Asianet Suvarna News Asianet Suvarna News

ಬೀದಿಗೆ ಬಂತು ರಾಮನಗರ ರೈತ ಸಂಘದ ಬಣ ರಾಜಕೀಯ

ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ಸಭೆಯಲ್ಲಿ ಆರೋಪ ಪ್ರತ್ಯಾರೋಪ ನಡೆದಿದೆ. ರಾಮನಗರ ಎಪಿಎಂಸಿ ಆವರಣದಲ್ಲಿ ರೈತ ಸಂಘದ ಬಣ ರಾಜಕೀಯಕ್ಕೆ ಸಮಸ್ಯೆಗಳು ತಾರಕಕ್ಕೇರಿದೆ.

Ramangara farmer Solution Forum turn into politics fights

ರಾಮನಗರ(ಆ.09):  ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ನಡೆದ ರೈತರ ಸಭೆ ರೈತ ಸಂಘದ ವಿವಿಧ ಬಣಗಳ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪ, ವಾಗ್ವಾದ, ದ್ವೇಷ, ಅಸೂಯೆಗೆ ಸಾಕ್ಷಿಯಾಯಿತು. ಎಪಿಎಂಸಿ ಮಾರುಕಟ್ಟೆಯಲ್ಲಿ ಸಮಿತಿ ಕಚೇರಿ ಎದುರು ಗ್ರಾಹಕರಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಸಂಬಂಧ ಕರೆಯಲಾಗಿದ್ದ ರೈತ ಮುಖಂಡರು ಹಾಗೂ ಸದಸ್ಯರ ಸಭೆಯಲ್ಲಿ ನಡೆಯುತ್ತಿದ್ದ ಚರ್ಚೆ ಹಾದಿತಪ್ಪಿ ರೈತ ಮುಖಂಡರ ನಡುವೆ ಪರಸ್ಪರ ಜಗಳಕ್ಕೆ ಕಾರಣವಾಯಿತು.

ರೈತ ಸಂಘದ ವಿವಿಧ ಬಣದ ದ್ವಂದ್ವ ನಿಲುವುಗಳ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಪ್ರತಿಕ್ರಿಯಿಸಿದ ರೈತ ಮುಖಂಡ ಮಲ್ಲಯ್ಯ ಅವರು, ಸಭೆಯಲ್ಲಿ ತುಂಬೇನಹಳ್ಳಿ ಶಿವಕುಮಾರ್ ಬಣ, ಕೋಡಿಹಳ್ಳಿ ಬಣ, ಲಕ್ಷ್ಮಣ್ ಸ್ವಾಮಿ ಬಣದ ಮುಖಂಡರು ಇದ್ದಾರೆ ಎಂದು ಪ್ರಸ್ತಾಪಿಸಿ ಜಿಲ್ಲೆಯಲ್ಲಿ ಇಷ್ಟೊಂದು ಬಣಗಳು ಏಕೆ? ಉದ್ದೇಶ ಒಂದೇ ಆಗಿದ್ದರೂ ಭಿನ್ನಹಾದಿ ಏಕೆ? ಕೆಲ ವಸೂಲಿ ಮುಖಂಡರಿಂದ ಎಲ್ಲರಿಗೂ ಕೆಟ್ಟ ಹೆಸರು. ಈ ಬಗ್ಗೆ ಆತ್ಮಾವಲೋಕನ ಸಭೆ ನಡೆಯಬೇಕು. ಸಭೆಗೆ ನಾವೂ ಬರುಲು ಸಿದ್ಧ, ಎಲ್ಲಬಣದ ಮುಖಂಡರೂ ಬರಲಿ ಎಂದು ಸವಾಲು ಹಾಕಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಮುಖಂಡರು ಸಭೆ ಕರೆದಿರುವ ಉದ್ದೇಶದ ಬಗ್ಗೆ ಮಾತನಾಡಿ, ಬಣದ ವಿಷಯ ಏಕೆ? ಎಂದು ವಾಗ್ವಾದಕ್ಕೆ ಇಳಿದರು. ನಂತರ ಚರ್ಚೆ ಸಂಪೂರ್ಣ ಹಾದಿ ತಪ್ಪಿತು. ಪರಸ್ಪರ ಬೈದಾಡಿಕೊಂಡ ರೈತ ಸಂಘದ ವಿವಿಧ ಬಣದ ಸದಸ್ಯರು ಸಭೆಯಿಂದ ಎದ್ದು ಹೊರನಡೆದರು.

ಹೊರ ನಡೆದರೂ ಮುಗಿಯದ ವಾಗ್ವಾದ: 
ಸಭಾಂಗಣದ ಹೊರ ಬಂದ ನಂತರವೂ ರೈತ ಬಣಗಳ ನಡುವಿನ ಪರಸ್ಪರ ಆರೋಪ ಪ್ರತ್ಯಾರೋಪಗಳು ಮುಂದುವರಿಯಿತು. ಯಾರು ನಿಜವಾದ ರೈತರು, ಯಾರು ರೈತರಲ್ಲ? ಸಾಲ ಮನ್ನಾ ಮಾಡಿಸಲು ಹಣ ವಸೂಲಿ ಮಾಡಿದವರು ಯಾರು? ಎಂದು ಪರಸ್ಪರ ಪ್ರಶ್ನಿಸಿಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೆಲ ರೈತ ಮುಖಂಡರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ಸದಸ್ಯರು ಜಗಳ ಬಿಡಿಸಿದರು. ಪುರಷರು, ಮಹಿಳೆಯರು ಎನ್ನದೇ ಏರು ಧ್ವನಿಯಲ್ಲಿ ಜಗಳಕ್ಕೆ ನಿಂತರು.

ಇದಕ್ಕು ಮುನ್ನ ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಎಂ. ರಾಮು, ರೈತ ಸಂಘಟನೆಗಳು ರೈತರ ಸಮಸ್ಯೆಗಳಿಗೆ ಹೋರಾಟ ಮಾಡಿಕೊಂಡು ಬರುತ್ತಿದ್ದು, ಕೆಲವರು ಹಸಿರು ಶಾಲು ಹಾಕಿಕೊಂಡು ರೈತರಿಗೆ ಮೋಸ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಇಂತವರು ಹೆತ್ತ ತಾಯಿಗೆ ಮೋಸ ಮಾಡಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

Follow Us:
Download App:
  • android
  • ios