- Home
- Entertainment
- CM Vijay-Sangeetha Divorce Case: ಸಿಎಂ ವಿಜಯ್ ಮೇಲೆ ಪತ್ನಿ ಸಂಗೀತಾ ಮಾಡಿರೋ ಗಂಭೀರ ಆರೋಪಗಳಿವು, ನಿಜವಾಗಿಯೂ ಶಾಕಿಂಗ್!
CM Vijay-Sangeetha Divorce Case: ಸಿಎಂ ವಿಜಯ್ ಮೇಲೆ ಪತ್ನಿ ಸಂಗೀತಾ ಮಾಡಿರೋ ಗಂಭೀರ ಆರೋಪಗಳಿವು, ನಿಜವಾಗಿಯೂ ಶಾಕಿಂಗ್!
ತಮ್ಮ 27 ವರ್ಷಗಳ ಸುದೀರ್ಘ ವೈವಾಹಿಕ ಜೀವನವನ್ನು ಕೊನೆಗಾಣಿಸಲು ನಿರ್ಧರಿಸಿರುವ ಸಂಗೀತಾ ಸ್ವರ್ಣಲಿಂಗಂ, ಪತಿ ಸಿಎಂ ವಿಜಯ್ ವಿರುದ್ಧ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರು ವಿಜಯ್ ವಿರುದ್ಧ ಮಾಡಿರೋ ಗಂಭೀರ ಆರೋಪಗಳೇನು ಗೊತ್ತಾ? ಈ ಸ್ಟೋರಿ ನೋಡಿ..

ತಮಿಳುನಾಡು ಸಿಎಂ ವಿಜಯ್-ಪತ್ನಿ ಸಂಗೀತಾ ಡಿವೋರ್ಸ್ ಕೇಸ್ ವಿಚಾರಣೆ ಆಗಸ್ಟ್ 7ಕ್ಕೆ ಮುಂದೂಡಿಕೆ!
ತಮಿಳುನಾಡು ಸಿಎಂ ವಿಜಯ್ ಪತ್ನಿ ಸಂಗೀತಾ ಹೊರಿಸಿದ ಗಂಭೀರ ಆರೋಪಗಳೇನು?
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಮತ್ತು ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಹಾಗೂ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ (Sangeetha Sornalingam) ವಿಚ್ಛೇದನ ಪ್ರಕರಣವು ಭಾರೀ ಸಂಚಲನ ಮೂಡಿಸಿದೆ. ಇಂದು, ಜೂನ್ 15, ಸೋಮವಾರದಂದು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದೆ.
ಏನಿದು ಪ್ರಕರಣ?
ತಮ್ಮ 27 ವರ್ಷಗಳ ಸುದೀರ್ಘ ವೈವಾಹಿಕ ಜೀವನವನ್ನು ಕೊನೆಗಾಣಿಸಲು ನಿರ್ಧರಿಸಿರುವ ಸಂಗೀತಾ ಸ್ವರ್ಣಲಿಂಗಂ, ವಿಜಯ್ ವಿರುದ್ಧ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಬೆಳಿಗ್ಗೆ 10:30ಕ್ಕೆ ವಿಚಾರಣೆ ಆರಂಭವಾದಾಗ, ನ್ಯಾಯಾಲಯದ ಆದೇಶದಂತೆ ವಿಜಯ್ ಮತ್ತು ಸಂಗೀತಾ ಇಬ್ಬರೂ ಖುದ್ದಾಗಿ ಹಾಜರಾಗಿದ್ದರು. ಇಬ್ಬರ ಉಪಸ್ಥಿತಿಯ ನಡುವೆಯೂ, ಯಾವುದೇ ಪ್ರಮುಖ ನಿರ್ಧಾರ ಅಥವಾ ರಾಜಿ ಸಂಧಾನ ಅಲ್ಲಿ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್ ಅಂತಿಮವಾಗಿ ವಿಚಾರಣೆಯನ್ನು ಮುಂದೂಡಿತು.
ಸಂಗೀತಾ ಹೊರಿಸಿರುವ ಗಂಭೀರ ಆರೋಪಗಳೇನು?
ಸಂಗೀತಾ ಅವರು 1954ರ ವಿಶೇಷ ವಿವಾಹ ಕಾಯ್ದೆಯಡಿ ವಿಜಯ್ ವಿರುದ್ಧ ವ್ಯಭಿಚಾರ (Adultery) ಮತ್ತು ಕ್ರೌರ್ಯದ ಆರೋಪಗಳನ್ನು ಮಾಡಿದ್ದಾರೆ. ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, '2021ರ ಏಪ್ರಿಲ್ನಲ್ಲಿ ವಿಜಯ್ ಅವರು ಒಬ್ಬ ಹೆಸರಿಸದ ನಟಿಯೊಂದಿಗೆ ಸಂಬಂಧ ಹೊಂದಿರುವುದು ತಮಗೆ ತಿಳಿಯಿತು' ಎಂದು ಸಂಗೀತಾ ಹೇಳಿದ್ದಾರೆ. ಅರ್ಜಿಯಲ್ಲಿ ನಟಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಅವರ ಸಹನಟಿ ತ್ರಿಶಾ ಕೃಷ್ಣನ್ ಅವರ ಹೆಸರನ್ನು ಈ ಪ್ರಕರಣಕ್ಕೆ ತಳುಕು ಹಾಕಲಾಗುತ್ತಿದೆ.
'ವಿಜಯ್ ಅವರು ಈ ಸಂಬಂಧವನ್ನು ಕಡಿದುಕೊಳ್ಳುವ ಭರವಸೆ ನೀಡಿದ್ದರೂ, ಸಾರ್ವಜನಿಕವಾಗಿ ಆ ನಟಿಯೊಂದಿಗೆ ಪ್ರವಾಸ ಕೈಗೊಳ್ಳುವುದು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದ್ದರು ಎಂದು ಸಂಗೀತಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಆ ನಟಿ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರೂ ವಿಜಯ್ ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ, ಇದು ತಮಗೆ ಮತ್ತು ತಮ್ಮ ಮಕ್ಕಳಿಗೆ ಸಾರ್ವಜನಿಕವಾಗಿ ಅವಮಾನ ಉಂಟುಮಾಡಿದೆ' ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಆರ್ಥಿಕ ನಿರ್ಬಂಧ ಮತ್ತು ಮಾನಸಿಕ ಹಿಂಸೆ:
'ಮದುವೆ ಎಂಬುದು ಕೇವಲ ಕಾಗದದ ಮೇಲೆ ಮಾತ್ರ ಉಳಿದಿದೆ' ಎಂದು ಹೇಳಿರುವ ಸಂಗೀತಾ, 'ವಿಜಯ್ ನನಗೆ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದಾರೆ ಮತ್ತು ಮನೆಯ ಸೌಲಭ್ಯಗಳನ್ನು ಕಡಿತಗೊಳಿಸಿದ್ದಾರೆ' ಎಂದು ದೂರಿದ್ದಾರೆ.
'ವಿಜಯ್ ಅವರ ರಾಜಕೀಯ ಮತ್ತು ಸಿನೆಮಾ ವೃತ್ತಿಜೀವನದ ನಡುವೆ ತಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ' ಎಂದೂ ಸಹ ಸಂಗೀತಾ ಅವರು ಆರೋಪಿಸಿದ್ದಾರೆ. ಜೊತೆಗೆ, 2024ರ ಆಗಸ್ಟ್ನಿಂದ 2025ರ ಫೆಬ್ರವರಿವರೆಗೆ ಸಂಬಂಧ ಸರಿಪಡಿಸಿಕೊಳ್ಳಲು ನಡೆದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ದಂಪತಿಯ ಹಿನ್ನೆಲೆ:
1996ರಲ್ಲಿ ಬಿಡುಗಡೆಯಾದ 'ಪೂವೆ ಉನಕ್ಕಾಗಿ' ಚಿತ್ರವನ್ನು ನೋಡಿ ವಿಜಯ್ ಅಭಿಮಾನಿಯಾಗಿದ್ದ ಲಂಡನ್ ಮೂಲದ ಸಂಗೀತಾ, ನಂತರ ವಿಜಯ್ ಅವರನ್ನು ಪ್ರೀತಿಸಿ 1999ರಲ್ಲಿ ವಿವಾಹವಾಗಿದ್ದರು. ಇವರಿಗೆ ಜೇಸನ್ ಸಂಜಯ್ ಎಂಬ ಪುತ್ರ ಮತ್ತು ದಿವ್ಯಾ ಸಾಶಾ ಎಂಬ ಪುತ್ರಿ ಇದ್ದಾರೆ. ದಶಕಗಳ ಕಾಲ ಮಾದರಿ ದಂಪತಿಯಾಗಿದ್ದ ಇವರ ನಡುವೆ ಈಗ ಕಾನೂನು ಸಮರ ಏರ್ಪಟ್ಟಿರುವುದು ಅಭಿಮಾನಿಗಳಿಗೆ ಅತೀವ ಬೇಸರ ತಂದಿದೆ.
ಇಂದು ನೀಡಬೇಕಿದ್ದ ಅಂತಿಮ ತೀರ್ಪು ಇದೀಗ ಮುಂದೂಡಿಕೆ ಆಗಿದ್ದು, ಆಗಸ್ಟ್ 7, 2026ರ ವಿಚಾರಣೆಯಲ್ಲಿ ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ. ಒಟ್ಟಿನಲ್ಲಿ, ನಟ, ತಮಿಳುನಾಡಿನ ಸಿಎಂ ವಿಜಯ್ ಜೋಸೆಫ್ ಅವರ ವೈಯಕ್ತಿಕ ಜೀವನ ಈ ಮೂಲಕ ಸುದ್ದಿಗೆ ಗ್ರಾಸವಾಗಿದ್ದು, ಮುಂದೇನು ಆಗಲಿದೆ ಎಂಬುದು ಸದ್ಯಕ್ಕೆ ಕುತೂಹಲ ಹುಟ್ಟಿಸಿರುವ ಸಂಗತಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

