ಸೋಲಿನ ಬೆನ್ನಲ್ಲಿ ಟೀಂ ಇಂಡಿಯಾಗೆ ಮೇಜರ್ ಸರ್ಜರಿ?
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೋಲು ಬಿಸಿಸಿಐ ಚಿಂತೆಗೆ ಕಾರಣವಾಗಿದೆ. ಇದೀಗ ಸೋಲಿನ ಪರಾಮರ್ಶೆ ನಡೆಯುತ್ತಿದ್ದು, ಕೆಲ ಬದಲಾವಣೆ ಮಾಡಲು ಮುಂದಾಗಿದೆ. ಇದರ ಮೊದಲ ಭಾಗವಾಗಿ ಮೊದಲ ವಿಕೆಟ್ ಉರುಳಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಮುಂಬೈ(ಜು.12): ವಿಶ್ವಕಪ್ ಟೂರ್ನಿಗೆ ಸೋಲಿನೊಂದಿಗೆ ವಿದಾಯ ಹೇಳಿದ ಟೀಂ ಇಂಡಿಯಾ ಇದೀಗ ಎಡವಿದ್ದೆಲ್ಲಿ ಎಂದು ಪರಾಮರ್ಶೆ ನಡೆಸುತ್ತಿದೆ. ಇತ್ತ ಬಿಸಿಸಿಐ ಸೆಮಿಫೈನಲ್ನಿಂದ ಹೊರಬಿದ್ದ ಬೆನ್ನಲ್ಲೇ ಟೀಂ ಇಂಡಿಯಾಗೆ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ. ಮೊದಲ ಭಾಗವಾಗಿ ಟೀಂ ಇಂಡಿಯಾ ಸಹಾಯಕ ಕೋಚ್(ಬ್ಯಾಟಿಂಗ್ ಕೋಚ್) ಸಂಜಯ್ ಬಂಗಾರ್ ತಲೆದಂಡವಾಗೋ ಸಾಧ್ಯತೆ ದಟ್ಟವಾಗುತ್ತಿದೆ.
ಇದನ್ನೂ ಓದಿ: ಹಲವರಿಗೆ ವಿಶ್ರಾಂತಿ; ಧೋನಿ ನಿರ್ಧಾರಕ್ಕೆ ಕಾಯುತ್ತಿದೆ BCCI!
ವಿಶ್ವಕಪ್ ಟೂರ್ನಿ ಬೆನ್ನಲ್ಲೇ ಮುಖ್ಯ ಕೋಚ್ ರವಿ ಶಾಸ್ತ್ರಿ ಅವಧಿ ಮುಕ್ತಾಯಗೊಳ್ಳುತ್ತಿತ್ತು. ಆದರೆ 45 ದಿನಕ್ಕೆ ಶಾಸ್ತ್ರಿ ಅವದಿಯನ್ನು ಬಿಸಿಸಿಐ ವಿಸ್ತರಿಸಿದೆ. ಆದರೆ ಸಹಾಯಕ ಕೋಚ್ ಕುರಿತು ಬಿಸಿಸಿಐ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಬೌಲಿಂಗ್ ಕೋಚ್ ಭರತ್ ಅರುಣ್ ಉತ್ತಮ ನಿರ್ವಹಣೆ ನೀಡಿದ್ದಾರೆ. ಹೀಗಾಗಿ ಭಾರತದ ಬೌಲಿಂಗ್ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಇತ್ತ ಫೀಲ್ಡಿಂಗ್ ಕೋಚ್ ಶ್ರೀಧರ್ ಕೂಡ ನಿರೀಕ್ಷೆಗೆ ಸ್ಪಂದಿಸಿದ್ದಾರೆ. ಆದರೆ ಟೀಂ ಇಂಡಿಯಾ ಬ್ಯಾಟಿಂಗ್ ಪ್ರತಿ ಪಂದ್ಯದಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಿಸಿದೆ. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣವಾಗಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಸೋತಿದ್ದೆಲ್ಲಿ..? ಇಲ್ಲಿವೆ ನೋಡಿ 5 ಕಾರಣಗಳು
ಟೂರ್ನಿ ಆರಂಭದಿಂದಲೂ ಮಧ್ಯಮ ಕ್ರಮಾಂಕದ ಸಮಸ್ಯೆ ಬಗೆಹರಿದಿಲ್ಲ. ಎಲ್ಲಾ ಪಂದ್ಯದಲ್ಲೂ ಬ್ಯಾಟಿಂಗ್ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ಗೆ ಕೊಕ್ ನೀಡಲು ಬಿಸಿಸಿಐ ಮುಂದಾಗಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ.