ಕಾಶ್ಮೀರ ಪ್ರವಾಸಕ್ಕೆ ಬೇಕಿಲ್ಲ ಹೆಚ್ಚು ಸಮಯ, ಶೀಘ್ರದಲ್ಲೇ ದೆಹಲಿ-ಕಾಶ್ಮೀರ ವಂದೇ ಭಾರತ್ ರೈಲು!
ದೆಹಲಿ-ಕಾಶ್ಮೀರ ಸಂಪರ್ಕಿಸುವ ವಂದೇ ಭಾರತ್ ರೈಲು ಶೀಘ್ರದಲ್ಲೇ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ ವಿಶ್ವದ ಅತೀ ಎತ್ತರದ ರೈಲು ಸೇತುವೆ ಚೆನಾಬ್ ಮೂಲಕ ಈ ರೈಲು ಸಾಗಲಿದೆ. ಇದೀಗ ಕಾಶ್ಮೀರ ಪ್ರವಾಸಕ್ಕೆ ಹೆಚ್ಚಿನ ಸಮಯ ಬೇಕಿಲ್ಲ.

ರೈಲು ಪ್ರಯಾಣಿಕರು, ಕಾಶ್ಮೀರಕ್ಕೆ ಪ್ರವಾಸಕ್ಕೆ ಹೊರಟಿರುವ ಪ್ರವಾಸಿಗರಿಗೆ ಭಾರತೀಯ ರೈಲ್ವೇ ಗುಡ್ ನ್ಯೂಸ್ ನೀಡಿದೆ. ಇದೀಗ ದೆಹಲಿಯಿಂದ ಕಾಶ್ಮೀರ ಸಂಪರ್ಕಿಸುವ ಹೊಸ ವಂದೇ ಭಾರತ್ ರೈಲು ಶೀಘ್ರದಲ್ಲೇ ಆರಂಭಗೊಳ್ಳುತ್ತಿದೆ. ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ರವನೀತ್ ಸಿಂಗ್ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಲಿದ್ದಾರೆ. ಅತೀ ಕಡಿಮೆ ಸಮಯದಲ್ಲಿ ಅತ್ಯಂತ ಸುಂದರ ತಾಣಗಳ ಮೂಲಕ ಹಾದು ಹೋಗುವ ವಂದೇ ಭಾರತ್ ರೈಲು ಸೇವೆ ಆರಂಭಗೊಳ್ಳುತ್ತಿದೆ.
ನವದೆಹಲಿ-ಉದಮಪುರ್-ಶ್ರೀನಗರ-ಬಾರಮುಲ್ಲಾ ರೈಲ್ ಲಿಂಕ್(USBRL) 2025ರ ಜನವರಿಯಲ್ಲಿ ಅಂದರೆ ಇನ್ನೆರಡು ತಿಂಗಳಲ್ಲಿ ಚಾಲನೆ ಸಿಗಲಿದೆ. ದೆಹಲಿ-ಕಾಶ್ಮೀರ ವಂದೇ ಭಾರತ್ ರೈಲು ಒಂದು ಫಸ್ಟ್ ಎಸಿ ಕೋಚ್, ನಾಲ್ಕು 2 ಟೈರ್ ಎಸಿ ಕೋಚ್ ಹಾಗೂ ಹನ್ನೊಂದು 3 ಟೈಯರ್ ಎಸಿ ಕೋಚ್ ಸೇರಿದಂತೆ ಒಟ್ಟು 17 ಬೋಗಿಗಳ ರೈಲು ಇದಾಗಿದೆ.
ವಿಶೇಷ ಅಂದರೆ ಈ ರೈಲು ವಿಶ್ವದ ಅತೀ ಎತ್ತರದ ಹಾಗೂ ಅತ್ಯಂತ ಸೌಂದರ್ಯ ತಾಣವಾದ ಚೆನಾಬ್ ಸೇತುವೆ ಮೂಲಕ ಹಾದು ಹೋಗಲಿದೆ. ಒಟ್ಟು 272 ಕಿಲೋಮೀಟರ್ ದೂರದ USBRL ರೈಲು ಯೋಜನೆಯಲ್ಲಿ ಈಗಾಗಲೇ 255 ಕಿಲೋಮೀಟರ್ ರೈಲು ಮಾರ್ಗ ಪೂರ್ಣಗೊಂಡಿದೆ. ಇನ್ನುಳಿದ ಕಿಲೋಮೀಟರ್ ಡಿಸೆಂಬರ್ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದೆ.ಬಾಕಿ ಉಳಿದಿರುವ 17 ಕಿಲೋಮೀಟರ್ ದೂರದ ಕತ್ರಾ ಹಾಗೂ ರೆಸಾಯಿ ನಡುವಿನ ಮಾರ್ಗದ ಕಾಮಾಗಾರಿ ನಡೆಯುತ್ತಿದೆ. ಡಿಸೆಂಬರ್ 2ನೇ ವಾರದಿಂದ ಪ್ರಾಯೋಗಿಕ ರೈಲು ಆರಂಭಗೊಳ್ಳಲಿದೆ.
ಚಳಿಗಾಲದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಹಲವು ರಸ್ತೆ ಮಾರ್ಗಗಳು ಬಂದ್ ಆಗುತ್ತಿದೆ. ಇದರಿಂದ ಕಾಶ್ಮೀರ ಸಂಪರ್ಕ, ಸರಕು ಸಾಗಾಣೆ ಜೊತೆಗೆ ಪ್ರಮುಖವಾಗಿ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತಿದೆ. ಇದೀಗ ಅತೀ ಕಡಿಮೆ ಸಮಯದಲ್ಲಿ ದೆಹಲಿಯಿಂದ ಕಾಶ್ಮೀರ ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭಗೊಳ್ಳುತ್ತಿದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ರವನೀತ್ ಸಿಂಗ್ ಹೇಳಿದ್ದಾರೆ
ಈ ವಂದೇ ಭಾರತ್ ರೈಲು ಜಮ್ಮುವಿನಲ್ಲಿ ನಿಲುಗಡೆಯಾಗಲಿದೆ. ಇಷ್ಟೆ ಅಲ್ಲ ಮಾತಾ ವೈಷ್ಣೋ ದೇವಿ ಮಂದಿರದ ಬಳಿ ಇರುವ ರೈಲು ನಿಲ್ದಾಣದಲ್ಲೂ ನಿಲುಗಡೆಯಾಗಲಿದೆ. ಇದರಿಂದ ದೇಗುಲ ದರ್ಶನಕ್ಕೆ ತೆರಳುವ ಭಕ್ತರಿಗೂ ಅನುಕೂಲವಾಗಲಿದೆ. ದೆಹಲಿಯಿಂದ ಕಾಶ್ಮೀರ ಬೆಲೆ 1,500 ರೂಪಾಯಿಯಿಂದ 2100 ರೂಪಾಯಿ ನಿಗದಿಪಡಿಸಲಾಗುತ್ತದೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಜನತೆಗೆ, ಭಾರತೀಯರಿಗೆ ಎನ್ಡಿಎ ಸರ್ಕಾರದ ಕೊಡುಗೆ ಇದು. ವಂದೇ ಭಾರತ್ ರೈಲು ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯ,ವ್ಯಾಪಾರ ವಹಿವಾಟು, ಸರಕು ಸಾಗಾಣೆ ಸೇರಿದಂತೆ ಎಲ್ಲಾ ರೀತಿಯಲ್ಲೂ ನೆರವಾಗಲಿದೆ. ಇದೇ ವೇಳೆ ರೈಲು ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ ಎಂದ ರವನೀತ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ