ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ… ರೋಗ ಬಾರದಂತೆ ತಡೆಯಲು ಈ ಆಹಾರ ಸೇವಿಸಿ
ಕರ್ನಾಟಕದಲ್ಲಿ ಮಾನ್ಸೂನ್ಗೂ ಮೊದಲೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ, 1,100 ಕ್ಕೂ ಹೆಚ್ಚು ಸೋಂಕುಗಳು ವರದಿಯಾಗಿವೆ, ಇವುಗಳಲ್ಲಿ ಪ್ರಮುಖವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಡೆಂಗ್ಯೂ ಬಾರದಂತೆ ತಡೆಗಟ್ಟಲು ನೀವು ಈ ಆಹಾರಗಳನ್ನು ಸೇವಿಸಿ.

ಮಳೆಗಾಲ ಆರಂಭವಾಗುವ ಮೊದಲೇ ಕರ್ನಾಟಕದಾದ್ಯಂತ ಡೆಂಗ್ಯೂ ಪ್ರಕರಣಗಳು (dengue season) ಸ್ಥಿರವಾಗಿ ಹೆಚ್ಚುತ್ತಿವೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಈ ವರ್ಷ ಜನವರಿಯಿಂದ ಏಪ್ರಿಲ್ 30 ರವರೆಗೆ ಕರ್ನಾಟಕದಲ್ಲಿ 1,186 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಆರು ರೋಗಿಗಳಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿತ್ತು. ಹೆಚ್ಚು ಕಳವಳಕಾರಿ ಸಂಗತಿಯೆಂದರೆ, ಈ ಪ್ರಕರಣಗಳಲ್ಲಿ 51 ಒಂದು ವರ್ಷದೊಳಗಿನ ಶಿಶುಗಳು ಮತ್ತು 553 18 ವರ್ಷದೊಳಗಿನ ಮಕ್ಕಳಿಗೆ ಡೆಂಗ್ಯೂ ಆಗಿದೆ.
ಡೆಂಗ್ಯೂ ಜ್ವರದ ಲಕ್ಷಣಗಳು ಯಾವುವು?
ಡೆಂಗ್ಯೂ ಜ್ವರದ ಈ ಕೆಳಗಿನ ಸಾಮಾನ್ಯ ಲಕ್ಷಣಗಳು ಕಂಡುಬಂದರೆ ಜನರು ಜಾಗರೂಕರಾಗಿರಲು ಮತ್ತು ವೈದ್ಯಕೀಯ ಸಹಾಯವನ್ನು ಪಡೆಯಬೇಕೆಂದು ವೈದ್ಯರು ಹೇಳಿದ್ದಾರೆ:
ಹಠಾತ್ ತೀವ್ರ ಜ್ವರ
ತೀವ್ರ ತಲೆನೋವು, ವಿಶೇಷವಾಗಿ ಕಣ್ಣುಗಳ ಹಿಂದೆ
ಕೀಲು ಮತ್ತು ಸ್ನಾಯು ನೋವು
ಚರ್ಮದ ದದ್ದು (skin allergy)
ವಾಕರಿಕೆ ಮತ್ತು ವಾಂತಿ
ಆಯಾಸ ಮತ್ತು ದೌರ್ಬಲ್ಯ
ಹೊಟ್ಟೆಯಲ್ಲಿ ನೋವು
ಒಸಡುಗಳು ಅಥವಾ ಮೂಗಿನಿಂದ ರಕ್ತಸ್ರಾವ (ತೀವ್ರತರವಾದ ಸಂದರ್ಭಗಳಲ್ಲಿ)
ಕೆಲವು ಸಂದರ್ಭಗಳಲ್ಲಿ, ಲಕ್ಷಣಗಳು ಉಲ್ಬಣಗೊಂಡು ಡೆಂಗ್ಯೂ ಹೆಮರಾಜಿಕ್ ಜ್ವರ ಅಥವಾ ಡೆಂಗ್ಯೂ ಶಾಕ್ ಸಿಂಡ್ರೋಮ್ಗೆ ಕಾರಣವಾಗಬಹುದು, ಇವು ಗಂಭೀರ ಸ್ಥಿತಿಗಳಾಗಿದ್ದು ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸಿ
ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದರ ಜೊತೆಗೆ, ರೋಗನಿರೋಧಕ ಶಕ್ತಿಯನ್ನು (immunity power) ಬಲಪಡಿಸುವ ಆಹಾರವನ್ನು ಸೇವಿಸಲು ತಜ್ಞರು ಜನರಿಗೆ ಸಲಹೆ ನೀಡುತ್ತಾರೆ. ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಯು ದೇಹವು ಡೆಂಗ್ಯೂನಂತಹ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಿಗೆ ಇದು ಉತ್ತಮ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಆಹಾರಗಳು ಇಲ್ಲಿವೆ:
ಸಿಟ್ರಸ್ ಹಣ್ಣುಗಳು (Citrus Fruits): ಕಿತ್ತಳೆ, ನಿಂಬೆಹಣ್ಣು ಮತ್ತು ಮೂಸಂಬಿ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ಸೋಂಕುಗಳ ವಿರುದ್ಧ ಹೋರಾಡಲು ಬಿಳಿ ರಕ್ತ ಕಣಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಪಪ್ಪಾಯಿ (Papaya): ಈ ಹಣ್ಣು ಪ್ಲೇಟ್ಲೆಟ್ ಎಣಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತೆ ಮತ್ತು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ, ಸಿ ಮತ್ತು ಇ ಈ ಹಣ್ಣಿನಲ್ಲಿ ಸಮೃದ್ಧವಾಗಿದೆ.
ಶುಂಠಿ: ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಗಂಟಲು ನೋವನ್ನು ನಿವಾರಿಸುತ್ತೆ ಮತ್ತು ದೇಹಕ್ಕೆ ನೈಸರ್ಗಿಕವಾಗಿ ರಕ್ಷಣೆಯನ್ನು ನೀಡುತ್ತೆ.
ಬೆಳ್ಳುಳ್ಳಿ: ಬೆಳ್ಳುಳ್ಳಿ ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ (anti bacteria) ಪರಿಣಾಮಗಳನ್ನು ಹೊಂದಿದ್ದು ಅದು ಸೋಂಕುಗಳ ವಿರುದ್ಧ ಹೋರಾಡಲು ಉಪಯುಕ್ತವಾಗಿದೆ.
ಡ್ರೈ ಫ್ರುಟ್ಸ್ ಮತ್ತು ನಟ್ಸ್ : ಬಾದಾಮಿ ಮತ್ತು ಸೂರ್ಯಕಾಂತಿ ಬೀಜಗಳು ವಿಟಮಿನ್ ಇ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲಗಳಾಗಿವೆ.
ಮೊಸರು : ಇವುಗಳು ಕರುಳಿನ ಆರೋಗ್ಯವನ್ನು ಸುಧಾರಿಸುವ ಪ್ರೋಬಯಾಟಿಕ್ಗಳನ್ನು ಹೊಂದಿರುತ್ತವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅರಿಶಿನ: ಸಾಮಾನ್ಯ ಅಡುಗೆಮನೆಯ ಮಸಾಲೆ ಪದಾರ್ಥವಾದ ಅರಿಶಿನವು ರೋಗನಿರೋಧಕ ಆರೋಗ್ಯವನ್ನು ಬೆಂಬಲಿಸುವ ಬಲವಾದ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ.
ಹಸಿರು ತರಿಕಾರಿ : ಪಾಲಕ್ ಮತ್ತು ನುಗ್ಗೆಸೊಪ್ಪಿನಂತಹ ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತೆ.