ಶ್ರಾವಣದಲ್ಲಿ ಕೆಲವರು ಈರುಳ್ಳಿ-ಬೆಳ್ಳುಳ್ಳಿ ತಿನ್ನಲ್ಲ ಯಾಕೆ? ಧರ್ಮ & ವಿಜ್ಞಾನದ ಉತ್ತರ
ಹಬ್ಬ, ಉಪವಾಸದ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಅವುಗಳ ತಾಮಸಿಕ ಗುಣಗಳಿಂದಾಗಿ ಧಾರ್ಮಿಕವಾಗಿ ದೂರವಿಡಲಾಗುತ್ತದೆ. ಆಯುರ್ವೇದವು ಇವುಗಳ ಉತ್ತೇಜಕ ಸ್ವಭಾವವನ್ನು ಉಲ್ಲೇಖಿಸಿದರೆ, ವಿಜ್ಞಾನವು ಇವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ.
- FB
- TW
- Linkdin

ಈರುಳ್ಳಿ, ಬೆಳ್ಳುಳ್ಳಿ
ನವರಾತ್ರಿ, ಏಕಾದಶಿ, ಶಿವರಾತ್ರಿ, ಸೋಮವಾರದ ವ್ರತ. ಹೀಗೆ ಹಬ್ಬ, ಉಪವಾಸ ಅಂದಾಗ ನಮ್ಮ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಆಹಾರದಿಂದ ದೂರವಿಡುತ್ತಾರೆ. ಅದರಲ್ಲಿಯೂ ಕೆಲವರು ಶ್ರಾವಣದ ಒಂದು ತಿಂಗಳು ಈ ಎರಡರಿಂದ ದೂರವಿರುತ್ತಾರೆ. ಆದ್ರೆ ಯಾಕೆ ಹೀಗೆ ಮಾಡ್ತಾರೆ ಅಂತ ಎಂದಾದ್ರೂ ಯೋಚಿಸಿದ್ದೀರಾ? ಇದರ ಹಿಂದೆ ಬರೀ ಧಾರ್ಮಿಕ ನಂಬಿಕೆನಾ ಅಥವಾ ಆಯುರ್ವೇದ ಮತ್ತು ನಮ್ಮ ಜೀವನಶೈಲಿಗೆ ಸಂಬಂಧಿಸಿದ ಬೇರೆ ಕಾರಣ ಇದೆಯಾ ಎಂಬುದನ್ನು ನೊಡೋಣ ಬನ್ನಿ
ಹಿಂದೂ ಧರ್ಮದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಸೇವನೆಗಿದ್ಯಾ ನಿಷೇಧ?
ಹಿಂದೂ ಧರ್ಮದಲ್ಲಿ ಉಪವಾಸ ಅಂದ್ರೆ ಬರೀ ಹಸಿವಿನಿಂದ ಇರೋದಲ್ಲ. ಮನಸ್ಸು, ಮಾತು ಮತ್ತು ಇಂದ್ರಿಯಗಳ ಮೇಲೆ ಹಿಡಿತ ಸಾಧಿಸೋದು ಅಂತ ನಂಬಲಾಗುತ್ತದೆ. ಅದಕ್ಕಾಗಿಯೇ ಉಪವಾಸದ ಸಮಯದಲ್ಲಿ ಸಾತ್ವಿಕ ಆಹಾರ ಸೇವನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.
ಸಂಪ್ರದಾಯಗಳ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಮಸಿಕ ಅಥವಾ ಕೆಲವು ಕಡೆ ರಾಜಸಿಕ ಗುಣದ ಆಹಾರ ಅಂತ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ವ್ರತ, ಪೂಜೆಗಳ ಸಮಯದಲ್ಲಿ ಇವುಗಳನ್ನು ಬಳಸಲ್ಲ.
ಸಾಧು-ಸಂತರು ಯಾಕೆ ಈರುಳ್ಳಿ-ಬೆಳ್ಳುಳ್ಳಿ ತಿನ್ನಲ್ಲ?
ಸಾಧು-ಸಂತರ ಜೀವನ ಸಂಪೂರ್ಣವಾಗಿ ಧರ್ಮ ಮತ್ತು ಆಧ್ಯಾತ್ಮಕ್ಕೆ ಮೀಸಲಾಗಿರುತ್ತದೆ. ಧ್ಯಾನ, ಜಪ ಮಾಡೋದು ಅವರ ದಿನಚರಿಯ ಪ್ರಮುಖ ಭಾಗ. ಈರುಳ್ಳಿ-ಬೆಳ್ಳುಳ್ಳಿ ತಿಂದರೆ ಮನಸ್ಸಿನಲ್ಲಿ ಚಂಚಲತೆ ಮತ್ತು ಉದ್ರೇಕ ಹೆಚ್ಚಾಗಬಹುದು ಅನ್ನೋದು ಒಂದು ನಂಬಿಕೆ. ಹಾಗಾಗಿ ಮನಸ್ಸನ್ನು ಶಾಂತವಾಗಿ ಮತ್ತು ಸ್ಥಿರವಾಗಿಡಲು ಸಹಾಯ ಮಾಡುವ ಆಹಾರವನ್ನೇ ಸಾಧು-ಸಂತರು ಇಷ್ಟಪಡ್ತಾರೆ.
ಹಾಗಾದ್ರೆ ಸಾತ್ವಿಕ ಆಹಾರ ಅಂದ್ರೆ ಏನು?
ಯಾವ ಆಹಾರ ಮನಸ್ಸನ್ನು ಶಾಂತವಾಗಿ, ಹಗುರವಾಗಿ ಮತ್ತು ಏಕಾಗ್ರತೆಯಿಂದ ಇಡಲು ಸಹಾಯ ಮಾಡುತ್ತೋ, ಅದನ್ನೇ ಸಾತ್ವಿಕ ಆಹಾರ ಅಂತಾರೆ. ಉಪವಾಸದ ಸಮಯದಲ್ಲಿ ಸಾಮಾನ್ಯವಾಗಿ ಜನರು ಯಾವ ಆಹಾರ ಹೆಚ್ಚು ಸೇವಿಸುತ್ತಾರೆ ಎಂಬುದರ ಪಟ್ಟಿ ಕೆಳಗೆ ನೀಡಲಾಗಿದೆ.
ಹಣ್ಣುಗಳು, ಹಾಲು ಮತ್ತು ಮೊಸರು, ಮಖಾನಾ (ತಾವರೆಬೀಜ), ಸಾಬುದಾನಾ, ಡ್ರೈ ಫ್ರೂಟ್ಸ್, ರಾಗಿ ಗಂಜಿ ಸೇರದಿಂತೆ ಉಪ್ಪು-ಹುಳಿ-ಖಾರ ಕಡಿಮೆ ಹೊಂದಿರುವ ಆಹಾರಗಳನ್ನು ಸೇವಿಸಲಾಗುತ್ತದೆ.
ಆಯುರ್ವೇದ ಏನು ಹೇಳುತ್ತೆ?
ಆಯುರ್ವೇದದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಅನೇಕ ಔಷಧೀಯ ಗುಣಗಳನ್ನು ವಿವರಿಸಲಾಗಿದೆ. ಜೀರ್ಣಕ್ರಿಯೆ, ಹೃದಯ ಸಂಬಂಧಿ ಸಮಸ್ಯೆಗಳಿಗೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಇವು ಬಹಳ ಒಳ್ಳೆಯದು ಅಂತ ಆಯುರ್ವೇದ ಹೇಳುತ್ತೆ. ಆದರೆ, ಇವುಗಳ ಪರಿಣಾಮ ದೇಹ ಮತ್ತು ಮನಸ್ಸಿನ ಮೇಲೆ ಉತ್ತೇಜಕವಾಗಿರಬಹುದು (Stimulating) ಅಂತಾನೂ ಹೇಳುತ್ತೆ.
ಇದೇ ಕಾರಣಕ್ಕೆ ಕೆಲವು ಆಧ್ಯಾತ್ಮಿಕ ಸಾಧನೆ ಮತ್ತು ಉಪವಾಸದ ಸಮಯದಲ್ಲಿ ಇವುಗಳಿಂದ ದೂರವಿರಲು ಸಲಹೆ ನೀಡಲಾಗುತ್ತೆ. ಅಂದರೆ, ಆಯುರ್ವೇದ ಇವುಗಳನ್ನು ಕೆಟ್ಟದ್ದು ಅಂತ ಹೇಳಲ್ಲ, ಬದಲಾಗಿ ವ್ಯಕ್ತಿಯ ಅಗತ್ಯ ಮತ್ತು ಪರಿಸ್ಥಿತಿಗೆ ತಕ್ಕಂತೆ ಬಳಸಬೇಕು ಅಂತ ಹೇಳುತ್ತೆ.
ವಿಜ್ಞಾನದ ದೃಷ್ಟಿಕೋನ ಏನು?
ವಿಜ್ಞಾನದ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿ ಪೋಷಕಾಂಶಗಳಿಂದ ತುಂಬಿರುವ ಆಹಾರ ಪದಾರ್ಥಗಳು. ಇವುಗಳು ಆ್ಯಂಟಿಆಕ್ಸಿಡೆಂಟ್ಗಳು, ಸಲ್ಫರ್ ಸಂಯುಕ್ತಗಳು (Sulfur Compounds), ವಿಟಮಿನ್ ಸಿ, ಫೈಬರ್ ಸೇರಿದಂತೆ ಹಲವು ಆರೋಗ್ಯಕರ ಗುಣಗಳನ್ನು ಹೊಂದಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಇವುಗಳನ್ನು ಸಮತೋಲಿತ ಆಹಾರದ ಭಾಗ ಅಂತ ಪರಿಗಣಿಸುತ್ತೆ. ಹಾಗಾಗಿ, ಉಪವಾಸದಲ್ಲಿ ಇವುಗಳನ್ನು ತಿನ್ನದಿರಲು ಮುಖ್ಯ ಕಾರಣ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವೇ ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

