ಹಾಸಿಗೆಗೆ ಹೋಗ್ತಿದ್ದಂತೆ ಮೊಬೈಲ್ ಹಿಡಿದು ಗಂಟೆ, ಎರಡು ಗಂಟೆ ಮೊಬೈಲ್ ನೋಡ್ತಾ ಜನ ನಿದ್ರೆಗೆಡ್ತಿದ್ದಾರೆ. ರೀಲ್ಸ್, ಸಿನಿಮಾ ಈಗ ಹವ್ಯಾಸವಾಗಿಲ್ಲ, ಚಟವಾಗಿದೆ. ಇದ್ರಿಂದ ಆರೋಗ್ಯ ಹಾಳಾಗ್ತಿದೆ. ನಿಮ್ಮ ಚಟದಿಂದ ಹೊರ ಬರ್ಬೇಕು ಅಂದ್ರೆ ಈ ಒಂದೇ ಒಂದು ಮಂತ್ರ ಸಾಕು. 

 ಡಿಜಿಟಲ್ ಯುಗದಲ್ಲಿ Gen Z ಗಳಿಗೆ ಹಗಲು – ರಾತ್ರಿಗೆ ವ್ಯತ್ಯಾಸವಿಲ್ಲ. ಬೆಳಗಿನ ಜಾವ 2 -3 ಗಂಟೆಯಾದ್ರೂ ಜನ ಮಲಗೋದಿಲ್ಲ. ಮಲಗೋದು ಅಂದ್ರೆ ಈಗ ನಿದ್ರೆಯಲ್ಲ. ಹಾಸಿಗೆ ಮೇಲೆ ಮಲಗಿ ಮೊಬೈಲ್ ನಲ್ಲಿ ರೀಲ್ಸ್ ನೋಡ್ತಾ, ಒಟಿಟಿ ಸಿನಿಮಾ, ಸಿರೀಸ್ ನೋಡ್ತಾ ಇಲ್ಲ ಗೇಮ್ ಆಡ್ತಾ ಟೈಂ ಸ್ಪೆಂಡ್ ಮಾಡೋದಾಗಿದೆ. ಅವರ ಈ ಅಭ್ಯಾಸ ನಿದ್ರಾಹೀನತೆಗೆ ಕಾರಣವಾಗ್ತಿದೆ.

Add Asianetnews Kannada as a Preferred SourcegooglePreferred

ಫೋನ್ ಬಳಕೆ ಚಟವಾಗಿದ್ದು ಹೇಗೆ?

ನಿದ್ರೆ ಬರೋದಿಲ್ಲ, ಹಾಗಾಗಿ ಮೊಬೈಲ್ ನೋಡ್ತೇವೆ ಎನ್ನುವವರ ಸಂಖ್ಯೆ ಹೆಚ್ಚಿದೆ. ಡಿಜಿಟಲ್ ಚಟದಿಂದ ನಿದ್ರೆ ಬರ್ತಿಲ್ಲ ಎಂಬುದು ಅನೇಕರಿಗೆ ತಿಳಿದಿಲ್ಲ. ತಡರಾತ್ರಿಯವರೆಗೂ ನೀವು ಎಚ್ಚರವಾಗಿರ್ತೀರಿ ಅಂದ್ರೆ ಅದು ಬರೀ ಶಿಸ್ತಿನ ಕೊರತೆ ಮಾತ್ರವಲ್ಲ, ಕೆಮಿಕಲ್ ಆಟವೂ ಇದ್ರಲ್ಲಿದೆ.

ಪ್ರತಿ ಹೊಸ ರೀಲ್ ಅಥವಾ ಕಿರು ವೀಡಿಯೊ ನಿಮ್ಮ ಮೆದುಳಿನಲ್ಲಿ ಡೋಪಮೈನ್ ಬಿಡುಗಡೆ ಮಾಡುತ್ತದೆ. ನಿಮ್ಮ ಮೆದುಳು ಮುಂದಿನ ವೀಡಿಯೊ ನೋಡಲು ಉತ್ಸುಕವಾಗಿರುತ್ತದೆ. ಇನ್ನೊಂದು ಫೋನ್ ಸ್ಕ್ರೀನ್ ನಿಂದ ಹೊರಸೂಸುವ ಬೆಳಕು ನಮ್ಮ ದೇಹದಲ್ಲಿ ಮೆಲಟೋನಿನ್ ನಿದ್ರೆಯನ್ನು ಉಂಟುಮಾಡುವ ಹಾರ್ಮೋನ್ ಬಿಡುಗಡೆಯಾಗದಂತೆ ತಡೆಯುತ್ತದೆ. ಇಡೀ ದಿನ ಕೆಲ್ಸ ಹಾಗೂ ಒತ್ತಡದಲ್ಲಿರುವ ಜನರು ರಾತ್ರಿ ಕೂಡ ಬ್ಯುಸಿಯಾಗಿರ್ತಾರೆ. ಅವರ ಮನಸ್ಸು ರಿಲ್ಯಾಕ್ಸ್ ಆಗಲು ಬಯಸೋದಿಲ್ಲ.

ಬೇಸಿಗೆ ಶುರುವಾಗ್ತಿದ್ದಂತೆ ಸೊಳ್ಳೆ ಕಾಟ ಜೋರು, ಕೆಮಿಕಲ್ ಸ್ಪ್ರೇ ಇಲ್ದೆ ಹೀಗೆ ಓಡಿಸಿ

ಈ ಮಂತ್ರದಲ್ಲಿದೆ ಮ್ಯಾಜಿಕ್

ಪ್ರತಿ ರಾತ್ರಿ ನಿದ್ರೆ ಬರ್ತಿಲ್ಲ ಎನ್ನುವ ಕಾರಣ ಹೇಳಿ ತಡರಾತ್ರಿ, ಬೆಳಗಿನಜಾವದವರೆಗೆ ನೀವು ಮೊಬೈಲ್, ಟಿವಿ ನೋಡ್ತಿದ್ದರೆ ಇನ್ಮುಂದೆ ಅದನ್ನು ಬಿಟ್ಟುಬಿಡಿ. ಭಾರತೀಯ ಸಂಪ್ರದಾಯದಲ್ಲಿ, ನಿದ್ರೆಯನ್ನು ಕೇವಲ ದೈಹಿಕ ಪ್ರಕ್ರಿಯೆಯಲ್ಲ, ಬದಲಾಗಿ ಆತ್ಮಕ್ಕೆ ವಿಶ್ರಾಂತಿ ಎಂದು ಪರಿಗಣಿಸಲಾಗುತ್ತದೆ. ನಿದ್ರೆ ನಕಾರಾತ್ಮಕ ಆಲೋಚನೆಗಳನ್ನು ತಡೆಯುವುದಲ್ಲದೆ ಮನಸ್ಸನ್ನು ಆಳವಾದ ನಿದ್ರೆಗೆ ಸಿದ್ಧಪಡಿಸಲು ಧರ್ಮಗ್ರಂಥದಲ್ಲಿ ಮಂತ್ರವಿದೆ.

ಈ ಮಂತ್ರವನ್ನು ಪಠಿಸಿ

ರಾಮಸ್ಕಂದಂ ಹನುಮಂತಂ, ವೈನತೇಯಂ ವೃಕೋದರಂ

ಶಯನಾಯಃ ಸ್ಮರೇ ನಿತ್ಯಂ, ದುಸ್ವಪ್ನಂ ತಸ್ಯ ನಶ್ಯತಿ|

ಈ ಮಂತ್ರದ ಅರ್ಥ: ಮಲಗುವ ಮುನ್ನ ಭಗವಂತ ರಾಮ, ಕಾರ್ತಿಕೇಯ, ಹನುಮಂತ, ಗರುಡ ಮತ್ತು ಭೀಮನನ್ನು ಸ್ಮರಿಸುವವನಿಗೆ, ಕೆಟ್ಟ ಕನಸುಗಳು ಮತ್ತು ಮಾನಸಿಕ ಭಯಗಳು ದೂರವಾಗುತ್ತವೆ.

ಈ ಮಂತ್ರ ಹೇಗೆ ಕೆಲಸ ಮಾಡುತ್ತದೆ?

ಮಂತ್ರ ಪಠಣ ಮಾನಸಿಕ ಚಿಕಿತ್ಸೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಮೆದುಳಿನ ಅಲೆಗಳನ್ನು ಈ ಮಂತ್ರ ನಿಧಾನಗೊಳಿಸುತ್ತದೆ. ಮಂತ್ರದ ಲಯವು ವೇಗದ ಮೆದುಳಿನ ಅಲೆಗಳನ್ನು ಅಂದ್ರೆ ಬೀಟಾ ಅಲೆಗಳನ್ನು ಆಲ್ಫಾ ಮತ್ತು ಥೀಟಾ ಸ್ಥಿತಿಗಳಿಗೆ ನಿಧಾನಗೊಳಿಸುತ್ತದೆ. ಕೈನಲ್ಲಿರುವ ಮೊಬೈಲ್ ಕೆಳಗಿಟ್ಟು ಮಂತ್ರ ಪಠಿಸಲು ಶುರು ಮಾಡಿ. ಈ ಮಂತ್ರ ನಿಮ್ಮನ್ನು ಡಿಜಿಟಲ್ ಸಂಪರ್ಕದಿಂದ ದೂರವಿಡುತ್ತದೆ. ನಿಮ್ಮ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ದೇಹದಲ್ಲಿನ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಕಡಿಮೆಯಾಗುತ್ತದೆ.

Kitchen Vastu: ಚಪ್ಪಲಿ ಧರಿಸಿ ಅಡುಗೆ ಮಾಡ್ತಿದ್ರೆ ಎಚ್ಚರ, ಜೇಬು ಖಾಲಿಯಾಗೋದಲ್ದೆ ಆಸ್ಪತ್ರೆ ಬೆಡ್ ಖಾಯಂ ಆಗ್ಬಹುದು

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ

ರಾತ್ರಿ ಮಲಗುವ ಮೊದಲು ಕೈ, ಕಾಲನ್ನು ತೊಳೆಯಿರಿ. ಆಯುರ್ವೇದದ ಪ್ರಕಾರ, ಮಲಗುವ ಮೊದಲು ನಿಮ್ಮ ಕೈ ಮತ್ತು ಪಾದಗಳನ್ನು ತೊಳೆಯುವುದು ನರಮಂಡಲವನ್ನು ಶಾಂತಗೊಳಿಸುತ್ತದೆ. ನಂತ್ರ ಮಂತ್ರಗಳನ್ನು ಪಠಿಸಿ. ನೀವು ಹಾಸಿಗೆಯಲ್ಲಿ ಮಲಗಿ ಅಥವಾ ಕುಳಿತುಕೊಂಡು ಮೇಲಿನ ಮಂತ್ರವನ್ನು ಕನಿಷ್ಠ 3 ರಿಂದ 11 ಬಾರಿ ಹೇಳಬೇಕು. ಹಾಗೆಯೇ ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು. ಮಂತ್ರ ಮುಗಿದ ಮೇಲೆ ನಿಮ್ಮಿಷ್ಟದ ದೇವರು ಅಥವಾ ನಿಮ್ಮ ಗುರಿಯನ್ನು ನೆನಪು ಮಾಡಿಕೊಳ್ಳುತ್ತ ಕಣ್ಣನ್ನು ಮುಚ್ಚಿ. ಮಂತ್ರ ಹೇಳುವುದು ಮೂಢನಂಬಿಕೆಯಲ್ಲ. ಇದು ನಿಮ್ಮ ಹಾಗೂ ನಿಮ್ಮ ಮನಸ್ಸಿನ ನಡುವೆ ಸಂಪರ್ಕ ಬೆಸೆಯುತ್ತದೆ.