ಶ್ರೀಲಂಕಾ ವಿರುದ್ಧದ ಟೆಸ್ಟ್ನಲ್ಲಿ ರಿಷಭ್ ಪಂತ್ ಅವರ ಸ್ಟಂಪ್ ಮೈಕ್ ಕಾಮೆಂಟರಿ ಕೆಲವೊಮ್ಮೆ ಆಟಗಾರರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ. ಇದೇ ವೇಳೆ, ಪಂತ್ ಮತ್ತು ಸರ್ಫರಾಜ್ ಖಾನ್ ನಡುವಿನ ತಮಾಷೆಯ ಸಂಭಾಷಣೆ ವೈರಲ್ ಆಗಿದ್ದು, ಪಂತ್ ಬ್ಯಾಟಿಂಗ್ನಲ್ಲೂ ಮಿಂಚಿ ತಂಡದ ಗೆಲುವಿಗೆ ನೆರವಾಗಿದ್ದಾರೆ.
ಗಾಲೆ: ವಿಕೆಟ್ ಹಿಂದೆ ನಿಂತು ಕಾಮೆಂಟರಿ ಕೊಡುವುದರಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಸಖತ್ ಫೇಮಸ್. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ನಲ್ಲೂ ಅವರ ಮಾತುಗಳು ಸ್ಟಂಪ್ ಮೈಕ್ನಲ್ಲಿ ಕೇಳಿಬಂದಿದ್ದವು. ಪಂತ್ ಜೊತೆ ಬಹಳ ಕಾಲ ಆಡಿರುವ ಅಜಿಂಕ್ಯ ರಹಾನೆ, ಅವರ ಈ ಸ್ಟೈಲ್ ತಮಾಷೆಯಾಗಿದ್ದರೂ ಕೆಲವೊಮ್ಮೆ ಗಮನವನ್ನು ಬೇರೆಡೆ ಸೆಳೆಯುತ್ತದೆ ಎಂದು ಸೋನಿ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ.
ಸದ್ಯ ಕಾಮೆಂಟೇಟರ್ ಆಗಿರುವ ಮಾಜಿ ಭಾರತೀಯ ಆಟಗಾರ ಅಜಿಂಕ್ಯ ರಹಾನೆ, ''ಅವನು ಯಾವಾಗಲೂ ಹೀಗೆನೇ. ಸಖತ್ ತಮಾಷೆಯ ವ್ಯಕ್ತಿ. ಶ್ರೀಲಂಕಾ ಆಟಗಾರರಿಗೆ ಹಿಂದಿ ಅರ್ಥ ಆಗದೇ ಇರಬಹುದು, ಆದರೆ ಹೀಗೆ ಸತತವಾಗಿ ಮಾತಾಡ್ತಾ ಇದ್ರೆ ಬ್ಯಾಟ್ಸ್ಮನ್ಗೆ ಡಿಸ್ಟರ್ಬ್ ಆಗುತ್ತೆ. ಬ್ಯಾಟ್ಸ್ಮನ್ಗೆ ಮಾತ್ರ ಅಲ್ಲ, ನಮ್ಮ ಟೀಮ್ನ ಆಟಗಾರರಿಗೂ ಇದರಿಂದ ಕಷ್ಟ(ಕಿರಿಕಿರಿ) ಆಗುತ್ತೆ. ಸ್ಲಿಪ್ ಮತ್ತು ಶಾರ್ಟ್ ಲೆಗ್ನಲ್ಲಿ ಫೀಲ್ಡಿಂಗ್ ಮಾಡುವಾಗ ನಾವು ಹೆಚ್ಚು ಗಮನ ಕೊಡಬೇಕು. ಕೆಲವೊಮ್ಮೆ ಬೌಲರ್ಗಳಿಗೂ ಕೋಪ ಬರಬಹುದು. ಅಶ್ವಿನ್ ಮತ್ತು ಜಡೇಜಾ ಬೌಲಿಂಗ್ ಮಾಡುವಾಗ, ಬ್ಯಾಟ್ಸ್ಮನ್ ಗಮನವನ್ನು ಮಾತ್ರ ಡಿಸ್ಟರ್ಬ್ ಮಾಡು, ನಮ್ಮ ಆಟಗಾರರದ್ದಲ್ಲ ಅಂತಾ ಅವನಿಗೆ ಹೇಳ್ತೀವಿ,'' ಎಂದು ರಹಾನೆ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ಸ್ಟಂಪ್ ಮೈಕ್ನಲ್ಲಿ ನಗೆಗಡಲಲ್ಲಿ ತೇಲಿಸಿದ ಪಂತ್-ಸರ್ಫರಾಜ್
ಇದೇ ವೇಳೆ, ಟೆಸ್ಟ್ನ ಮೂರನೇ ದಿನ, ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಬದಲಿ ಫೀಲ್ಡರ್ ಸರ್ಫರಾಜ್ ಖಾನ್ ನಡುವೆ ನಡೆದ ಒಂದು ತಮಾಷೆಯ ಸಂಭಾಷಣೆ ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿ, ಅಭಿಮಾನಿಗಳನ್ನು ನಗುವಿನ ಅಲೆಯಲ್ಲಿ ತೇಲಿಸಿದೆ. ಮಾನವ್ ಸುತಾರ್ ನೇತೃತ್ವದ ಭಾರತೀಯ ಬೌಲರ್ಗಳು ಲಂಚ್ಗೂ ಮುನ್ನ ಶ್ರೀಲಂಕಾವನ್ನು 99 ರನ್ಗಳಿಗೆ 5 ವಿಕೆಟ್ ಕಳೆದುಕೊಳ್ಳುವಂತೆ ಮಾಡಿ, ಭಾರತಕ್ಕೆ ಮೇಲುಗೈ ಒದಗಿಸಿದ್ದರು. ಆದರೆ, ರವೀಂದ್ರ ಜಡೇಜಾ ಅಲ್ಲಿಯವರೆಗೂ ಬೌಲಿಂಗ್ ಮಾಡಿರಲಿಲ್ಲ. ಇದೇ ವಿಷಯ ಪಂತ್ ಮತ್ತು ಸರ್ಫರಾಜ್ ನಡುವೆ ಫನ್ನಿ ಮಾತುಕತೆಗೆ ಕಾರಣವಾಯಿತು. ಭಾರತದ ಬೌಲರ್ಗಳು ವಿಕೆಟ್ಗಳನ್ನು ಹಂಚಿಕೊಳ್ಳುತ್ತಾರೆ, ಹಾಗಾಗಿ ತಾಳ್ಮೆಯಿಂದ ಇರು ಎಂದು ಸರ್ಫರಾಜ್ ಖಾನ್, ಜಡೇಜಾಗೆ ಹೇಳುತ್ತಿದ್ದುದು ಮೈಕ್ನಲ್ಲಿ ಸ್ಪಷ್ಟವಾಗಿ ಕೇಳಿಸಿದೆ.
ಇದಕ್ಕೆ ತಕ್ಷಣವೇ ಪಂತ್ ಕೂಡಾ ಎಂಟ್ರಿ ಕೊಟ್ಟರು. ಜಡೇಜಾರ ಫೇಮಸ್ 'ಕತ್ತಿ ಬೀಸೋ' ಸೆಲೆಬ್ರೇಷನ್ ಬಗ್ಗೆ ನೆನಪಿಸಿ, ಎಲ್ಲರೂ ಒಟ್ಟಿಗೆ ಆ ಟ್ರೇಡ್ಮಾರ್ಕ್ ಆ್ಯಕ್ಷನ್ ಮಾಡಿ ಸಂಭ್ರಮಿಸೋಣ ಅಂತಾ ಪಂತ್ ತಮಾಷೆಯಾಗಿ ಹೇಳಿದ್ರು.
ರಿಷಭ್, ಬೌಲರ್ಸ್ ಮಿಂಚು: ಗೆಲುವಿನತ್ತ ಟೀಂ ಇಂಡಿಯಾ
ಗಾಲೆ: ರಿಷಭ್ ಪಂತ್ ಮಿಂಚಿನ ಆಟ, ಬಳಿಕ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದಾಗಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಜಯದ ನಿರೀಕ್ಷೆಯಲ್ಲಿದೆ. ಗೆಲುವಿಗೆ 372 ರನ್ ಗುರಿ ಪಡೆದಿರುವ ಲಂಕಾ ತಂಡ 4ನೇ ದಿನದಂತ್ಯಕ್ಕೆ 4 ವಿಕೆಟ್ ನಷ್ಟದಲ್ಲಿ 84 ರನ್ ಗಳಿಸಿದ್ದು, ಕೊನೆ ದಿನ ಇನ್ನೂ 288 ರನ್ ಗಳಿಸಬೇಕಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ 462 ರನ್ ಸಿಡಿಸಿದ್ದರೆ, ಲಂಕಾ 284 ರನ್ಗೆ ಆಲೌಟಾಗಿತ್ತು. 178 ರನ್ ಮುನ್ನಡೆಯೊಂದಿಗೆ ಮಂಗಳವಾರ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 48.5 ಓವರ್ಗಳಲ್ಲಿ 193 ರನ್ಗೆ ಆಲೌಟಾಯಿತು. ಜೈಸ್ವಾಲ್ ಸೊನ್ನೆಗೆ ಔಟಾದ ಬಳಿಕ 2ನೇ ವಿಕೆಟ್ಗೆ ಕೆ.ಎಲ್.ರಾಹುಲ್-ದೇವದತ್ ಪಡಿಕ್ಕಲ್ 65 ರನ್ ಸೇರಿಸಿದರು. ದೇವದತ್ 44, ರಾಹುಲ್ 35 ರನ್ಗೆ ಔಟಾದರು. ನಾಯಕ ಗಿಲ್(8) ಮತ್ತೆ ವಿಫಲರಾದರು. ಈ ವೇಳೆ ಸ್ಫೋಟಕ ಆಟದ ಮೂಲಕ ತಂಡಕ್ಕೆ ಆಸರೆಯಾದ ರಿಷಭ್ 69 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ನೊಂದಿಗೆ 66 ರನ್ ಸಿಡಿಸಿದರು. ಬೇರೆ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಅಸಿತಾ ಫೆರ್ನಾಂಡೊ 4, ಪ್ರಭಾತ್ 3 ವಿಕೆಟ್ ಕಿತ್ತರು.
ಆರಂಭಿಕ ಆಘಾತ:
ದೊಡ್ಡ ಗುರಿ ಬೆನ್ನತ್ತಲು ಇಳಿದ ಆತಿಥೇಯ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. 47 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ವರನ್ನು ತಂಡ ಕಳೆದುಕೊಂಡಿತು. ನಾಯಕ ಧನಂಜಯ ಡಿ ಸಿಲ್ವ(ಔಟಾಗದೆ 31), ಸೋನಲ್ ದಿನುಶಾ(ಔಟಾಗದೆ 25) ಕ್ರೀಸ್ನಲ್ಲಿದ್ದು, ಕೊನೆ ದಿನ ತಂಡವನ್ನು ಸೋಲಿನಿಂದ ಪಾರು ಮಾಡಲು ಹೋರಾಡಬೇಕಿದೆ.


