Asianet Suvarna News Asianet Suvarna News

ಮಾನಸಿಕ ಆರೋಗ್ಯ ರಕ್ಷಣೆಗೆ ರಾಜ್ಯ ಪಣ, ಬಳಸಿಕೊಳ್ಳಿ ಇ-ಮನಸ್‌ ಯೋಜನೆ

ಕರ್ನಾಟಕ ಬ್ರೈನ್‌ ಹೆಲ್ತ್ ಇನಿಶಿಯೇಟಿವ್‌ ಪ್ರಾಯೋಗಿಕ ಯೋಜನೆಯನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಬಿಎಂಪಿ, ನಿಮ್ಹಾನ್ಸ್‌ ಜೊತೆಗೂಡಿ ಜಾರಿ ಮಾಡಲು ಪ್ರಸ್ತಾಪಿಸಲಾಗಿದೆ. 

E Manas a statewide registry of all facilities and professionals providing mental healthcare hls
Author
Bengaluru, First Published Apr 20, 2022, 10:31 AM IST

ವ್ಯಕ್ತಿಯೊಬ್ಬ ತನ್ನ ಜೀವನದ ಪ್ರತಿ ಚಟುವಟಿಕೆಗಳನ್ನು ಸರಿಯಾಗಿ ನಿರ್ಧರಿಸಲು, ದೃಢ ನಿರ್ಧಾರ ಕೈಗೊಳ್ಳಲು, ಸಂಕಷ್ಟದ ಸಂದರ್ಭದಲ್ಲಿ ಸೂಕ್ತವಾಗಿ ಆಲೋಚಿಸಲು ಬೇಕಿರುವುದು ಮಾನಸಿಕ ದೃಢತೆ. ಇದೇ ಮಾನಸಿಕ ಆರೋಗ್ಯ. ಮನಸ್ಸು ಬಲವಾಗಿದ್ದರೆ ವ್ಯಕ್ತಿಯು ಎಂಥ ಕಠಿಣ ಪರಿಸ್ಥಿತಿಗಳನ್ನೂ ಎದುರಿಸಬಹುದು. ಎಷ್ಟೋ ಉದಾಹರಣೆಗಳಲ್ಲಿ, ದೈಹಿಕ ಆರೋಗ್ಯ ಹದಗೆಟ್ಟರೂ ಅಪಾರ ಮಾನಸಿಕ ಶಕ್ತಿಯಿಂದ ಆರೋಗ್ಯವನ್ನು ಮರಳಿ ಪಡೆಯುವ, ಸಾವಿನ ಅಂಚಿನಿಂದ ಮರಳಿ ಬರುವುದನ್ನು ನಾವೆಲ್ಲರೂ ಕಂಡಿರುತ್ತೇವೆ. ಆದ್ದರಿಂದ ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯ ಕೂಡ ಅತಿಮುಖ್ಯ. ಮಾನಸಿಕ ಅನಾರೋಗ್ಯ ಸುಲಭವಾಗಿ ಗೋಚರವಾಗದಿರುವುದರಿಂದ ಅದರ ಬಗ್ಗೆ ಜನರು ಹೆಚ್ಚು ಗಮನ ನೀಡುತ್ತಿಲ್ಲ ಎಂಬುದೂ ಸತ್ಯ.

ಮಾನಸಿಕ ಆರೋಗ್ಯಕ್ಕೆ ಒತ್ತು

ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಜನರು ಪರಿಪೂರ್ಣರಾಗಿ ಆಲೋಚಿಸಲು ಸಾಧ್ಯ, ಸಮಸ್ಯೆಗಳಿಗೆ ಸರಿಯಾದ ಪರಿಹಾರ ಕಂಡುಕೊಳ್ಳಲು ಸಾಧ್ಯ. ಕೋವಿಡ್‌ ಆರಂಭ ಕಾಲದಲ್ಲಿ ‘ಪಾಸಿಟಿವ್‌’ ಎಂಬ ವರದಿಯನ್ನು ನೋಡಿಯೇ ವಿನಾಕಾರಣ ಆತಂಕಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಉದಾಹರಣೆ ಇದೆ. ಹಾಗೆಯೇ 100 ವರ್ಷ ಮೇಲ್ಪಟ್ಟವೃದ್ಧರು ಯಶಸ್ವಿಯಾಗಿ ಕೊರೋನಾ ಗೆದ್ದು ಬಂದ ಅಚ್ಚರಿಯ ಘಟನೆಗಳೂ ಇವೆ. ಮಾನಸಿಕ ಆರೋಗ್ಯ ಇಡೀ ದೇಹದ ಒಟ್ಟು ಆರೋಗ್ಯದ ಸುಸ್ಥಿತಿಯ ಮೇಲೆ ಹೆಚ್ಚು ಪರಿಣಾಮ ಹೊಂದಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಹಿತಶತ್ರು ಮೊಬೈಲ್ ಫೋನ್: ಮಕ್ಕಳ ಕ್ರಿಯಾಶೀಲತೆಯೇ ಮಾಯ!

ಅನೇಕರು ಮಾನಸಿಕ ರೋಗಗಳಿಂದ ಬಳಲುತ್ತಿದ್ದರೂ ಅದನ್ನು ಒಂದು ರೋಗ ಎಂದು ಗುರುತಿಸುವುದಿಲ್ಲ. ಇನ್ನೂ ಕೆಲವರು ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರಪಡುತ್ತಾರೆ. ಈ ಸವಾಲುಗಳನ್ನು ನಿವಾರಿಸಿ ಮಾನಸಿಕ ಅನಾರೋಗ್ಯಗಳಿಗೆ ಸೂಕ್ತ ಪರಿಹಾರ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನೇಕ ಕ್ರಮಗಳನ್ನು ವಹಿಸಲಾಗಿದೆ.

ಆಪ್ತ ಸಮಾಲೋಚನೆ ಸೇವೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ನೀಡಿರುವ ಆದ್ಯತೆಯನ್ನು ಮಾನಸಿಕ ಆರೋಗ್ಯ ನಿರ್ವಹಣೆಗೂ ನೀಡಿದೆ. ಸಾರ್ವಜನಿಕರ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಆಪ್ತ ಸಮಾಲೋಚನೆ ಸೇವೆ ನೀಡಲಾಗುತ್ತಿದೆ. ಕೋವಿಡ್‌ ಆರಂಭದಿಂದ ರೋಗಿಗಳುÜ ಹಾಗೂ ಅವರ ಕುಟುಂಬದವರಿಗೆ ಹೆಚ್ಚಾಗಿ ಆಪ್ತ ಸಮಾಲೋಚನೆ ಸೇವೆ ನೀಡಲಾಗಿದೆ.

ಇದರಿಂದಾಗಿ ಅನೇಕರು ರೋಗದ ಭಯದಿಂದ ಹೊರಬರಲು ಸಾಧ್ಯವಾಗಿದೆ. ಕೋವಿಡ್‌ ಸಾಂಕ್ರಾಮಿಕ ಆರ್ಥಿಕತೆಯ ಮೇಲೆ ಭಾರಿ ಭಾರೀ ದುಷ್ಪರಿಣಾಮ ಬೀರಿದ್ದು, ಅನೇಕರು ಆರ್ಥಿಕ ಸಂಕಷ್ಟಎದುರಿಸಿದ್ದಾರೆ. ಹಲವರು ಉದ್ಯೋಗ ಕಳೆದುಕೊಂಡರೆ, ಮತ್ತೆ ಹಲವರು ಆಪ್ತರನ್ನು ಕಳೆದುಕೊಂಡಿದ್ದಾರೆ. ಇಂತಹವರಿಗೆ ಮಾನಸಿಕ ಶಕ್ತಿ ತುಂಬಿ ಅವರು ಮತ್ತೆ ಪುಟಿದೇಳುವಂತೆ ಮಾಡುವ ಸಂಜೀವಿನಿಯೇ ಆಪ್ತ ಸಮಾಲೋಚನೆ.

ಆಪ್ತ ಸಮಾಲೋಚನೆ ಪಡೆಯುವವರ ಸಂಖ್ಯೆ ಹೆಚ್ಚಾಗಿರುವುದು ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಹೆಚ್ಚಾಗಿರುವುದಕ್ಕೆ ಸಾಕ್ಷಿ. 2015-16ರಲ್ಲಿ 32,333, 2016-17ರಲ್ಲಿ 2,14,126 ಜನರಿಗೆ ಆಪ್ತ ಸಮಾಲೋಚನೆ ಸೇವೆ ನೀಡಲಾಗಿತ್ತು. 2017-18ರಲ್ಲಿ 6.86 ಲಕ್ಷ, 2018-19ರಲ್ಲಿ 10.1 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ಸೇವೆ ನೀಡಲಾಗಿತ್ತು. 2019-20 ರಲ್ಲಿ ಈ ಸಂಖ್ಯೆ ದಾಖಲೆಯಂತೆ ಏರಿತು. ಈ ಸಾಲಿನಲ್ಲಿ 10.63 ಲಕ್ಷ ಜನರಿಗೆ ಸೇವೆ ನೀಡಲಾಗಿದೆ. 2020-21ರಲ್ಲಿ 9.02 ಲಕ್ಷ ಜನರಿಗೆ ಸೇವೆ ನೀಡಿದ್ದು, 2021-22 ರ ಮಾಚ್‌ರ್‍ ವರೆಗೆ 8.65ಲಕ್ಷ ಮಂದಿಗೆ ಈ ಸೇವೆ ನೀಡಲಾಗಿದೆ. 2022 ಏಪ್ರಿಲ… 5ರ ವರೆಗೆ, ಕೋವಿಡ್‌ ಸೋಂಕಿಗೊಳಗಾದ ಹಾಗೂ ಐಸೋಲೇಶನ್‌ನಲ್ಲಿದ್ದ 27.50 ಲಕ್ಷ ಮಂದಿ, 88,847 ವಲಸಿಗರು, 8,775 ವೈದ್ಯರು ಹಾಗೂ 25,493 ಆರೋಗ್ಯ ಕಾರ್ಯಕರ್ತರಿಗೆ ಮಾನಸಿಕ ಆರೋಗ್ಯ ಬೆಂಬಲಕ್ಕಾಗಿ ಟೆಲಿ-ಕನ್ಸಲ್ಟೇಶನ್‌ ನೀಡಲಾಗಿದೆ.

ಬೇಸಿಗೆಯಲ್ಲಿ ಮಕ್ಕಳು ಹೆಲ್ತಿ ಆಗಿರ್ಬೇಕೇ? ಹಾಗಿದ್ರೆ ಈ ಆಹಾರಗಳನ್ನು ನೀಡಿ

ಇ-ಮನಸ್‌ ಯೋಜನೆ ಜಾರಿ

ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆ-2017ರ ನಿಯಮಗಳಿಗೆ ಅನುಸಾರವಾಗಿ ಕರ್ನಾಟಕ ಮಾನಸಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆ (ಇ-ಮನಸ್‌) ಜಾರಿಗೊಳಿಸಲಾಗಿದೆ. ಈ ವೆಬ್‌ ವ್ಯವಸ್ಥೆಯು, ಮಾನಸಿಕ ಅಸ್ವಸ್ಥತೆಯ ಆರೈಕೆ ಪಡೆಯಲು ಬಯಸುವ ವ್ಯಕ್ತಿಯ ಮೂಲ ವೈದ್ಯಕೀಯ ದಾಖಲೆಯನ್ನು ನಿರ್ವಹಣೆ ಮಾಡುತ್ತದೆ. ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ, ಸಾರ್ವಜನಿಕ ಹಾಗೂ ಖಾಸಗಿ ಮಾನಸಿಕ ಆರೋಗ್ಯ ಸಂಸ್ಥೆಗಳು ಸೇರಿದಂತೆ ಮಾನಸಿಕ ಆರೋಗ್ಯ ವಲಯದ ಎಲ್ಲಾ ಪಾಲುದಾರರನ್ನು ಒಂದುಗೂಡಿಸುವ ವೇದಿಕೆ ಇದಾಗಿದೆ. ರೋಗಿಯ ಆರೈಕೆಯ ವೇಳೆ ಸಮಸ್ಯೆಗಳು ತಲೆದೋರಿದಾಗ ಆಯಾ ಮಾನಸಿಕ ಆರೋಗ್ಯ ವಿಮರ್ಶೆ ಮಂಡಳಿಗಳೊಂದಿಗೆ ಲಿಂಕ್‌ ಮಾಡಲು ಇಲ್ಲಿ ಅವಕಾಶವಿದೆ.

ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಔಷಧಿ ಹೊರತುಪಡಿಸಿ ಹೆಚ್ಚಿನ ಚಿಕಿತ್ಸೆ, ಆರೈಕೆ ಅಗತ್ಯವಿರುತ್ತದೆ. ಇದಕ್ಕಾಗಿ ರಾಜ್ಯದಲ್ಲಿ ನವೀನ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ ಜಾರಿಯಲ್ಲಿದೆ. ಇದರಡಿ ಮೊದಲ ಬಾರಿಗೆ ರಾಜ್ಯದ 10 ತಾಲೂಕುಗಳಲ್ಲಿ ಸಾಮಾಜಿಕ ಕಾರ್ಯಕರ್ತರನ್ನು ನೇಮಿಸಿದ್ದು, ಪ್ರತಿ ಕಾರ್ಯಕರ್ತರು 700 ರೋಗಿಗಳಿಗೆ ಪುನರ್ವಸತಿ ಸೇವೆ ಒದಗಿಸುತ್ತಾರೆ. ಇದು 3 ವರ್ಷದ ಯೋಜನೆಯಾಗಿದ್ದು, ಬೇರೆ ರಾಜ್ಯಗಳು ಕೂಡ ಅನುಸರಿಸಬಹುದಾದ ಮಾದರಿ.

ಅತಿಯಾಗಿ ಯೋಚನೆ ಮಾಡೋ ಅಭ್ಯಾಸ ಆರೋಗ್ಯಕ್ಕೆ ಒಳ್ಳೇದಲ್ಲ, ಕಡಿಮೆ ಮಾಡೋದು ಹೇಗೆ?

ಈ ಯೋಜನೆಯಲ್ಲಿ, ರೋಗಿಗೆ ಆರೋಗ್ಯ, ಶಿಕ್ಷಣ, ಜೀವನೋಪಾಯ, ಸಾಮಾಜಿಕ ಸಂಬಂಧ ಮತ್ತು ಸಬಲೀಕರಣದ ವಿಚಾರಗಳಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಈಗಾಗಲೇ ಸುಮಾರು 700 ಫಲಾನುಭವಿಗಳಿಗೆ ವಿವಿಧ ಹಂತಗಳಲ್ಲಿ ಸೇವೆ ನೀಡಲಾಗುತ್ತಿದೆ. ಸಾಮಾನ್ಯವಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ನೋಂದಾಯಿಸಿದ ರೋಗಿಗಳು ಅನುಸರಣಾ ಆರೈಕೆಗೆ ಬರುವುದು ಬಹಳ ಕಡಿಮೆ. ಅದಕ್ಕಾಗಿ ಮನೆ ಬಾಗಿಲಿಗೆ ಆರೈಕೆ ಸೇವೆಯ ಮೂಲಕ ಅವರನ್ನು ಆರೈಕೆ, ಚಿಕಿತ್ಸೆಗೆ ಮರಳಿ ಕರೆತರಲಾಗುತ್ತದೆ.

ಬ್ರೈನ್‌ ಹೆಲ್ತ್ ಇಶಿಯೇಟಿವ್‌

ಕರ್ನಾಟಕ ಬ್ರೈನ್‌ ಹೆಲ್ತ್ ಇನಿಶಿಯೇಟಿವ್‌ ಪ್ರಾಯೋಗಿಕ ಯೋಜನೆಯನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಬಿಎಂಪಿ, ನಿಮ್ಹಾನ್ಸ್‌ ಜೊತೆಗೂಡಿ ಜಾರಿ ಮಾಡಲು ಪ್ರಸ್ತಾಪಿಸಲಾಗಿದೆ. ನರ ರೋಗಗಳ ತಪಾಸಣೆ ಮತ್ತು ಆರಂಭಿಕ ಹಂತದಲ್ಲೇ ಗುರುತಿಸುವುದು, ಅದರ ನಿರ್ವಹಣೆಗೆ ಸಿಬ್ಬಂದಿಗೆ ತರಬೇತಿ, ಬ್ರೈನ್‌ ಹೆಲ್ತ್ ಕ್ಲಿನಿಕ್‌ಗಳ ಆರಂಭ, ಮೌಲ್ಯಮಾಪನ ಮತ್ತು ವರದಿ ಮೊದಲಾದವುಗಳನ್ನು ಇದು ಒಳಗೊಂಡಿದೆ. ಇದರಿಂದಾಗಿ ಸಮುದಾಯದಲ್ಲಿ ನರ ವೈಜ್ಞಾನಿಕ ಕಾಯಿಲೆಯಿಂದಾಗಿ ಅಂಗವೈಕಲ್ಯ ಉಂಟಾಗುವುದನ್ನು ಕಡಿಮೆ ಮಾಡಬಹುದು.

ತಾಯಂದಿರಿಗೆ ಮಾತೃ ಚೈತನ್ಯ

ರಾಜ್ಯದಲ್ಲಿ ತಾಯಂದಿರು ಹಾಗೂ ಗರ್ಭಿಣಿಯರ ಮಾನಸಿಕ ಆರೋಗ್ಯ ರಕ್ಷಣೆಗೆ ‘ಮಾತೃ ಚೈತನ್ಯ’ ಯೋಜನೆ ಜಾರಿಯಲ್ಲಿದೆ. ಬಾಣಂತಿ ಹಾಗೂ ಗರ್ಭಿಣಿಯರು ಎದುರಿಸುತ್ತಿರುವ ಖಿನ್ನತೆ ಮತ್ತು ಆತಂಕದ ಆರಂಭಿಕ ಹಂತದ ಗುರುತಿಸುವಿಕೆ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ತಾಯಂದಿರ ಚಿಕಿತ್ಸೆಗೆ ವಿಶೇಷ ಮಾನಸಿಕ ಆರೋಗ್ಯ ತಂಡಕ್ಕೆ ಶಿಫಾರಸು ಮಾಡುವುದು, ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಗೆ ಈ ಬಗ್ಗೆ ತರಬೇತಿ ನೀಡುವುದು ಮೊದಲಾದ ಅಂಶಗಳನ್ನು ಇದು ಒಳಗೊಂಡಿದೆ.

ಈ ತಪ್ಪುಗಳನ್ನು ಮಾಡಿದ್ರೆ ನೀವು ಯಾವಾಗ್ಲೂ ಸಿಂಗಲ್ ಆಗಿಯೇ ಇರ್ತೀರಿ

ಮನಸ್ಸು ನೆಮ್ಮದಿಯಿಂದಿದ್ದು, ತಾಳ್ಮೆ, ಸಮಾಧಾನ, ಸಕಾರಾತ್ಮಕ ಚಿಂತನೆಗಳು ಭರ್ತಿಯಾಗಿದ್ದರೆ ವ್ಯಕ್ತಿ ಏನು ಬೇಕಾದರೂ ಸಾಧಿಸಬಲ್ಲ. ಆಧುನಿಕ ಜೀವನ ಶೈಲಿ, ಉದ್ಯೋಗದ ಒತ್ತಡ, ಕೌಟುಂಬಿಕ ಕಲಹ ಮೊದಲಾದ ಕಾರಣಗಳಿಂದ ಜನರು ಮಾನಸಿಕ ರೋಗಗಳಿಗೆ ತುತ್ತಾಗುವುದನ್ನು ಸರಿಯಾಗಿ ಗಮನಿಸಿ ಅದಕ್ಕೆ ಸೂಕ್ತ ಪರಿಹಾರ ಕಲ್ಪಿಸುವುದು ಇಂದಿನ ಅಗತ್ಯ. ದೈಹಿಕ ಆರೋಗ್ಯದಿಂದ ಮಾತ್ರ ಪರಿಪೂರ್ಣ ಆರೋಗ್ಯ ಪಡೆಯಲು ಸಾಧ್ಯವಿಲ್ಲ. ದೈಹಿಕ ಆರೋಗ್ಯದೊಂದಿಗೆ, ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಅದು ‘ಸಮಗ್ರ ಆರೋಗ್ಯ’ ಎಂಬ ಅಂಶವನ್ನು ಸಮಾಜಕ್ಕೆ ಮನದಟ್ಟು ಮಾಡುವುದು ದೇಶದ ಪ್ರಗತಿಗೆ ಪೂರಕ.

- ರಂದೀಪ್‌ ಡಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ

Follow Us:
Download App:
  • android
  • ios