ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನೀರ್ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ
ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪಾಕಿಸ್ತಾನವನ್ನು ‘ವಿಫಲ ರಾಷ್ಟ್ರ’ ಎಂದು ಕರೆದಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರ ಹೇಳಿಕೆಗೆ ಪ್ರತಿಕ್ರಿಯಿಸಿದ ಓವೈಸಿ, ಪಾಕಿಸ್ತಾನದಲ್ಲಿ ಅಸಂಬದ್ಧವಾಗಿ ಮಾತನಾಡುವವರಿಗೆ ಇಸ್ಲಾಂ ಗೊತ್ತಿಲ್ಲ ಎಂದಿದ್ದಾರೆ.

ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಮತ್ತೆ ನೆರೆಯ ರಾಷ್ಟ್ರದ ವಿರುದ್ಧ ಕಿಡಿ ಕಾರಿದ್ದು, ‘ಪಾಕಿಸ್ತಾನದಲ್ಲಿ ಅಸಂಬದ್ಧವಾಗಿ ಮಾತನಾಡುವವರಿಗೆ ಇಸ್ಲಾಂ ಗೊತ್ತಿಲ್ಲ. ಪಾಕ್ ಒಂದು ವಿಫಲ ದೇಶ’ ಎಂದಿದ್ದಾರೆ.
ಇತ್ತೀಚೆಗೆ ‘ಕಾಶ್ಮೀರವು ನಮ್ಮ ಕಂಠನಾಳ. ಅದನ್ನು ಪಡೆದೇ ತೀರುತ್ತೇವೆ’ ಎಂಬ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನೀರ್ ಅವರ ಹೇಳಿಕೆಗೆ ಹಾರಿಹಾಯ್ದ ಒವೈಸಿ, ‘ಪಾಕಿಸ್ತಾನದಲ್ಲಿ ಅಸಂಬದ್ಧವಾಗಿ ಮಾತನಾಡುವವರಿಗೆ ಇಸ್ಲಾಂ ಗೊತ್ತಿಲ್ಲ. ನೀವು ಜನರನ್ನು ಮಹಾಜಿರ್, ಪಠಾಣ್ಗಳು ಎಂದು ಕರೆಯುವ ದೇಶದಲ್ಲಿದ್ದೀರಿ ಎಂದು ಅಸಾದುದ್ದೀನ್ ಓವೈಸಿ ಎಂದು ಹೇಳಿದ್ದಾರೆ.
ನಿಮ್ಮ ದೇಶವು ತುಂಬಾ ಬಡವಾಗಿದೆ. ಜನರು ಚಿಂತಿತರಾಗಿದ್ದಾರೆ. ನಿಮಗೆ ಅಪ್ಘಾನಿಸ್ತಾನದೊಂದಿಗೆ ಭಿನ್ನಾಭಿಪ್ರಾಯಗಳಿವೆ. ಇರಾನ್ನೊಂದಿಗೆ ಗಡಿ ವಿವಾದವಿದೆ. ಹೀಗಾಗಿ ಪಾಕಿಸ್ತಾನ ವಿಫಲ ರಾಷ್ಟ್ರವಾಗಿದೆ’ ಎಂದು ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದರು.
ಸೂಕ್ತ ಉತ್ತರ ನೀಡಲಾಗುವುದು
ಭಾರತದ ಮೇಲೆ ಕೆಟ್ಟ ದೃಷ್ಟಿ ಬೀರುವವರಿಗೆ ಸೂಕ್ತ ಉತ್ತರ ನೀಡುವುದು ಮತ್ತು ಸಶಸ್ತ್ರ ಪಡೆಗಳೊಂದಿಗೆ ಕೆಲಸ ಮಾಡುವುದು ತಮ್ಮ ಜವಾಬ್ದಾರಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸಮಾರಂಭವೊದರಲ್ಲಿ ಮಾತನಾಡಿದ ಅವರು, ‘ರಕ್ಷಣಾ ಸಚಿವನಾಗಿ, ದೇಶದ ಗಡಿಗಳನ್ನು ರಕ್ಷಿಸುವುದು ಮತ್ತು ನಮ್ಮ ದೇಶದ ಮೇಲೆ ಕೆಟ್ಟ ದೃಷ್ಟಿ ಬೀರುವವರಿಗೆ ಸೂಕ್ತ ಉತ್ತರ ನೀಡುವುದು ನನ್ನ ಕರ್ತವ್ಯ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಇದು ಖಂಡಿತವಾಗಿಯೂ ಸಂಭವಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ’ ಎಂದರು. ಈ ಮೂಲಕ ಶತ್ರುದೇಶ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.