ಈಗಿದ್ದವರು ಇನ್ನೊಂದು ಗಳಿಕೆಯಲ್ಲಿ ಇರೋದಿಲ್ಲ. ಸಾವು ನಮ್ಮ ಕೈನಲ್ಲಿ ಇಲ್ಲವಾದ್ರೂ ಪ್ರಯತ್ನ ನಮ್ಮದಾಗಿರಬೇಕು. ಮಕ್ಕಳು ಹೃದಯದಲ್ಲಿ ನೋವಾಗ್ತಿದೆ ಎಂದಾಗ ಅದನ್ನು ನಿರ್ಲಕ್ಷ್ಯ ಮಾಡ್ದೆ ಈ ಕ್ರಮಕೈಗೊಳ್ಳಿ.  

ಹೃದಯಾಘಾತ.. ಸದ್ಯ ಕೇಳಿ ಬರ್ತಿರುವ ಟ್ರೆಂಡಿಂಗ್ ವಿಷ್ಯ ಅಂದ್ರೆ ತಪ್ಪಾಗೋದಿಲ್ಲ. ಆಟವಾಡ್ತಿದ್ದಾಗ್ಲೇ ಕುಸಿದು ಬಿದ್ದ.. ಪರೀಕ್ಷೆ ಮುಗಿಸಿ ಬರುವಾಗ ಹೃದಯಾಘಾತ, ಮಲಗಿದ್ದಾಗ್ಲೇ ಪ್ರಾಣ ಹೋಯ್ತು.. ಟಿವಿ ನೋಡುವಾಗ್ಲೇ ಹೃದಯಾಘಾತವಾಯ್ತು.. ಹೀಗೆ ದಿನಕ್ಕೆ ನಾಲ್ಕೈದು ಹೃದಯಾಘಾತದ ಸುದ್ದಿಗಳು ನಮ್ಮ ಕಿವಿಗೆ ಬೀಳ್ತಿವೆ. ಕೊರೊನಾ ನಂತ್ರ ಹೃದಯಾಘಾತ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದಕ್ಕೆ ಕಾರಣವೇನು ಎಂಬ ಪತ್ತೆ ಕಾರ್ಯ ಒಂದ್ಕಡೆ ಶುರುವಾಗಿದೆ.

Add Asianetnews Kannada as a Preferred SourcegooglePreferred

60 ವರ್ಷದ ನಂತ್ರ ಕಾಡ್ತಿದ್ದ ಈ ಹೃದಯಾಘಾತ (Heart Attack) ಈಗ 9 ವರ್ಷದ ಮಕ್ಕಳನ್ನೂ ಬಿಡ್ತಿಲ್ಲ. ಒಂದೆರಡು ವಾರಗಳಲ್ಲಿ ಎರಡರಿಂದ ಮೂರು ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿವೆ. ದೊಡ್ಡವರಂತೆ ಮಕ್ಕಳಿ (children) ಗೂ ಕೂಡ ಕಾರ್ಡಿಯಾಕ್ ಅರೆಸ್ಟ್ ಆಗುತ್ತೆ. ದೇಹದ ಅಂಗಗಳಿಗೆ ರಕ್ತ ಸರಿಯಾಗಿ ಪಂಪ್ ಆಗದೇ ಇದ್ದಾಗ ಹೃದಯ ಸ್ತಂಭನ ಸಂಭವಿಸುತ್ತದೆ. ಈ ಬಗ್ಗೆ ಸರಿಯಾದ ಮಾಹಿತಿ ಇದ್ರೆ ಸೂಕ್ತ ಚಿಕಿತ್ಸೆ ನೀಡಿ ಮಕ್ಕಳನ್ನು ಉಳಿಸಿಕೊಳ್ಳಬಹುದು.

ಕ್ಯಾನ್ಸರ್ ಇದ್ರೂ ಪತ್ತೆಹಚ್ಚುತ್ತೆ ಸೆಲೆಬ್ರಿಟಿಗಳು ಮಾಡಿಸ್ಕೊಳ್ಳೋ ಈ ಕಾಸ್ಟ್ಲೀ ಎಂಆರ್‌ಐ ಸ್ಕ್ಯಾನ್‌

ಮಕ್ಕಳಲ್ಲಿ ಕಾರ್ಡಿಯಾಕ್ ಅರೆಸ್ಟ್ (Cardiac Arrest ) ಉಂಟಾಗಲು ಕಾರಣವೇನು? : ಕೆಲವು ಮಕ್ಕಳಿಗೆ ಹುಟ್ಟಿನಿಂದಲೇ ಹೃದಯದ ದೋಷಗಳು ಇರುತ್ತವೆ. ಅವರ ಹೃದಯದ ರಚನೆಯಲ್ಲಿಯೇ ಅಸಹಜತೆಗಳಿರುತ್ತವೆ. ಅಂತವರಲ್ಲಿ ರಕ್ತದ ಹರಿವು ಎಲ್ಲರಂತೆ ಸಾಮಾನ್ಯವಾಗಿರುವುದಿಲ್ಲ. ಅಂತಹ ಮಕ್ಕಳಿಗೆ ಹೃದಯ ಸ್ತಂಭನದ ಅಪಾಯ ಹೆಚ್ಚಾಗಿರುತ್ತದೆ. ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ನ್ಯುಮೋನಿಯಾ, ಬ್ರಾಂಕೈಟಿಸ್ ನಂತಹ ಉಸಿರಾಟದ ಖಾಯಿಲೆಗಳು ಇರುತ್ತವೆ. ಇಂತಹ ಸೋಂಕುಗಳು ತೀವ್ರವಾದಾಗ ಹೃದಯದ ಮೇಲೆ ಒತ್ತಡವುಂಟಾಗಿಯೂ ಹೃದಯ ಸ್ತಂಭನ ಉಂಟಾಗಬಹುದು.

ಶಿಶುಗಳ ಹಠಾತ್ ನಿಧನ : ನವಜಾತ ಶಿಶುಗಳು ನಿದ್ರೆಯ ಸಮಯದಲ್ಲಿ ಸಾಯುತ್ತವೆ. ಇದನ್ನು ಹಠಾತ್ ಶಿಶು ಸಾವಿನ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಶಿಶುಗಳು ಹೀಗೆ ಸಾವನ್ನಪ್ಪಲು ನಿಖರವಾದ ಕಾರಣ ತಿಳಿದಿಲ್ಲ. ಕೆಲವೊಮ್ಮೆ ಆಘಾತದಿಂದ ಅಥವಾ ಆಮ್ಲಜನಕದ ಕೊರತೆಯಿಂದ ಹೃದಯ ಸ್ತಂಭನವಾಗಿ ಮಗುವಿನ ಮರಣವಾಗಬಹುದು.

ಲೋ ಬಿಪಿಯಂತೆಯೇ ಸೈಲೆಂಟ್ ಕಿಲ್ಲರ್ ಕಾಯಿಲೆಗಳಿವು, ಎಚ್ಚರವಿರಲಿ

ಹೃದಯದ ತೊಂದರೆ : ಕೆಲವು ಮಕ್ಕಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಚಿಕ್ಕ ಪುಟ್ಟ ತೊಂದರೆಗಳು ಮೊದಲು ಯಾರಿಗೂ ತಿಳಿಯುವುದಿಲ್ಲ. ಅವು ಗಂಭೀರ ಪರಿಸ್ಥಿತಿಗೆ ಬಂದಾಗಲೇ ಹೃದಯದ ತೊಂದರೆ ಇರುವುದು ಪತ್ತೆಯಾಗುತ್ತದೆ. ಇದರ ಹೊರತಾಗಿ ಕೆಲವು ಹೈ ಡೋಜ್ ಮಾತ್ರೆಗಳ ಕಾರಣದಿಂದಲೂ ಮಕ್ಕಳಲ್ಲಿ ಕಾರ್ಡಿಯಾಕ್ ಅರೆಸ್ಟ್ ಉಂಟಾಗುತ್ತದೆ.

ಮಕ್ಕಳಿಗೆ ಕಾರ್ಡಿಯಾಕ್ ಅರೆಸ್ಟ್ ಆದಾಗ ಏನು ಮಾಡಬೇಕು? : ಮಕ್ಕಳಿಗೆ ಹೃದಯದ ತೊಂದರೆಯುಂಟಾದಾಗ ಮೊದಲು ನೀವು ಅಂಬುಲೆನ್ಸ್ ಗೆ ಕರೆ ಮಾಡಿ. ಹತ್ತಿರದಲ್ಲಿ ಆಸ್ಪತ್ರೆಯಿದ್ದರೆ ಅಲ್ಲಿಗೆ ಕರೆದುಕೊಂಡು ಹೋಗಿ. ಜೋರಾಗಿ ಕೂಗಿ ಮಗು ನಿಮ್ಮ ಮಾತಿಗೆ ರೆಸ್ಪಾನ್ಸ್ ಮಾಡುತ್ತಿದಿಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಿ. ಮಗು ಉಸಿರಾಡುತ್ತಿದೆಯೇ ಇಲ್ಲವೇ ಎನ್ನುವುದನ್ನು ಗಮನಿಸಿ. ಮಗು ಉಸಿರಾಡುತ್ತಿಲ್ಲ ಎಂದಾದರೆ ನೀವು ಸಿಪಿಆರ್ ಕೂಡ ನೀಡಬಹುದು.

ಸಿಪಿಆರ್ ನೀಡೋದು ಹೇಗೆ? : ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (ಸಿಪಿಆರ್) ವ್ಯಕ್ತಿಯ ಜೀವ ಉಳಿಸಲು ನೆರವಾಗುತ್ತದೆ. ವ್ಯಕ್ತಿ ಮೂರ್ಛೆ ಹೋದರೆ, ಹೃದಯ ಬಡಿತ ನಿಂತುಹೋದರೆ ಅಥವಾ ನಾಡಿ ಮಿಡಿತ ನಿಂತ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಲಾಗುತ್ತದೆ. ಇದರಿಂದ ಹೃದಯ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ. 

ಸಿಪಿಆರ್ ನೀಡುವಾಗ ರೋಗಿಯ ದೇಹ, ಕೈ ಕಾಲುಗಳು ನೇರವಾಗಿರಬೇಕು. ರೋಗಿಯನ್ನು ನೆಲದ ಮೇಲೆ ಮೇಲ್ಮುಖವಾಗಿ ಮಲಗಿಸಬೇಕು. ನಂತರ ನಿಮ್ಮ ಅಂಗೈಯನ್ನು ರೋಗಿಯ ಎದೆಯ ಮಧ್ಯಭಾಗದಲ್ಲಿಟ್ಟು ಇನ್ನೊಂದು ಕೈಯನ್ನು ಆ ಕೈ ಮೇಲಿರಿಸಿ ಎರಡೂ ಕೈಗಳಿಂದ ರೋಗಿಯ ಎದೆಯನ್ನು ಒತ್ತಬೇಕು. ಹೃದಯ ಸ್ತಂಭನವಾದಾಗ ಪ್ರತಿ ನಿಮಿಷವೂ ಮುಖ್ಯವಾಗಿರುತ್ತವೆ. ಕೆಲವೇ ಕೆಲವು ನಿಮಿಷದಲ್ಲಿ ವ್ಯಕ್ತಿಯ ಪ್ರಾಣ ಉಳಿಯಬಹುದು. ಹಾಗಾಗಿ ಅಂತಹ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು.