Lakshmi Nivasa: ಕಲಿಯುಗ ಸಿನಿಮಾದ ರಾಜೇಶ್ ರಂತೆ ಸಾಧನೆ ಮಾಡ್ತಾರಾ ಶ್ರೀನಿವಾಸ್?
ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯು 1984ರ 'ಕಲಿಯುಗ' ಸಿನಿಮಾದ ಕಥಾಹಂದರವನ್ನು ಹೋಲುತ್ತಿದೆ. ಈ ಸಿನಿಮಾದಲ್ಲಿ ಹಿರಿಯ ನಟ ರಾಜೇಶ್, ಸುಂದರ್ ರಾಜ್, ಬಾಲಕೃಷ್ಣ, ದಿನೇಶ್ ಮತ್ತು ನಟಿ ಆರತಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.

ಲಕ್ಷ್ಮೀ ನಿವಾಸ ಸೀರಿಯಲ್
ದೀರ್ಘಕಾಲ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಕೆಲವೊಮ್ಮೆ ಯಾವುದೋ ಸಿನಿಮಾದ ಝಲಕ್ ಕಾಣಿಸಿಕೊಳ್ಳುತ್ತದೆ. ಇಂತಹ ದೃಶ್ಯಗಳು ಸೀರಿಯಲ್ ವೀಕ್ಷಕರು ಬಹುಬೇಗ ಪತ್ತೆ ಮಾಡುತ್ತಾರೆ. ಇದೀಗ ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಕನ್ನಡದ 'ಕಲಿಯುಗ' ಸಿನಿಮಾದ ನೆರಳು ಕಾಣಿಸಿಕೊಂಡಿದೆ. 1984ರಲ್ಲಿ ಬಿಡುಗಡೆಯಾದ ಕಲಿಯುಗ ಸಿನಿಮಾದಲ್ಲಿ ಹಿರಿಯ ನಟ ರಾಜೇಶ್, ಸುಂದರ್ ರಾಜ್, ಬಾಲಕೃಷ್ಣ, ದಿನೇಶ್ ಮತ್ತು ನಟಿ ಆರತಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.
ಕಲಿಯುಗ ಸಿನಿಮಾದ ಕಥೆ ಏನು?
ಮೆಕ್ಯಾನಿಕ್ ಆಗಿರುವ ನಾಯಕ ನಟ, ಕಾರ್ ರಿಪೇರಿ ವೇಳೆ ಕೈ ಕಳೆದುಕೊಳ್ಳುತ್ತಾನೆ. ವಿಮೆ ಹಣವನ್ನೆಲ್ಲಾ ಮಕ್ಕಳಿಗೆ ಹಂಚಿ, ಅವರಿಂದಲೇ ಮನೆಯಿಂದ ದೂರವಾಗುತ್ತಾನೆ. ಸ್ವಂತ ಮಕ್ಕಳು ದೂರ ಮಾಡಿದ ಬಳಿಕ ಸಾಕು ಮಗ ಮತ್ತು ಹೆಂಡ್ತಿಯೊಂದಿಗೆ ಹೊಸ ಜೀವನ ಆರಂಭಿಸುತ್ತಾನೆ. ನಂತರ ಸಣ್ಣದಾದ ಗ್ಯಾರೇಜ್ ಆರಂಭಿಸಿ, ಕಡಿಮೆ ಪೆಟ್ರೋಲ್ ಬಳಕೆ ಮಾಡುವ ಇಂಜಿನ್ ಕಂಡು ಹಿಡಿದು ಉನ್ನತ ಸ್ಥಾನಕ್ಕೇರುತ್ತಾನೆ. ತಂದೆಯನ್ನು ದೂರ ಮಾಡಿದ ಮಕ್ಕಳು ಸಾಲದ ಶೂಲದಲ್ಲಿ ಸಿಲುಕಿ ಮತ್ತೆ ತಂದೆಯನ್ನು ಆಶ್ರಯಿಸುತ್ತಾರೆ.
ಇಲ್ಲಿಯೂ ಸಾಕು ಮಗ
ಸ್ವಂತ ಗಂಡು ಮಕ್ಕಳು ದೂರ ಮಾಡಿದರೂ ಸಾಕು ಮಗ ವೆಂಕಿ ಒಬ್ಬನೇ ಲಕ್ಷ್ಮೀ ಮತ್ತು ಶ್ರೀನಿವಾಸ್ಗೆ ಜೊತೆಯಾಗಿದ್ದಾನೆ. ಬಂದಂತಹ ಎಲ್ಲಾ ಕಷ್ಟಗಳನ್ನು ಎದುರಿಸಿರುವ ಶ್ರೀನಿವಾಸ್ ದೊಡ್ಡಮಟ್ಟದಲ್ಲಿ ತನ್ನದೇ ಸ್ವಂತ ಗ್ಯಾರೇಜ್ ಆರಂಭಿಸಿದ್ದಾನೆ. ಇತ್ತೀಚಿನ ಸಂಚಿಕೆಯಲ್ಲಿ ಶ್ರೀನಿವಾಸ್ ಮತ್ತು ಲಕ್ಷ್ಮೀ ನಡುವಿನ ಸಂಭಾಷಣೆ ಸೀರಿಯಲ್ ಕಥೆ ಮುಂದೆ ಕಲಿಯುಗ ಸಿನಿಮಾದಂತೆ ತಿರುವು ಪಡೆದುಕೊಳ್ಳುವ ಸುಳಿವು ನೀಡಿದೆ.
ಶ್ರೀನಿವಾಸ್ ಮಾತು
ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಯಾರಾದ್ರು ಕಡಿಮೆ ಇಂಧನ ಬಳಸಿಕೊಂಡು ಹೆಚ್ಚು ಮೈಲೇಜ್ ನೀಡುವ ಇಂಜಿನ್ ಕಂಡು ಹಿಡಿದಿದ್ರೆ ಬಡವರಿಗೆ ಎಷ್ಟು ಅನುಕೂಲ ಆಗುತ್ತಿತ್ತು ಅಲ್ಲವಾ ಎಂದು ಪತ್ನಿ ಲಕ್ಷ್ಮೀಗೆ ಶ್ರೀನಿವಾಸ್ ಹೇಳುತ್ತಾನೆ. ಇದೇ ವೇಳೆ ತಾನೇ ಏನಾದ್ರೂ ಪರಿಹಾರ ಕಂಡು ಹಿಡಿಯಬೇಕು ಎಂಬ ಶ್ರೀನಿವಾಸ್ ಮಾತುಗಳನ್ನು ಕೇಳಿದ ವೀಕ್ಷಕರು, ಇದು ಕಲಿಯುಗ ಸಿನಿಮಾದ ಕಥೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಜಯಂತ್ ಪ್ರೀತಿ ತೊರೆದ ಚಿನ್ನುಮರಿ
ಇನ್ನು ಮತ್ತೊಂದೆಡೆ ಜಯಂತ್ ಪ್ರೀತಿಯನ್ನು ತೊರೆದಿರುವ ಚಿನ್ನುಮರಿ ಮಾಂಗಲ್ಯ ಕಳಚಿ ಗಂಡನ ಕೈಗೆ ನೀಡಿದ್ದಾಳೆ. ಇದರ ಜೊತೆಯಲ್ಲಿ ಗಂಡ ಜಯಂತ್ ಓರ್ವ ಸೈಕೋ, ಅಜ್ಜಿ ಅನಾರೋಗ್ಯ ಮತ್ತು ತನ್ನ ಗರ್ಭಪಾತಕ್ಕೂ ಜಯಂತ್ ಕಾರಣ ಎಂದು ಚಿನ್ನುಮರಿ ಎಲ್ಲರ ಮುಂದೆ ಹೇಳಿದ್ದಾಳೆ. ಆದ್ರೆ ಇದು ನಿಜವಾಗಿಯೂ ನಡೆದಿದೆಯಾ ಅಥವಾ ಯಾರಾದ್ರೂ ಕನಸು ಕಂಡಿದ್ದಾರಾ ಎಂಬುದರ ಬಗ್ಗೆ ವೀಕ್ಷಕರಲ್ಲಿ ಅನುಮಾನವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

