರ್ಪ್ಸ್ ಹೇಳಿದೆ. ತಮ್ಮ ಕುಟುಂಬದಲ್ಲೇ ರಕ್ಷಣಾ ಪಡೆಗೆ ಸೇರಿದ ಏಕೈಕ ವ್ಯಕ್ತಿ ಅಮನ್. ಎಂಜಿನಿಯರಿಂಗ್ ಪ್ರವೇಶದ ಬಳಿಕ ತಾಂತ್ರಿಕ ಪ್ರವೇಶದ ಮೂಲಕ ಅವರು ಸೈನ್ಯಕ್ಕೆ ಸೇರಿದರು. ಅವರು ಪ್ರತಿಭಾವಂತ ಹುಡುಗರಾಗಿದ್ದರು ಎಂದು ಮೃತ ಅಧಿಕಾರಿಯ ಸಂಬಂಧಿ ತೇಜ್ ಬಹದ್ದೂರ್ ಸಿಂಗ್ ಹೇಳಿದರು.


