Ind vs SL: ಲಂಕಾ ಎದುರಿನ ಕೊನೆಯ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಮಹತ್ತರ ಬದಲಾವಣೆ..?
ತಿರುವನಂತಪುರಂ(ಜ.15): ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯಕ್ಕೆ ಇಲ್ಲಿನ ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದು 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ, ಇದೀಗ ಔಪಚಾರಿಕ ಪಂದ್ಯದಲ್ಲಿ 3 ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಲಂಕಾ ಎದುರಿನ 3ನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.

1. ರೋಹಿತ್ ಶರ್ಮಾ: ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದ ರೋಹಿತ್ ಶರ್ಮಾ, ಎರಡನೇ ಪಂದ್ಯದಲ್ಲಿ ಮಂಕಾಗಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ಹಿಟ್ಮ್ಯಾನ್ ದೊಡ್ಡ ಮೊತ್ತ ಗಳಿಸಲು ಎದುರು ನೋಡುತ್ತಿದ್ದಾರೆ.
2. ಶುಭ್ಮನ್ ಗಿಲ್: ಟೀಂ ಇಂಡಿಯಾ ಮತ್ತೋರ್ವ ಆರಂಭಿಕ ಬ್ಯಾಟರ್ ಕೂಡಾ ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಗಿಲ್ ಚುರುಕಿನ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಗಿಲ್ ಕೂಡಾ ಕೊನೆಯ ಪಂದ್ಯದಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡಬೇಕಿದೆ.
3. ವಿರಾಟ್ ಕೊಹ್ಲಿ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಎರಡನೇ ಪಂದ್ಯದಲ್ಲಿ ಕೇವಲ 4 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಆದರೆ ಕೊಹ್ಲಿ, ಯಾವ ಕ್ಷಣದಲ್ಲಿ ಬೇಕಿದ್ದರೂ ಕಮ್ಬ್ಯಾಕ್ ಮಾಡುವ ಕ್ಷಮತೆ ಹೊಂದಿದ್ದಾರೆ.
4. ಸೂರ್ಯಕುಮಾರ್ ಯಾದವ್: ಕಳೆದೆರಡು ಪಂದ್ಯಗಳಿಂದ ಬೆಂಚ್ ಕಾಯಿಸಿರುವ ಪ್ರತಿಭಾನ್ವಿತ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ ಇಂದು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆಯುವ ಸಾಧ್ಯತೆಯಿದ್ದು, ಹೀಗಾದಲ್ಲಿ ಶ್ರೇಯಸ್ ಅಯ್ಯರ್, ವಿಶ್ರಾಂತಿ ಸಿಗುವ ಸಾಧ್ಯತೆಯಿದೆ.
5. ಕೆ ಎಲ್ ರಾಹುಲ್: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಾಹುಲ್, ಕಳೆದ ಪಂದ್ಯದಲ್ಲಿ ಸಮಯೋಚಿತ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ತಂಡ ಅವರಿಂದ ಮತ್ತೊಮ್ಮೆ ಅಂತಹದ್ದೇ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.
6. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ತಾರಾ ಆಲ್ರೌಂಡರ್ ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ಪವರ್ ಪ್ಲೇನಲ್ಲೇ ಬೌಲಿಂಗ್ ಮಾಡುವ ಚಾಣಾಕ್ಷತೆಯನ್ನು ಪಾಂಡ್ಯ ಕರಗತ ಮಾಡಿಕೊಂಡಿದ್ದಾರೆ.
7. ಅಕ್ಷರ್ ಪಟೇಲ್: ತಂಡದ ತಾರಾ ಆಲ್ರೌಂಡರ್ ಅಕ್ಷರ್ ಪಟೇಲ್, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚುತ್ತಿದ್ದು, ಜಡೇಜಾ ಸ್ಥಾನವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.
8. ವಾಷಿಂಗ್ಟನ್ ಸುಂದರ್: ಟೀಂ ಇಂಡಿಯಾದ ಪ್ರತಿಭಾನ್ವಿತ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ಆದರೆ ಇದೀಗ ಮೂರನೇ ಪಂದ್ಯದಲ್ಲಿ ವೇಗಿ ಶಮಿಗೆ ವಿಶ್ರಾಂತಿ ನೀಡಿ ಸುಂದರ್ಗೆ ಮಣೆ ಹಾಕು ಸಾಧ್ಯತೆಯಿದೆ.
9. ಆರ್ಶದೀಪ್ ಸಿಂಗ್: ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಮೊದಲೆರಡು ಪಂದ್ಯಗಳಲ್ಲಿ ಮಾರಕ ದಾಳಿ ನಡೆಸಿದ್ದರು. ಇದೀಗ ಬೆಂಚ್ ಸ್ಟ್ರೆಂಥ್ ಪರೀಕ್ಷಿಸುವ ದೃಷ್ಠಿಯಿಂದ ಆರ್ಶದೀಪ್ ಸಿಂಗ್ಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ.
10. ಉಮ್ರಾನ್ ಮಲಿಕ್: ಜಮ್ಮು ಕಾಶ್ಮೀರ ಮೂಲದ ಮಾರಕ ವೇಗಿ ಉಮ್ರಾನ್ ಮಲಿಕ್ ಕೊಂಚ ದುಬಾರಿಯಾಗುತ್ತಿದ್ದರೂ, ವಿಕೆಟ್ ಕಬಳಿಸಲು ಹಿಂದೆ ಬೀಳುತ್ತಿಲ್ಲ. ಕೊನೆಯ ಪಂದ್ಯದಲ್ಲು ಮಲಿಕ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
11. ಕುಲ್ದೀಪ್ ಯಾದವ್: ಕಳೆದ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ ಕುಲ್ದೀಪ್ ಯಾದವ್, ತಮ್ಮ ಮೊನಚಾದ ದಾಳಿಯ ಮೂಲಕ ಲಂಕಾ ಬ್ಯಾಟರ್ಗಳನ್ನು ಕಾಡಲು ಮತ್ತೊಮ್ಮೆ ಸಜ್ಜಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.