- Home
- Entertainment
- TV Talk
- Krishna Rukku ಸೀರಿಯಲ್ ಆಟೋದ ಮೇಲೆ ದರ್ಶನ್ ಫೋಟೋ ಏಕಿಲ್ಲ? ಫ್ಯಾನ್ಸ್ ಪ್ರಶ್ನೆಗೆ ರುಕ್ಕು ಹೇಳಿದ್ದೇನು?
Krishna Rukku ಸೀರಿಯಲ್ ಆಟೋದ ಮೇಲೆ ದರ್ಶನ್ ಫೋಟೋ ಏಕಿಲ್ಲ? ಫ್ಯಾನ್ಸ್ ಪ್ರಶ್ನೆಗೆ ರುಕ್ಕು ಹೇಳಿದ್ದೇನು?
'ಕೃಷ್ಣ ರುಕ್ಕು' ಎಂಬ ಹೊಸ ಸೀರಿಯಲ್ ಆರಂಭವಾಗಲಿದೆ. ಅಣ್ಣನ ಸಾವಿನ ನಂತರ ಕುಟುಂಬದ ಜವಾಬ್ದಾರಿ ಹೊರುವ ರುಕ್ಕು ಮತ್ತು ಹಾದಿ ತಪ್ಪಿದ ಕೃಷ್ಣನ ಕಥೆಯಿದು. ಧಾರಾವಾಹಿಯ ಆಟೋದಲ್ಲಿ ದರ್ಶನ್ ಫೋಟೋ ಇಲ್ಲದಿರುವ ವಿವಾದಕ್ಕೆ ನಾಯಕಿ ಮೌನ ಗುಡ್ಡೇಮನೆ ಸ್ಪಷ್ಟನೆ ನೀಡಿದ್ದಾರೆ.

'ಕೃಷ್ಣ ರುಕ್ಕು' ಸೀರಿಯಲ್
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ 'ಪುಟ್ಟಕ್ಕನ ಮಕ್ಕಳು' (Puttakkana Makkalu) ಸೀರಿಯಲ್ ಮುಗಿದಿರುವ ಹಿನ್ನೆಲೆಯಲ್ಲಿ ಬರುವ ಸೋಮವಾರ ಅರ್ಥಾತ್ ಮಾರ್ಚ್ 9ರಿಂದ ಹೊಸ ಧಾರಾವಾಹಿ 'ಕೃಷ್ಣ ರುಕ್ಕು' ಆರಂಭವಾಗಲಿದೆ. ಇದರ ಪ್ರೊಮೋ ಇದಾಗಲೇ ವಾಹಿನಿ ಶೇರ್ ಮಾಡಿಕೊಂಡಿದೆ.
ಸೀರಿಯಲ್ ಸ್ಟೋರಿ
ಕುಟುಂಬದ ಒಗ್ಗಟ್ಟು, ಜವಾಬ್ದಾರಿ, ಪ್ರೀತಿ ಜತೆಗೆ ಅನಿರೀಕ್ಷಿತ ತಿರುವುಗಳು ಈ ಧಾರಾವಾಹಿ ಪ್ರಮುಖ ವಿಷಯಗಳು. ಅಣ್ಣನ ನಿಧನದ ನಂತರ ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುವ ರುಕ್ಕು ಮತ್ತು ಅವಳ ಪ್ರೀತಿ, ದ್ವೇಷ, ವಿಧಿಯಾಟದ ಕಥೆ ಹೇಳುತ್ತದೆ. ಆಗ ಎದುರಾಗುವ ಸವಾಲುಗಳನ್ನು ಅವಳು ಹೇಗೆ ಎದುರಿಸುತ್ತಾಳೆ ಎಂಬುದು ಧಾರಾವಾಹಿಯ ಕಥೆ. ಹಾಗೆಯೇ ಸಮಾಜದಲ್ಲಿ ಹಾದಿ ತಪ್ಪಿರುವ ಕೃಷ್ಣ ಅದು ಹೇಗೆ ರುಕ್ಕುವಿನ ಸಂಪರ್ಕಕ್ಕೆ ಬರುತ್ತಾನೆ ಎಂಬುದೇ ಈ ಧಾರಾವಾಹಿ ಪ್ರಮುಖ ಘಟ್ಟ.
ಪಾತ್ರ ಪರಿಚಯ
ಮೌನ ಗುಡ್ಡೇಮನೆ ರುಕ್ಕು, ಅಕ್ಷಯ್ ನಾಯಕ್ ಕೃಷ್ಣನ ಪಾತ್ರದಲ್ಲಿ, ಜೊತೆಗೆ ಎಸ್. ನಾರಾಯಣ್, ಸುಚಿತ್ರಾ, ಗಾಯಕ ನವೀನ ಸಜ್ಜು ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೂರ್ಯ ಪ್ರಕಾಶ್ ಎಂಬ ಪಾತ್ರದಲ್ಲಿ ನಾರಾಯಣ್ ನಟಿಸುತ್ತಿದ್ದಾರೆ.
ದರ್ಶನ್ ಫೋಟೋ ಇಲ್ಲ!
ಇದರಲ್ಲಿ ಆಟೋದ ಮೇಲೆ ದರ್ಶನ್ (D Boss Darshan) ಹೆಸರು, ಫೋಟೋ ಇಲ್ಲ ಎನ್ನುವುದು ಹಲವು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಸೀರಿಯಲ್ನವರಿಗೆ ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ ಅವರ ಅಭಿಮಾನಿಗಳು. ದರ್ಶನ್ ಅವರ ಹೆಸರು ಹಾಕಬೇಕು ಎನ್ನುವುದು ಅವರ ಒತ್ತಾಯ.
ನಟಿ ಹೇಳಿದ್ದೇನು?
ಈ ಬಗ್ಗೆ ಇದೀಗ ನಟಿ ಮೌನ ಗುಡ್ಡೇಮನೆ ಮಾತನಾಡಿದ್ದಾರೆ. ಬಾಸ್ ಟಿವಿ ಚಾನೆಲ್ ಜೊತೆ ಮಾತನಾಡಿರುವ ನಟಿ, ಎಷ್ಟೋ ಜನ ದರ್ಶನ್ ಹೆಸರು ಏಕೆ ಇಲ್ಲ ಎಂದು ನನ್ನನ್ನು ಪ್ರಶ್ನಿಸುತ್ತಾರೆ. ಆಟೋ ನನ್ನದಲ್ಲ, ಇದು ನನ್ನ ಆಯ್ಕೆಯೂ ಅಲ್ಲ. ಬದಲಿಗೆ ವಾಹಿನಿ ಕಡೆಯದ್ದು. ನಾನು ಕೂಡ ದರ್ಶನ್ ಅಭಿಮಾನಿ ಎಂದಿದ್ದಾರೆ. ಆಟೋದಲ್ಲಿ ಪುನೀತ್ ರಾಜ್ಕುಮಾರ್, ಶಂಕರ್ನಾಗ್ ಅವರಂಥ ಅಗಲಿದ ನಾಯಕರ ಹೆಸರು ಇಡಲಾಗಿದೆ. ಅವರ ಫೋಟೋ ಹಾಕಲಾಗಿದೆ. ಅಗಲಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಅವರ ಹೆಸರು ಇಡಲಾಗಿದೆ ಎಂದಿದ್ದಾರೆ ನಟಿ. ಕನ್ನಡದ ತೇರು ಎನ್ನುವ ಹೆಸರು ಆಟೋ ಹಿಂದೆ ಇದೆ. ಅದು ದರ್ಶನ್ ಅವರು ಹೇಳಿರುವ ಟೈಟಲ್ ಎನ್ನುವ ಖುಷಿ ಇದೆ ಎಂದಿದ್ದಾರೆ.
ಸೀರಿಯಲ್ ಕುರಿತು
ಇನ್ನು ಸೀರಿಯಲ್ ಕುರಿತು ಹೇಳುವುದಾದರೆ, ಧೃತಿ ಕ್ರಿಯೇಷನ್ಸ್ ಬ್ಯಾನರಡಿಯಲ್ಲಿ ದಿಲೀಪ್ ರಾಜ್, ಶ್ರೀ ವಿದ್ಯಾ ನಿರ್ಮಿಸುತ್ತಿದ್ದು, ಶಿವು ನಿರ್ದೇಶಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

