ಕಲುಷಿತ ನೀರು ಅನೇಕ ಅನಾರೋಗ್ಯಕ್ಕೆ ಕಾರಣವಾಗ್ತಿದೆ. ಅದ್ರಲ್ಲಿ ಅತಿಸಾರ ಕೂಡ ಒಂದು. ಈ ಅತಿಸಾರ ಮಾಡ್ತಿರುವ ಹಾನಿ ಸಣ್ಣದಲ್ಲ. ಪ್ರತಿ ವರ್ಷ ಲಕ್ಷಾಂತರ ಶಿಶುಗಳನ್ನು ಇದು ಬಲಿಪಡೆಯುತ್ತಿದೆ. 


ದೇಶದಲ್ಲಿ ಸಾವಿಗೆ ಅನೇಕ ಗಂಭೀರ ರೋಗಗಳು ಕಾರಣವಾಗ್ತವೆ. ರೋಗದಿಂದಲೇ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಗಂಭೀರ ರೋಗಗಳಲ್ಲಿ ಅತಿಸಾರ ಕೂಡ ಒಂದು. ಐದು ವರ್ಷದೊಳಗಿನ ಮಕ್ಕಳ ಸಾವಿಗೆ ಅತಿಸಾರ ಮೂರನೇ ದೊಡ್ಡ ಕಾರಣವಾಗಿದೆ. ಈ ವಯಸ್ಸಿನ ಶೇಕಡಾ 13ರಷ್ಟು ಮಕ್ಕಳು ಅತಿಸಾರಕ್ಕೆ ಬಲಿಯಾಗ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಅಂದಾಜು 3 ಲಕ್ಷ ಮಕ್ಕಳು ಅತಿಸಾರದಿಂದ ಸಾವನ್ನಪ್ಪುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ವಿಶ್ವ ಸಂಸ್ಥೆ (WHO) ಕೂಡ ಅತಿಸಾರವನ್ನು ಗಂಭೀರವಾಗಿ ಪರಿಗಣಿಸಿದೆ. ಅತಿಸಾರ (Diarrhea) ದಿಂದ ಆಗುವ ಸಾವನ್ನು ತಡೆಯಲು ದೂರಗಾಮಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆ ಹೇಳಿದೆ. ಅತಿಸಾರದಿಂದಾಗುವ ಸಾವನ್ನು ತಡೆಯಲು ಭಾರತ ಸರ್ಕಾರ ಜಲ ಜೀವನ್ ಮಿಷನ್ (Jal Jeevan Mission ) ಜಾರಿಗೆ ತಂದಿದೆ. ದೇಶದ ಎಲ್ಲಾ ಮನೆಗಳಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಭಾರತ ಸರ್ಕಾರ 2019 ರಲ್ಲಿ ಜಲ ಜೀವನ್ ಮಿಷನ್ ಯೋಜನೆ ಶುರು ಮಾಡಿದೆ. ಒಂದ್ವೇಳೆ ಕೇಂದ್ರ ಸರ್ಕಾರ ತನ್ನ ಕಾರ್ಯದಲ್ಲಿ ಯಶಸ್ವಿಯಾದ್ರೆ ಪ್ರತಿ ವರ್ಷ ಆಗುವ ನಾಲ್ಕು ಲಕ್ಷ ಮಕ್ಕಳ ಸಾವನ್ನು ತಡೆಯಬಹುದಾಗಿದೆ.

ಭಾರತದಲ್ಲಿ 100 ಮಿಲಿಯನ್ ದಾಟಿದ ಡಯಾಬಿಟಿಸ್ ರೋಗಿಗಳ ಸಂಖ್ಯೆ, ಆರೋಗ್ಯದ ಕಾಳಜಿ ವಹಿಸೋದು ಹೇಗೆ?

ಕರುಳಿನ ಸೋಂಕಿನಿಂದಾಗುವ ಒಂದು ಕಾಯಿಲೆ ಅತಿಸಾರ. ವಿವಿಧ ಬ್ಯಾಕ್ಟೀರಿಯಾಗಳು, ವೈರಸ್ ಗಳು ಮತ್ತು ಪರಾವಲಂಬಿಗಳಿಂದ ಉಂಟಾಗಬಹುದು. ಇದರ ಸೋಂಕು ಕಲುಷಿತ ಆಹಾರ ಅಥವಾ ಕುಡಿಯುವ ನೀರು ಅಥವಾ ನೈರ್ಮಲ್ಯದ ಕೊರತೆಯ ಪರಿಣಾಮವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಮಕ್ಕಳ ಹೊರತಾಗಿ ವಯಸ್ಕರು ಮತ್ತು ವೃದ್ಧರಿಗೆ ಇದು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಅತಿಸಾರದ ಬಗ್ಗೆ ಅಂಕಿ ಅಂಶಗಳು ಏನು ಹೇಳುತ್ವೆ? : ಜಲ ಜೀವನ್ ಮಿಷನ್ ಅಡಿಯಲ್ಲಿ ಶೇಕಡಾ 62 ಗ್ರಾಮೀಣ ಪ್ರದೇಶಗಳಿಗೆ ಶುದ್ಧ ನೀರನ್ನು ಒದಗಿಸಲಾಗಿದೆ. ಭಾರತದ ಎಲ್ಲ ಗ್ರಾಮದ ಎಲ್ಲ ಜನರಿಗೆ ಶುದ್ಧ ನೀರು ತೊರೆತದ್ದೇ ಆದಲ್ಲಿ ಅತಿಸಾರ ಸೇರಿದಂತೆ ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳನ್ನು ತಡೆಯಬಹುದಾಗಿದೆ. ನೀರಿಗಾಗಿ ಮಹಿಳೆಯರು ಕಳೆಯುವ ಸಮಯ ಕೂಡ ಉಳಿತಾಯವಾಗುತ್ತದೆ. ಅನೇಕ ರಾಜ್ಯಗಳಲ್ಲಿ ಮಹಿಳೆಯರು ನೀರಿಗಾಗಿ ದೂರದ ಪ್ರದೇಶಕ್ಕೆ ಹೋಗ್ತಾರೆ. ಇಲ್ಲವೆ ಸರದಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಳೆಯುತ್ತಾರೆ. 

ಸ್ಟ್ರೆಸ್‌ನಿಂದ ಹೃದಯಕ್ಕೆ ತೊಂದ್ರೆ, ರಿಲ್ಯಾಕ್ಸ್ ಆಗಿರಲು ಹೀಗ್ ಮಾಡಿ

ಅತಿಸಾರದ ಲಕ್ಷಣ : ಅತಿಸಾರವನ್ನು ಹೊಟ್ಟೆ ಜ್ವರ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲದೇ ಅತಿಸಾರ ಕೇವಲ 2-4 ದಿನಗಳಲ್ಲಿ ಕಡಿಮೆಯಾಗುತ್ತದೆ. ತೀವ್ರವಾದ ಅತಿಸಾರ ಜೀವಕ್ಕೆ ಅಪಾಯಕಾರಿ. ಅತಿಸಾರದಿಂದ ದೇಹ ನಿರ್ಜಲೀಕರಣಗೊಳ್ಳುವ ಕಾರಣ ಸಾವು ಸಂಭವಿಸುತ್ತದೆ. ಅಪೌಷ್ಟಿಕತೆ ಶಿಶುಗಳು, ಚಿಕ್ಕ ಮಕ್ಕಳು, ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರಲ್ಲಿ ಅಪಾಯ ಹೆಚ್ಚು. ಅತಿಸಾರದಿಂದ ಬಳಲುವ ವ್ಯಕ್ತಿಯ ಮಲ ನೀರಿನಂತಿರುತ್ತದೆ. ಕಿಬ್ಬೊಟ್ಟೆಯಲ್ಲಿ ಸೆಳೆತ, ನೋವು ಕಾಣಿಸಿಕೊಳ್ಳುತ್ತದೆ. ವಾಕರಿಕೆ, ವಾಂತಿಯಾಗುವುದಲ್ಲದೆ ಜ್ವರ, ನಿರ್ಜಲೀಕರಣದ ಸಮಸ್ಯೆ ಕಾಡುತ್ತದೆ. ಅತಿಸಾರದ ವೇಳೆ ಹಸಿವಾಗುವುದಿಲ್ಲ. 

ಅತಿಸಾರದಿಂದ ರಕ್ಷಣೆ ಹೇಗೆ? : ಅತಿಸಾರಕ್ಕೆ ಒಳಗಾದ ವ್ಯಕ್ತಿಗಳು ಎಲ್ಲಾ ಸಮಯದಲ್ಲೂ ಹೈಡ್ರೇಟೆಡ್ ಆಗಿರಬೇಕಾಗುತ್ತದೆ. ಸಾಕಷ್ಟು ದ್ರವ ಸೇವನೆ ಮಾಡಬೇಕು. ಒಆರ್ ಎಸ್ ಅನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದು ಒಳ್ಳೆಯದು. ಮಸಾಲೆ, ಉಪ್ಪು ಮತ್ತು ಸಕ್ಕರೆ ಪದಾರ್ಥವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಅತಿಸಾರದಿಂದ ಶಿಶುಗಳು ಬಳಲುವುದು ಹೆಚ್ಚು. ಈ ಮಕ್ಕಳಿಗೆ ಸ್ತನ್ಯಪಾನ ಮಾಡುವುದನ್ನು ಬಿಡಬಾರದು. ಮಕ್ಕಳಿಗೆ ಒಂದಿ ದಿನಕ್ಕಿಂತ ಹೆಚ್ಚು ಅತಿಸಾರ ಕಾಡಿದ್ರೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ವಯಸ್ಕರಿಗೆ ಒಂದು ವಾರಕ್ಕಿಂತ ಹೆಚ್ಚು ಸಮಯ ಅತಿಸಾರ ಕಾಡಿದ್ರೆ ವೈದ್ಯರನ್ನು ಭೇಟಿಯಾಗ್ಬೇಕು.