ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಸಿನಿಮಾದ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಕೇರಳವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ವಿಚಾರಣೆ ಮುಗಿಯುವವರೆಗೆ ಚಿತ್ರವನ್ನು ಬಿಡುಗಡೆ ಮಾಡದಂತೆ ನಿರ್ಮಾಪಕರಿಗೆ ನಿರ್ದೇಶನ ನೀಡಿದೆ.

ದಿ ಕೇರಳ ಸ್ಟೋರಿ 2' ಬಿಡುಗಡೆಗೆ ಹೈಕೋರ್ಟ್ ತಡೆ
ದಿ ಕೇರಳ ಸ್ಟೋರಿ 2 ಸಿನಿಮಾವು ಫೆಬ್ರವರಿ 27ರಂದು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಕೇರಳ ಹೈಕೋರ್ಟ್ ಸದ್ಯಕ್ಕೆ ಈ ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಹೌದು ಸ್ವತಃ ಕೇರಳ ಸ್ಟೋರಿ -2 ಸಿನಿಮಾವೂ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಈ ಸಿನಿಮಾವೂ ಕೇರಳದ ಬಗ್ಗೆ ತಪ್ಪು ಚಿತ್ರಣ ನೀಡುತ್ತದೆ ಎಂದು ಆರೋಪಿಸಿ ಚಿತ್ರದ ಬಿಡುಗಡೆಯ ವಿರುದ್ಧ ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ವಿಚಾರಣೆಯ ಸಮಯದಲ್ಲಿ, ನಿರ್ಮಾಪಕರು ನ್ಯಾಯಾಲಯಕ್ಕಾಗಿ ಪೂರ್ವ-ಪ್ರದರ್ಶನವನ್ನು(pre-screening) ಏರ್ಪಡಿಸುವಂತೆ ಕೋರ್ಟ್ ಕೇಳಿತು. ಆದರೆ ನಿರ್ಮಾಪಕರು ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ದಿ ಕೇರಳ ಸ್ಟೋರಿ: ಗೋಸ್ ಬಿಯಾಂಡ್
ಚಿತ್ರದ ಪೂರ್ಣ ಹೆಸರು ' ದಿ ಕೇರಳ ಸ್ಟೋರಿ: ಗೋಸ್ ಬಿಯಾಂಡ್' , ಈ ಗೋಸ್ ಬಿಯಾಂಡ್ ಎಂಬುದು ಸಿನಿಮಾವೂ ಕೇವಲ ಕೇರಳಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಸೂಚಿಸುತ್ತದೆ ಹೀಗಾಗಿ ವಿವಾದದ ಹೊರತಾಗಿಯೂ, ಸಿನಿಮಾ ನಿರ್ಮಾಪಕರು ಸಿನಿಮಾದ ಹೆಸರನ್ನು ಬದಲಾಯಿಸುವುದಿಲ್ಲ ಎಂದು ಹೇಳಿದರು. ವಿಚಾರಣೆಯ ಸಮಯದಲ್ಲಿ, ಫೆಬ್ರವರಿ 27 ರಂದು ಬಿಡುಗಡೆಗೆ ನಿಗದಿಯಾದ ದಿನಾಂಕಕ್ಕೂ ಮೊದಲು ಕೊಚ್ಚಿಯಲ್ಲಿ ಸಿನಿಮಾದ ಪ್ರದರ್ಶನ ಮಾಡುವಂತೆ ನ್ಯಾಯಾಲಯ ಕೇಳಿತು. ಆದರೆ ಇದಕ್ಕೆ ನಿರ್ಮಾಪಕರು ನಿರಾಕರಿಸಿದ ನಂತರ, ವಿಚಾರಣೆಯನ್ನು ಮುಂದೂಡಲಾಗಿದೆ.
ಚಿತ್ರದ ಶೀರ್ಷಿಕೆಯನ್ನು ಸಮರ್ಥಿಸಿಕೊಂಡ ನಿರ್ಮಾಪಕರು
ನಂತರ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮರು ನಿಗದಿಪಡಿಸಿದರು. ಮತ್ತೆ ಆರಂಭವಾದ ವಿಚಾರಣೆಯಲ್ಲಿ ನಿರ್ಮಾಪಕರು ಅರ್ಜಿಯನ್ನು ವಿರೋಧಿಸಿ ಮತ್ತು ಚಿತ್ರದ ಶೀರ್ಷಿಕೆಯನ್ನು ಸಮರ್ಥಿಸಿಕೊಂಡು ಪ್ರತಿಕ್ರಿಯೆ ಸಲ್ಲಿಸಿದರು. ಈ ಮಧ್ಯೆ, ನಡೆಯುತ್ತಿರುವ ವಿಚಾರಣೆ ಮುಗಿಯುವವರೆಗೆ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಹೈಕೋರ್ಟ್ ನಿರ್ದೇಶಿಸಿತು. ಸಿನಿಮಾದ ವಿಷಯ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಅದರ ಸಂಭಾವ್ಯ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಈ ಆದೇಶ ಬಂದಿದೆ.
ಮೂರು ವಿಭಿನ್ನ ರಾಜ್ಯಗಳ ಮೂವರು ಮಹಿಳೆಯರ ಕತೆ
ಈ ಸಿನಿಮಾದ ಟೀಸರ್ ಮೂರು ವಿಭಿನ್ನ ರಾಜ್ಯಗಳ ಮೂವರು ಮಹಿಳೆಯರನ್ನು ಒಳಗೊಂಡಿದ್ದು, ಕೇರಳ ಕೇಂದ್ರಿತ ಕಥೆಗಿಂತ ರಾಷ್ಟ್ರೀಯ, ಬಹು ರಾಜ್ಯವನ್ನು ಒಳಗೊಂಡ ನಿರೂಪಣೆಯನ್ನು ಹೊಂದಿದೆ. ಗೋಸ್ ಬಿಯಾಂಡ್ ಎಂಬ ಟ್ಯಾಗ್ ಲೈನ್ ಸಿನಿಮಾ ಕತೆಯೂ ಕೇರಳವನ್ನು ಮೀರಿ ವಿಸ್ತರಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಹಾಗೆಯೇ ದಿ ಎಂಬ ಪದವು ಚಿತ್ರವನ್ನು ಮೊದಲ ಕಂತಿಗೆ ಸಂಪರ್ಕಿಸುತ್ತದೆ ಮತ್ತು ನಿರೂಪಣೆಯನ್ನು ಕೇರಳಕ್ಕೆ ಸೀಮಿತಗೊಳಿಸುವುದಿಲ್ಲ.
ಟೀಸರ್ ಬಿಡುಗಡೆಯಾದ 16 ದಿನಗಳ ನಂತರ ಅರ್ಜಿ
ಕೇವಲ 2 ನಿಮಿಷಗಳ ಟೀಸರ್ ಮೇಲೆ ಚಿತ್ರವನ್ನು ನಿರ್ಣಯಿಸುವುದು ಸರಿಯಲ್ಲ, ಏಕೆಂದರೆ ಟೀಸರ್ ಪೂರ್ಣ ಕಥೆಯನ್ನು ಹೊಂದಿಲ್ಲ, ಹಾಗೆಯೇ ಈ ಚಿತ್ರವು ಈಗಾಗಲೇ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (ಸಿಬಿಎಫ್ಸಿ) ಅನುಮತಿ ಪಡೆದಿದ್ದು, ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಟೀಸರ್ ಬಿಡುಗಡೆಯಾದ 16 ದಿನಗಳ ನಂತರ ಅರ್ಜಿ ಸಲ್ಲಿಸಲಾಗಿದ್ದು, ಇದು ವಿಳಂಬವಾಗಿದೆ. ಅರ್ಜಿದಾರರು ಕೇರಳದ ಜನರ ಸಾಮೂಹಿಕ ಘನತೆಯನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ನಿರ್ಮಾಪಕರು ವಾದಿಸಿದರು.
ನ್ಯಾಯಾಲಯ ತರಾಟೆ
ನಿರ್ಮಾಪಕರ ಪರವಾಗಿ ಹಾಜರಾದ ಹಿರಿಯ ವಕೀಲ ಎಸ್. ಶ್ರೀಕುಮಾರ್ ಈ ಅರ್ಜಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂದು ಅರ್ಹತೆ ಪಡೆಯುತ್ತವೆಯೇ ಅಥವಾ ಖಾಸಗಿ ಅರ್ಜಿಗಳಾಗಿ ಅರ್ಹತೆ ಪಡೆಯುತ್ತವೆಯೇ ಎಂಬುದನ್ನು ನ್ಯಾಯಾಲಯ ಮೊದಲು ನಿರ್ಧರಿಸಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ನ್ಯಾಯಾಲಯವು ಚಲನಚಿತ್ರವನ್ನು ನೋಡಬಾರದು ಎಂದು ನೀವು ಬಯಸುತ್ತೀರಿ. ಈ ವಿಷಯವು ವ್ಯಕ್ತಿಯ ಖಾಸಗಿ ವಿಷಯವೋ ಅಥವಾ ಎಲ್ಲಾ ಜನರಿಗೆ ಸಂಬಂಧಿಸಿದ ಸಾರ್ವಜನಿಕ ವಿಷಯವೋ ಎಂಬುದನ್ನು ನ್ಯಾಯಾಲಯವು ಮಾತ್ರ ನಿರ್ಧರಿಸಬೇಕೆಂದು ನೀವು ಬಯಸುತ್ತೀರಿ ಎಂದರು.
ವಿಚಾರಣೆ ಮುಗಿಯುವವರೆಗೆ ಚಿತ್ರವನ್ನು ಬಿಡುಗಡೆ ಮಾಡದಂತೆ ಹೈಕೋರ್ಟ್ ಆದೇಶ
ಸೌಹಾರ್ದತೆಯ ರಾಜ್ಯ ಎಂದು ಬಣ್ಣಿಸಲಾದ ಕೇರಳವನ್ನು ಏಕೆ ತಪ್ಪಾಗಿ ನಿರೂಪಿಸಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಾಲಯವು ಚಲನಚಿತ್ರ ನಿರ್ಮಾಪಕರನ್ನು ಟೀಕಿಸಿತು. ಚಲನಚಿತ್ರವನ್ನು ನೈಜ ಘಟನೆಗಳಿಂದ ಪ್ರೇರಿತ ಎಂದು ವಿವರಿಸಲಾಗಿದೆ ಮತ್ತು ಶೀರ್ಷಿಕೆಯಲ್ಲಿ ಕೇರಳವನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ, ಆದರೆ ಕಥೆಗೆ ರಾಜ್ಯಕ್ಕೂ ಯಾವುದೇ ನಿಜವಾದ ಸಂಬಂಧವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೇ ನಡೆಯುತ್ತಿರುವ ವಿಚಾರಣೆ ಮುಗಿಯುವವರೆಗೆ ಚಿತ್ರವನ್ನು ಬಿಡುಗಡೆ ಮಾಡದಂತೆ ಹೈಕೋರ್ಟ್ ನಿರ್ಮಾಪಕರಿಗೆ ನಿರ್ದೇಶನ ನೀಡಿದೆ. ಚಿತ್ರದ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯದ ಈ ಆದೇಶ ಬಂದಿದ್ದು,ಸಿನಿಮಾದ ವಿಷಯ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಉಂಟಾಗುವ ಸಂಭಾವ್ಯ ಪರಿಣಾಮದ ಬಗ್ಗೆ ಕಳವಳ ವ್ಯಕ್ತವಾಗಿದೆ. ಪರಿಣಾಮವಾಗಿ, ಮುಂದಿನ ನ್ಯಾಯಾಂಗ ಪರಿಶೀಲನೆಯವರೆಗೆ ಬಿಡುಗಡೆಯನ್ನು ತಡೆಹಿಡಿಯಲಾಗಿದೆ.
ವಿವಾದ ಏಕೆ?
ಚಿತ್ರದ ಬಿಡುಗಡೆಯನ್ನು ನಿಷೇಧಿಸಬೇಕು ಮತ್ತು ಸಿಬಿಎಫ್ಸಿ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕೆಂದು ಕೋರಿ ವಿವಿಧ ವ್ಯಕ್ತಿಗಳು ಸಲ್ಲಿಸಿರುವ ಮೂರು ಪ್ರತ್ಯೇಕ ಅರ್ಜಿಗಳನ್ನು ಕೇರಳ ಹೈಕೋರ್ಟ್ ಪ್ರಸ್ತುತ ವಿಚಾರಣೆ ನಡೆಸುತ್ತಿದೆ.
ವಿವಾದ ಏಕೆ?
ಫೆಬ್ರವರಿ 27 ರಂದು ಬಿಡುಗಡೆಯಾಗಬೇಕಿರುವ ಈ ಚಿತ್ರವು ಮತಾಂತರ, ಲವ್ ಜಿಹಾದ್ ಮತ್ತು ಭಯೋತ್ಪಾದನೆ ಸೇರಿದಂತೆ ಸೂಕ್ಷ್ಮ ವಿಷಯಗಳನ್ನು ಒಳಗೊಂಡಿದೆ. ಇದು ವಿವಿಧ ರಾಜ್ಯಗಳ ಮೂವರು ಹುಡುಗಿಯರ ಕಥೆಯನ್ನು ಹೇಳುತ್ತಿದ್ದರೂ, ಶೀರ್ಷಿಕೆಯಲ್ಲಿ ಕೇರಳವನ್ನು ಸೇರಿಸಿರುವುದರಿಂದ ರಾಜ್ಯವನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಟ್ರೇಲರ್ ಬಿಡುಗಡೆಯಾದ ನಂತರ, ಕೇರಳದ ಅನೇಕ ಜನರು ಚಿತ್ರ ಬಿಡುಗಡೆಯ ವಿರುದ್ಧ ಅರ್ಜಿಗಳನ್ನು ಸಲ್ಲಿಸಿದರು, ಈ ಚಿತ್ರವು ರಾಜ್ಯದ ಮಾನನಷ್ಟಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದರು. ಒಂದು ಅರ್ಜಿಯು ಚಿತ್ರದ ಶೀರ್ಷಿಕೆಯಲ್ಲಿ ಬದಲಾವಣೆಯನ್ನು ಸಹ ಒತ್ತಾಯಿಸಿತು.
ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ ಚಿತ್ರವನ್ನು ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ ಮತ್ತು ಸನ್ಶೈನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ವಿಪುಲ್ ಅಮೃತ್ಲಾಲ್ ಶಾ ನಿರ್ಮಿಸಿದ್ದಾರೆ. ಇದು 2023 ರ ಚಲನಚಿತ್ರ ದಿ ಕೇರಳ ಸ್ಟೋರಿ ಯ ಮುಂದುವರಿದ ಭಾಗವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

