ಬಾದಾಮಿ ಜಾತ್ರೆಯಲ್ಲಿ 30 ದಿನದಲ್ಲಿ 1 ಕೋಟಿ ಸಿಕ್ತು: ರಾಜು ತಾಳಿಕೋಟಿ ಪುತ್ರ ಭರತ್
ಹಿರಿಯ ಕಲಾವಿದ ರಾಜು ತಾಳಿಕೋಟಿ ಅವರ ಪುತ್ರ ಭರತ್, ತಮ್ಮ ನಾಟಕ ಕಂಪನಿ ಬಾದಾಮಿ ಜಾತ್ರೆಯಲ್ಲಿ 30 ದಿನಗಳಲ್ಲಿ 1 ಕೋಟಿ ರೂ.ಗೂ ಹೆಚ್ಚು ಗಳಿಸಿದೆ ಎಂದು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ಸಿನಿಮಾ-ಸೀರಿಯಲ್ಗಳಿಗಿಂತ ರಂಗಭೂಮಿಯಲ್ಲಿ ಹೆಚ್ಚು ಸಂಭಾವನೆ ಇದೆ ಎಂದಿದ್ದಾರೆ.

ರಾಜು ತಾಳಿಕೋಟಿ ಅವರ ಪುತ್ರ ಭರತ್ ಸಂದರ್ಶನ
ರಂಗಭೂಮಿಯ ಹಿರಿಯ ಕಲಾವಿದ ರಾಜು ತಾಳಿಕೋಟಿ ಅವರ ಪುತ್ರ ಭರತ್ ಸಂದರ್ಶನದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವರ್ಷ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ತಮ್ಮ ನಾಟಕ ಕಂಪನಿ (ಗುರು ಖಾಸ್ಗತೇಶ್ವರ ನಾಟಕ ಸಂಘ) 1 ಕೋಟಿ ರೂ.ಗಳವರೆಗೆ ಸಂಪಾದನೆ ಮಾಡಿದೆ ಎಂದು ಭರತ್ ತಾಳಿಕೋಟಿ ಹೇಳಿಕೊಂಡಿದ್ದಾರೆ.
ಸಿನಿಮಾ ಮತ್ತು ಸೀರಿಯಲ್ಗಿಂತ ಹೆಚ್ಚು ಸಂಭಾವನೆ
ಟಾಕಿಂಗ್ ಪ್ಯಾರೋಟ್ಸ್ (Talking parrots kannada) ಯುಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿರುವ ಭರತ್ ತಾಳಿಕೋಟಿ, ವೃತ್ತಿ ಮತ್ತು ಖಾಸಗಿ ಬದುಕಿನ ಕುರಿತ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ರಂಗಭೂಮಿಯಲ್ಲಿ ಸಿನಿಮಾ ಮತ್ತು ಸೀರಿಯಲ್ಗಿಂತ ಹೆಚ್ಚು ಸಂಭಾವನೆ ಸಿಗುತ್ತದೆ. ಆದ್ರೆ ಸ್ಟಾರ್ ಕಲಾವಿದರಿಗೆ ಹೆಚ್ಚು ಸಮಯ ನಾಟಕಗಳಿಗೆ ನೀಡಲು ಆಗಲ್ಲ. ನಾವು ಮಾತ್ರ ತಿಂಗಳುಗಟ್ಟಲೇ ನಾಟಕ ಮಾಡುತ್ತಿರುತ್ತೇವೆ ಎಂದರು.
ತಂದೆ ರಾಜು ತಾಳಿಕೋಟಿ ಅವರು ಮುಸ್ಲಿಮರಾಗಿದ್ರೂ, ಭರತ್ ಅವರ ಅಪ್ಪಟ ರಾಘವೇಂದ್ರ ಸ್ವಾಮಿಗಳ ಭಕ್ತರು. ವರ್ಷಕ್ಕೆ ಎರಡೂ ಬಾರಿಯಾದ್ರೂ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆಯುತ್ತಾರೆ. ಮನೆಯಲ್ಲಿ ರಂಜಾನ್ ಮತ್ತು ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.
30 ದಿನಗಳವರೆಗೆ ಪ್ರದರ್ಶನ
ಉತ್ತರ ಕರ್ನಾಟಕ ಭಾಗದಲ್ಲಿ ನಾಟಕದ ಕ್ರೇಜ್ ಮಾತ್ರ ಇನ್ನು ಕಡಿಮೆಯಾಗಿಲ್ಲ. ಸಿನಿಮಾ ಟಿಕೆಟ್ 100 ರೂಪಾಯಿ ಇದ್ರೆ ನಮ್ಮ 150 ರೂಪಾಯಿ ಆಗಿರುತ್ತದೆ. ಕೆಲವೊಮ್ಮೆ ಸ್ಟಾರ್ ಕಲಾವಿದರು ಬಂದಾಗ ಟಿಕೆಟ್ ಬೆಲೆ ಹೆಚ್ಚು ಮಾಡಿರುತ್ತೇವೆ. ಇಂದು ಸಿನಿಮಾಗಳು ಒಂದು ವಾರ ಥಿಯೇಟರ್ನಲ್ಲಿ ಉಳಿಯೋದು ಕಷ್ಟದ ಪರಿಸ್ಥಿತಿ ಬಂದಿದೆ.
ನಮ್ಮ ನಾಟಕಗಳು ದಿನಕ್ಕೆ ನಾಲ್ಕು ಶೋ ಲೆಕ್ಕದಲ್ಲಿ 30 ದಿನಗಳವರೆಗೆ ಪ್ರದರ್ಶನ ಕಾಣುತ್ತವೆ. ಇತ್ತೀಚಿಗೆ ಹೆಚ್ಚಿನ ಕಲಾವಿದರು ಸಿನಿಮಾ ಮತ್ತು ಕಿರುತೆರೆಯತ್ತ ಆಕರ್ಷಿತರಾಗುತ್ತಿರುವ ಕಾರಣ ರಂಗಭೂಮಿಗೆ ಹೊಸಬರ ಆಗಮನ ಕಡಿಮೆಯಾಗಿದೆ. ರಂಗಭೂಮಿ ಹಿಂದೆಯೂ ಇತ್ತು, ಇಂದಿಗೂ ಇದೆ, ಮುಂದೆಯೂ ಇರುತ್ತದೆ ಎಂದು ಭರತ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.
30 ದಿನದಲ್ಲಿ 1 ಕೋಟಿಗೂ ಹೆಚ್ಚು ಸಂಪಾದನೆ
ಈ ಹಿಂದೆ ಬಾದಾಮಿ ಜಾತ್ರೆಯಲ್ಲಿ ಎರಡು ನಾಟಕ ಕಂಪನಿ ಬಂದ್ರೆ, ಏಳೆಂಟು ಸಿನಿಮಾ ಟೆಂಟ್ಗಳು ಬರುತ್ತಿದ್ದವು. ಇಂದು ಕಾಲ ಬದಲಾಗಿದ್ದು, ಸಿನಿಮಾ ಟೆಂಟ್ಗಳು ಹೋಗಿ 8 ರಿಂದ 10 ನಾಟಕ ಕಂಪನಿಗಳು ಕಾಣಸಿಗುತ್ತವೆ. ಈ ಬಾರಿ ಜಾತ್ರೆಯಲ್ಲಿ ಕಾಮಿಡಿ ಕಿಲಾಡಿ ಹರೀಶ್ ಹಿರಿಯೂರ, ಪ್ರಿಯಾ ಹಿರಿಯೂರು, ನಯನಾ, ಸೋದರ ದಾವಲ್ ಸೇರಿದಂತೆ ನಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು ನಾಟಕ ಮಾಡಿ ಯಶಸ್ವಿಯಾಗಿದ್ದೇವೆ. 30 ದಿನದಲ್ಲಿ 1 ಕೋಟಿಗೂ ಹೆಚ್ಚು ಸಂಪಾದನೆಯಾಗಿದ್ದು, ಇಡೀ ಕುಳಿತುಕೊಂಡು ತಿನ್ನಬಹುದು ಎಂದು ರಂಗಭೂಮಿ ಬಗ್ಗೆ ಭರತ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇದನ್ನೂ ಓದಿ: 'ನನ್ನ ರಾಮ ಯಾರು..' ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ನಟ ಕಿಶೋರ್ ಪೋಸ್ಟ್
ರಂಗಭೂಮಿಗೆ ಕಲಾವಿದರ ಕೊರತೆ
ಇಂದು ರಂಗಭೂಮಿ ಕಲಾವಿದರ ಕೊರತೆಯನ್ನು ಎದುರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಭರತ್ ತಾಳಿಕೋಟಿ, ನಮ್ಮ ತಂದೆಯವರಿಗೆ ನಾವು ಆರ್ಟಿಸ್ಟ್ ಆಗೋದು ಇಷ್ಟವಿರಲಿಲ್ಲ. ಈಗ ನಮಗೂ ಅದೇ ಯೋಚನೆಗಳಿವೆ. ಹೊಸ ಕಲಾವಿದರು ಸೀರಿಯಲ್, ಸಿನಿಮಾ ಅಂತ ಹೋಗ್ತಾರೆ. ಆದ್ರೆ ನಾವು ಅಲ್ಲಿಗಿಂತ ಹೆಚ್ಚು ಸಂಭಾವನೆಯನ್ನು ನೀಡುತ್ತೇವೆ. ಈಗಾಗಲೇ ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ನಯನಾ, ಹರೀಶ್ ಅಂತವರು ಬಂದಾಗ ವೀಕ್ಷಕರು ಜೋರಾಗಿ ಕೂಗಿ ಚಪ್ಪಾಳೆ ಮೂಲಕ ಮೆಚ್ಚುಗೆ ಸೂಚಿಸುತ್ತಾರೆ ಎಂದು ಭರತ್ ಹೇಳಿಕೊಂಡರು.
ಇದನ್ನೂ ಓದಿ: ಕುಚಿಕುಗಳಾದ ವಿಜಯ್ ಸೇತುಪತಿ-ರಿಷಬ್ ಶೆಟ್ಟಿ: ಆತ್ಮೀಯರನ್ನ ಸಾಮಾಜಿಕ ಜಾಲತಾಣದಿಂದ ಅನ್ಫಾಲೋ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

