ಸಂಶೋಧನಾ ಸಮೀಕ್ಷೆ 2025ರ ಪ್ರಕಾರ, ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಕ್ಯಾನ್ಸರ್‌ ಆರೈಕೆಯಲ್ಲಿ ದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ 3ನೇ ಸ್ಥಾನ ಮತ್ತು ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶ್ವದರ್ಜೆಯ ಚಿಕಿತ್ಸೆಯಿಂದಾಗಿ ಈ ಗೌರವ ಲಭಿಸಿದೆ.

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ದೇಶದಲ್ಲಿ ಕ್ಯಾನ್ಸರ್‌ ಆರೈಕೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಪೈಕಿ ಮೂರನೇ ಹಾಗೂ ಕರ್ನಾಟಕದ ಆಸ್ಪತ್ರೆಗಳ ಪೈಕಿ ಪ್ರಥಮ ಸ್ಥಾನ ಪಡೆದಿದೆ. 2025ರಲ್ಲಿ 'ದಿ ವೀಕ್‌ ಹನ್ಸಾ ಸಂಶೋಧನಾ ಸಮೀಕ್ಷೆ'ಯಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಭಾರತದಲ್ಲಿ 5ನೇ ಸ್ಥಾನ, ಕ್ಯಾನ್ಸರ್‌ ಆರೈಕೆಯಡಿ ಸರ್ಕಾರಿ ಆಸ್ಪತ್ರೆಗಳ ಪೈಕಿ ಕಿದ್ವಾಯಿ 3ನೇ ಸ್ಥಾನ ಪಡೆದಿದೆ.

ವಿಶ್ವದರ್ಜೆಯ ಚಿಕಿತ್ಸೆ

2025ರಲ್ಲಿ ದ ವೀಕ್‌ ಹನ್ಸಾ ಸಂಶೋಧನಾ ಸಮೀಕ್ಷೆ ವರದಿ ಇದನ್ನು ತಿಳಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವದರ್ಜೆಯ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಪೈಕಿ ಕ್ಯಾನ್ಸರ್‌ ಆರೈಕೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಪೈಕಿ ಕಿದ್ವಾಯಿ ಮೂರನೇ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ಚಂಡಿಗಢದ ಪಿಜಿಐಎಂಇಆರ್‌ ಹಾಗೂ 2ನೇ ಸ್ಥಾನದಲ್ಲಿ ದೆಹಲಿಯ ಏಮ್ಸ್‌ ಇದೆ. ಒಟ್ಟಾರೆ ಖಾಸಗಿ ಸರ್ಕಾರಿ ಸೇರಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಭಾರತದಲ್ಲಿ ಐದನೇ ಸ್ಥಾನ ಪಡೆದಿದೆ ಎಂದು ವರದಿ ಹೇಳಿದೆ.

ಅತ್ಯಾಧುನಿಕ ಕ್ಯಾನ್ಸರ್ ಆರೈಕೆ ಮತ್ತು ತಂತ್ರಜ್ಞಾನ ಆಧಾರಿತ ಸೇವೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಪಾಶ್ಚಿಮಾತ್ಯ ದೇಶಗಳಿಗೆ ಸರಿಸಮನಾಗಿ ಅತ್ಯಾಧುನಿಕ ಕ್ಯಾನ್ಸರ್ ಆರೈಕೆ ಮತ್ತು ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುತ್ತಿದೆ. ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ, ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಮತ್ತು ಆರಂಭಿಕ ಪತ್ತೆಹಚ್ಚುವಿಕೆಯಲ್ಲಿ ಸದಾ ಮುಂಚೂಣಿಯಲ್ಲಿದ್ದೇವೆ. ರಾಜ್ಯದಲ್ಲಿ ಫೆರಿಫೆರಲ್‌ ಕ್ಯಾನ್ಸರ್‌ ಘಟಕಗಳ ನಿರ್ಮಾಣ ಮಾಡುವ ಮೂಲಕ ರೋಗಿಗಳಿಗೆ ಶೀಘ್ರ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಟಿ. ನವೀನ್‌ ತಿಳಿಸಿದ್ದಾರೆ.