ಆಹಾರದಲ್ಲಿ ಸಿಕ್ಕಿತು ಕೀಟ, ಗ್ರಾಹಕನಿಗೆ 5 ಭಾನುವಾರ 10 ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶ
ಬಿರಿಯಾನಿಯಲ್ಲಿ ಸತ್ತ ಕೀಟ ಸಿಕ್ಕಿತ್ತು. ರೊಚ್ಚಿಗೆದ್ದ ಗ್ರಾಹಕ ಕೋರ್ಟ್ ಮೆಟ್ಟಿಲೇರಿದ್ದ. ಪರಿಣಾಮ ಗ್ರಾಹಕನಿಗೆ ಐದು ಭಾನುವಾರ ಒಟ್ಟು 10 ಹೈದರಾಬಾದಿ ಚಿಕನ್ ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶಿಸಿದೆ.

ಹೈದರಾಬಾದಿ ಬಿರಿಯಾನಿ ಉಚಿತ
ಆಹಾರದಲ್ಲಿ ಹುಳ ಸಿಕ್ಕ ಘಟನೆಗಳು ಭಾರತದಲ್ಲಿ ಹೊಸದೇನಲ್ಲ. ಆದರೆ ಈ ಬಾರಿ ಕೋರ್ಟ್ ನೀಡಿದ ಆದೇಶ ಎಲ್ಲರ ಗಮನಸೆಳೆದಿದೆ. ಇಬ್ಬರು ಗೆಳೆಯರು ಹೈದರಾಬಾದಿ ಚಿಕನ್ ಬಿರಿಯಾನಿ ತಿನ್ನುವಾಗ ಸತ್ತ ಕೀಟವೊಂದು ಪತ್ತೆಯಾಗಿದೆ. ರೊಚ್ಚಿಗೆದ್ದು ಕೋರ್ಟ್ ಮೆಟ್ಟಿಲೇರಿದ್ದ ಇಬ್ಬರು ಗೆಳೆಯರ ಪರ ಕೋರ್ಟ್ ಆದೇಶ ನೀಡಿದೆ. ರೆಸ್ಟೋರೆಂಟ್ ಇದೀಗ ಇಬ್ಬರಿಗೆ ಪ್ರತಿ ಭಾನುವಾರ 2 ಹೈದರಾಬಾದಿ ಬಿರಿಯಾನಿಯಂತೆ ಐದು ಭಾನುವಾರ ಒಟ್ಟು 10 ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ರೆಸ್ಟೋರೆಂಟ್ಗೆ ಸೂಚಿಸಿದೆ.
ಬಿರಿಯಾನಿಯಲ್ಲಿ ಸತ್ತ ನೊಣ ಪತ್ತೆ
ಪುದುಚೇರಿ ಗ್ರಾಹಕ ಕೋರ್ಟ್ ಈ ಆದೇಶ ನೀಡಿದೆ. ಪುದುಚೇರಿಯ ಸುಂದರ ಕುಮಾರ್ ಮಣಿಕಂದನ್ ಹಾಗೂ ಆತನ ಸ್ನೇಹಿತ ಮೊಹಮ್ಮದ್ ನಿಯಾಸುದ್ದೀನ್ ಪುದುಚೇರಿಯ ಬಿರಿಯಾನಿ ಆ್ಯಂಡ್ ಕೋ ರೆಸ್ಟೋರೆಂಟ್ಗೆ ಬಿರಿಯಾನಿ ತಿನ್ನಲು ತೆರಳಿದ್ದಾರೆ. ಊಟದ ಪ್ಲೇಟ್ನಲ್ಲಿ ಸತ್ತ ನೊಣ ಪತ್ತೆಯಾಗಿತ್ತು. ಬಿರಿಯಾನಿಯಲ್ಲಿ ಸತ್ತ ನೊಣ ಪತ್ತೆಯಾಗಿ ಇಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಮುಖ ಸಾಕ್ಷ್ಯದಿಂದ ರೆಸ್ಟೋರೆಂಟ್ಗೆ ಸಂಕಷ್ಟ
ಫೋಟೋ, ವಿಡಿಯೋ ರೆಕಾರ್ಡ್ ಮಾಡಿ ಹೊಟೆಲ್ ತರಾಟೆಗೆ ತೆಗೆದುಕೊಂಡಿದ್ದರು. ಇತ್ತ ಗೂಗಲ್ ರಿವ್ಯೂವ್ನಲ್ಲಿ ಫೋಟೋ ಪೋಸ್ಟ್ ಮಾಡಿ ಕೆಟ್ಟ ರಿವ್ಯೂವ್ ಹಾಕಿದ್ದರು. ಇತ್ತ ರೆಸ್ಟೋರೆಂಟ್ ತಪ್ಪು ಒಪ್ಪಿಕೊಂಡು ಬಹಿರಂಗ ಕ್ಷಮೆಯಾಚಿಸಿತ್ತು. ಆದರೆ ಇಷ್ಟಕ್ಕೆ ಸುಮ್ಮನಾಗದ ಇಬ್ಬರು ಗ್ರಾಹಕರ ಕೋರ್ಟ್ ಮೆಟ್ಟಿಲೇರಿದ್ದರು. ಗೂಗಲ್ ರಿವ್ಯೂವ್ನಲ್ಲಿ ರೆಸ್ಟೋರೆಂಟ್ ಬಹಿರಂಗ ಕ್ಷಮೆಯಾಚನೆಯನ್ನೇ ಪ್ರಮುಖ ಸಾಕ್ಷ್ಯವಾಗಿ ಮುಂದಿಟ್ಟಿದ್ದರು.
ದುಬಾರಿ ದಂಡ
ವಿಚಾರಣೆ ನಡೆಸಿದ ಕೋರ್ಟ್ ಇಬ್ಬರು ಸ್ನೇಹಿತರ ಪರವಾಗಿ ತೀರ್ಪು ನೀಡಿದೆ. ಶುಚಿ ಇಲ್ಲದ, ಆರೋಗ್ಯಕ್ಕೆ ಹಾನಿಕಾರಕ ಆಹಾರ ಹಾಗೂ ಮಾನಿಸಿಕ ಹಿಂಸೆ ನೀಡಿದ ಕಾರಣ ರೆಸ್ಟೋರೆಂಟ್ಗೆ 10 ಸಾವಿರ ರೂಪಾಯಿ ದಂಡ, ಕಾನೂನು ಹೋರಾಟದ ವೆಚ್ಚ 3000 ರೂಪಾಯಿ ಒಟ್ಟು 13 ಸಾವಿರ ರೂಪಾಯಿ ದಂಡ ವಿಧಿಸಿದೆ.
ತಾಜಾ ಹಾಗು ಸುರಕ್ಷತಾ ಮಾನದಂಡಗಳ 10 ಬಿರಿಯಾನಿ ಉಚಿತ
ದುಬಾರಿ ದಂಡದ ಜೊತೆಗೆ ಇಬ್ಬರು ಸ್ನೇಹಿತರಿಗೆ ಪ್ರತಿ ಭಾನುವಾರ 2 ಹೈದರಾಬಾದ್ ಚಿಕನ್ ಬಿರಿಯಾನಿ ಉಚಿತವಾಗಿ ನೀಡಬೇಕು. ಈ ಬಿರಿಯಾನಿ ತಾಜಾ ಆಗಿರಬೇಕು. ಎಲ್ಲಾ ಸುರಕ್ಷತಾ ಮಾನದಂಡಕ್ಕೆ ಒಳಪಟ್ಟಿರಬೇಕು. ಹೀಗೆ ಒಟ್ಟು 5 ಭಾನುವಾರ ಇಬ್ಬರಿಗೆ 10 ಹೈದರಾಬಾದಿ ಚಿಕನ್ ಬಿರಿಯಾನಿ ನೀಡಬೇಕು ಎಂದು ಕೋರ್ಟ್ ಹೇಳಿದೆ.
ಗ್ರಾಹಕರ ವೇದಿಕೆ ಕೋರ್ಟ್ನಿಂದ ಮಹತ್ವದ ತೀರ್ಪು
ಗ್ರಾಹಕರ ರಕ್ಷಣಾ ಕಾಯ್ದೆ 2019 ರ ಅಡಿಯಲ್ಲಿ ಕಲುಷಿತ ಹಾಗೂ ಅಶುದ್ಧ ಆಹಾರವನ್ನು ನೀಡುವುದು ಅತ್ಯಂತ ಗಂಭೀರ ಎಂದು ಪರಿಗಣಿಸಲಾಗುತ್ತದೆ. ಪುದುಚೇರಿ ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗ ಅಧ್ಯಕ್ಷ ಮುತ್ತುವೇಲ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

