- Home
- Life
- Relationship
- Kannada Serials: ಗಂಡನ ಸಹಾಯವಿಲ್ಲದೇ ಹೆಂಡ್ತಿ ಬದುಕ್ತಾಳಾ ಅಥ್ವಾ ಅವಳಿಲ್ಲದೇ ಇವನಾ? 2 ಸೀರಿಯಲ್ಗಳಲ್ಲಿ ಭರ್ಜರಿ ಚಾಲೆಂಜ್
Kannada Serials: ಗಂಡನ ಸಹಾಯವಿಲ್ಲದೇ ಹೆಂಡ್ತಿ ಬದುಕ್ತಾಳಾ ಅಥ್ವಾ ಅವಳಿಲ್ಲದೇ ಇವನಾ? 2 ಸೀರಿಯಲ್ಗಳಲ್ಲಿ ಭರ್ಜರಿ ಚಾಲೆಂಜ್
ಸಂಸಾರದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರಲ್ಲಿ ಯಾರು ಹೆಚ್ಚು ಮುಖ್ಯ ಎಂಬ ಚರ್ಚೆ ಸಹಜ. 'ಕರ್ಣ' ಮತ್ತು 'ಲಕ್ಷ್ಮೀ ನಿವಾಸ' ಧಾರಾವಾಹಿಗಳ ಇತ್ತೀಚಿನ ಕಥಾಹಂದರವನ್ನು ಆಧರಿಸಿ, ಗಂಡನ ಅಹಂಕಾರ ಮತ್ತು ಹೆಂಡತಿಯ ಸ್ವಾಭಿಮಾನದ ನಡುವಿನ ಸಂಘರ್ಷವನ್ನು ಈ ಲೇಖನ ವಿಶ್ಲೇಷಿಸುತ್ತದೆ.

ಗಂಡ-ಹೆಂಡತಿ ಎರಡು ಕಣ್ಣುಗಳಂತೆ
ಸಂಸಾರ ಚೆನ್ನಾಗಿ ನಡೆಯಲು ಗಂಡ-ಹೆಂಡತಿ ಎರಡು ಕಣ್ಣುಗಳು ಇದ್ದಂತೆ. ಸಂಸಾರ ಎಂಬ ರಥದ ಎರಡು ಚಕ್ರಗಳಂತೆ. ಇವರಲ್ಲಿ ಒಬ್ಬರು ಸರಿಯಿಲ್ಲದಿದ್ದರೂ ಸಂಸಾರ ಎನ್ನುವ ನೌಕೆ ಅಲ್ಲಿಯೇ ಮುಳುಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದ್ದದ್ದೇ. ಒಂದು ವೇಳೆ ಒಬ್ಬರು ಸರಿ ಇಲ್ಲದಿದ್ದರೆ ಇನ್ನೊಬ್ಬರು ಅದೆಷ್ಟು ಸಹಿಸಿಕೊಂಡು ಹೋಗಬೇಕು, ಅದ್ಯಾವ ಪರಿಯಲ್ಲಿ ಹಿಂಸೆ ಅನುಭವಿಸಬೇಕು ಎನ್ನುವುದನ್ನು ಇದಾಗಲೇ ಹಲವು ಕುಟುಂಬಗಳಲ್ಲಿ ಗಂಡನೋ, ಹೆಂಡತಿಯೋ ಅನುಭವಿಸುತ್ತಿರುವುದು ಇದ್ದೇ ಇದೆ.
ಗಂಡೋ, ಹೆಣ್ಣೊ?
ಇದರ ಹೊರತಾಗಿಯೂ ಎಷ್ಟೋ ಸಂದರ್ಭಗಳಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಇಲ್ಲದೇ ಹೋದರೆ, ಸಂಸಾರವನ್ನು ನಿಭಾಯಿಸುವ ಶಕ್ತಿ ಯಾರಿಗಿದೆ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಪತಿಗೆ ಪತ್ನಿ ಮುಖ್ಯನೋ, ಪತ್ನಿಗೆ ಪತಿ ಮುಖ್ಯನೋ ಎನ್ನುವ ಪ್ರಶ್ನೆ ಆಗ್ಗಾಗ್ಗೆ ಚರ್ಚೆಯ ವಿಷಯವಾಗಿಯೇ ಇರುತ್ತದೆ. ಪ್ರತಿಯೊಬ್ಬರ ಮನೆಯಲ್ಲಿನ ಪರಿಸ್ಥಿತಿ ಒಂದೇ ರೀತಿ ಇರದೇ ಹೋದರೂ, ಸಾಮಾನ್ಯವಾಗಿ ಜನರಲ್ ಆಗಿ ವಿಷಯಕ್ಕೆ ಬಂದಾಗ ಅಥವಾ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ ಸಹಜವಾಗಿ ಬಹುತೇಕರು ಹೇಳುವುದು, ಪತಿ ಇಲ್ಲದೇ ಪತ್ನಿ ಬದುಕಬಲ್ಲಳು. ಒಂದು ವೇಳೆ ಆಕೆಗೆ ಹಣ ಬರದೇ ಹೋದರೂ, ಹೇಗಾದರೂ ಆಕೆ ದುಡಿದು ಸಂಸಾರ ನಿಭಾಯಿಸಬಲ್ಲಳು. ಆದರೆ ದಿನನಿತ್ಯದ ಪ್ರತಿಯೊಂದು ಕೆಲಸಕ್ಕೂ ಪತ್ನಿಯ ಮೇಲೆ ಡಿಪೆಂಡ್ ಆಗಿರೋ ಗಂಡ ಆಕೆಯಿಲ್ಲದೇ ಸಂಸಾರ ನಿಭಾಯಿಸುವುದು ಬಲು ಕಷ್ಟ ಎನ್ನೋದು. ಪತ್ನಿ ಇಲ್ಲದಿದ್ದರೂ ಮನೆಯಲ್ಲಿ ಅಮ್ಮನೋ, ತಂಗಿನೋ ಒಟ್ಟಿನಲ್ಲಿ ಒಬ್ಬ ಹೆಣ್ಣು ಇರಬೇಕು ಎನ್ನುವುದು.
ಅದೂ ಸತ್ಯ, ಇದೂ ಸತ್ಯ!
ಮೊದಲೇ ಹೇಳಿದಂತೆ ಒಂದೊಂದು ಮನೆಯ ಪರಿಸ್ಥಿತಿ ಒಂದೊಂದು ರೀತಿಯಾಗಿರುತ್ತದೆ. ನಮ್ಮದು ಪುರುಷ ಪ್ರಧಾನ ಸಮಾಜ ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ, ಹೆಣ್ಣು ಇರದೇ ಹೋದರೆ ಆ ಮನೆಯ ಸ್ಥಿತಿ ಹೇಗಿರುತ್ತದೆ ಎನ್ನುವುದು. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈಗ ಎರಡು ಸೀರಿಯಲ್ಗಳು. ಒಂದು ಕರ್ಣ ಸೀರಿಯಲ್ ಹಾಗೂ ಇನ್ನೊಂದು ಲಕ್ಷ್ಮೀ ನಿವಾಸ ಸೀರಿಯಲ್. ಸದ್ಯ ಎರಡೂ ಸೀರಿಯಲ್ಗಳಲ್ಲಿ ಭರ್ಜರಿ ಟ್ವಿಸ್ಟ್ ಬಂದಿದೆ. ಗಂಡಿನ ಸಹಾಯವಿಲ್ಲದೇ ಹೆಣ್ಣು ಬದುಕಬಲ್ಲಳೋ ಅಥವಾ ಹೆಣ್ಣಿಲ್ಲದೇ ಗಂಡು ಎನ್ನುವುದು ಇದೀಗ ಭಾರಿ ಚರ್ಚೆಯ ವಿಷಯವಾಗಿದೆ.
ಅವಿವಾಹಿತರ ಮಾತು
ಹೆಂಡ್ತಿ ಇಲ್ಲದಿದ್ದರೆ ಏನು, ಹೋಟೆಲ್ ಇಲ್ವಾ ಎಂದು ಕೇಳಬಹುದು. ಆದರೆ ಪ್ರತಿನಿತ್ಯವೂ ಹೋಟೆಲ್ನಲ್ಲಿ ಮೂರು ಹೊತ್ತು ತಿಂಡಿ, ಊಟ ಮಾಡುವವರ ಪಾಡು ಕೇಳಿದರೆ ಬಹುಶಃ ಇದಕ್ಕೆ ಉತ್ತರ ಸಿಗಬಹುದು. ಇನ್ನು ಅವಿವಾಹಿತರ ಮಾತು ಬೇರೆ. ಅವರು ಮೊದಲೇ ಯಾರ ಮೇಲೂ ಡಿಪೆಂಡ್ ಆಗದ ಕಾರಣ, ಅವರು ಎಲ್ಲವನ್ನೂ ನಿಭಾಯಿಸುವ ಶಕ್ತಿ ಹೊಂದಿರುತ್ತಾರೆ ಎನ್ನುವುದು ಬೇರೆಯ ಮಾತು.
ಕರ್ಣ ಸೀರಿಯಲ್ನಲ್ಲಿ ರಮೇಶ್ ಸ್ಥಿತಿ
ಇದಾಗಲೇ ಕರ್ಣ ಸೀರಿಯಲ್ನಲ್ಲಿ (Karna Serial) ರಮೇಶ್ ಸ್ಥಿತಿ ನೋಡುತ್ತಿದ್ದೀರಿ. ವಿಲನ್ ಸಹೋದರಿಯ ಮಾತು ಕೇಳಿ ಪತ್ನಿ ಮಾಲತಿಗೆ ಡಿವೋರ್ಸ್ಗೆ ಸಹಿ ಹಾಕಿರೋ ರಮೇಶ್, ಏನೂ ಮಾಡಿಕೊಳ್ಳಲು ಬರದೇ ಒದ್ದಾಡುತ್ತಿದ್ದಾನೆ. ಎಲ್ಲದ್ದಕ್ಕೂ ಪತ್ನಿಯ ಮೇಲೆ ಡಿಪೆಂಡ್ ಆಗಿದ್ದ ಆತ, ತಾನು ಪುರುಷ ಎನ್ನುವ ಅಹಂಕಾರದಿಂದ ದಿನೇ ದಿನೇ ಪತ್ನಿಗೆ ಟಾರ್ಚರ್ ಕೊಡುತ್ತಿದ್ದ. ಆದರೆ ಇದೀಗ ಅವನ ಇಗೋ ಅವನಿಗೆ ಮುಳುವಾಗಿದೆ. ಹೆಂಡ್ತಿ ಇಲ್ಲದೇ ಉಪವಾಸ ಬೀಳುವಂತಾಗಿದೆ. ಅಲ್ಲಿಗೆ ಗಂಡಿಗೆ ಅದರಲ್ಲಿಯೂ ಎಲ್ಲದ್ದಕ್ಕೂ ಹೆಂಡತಿ ಮೇಲೆ ಡಿಪೆಂಡ್ ಆಗಿರೋ ಗಂಡನಿಗೆ ಹೇಗೆ ಹೆಣ್ಣು ಮುಖ್ಯ ಎನ್ನುವುದು ಸಾಬೀತಾಗಿದೆ.
ಲಕ್ಷ್ಮೀ ನಿವಾಸ ಸೀರಿಯಲ್
ಇದೀಗ ಇನ್ನಷ್ಟು ಕುತೂಹಲ ಇರುವುದು ಲಕ್ಷ್ಮೀ ನಿವಾಸ ಸೀರಿಯಲ್ದ್ದು (Lakshmi Nivasa). ಇದರಲ್ಲಿ ಪತಿ ಜಯಂತ್ ಕ್ರೌರ್ಯ ಚಿನ್ನುಮರಿಗೆ ತಿಳಿದಿದೆ. ಸೈಕೋ ಪತಿಯಿಂದ ದೂರವಾಗುವ ಪ್ರಯತ್ನ ಮಾಡುತ್ತಿದ್ದಾಳೆ. ಕ್ರಿಮಿನಲ್ ಕೇಸ್ನಲ್ಲಿ ಜೈಲಿಗೆ ಹೋಗಿರೋ ಜಯಂತ್ ವಾಪಸ್ ಬಂದು ಪತ್ನಿಗೆ ಕ್ಷಮೆ ಕೋರಿದ್ದಾನೆ. ಆದರೆ, ಜಾಹ್ನವಿ ಆತನನ್ನು ಕ್ಷಮಿಸಲು ರೆಡಿ ಇಲ್ಲ. ಇನ್ನು ನಾವಿಬ್ಬರೂ ಬೇರೆ. ನಿಮ್ಮ ದಾರಿ ನಿಮಗೆ, ನನ್ನ ದಾರಿ ನನಗೆ ಎನ್ನುತ್ತಾಳೆ. ಆದರೆ ಗಂಡಿನ ಅಹಂಕಾರ ಎಲ್ಲಿ ಹೋಗತ್ತೆ ಹೇಳಿ. ನಾನು ಜಯಂತ್. ನಾನಿಲ್ಲದೇ ನೀವು ಹೇಗೆ ಬದುಕುತ್ತೀರಿ ಎಂದು ನೋಡುತ್ತೇನೆ ಎಂದು ಜಯಂತ್ ಪತ್ನಿಗೆ ಸವಾಲು ಎಸೆದಾಗ, ಅದನ್ನು ನಾನು ತೋರಿಸುತ್ತೇನೆ ಎಂದಿದ್ದಾಳೆ ಜಾಹ್ನವಿ. ಹಾಗಿದ್ದರೆ ಇಲ್ಲಿ ಗೆಲುವು ಗಂಡಿನ ಅಹಂಕಾರಕ್ಕೋ, ಹೆಣ್ಣಿನ ಚಾಲೆಂಜ್ಗೋ ಎನ್ನುವುದನ್ನು ಕಾದು ನೋಡಬೇಕಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

