ದಾಖಲೆ ಮಾಡಿದ ಉತ್ತರ ಕನ್ನಡದ ಅಪರೂಪದ ರಾಜಕಾರಣಿ, ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ!
ಉತ್ತರ ಕನ್ನಡ ಮೂಲದ ರಾಜಕಾರಣಿ ಶಶಿಭೂಷಣ್ ಹೆಗಡೆ ಅವರು ಕ್ರೀಡಾ ಲೋಕದಲ್ಲಿ ಅಪರೂಪದ ದಾಖಲೆ ಮಾಡಿದ್ದಾರೆ. ಈ ಬಗ್ಗೆ ಲೇಖಕ, ಡಾ ಅಜಿತ್ ಹರೀಶಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಬಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ರಾಮಕೃಷ್ಣ ಹೆಗಡೆ ಅವರ ಮೊಮ್ಮಗ
ಕರ್ನಾಟಕದ ಮಾಜಿ ಮತ್ತು ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ ದಿll ರಾಮಕೃಷ್ಣ ಹೆಗಡೆ ಅವರ ಮೊಮ್ಮಗನಾದ ಶಶಿಭೂಷಣ ಹೆಗಡೆಯವರು ಅಪರೂಪದ ಸಾಧನೆಯೊಂದನ್ನು ಮಾಡಿ, ಇಂದಿನ ಯುವ ಪೀಳಿಗೆಗೆ, ಅದರಲ್ಲೂ ಮಧ್ಯ ವಯಸ್ಸಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ತಮ್ಮ ಇಪ್ಪತ್ತಾರನೆಯ ವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸಿದ ಇವರು ತುಂಬಾ ಕಡಿಮೆ ಮತಗಳ ಅಂತರದಿಂದ ಕುಮಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಾಭವ ಹೊಂದಿದರು.
ಹಿರಿತನಕ್ಕೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿತು
ಎರಡನೇ ಬಾರಿಯೂ ಮತ್ತೊಂದು ಅತ್ಯಲ್ಪ ಮತಗಳ ಸೋಲು. ಮೂರನೇ ಬಾರಿಗೆ ಶಿರಸಿ- ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸಿದಾಗಲೂ ಇದೇ ಕಥೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹೊರಗುಳಿದರು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಅನಂತ ಕುಮಾರ್ ಬದಲು ಇವರು ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ವಿಶ್ವೇಶ್ವರ ಹೆಗಡೆ ಅವರ ಹಿರಿತನಕ್ಕೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿತು
ಸಹಕಾರಿ ಕ್ಷೇತ್ರದಲ್ಲಿ ಬ್ಯುಸಿಯಾದ್ರು
ಶಶಿಭೂಷಣ ಎದೆಗುಂದದೆ, ಭ್ರಮನಿರಸನಕ್ಕೆ ಒಳಗಾಗದೇ ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವು ಶಾಲೆ, ಕಾಲೇಜು, ಆಯುರ್ವೇದ, ನ್ಯಾಚುರೋಪತಿ ಮತ್ತು ಯೋಗ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಚೇತನಾ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
'ಐರನ್ಮ್ಯಾನ್ 70.3' ಟ್ರಯಾಥ್ಲಾನ್ ಸ್ಪರ್ಧೆ
ಈಗ ವಿಷಯಕ್ಕೆ ಬರೋಣ! ಇತ್ತೀಚೆಗೆ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ಪ್ರತಿಷ್ಠಿತ 'ಐರನ್ಮ್ಯಾನ್ 70.3' ಟ್ರಯಾಥ್ಲಾನ್ ಸ್ಪರ್ಧೆಯಲ್ಲಿ ಶಶಿಭೂಷಣ ಹೆಗಡೆ, ದೊಡ್ಮನೆಯವರು ಬಹಳ ಯಶಸ್ವಿಯಾಗಿ, ಈ ಗುರಿಯನ್ನು ತಲುಪುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿಶ್ವದ ಅತ್ಯಂತ ಕಠಿಣತಮ ದೈಹಿಕ ಮತ್ತು ಮಾನಸಿಕ ದೃಢತೆಯ ಪರೀಕ್ಷೆ ಎಂದೇ ಕರೆಯಲಾಗುವ ಈ ಸ್ಪರ್ಧೆಯನ್ನು, ಶಶಿಭೂಷಣ ಅವರು ಕೇವಲ 6 ಗಂಟೆ 48 ನಿಮಿಷಗಳಲ್ಲಿ ಪೂರ್ಣಗೊಳಿಸಿ, ತಮ್ಮ ಅದ್ಭುತ ಫಿಟ್ನೆಸ್ ಮತ್ತು ಅಚಲ ಸಂಕಲ್ಪವನ್ನು ಪ್ರದರ್ಶಿಸಿದ್ದಾರೆ. ಅವರ ಮುಂದಿನ ಸಾರ್ವಜನಿಕ ಜೀವನದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

