ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ, ದಕ್ಷಿಣ ಕರ್ನಾಟಕದ ಮೊದಲ  ಟಿಎಂವಿಆರ್  ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಅಪಾಯದಲ್ಲಿದ್ದ 72ವರ್ಷದ ರೋಗಿಗೆ ಈ ಅತ್ಯಾಧುನಿಕ,ಕನಿಷ್ಠ ಆಕ್ರಮಣಕಾರಿ ವಿಧಾನದ ಮೂಲಕ ಚಿಕಿತ್ಸೆ ನೀಡಿ, ಮೂರೇ ದಿನಗಳಲ್ಲಿ ಬಿಡುಗಡೆ ಮಾಡಲಾಯಿತು.

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಕ್ಷಿಣ ಕರ್ನಾಟಕದ ಮೊದಲ, ಹೃದ್ರೋಗಕ್ಕೆ ಅತ್ಯಾಧುನಿಕ ಟ್ರಾನ್ಸ್‌ಕ್ಯಾಥೆಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್‌ಮೆಂಟ್ (ಟಿಎಂವಿಆರ್) ಎಂಬ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಷ್ಟ್ರದ 72 ವರ್ಷದ ಪುರುಷ ರೋಗಿಯಬ್ಬರು ಒಂದು ದಶಕದ ಹಿಂದೆ ತೆರೆದ ಹೃದಯದ ಕವಾಟ ಬದಲಿ ಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರು ತೀವ್ರ ಉಸಿರಾಟದ ತೊಂದರೆ ಮತ್ತು ಆಯಾಸದಿಂದ ಬಳಲುತ್ತಿದ್ದರು, ಆದರೆ ಅವರ ವಯಸ್ಸು ಮತ್ತು ಆರೋಗ್ಯ ಅಂಶಗಳಿಂದಾಗಿ ಪುನಃ ತೆರೆದ ಹೃದಯ ಶಸ್ತ್ರಚಿಕಿತ್ಸೆ ಸಾಧ್ಯವಿರಲಿಲ್ಲ. ಆದ್ದರಿಂದ ಅವರಿಗೆ ಅತ್ಯಾಧುನಿಕ ಟಿಎಂವಿಆರ್ ಕಾರ್ಯವಿಧಾನವನ್ನು ನಡೆಸಲಾಯಿತು.

ಮೂರು ದಿನಗಳಲ್ಲಿ ಸ್ಥಿರ ಸ್ಥಿತಿ

ಡಾ. ಟಾಮ್ ದೇವಾಸಿಯಾ, ಡಾ. ಮೋನಿಕಾ ಜವಾಂಜಲ್ ಮತ್ತು ಡಾ. ಹರೇಶ್ ಮೆಹ್ತಾ ನೇತೃತ್ವದ ತಂಡವು ಈ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಕವಾಟ ಯಶಸ್ವಿಯಾಗಿ ಅಳವಡಿಸಿತು. ರೋಗಿಯಲ್ಲಿ ತ್ವರಿತ ವೈದ್ಯಕೀಯ ಸುಧಾರಣೆ ಕಂಡುಬಂತು ಮತ್ತು ಕಾರ್ಯವಿಧಾನದ ಮೂರು ದಿನಗಳಲ್ಲಿ ಸ್ಥಿರ ಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.

ಈ ಚಿಕಿತ್ಸಯಲ್ಲಿ ತೊಡೆಸಂದಿಯಲ್ಲಿ ಸಣ್ಣ ತೂತಿನ ಮೂಲಕ ಹೃದಯವನ್ನು ಪ್ರವೇಶಿಸಿ, ಅಲ್ಲಿ ಹೊಸ ಕವಾಟವನ್ನು ಅಳವಡಿಸಿ, ಸಮಸ್ಯೆ ಪರಿಹರಿಸಲಾಯಿತು, ಈ ಮೂಲಕ ಎದೆಯನ್ನು ತೆರೆಯುವುದನ್ನು ತಪ್ಪಿಸಲಾಯಿತು. ಇದು ನೋವು, ರಕ್ತದ ನಷ್ಟ, ಸೋಂಕಿನ ಅಪಾಯ ಮತ್ತು ಚೇತರಿಕೆಯ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಬಹುತೇಕ ರೋಗಿಗಳು ಅದೇ ದಿನ ಎದ್ದು ಕುಳಿತುಕೊಳ್ಳಬಹುದು, ಮರುದಿನ ನಡೆಯಬಹುದು ಮತ್ತು ಉಸಿರಾಟ ಮತ್ತು ಶಕ್ತಿಯ ಮಟ್ಟದಲ್ಲಿ ತಕ್ಷಣದ ಸುಧಾರಣೆಯೊಂದಿಗೆ ಕೆಲವೇ ದಿನಗಳಲ್ಲಿ ಮನೆಗೆ ಮರಳಬಹುದು.

ಕಸ್ತೂರ್ಬಾ ಆಸ್ಪತ್ರೆಯ ರೋಗಿಕೇಂದ್ರಿತ ಆರೈಕೆಗೆ ಅಚಲವಾದ ಬದ್ಧತೆ

ಆಸ್ಪತ್ರೆಯ ವೈದ್ಯರ ಈ ಸಾಧನೆಯನ್ನು ಶ್ಲಾಘಿಸಿರುವ ಮಾಹೆ ಬೋಧನಾ ಆಸ್ಪತ್ರೆಗಳ ಸಿಓಓ ಡಾ. ಸುಧಾಕರ್ ಕಂಟಿಪುಡಿ, ‘ಈ ಸಾಧನೆಯು ಕಸ್ತೂರ್ಬಾ ಆಸ್ಪತ್ರೆಯ ರೋಗಿಕೇಂದ್ರಿತ ಆರೈಕೆಗೆ ಅಚಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆಸ್ಪತ್ರೆಯಲ್ಲಿ ಅನುಭವಿ ತಜ್ಞರು, ಅತ್ಯಾಧುನಿಕ ಕ್ಯಾತ್ ಲ್ಯಾಬ್ ಮೂಲಸೌಕರ್ಯ ಮತ್ತು ಸುರಕ್ಷಿತ ಹಾಗೂ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ಪ್ರತಿಯೊಂದು ಪ್ರಕರಣವನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡುವ ಬಹುಶಿಸ್ತೀಯ ಹೃದಯ ತಂಡವನ್ನು ಹೊಂದಿದ್ದು, ಇಂತಹ ಸಂಕೀರ್ಣ ಕವಾಟದ ಕಾರ್ಯವಿಧಾನಗಳಿಂದ ಹಿಡಿದು ನಂತರದ ಚೇತರಿಕೆಯವರೆಗೆ, ಆರೈಕೆಗೆ ಆಸ್ಪತ್ರೆ ಬದ್ದವಾಗಿದೆ’ ಎಂದಿದ್ದಾರೆ.