- Home
- Entertainment
- Cine World
- ರೂಪಾ ಅಯ್ಯರ್ 'ಆಜಾದ್ ಭಾರತ್' ಹೇಗಿದೆ? ಯಾಕೆ ಈ ಸಿನಿಮಾ ನೋಡಬೇಕು? ಇಲ್ಲಿದೆ ಮುಖ್ಯ ಕಾರಣ..
ರೂಪಾ ಅಯ್ಯರ್ 'ಆಜಾದ್ ಭಾರತ್' ಹೇಗಿದೆ? ಯಾಕೆ ಈ ಸಿನಿಮಾ ನೋಡಬೇಕು? ಇಲ್ಲಿದೆ ಮುಖ್ಯ ಕಾರಣ..
ರೂಪಾ ಅಯ್ಯರ್ ನಿರ್ದೇಶನದ ಆಜಾದ್ ಭಾರತ್ನಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಸುಭಾಷ್ ಚಂದ್ರ ಭೋಸ್ ಪಾತ್ರದಲ್ಲಿ ನಟಿಸಿದ್ದಾರೆ. ಸ್ವತಃ ರೂಪಾ ಅಯ್ಯರ್ ನೀರಾ ಆರ್ಯ ಪಾತ್ರ ಮಾಡಿದ್ದಾರೆ. ಈ ಸಿನಿಮಾಗೆ ನೀರಾ ಆರ್ಯ' ಎಂದು ಹೆಸರಿಡಲಾಗಿತ್ತು. ಬಳಿಕ ಹೆಸರನ್ನು 'ಆಜಾದ್ ಭಾರತ್' ಎಂದು ಬದಲಾಯಿಸಲಾಗಿದೆ.

ರೂಪಾ ಅಯ್ಯರ್ (Roopa Iyer) ಕನ್ನಡದ ನಟಿ, ನಿರ್ದೇಶಕಿ, ನಿರ್ಮಾಪಕಿ ಹಾಗೂ ಆಧ್ಯಾತ್ಮ ಚಿಂತಕಿ. ಇಂದು (02 ಜನವರಿ 2026) ರೂಪಾ ಅಯ್ಯರ್ ನಿರ್ದೇಶನ, ನಿರ್ಮಾಣ ಹಾಗೂ ನಟನೆಯ 'ಆಜಾದ್ ಭಾರತ್' ಸಿನಿಮಾ () ಕರ್ನಾಟಕ ಸೇರಿದಂತೆ ಇಡೀ ಭಾರತದಲ್ಲಿ ಬಿಡುಗಡೆ ಆಗಿದೆ. ಮೊನ್ನೆ ಹಾಗೂ ನಿನ್ನೆ ಈ ಚಿತ್ರದ ಸ್ಪೆಷಲ್ ಶೋವನ್ನು ಒರಾಯಿನ್ ಮಾಲ್ನಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ಸಿನಿಮಾ ನೋಡಿದವರು ಏನಂತಿದಾರೆ? ಇಲ್ಲಿದೆ ನೋಡಿ ಹಲವರ ಅನಿಸಿಕೆ..
ಹೌದು, ರೂಪಾ ಅಯ್ಯರ್ ಅವರು ಈ ಮೊದಲು 'ಚಂದ್ರ' ಸೇರಿದಂತೆ ಹಲವು ಸಿನಿಮಾಗಳು, ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡ ನಿರ್ದೇಶಕಿ. ಇದೀಗ ಆಜಾದ್ ಭಾರತ್ ಎಂಬ ಸಿನಿಮಾವನ್ನು ನಿರ್ದೇಶನ, ನಟನೆ ಹಾಗೂ ನಿರ್ಮಾಣದಲ್ಲೂ ಪಾಲುದಾರಿಕೆ ಮಾಡಿ ಇಂದು ತೆರೆಗೆ ತಂದಿದ್ದಾರೆ. ಅವರ ಪತಿ ಗೌತಮ್ ಶ್ರೀವತ್ಸ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರಿಗೆ ಸಂಬಂಧಪಟ್ಟ ಕಥೆಯ ಭಾಗವಾಗಿದ್ದು, ಈ ಚಿತ್ರವನ್ನು ಅವರಿಗೆ ಅರ್ಪಿಸಲಾಗಿದೆ ಎಂದಿದ್ದಾರೆ ರೂಪಾ ಅಯ್ಯರ್.
ರೂಪಾ ಅಯ್ಯರ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಸುಭಾಷ್ ಚಂದ್ರ ಭೋಸ್ ಪಾತ್ರದಲ್ಲಿ ನಟಿಸಿದ್ದಾರೆ. ಸ್ವತಃ ರೂಪಾ ಅಯ್ಯರ್ ನೀರಾ ಆರ್ಯ ಪಾತ್ರ ಮಾಡಿದ್ದಾರೆ. ಸಿನಿಮಾ ಶುರುವಾದಾಗ ಈ ಸಿನಿಮಾಗೆ ನೀರಾ ಆರ್ಯ' ಎಂದು ಹೆಸರಿಡಲಾಗಿತ್ತು. ಆದರೆ, ಆ ಬಳಿಕ ಹೆಸರನ್ನು 'ಆಜಾದ್ ಭಾರತ್' ಎಂದು ಬದಲಾಯಿಸಲಾಗಿದೆ. ಈ ಚಿತ್ರವು ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿಯ ಕಥೆಯನ್ನು ಹೇಳಿದೆ. ಅದರಲ್ಲಿ ಮಹಿಳಾ ಆರ್ಮಿಯ ಮುಖ್ಯಸ್ಥೆ ರಾಣಿ 'ನೀರಾ ಆರ್ಯ' ಕಥೆ ಮುಖ್ಯವಾಗಿದೆ.
ನೀರಾ ಆರ್ಯ ಪಾತ್ರದಲ್ಲಿ ರೂಪಾ ಅಯ್ಯರ್
ಆಜಾದ್ ಭಾರತ್ ಚಿತ್ರದ ಮುಖ್ಯ ಪಾತ್ರವಾದ 'ನೀರಾ ಆರ್ಯ' ಪಾತ್ರಧಾರಿಯಾಗಿ ಸ್ವತಃ ರೂಪಾ ಅಯ್ಯರ್ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ-ನಿರ್ದೇಶಕಿ ರೂಪಾ ಅಯ್ಯರ್ ಹೀಗೆ ಹೇಳಿದ್ದಾರೆ- "ನಮ್ಮ ಈ ಚಿತ್ರದಲ್ಲಿ ಮೂರು ಮುಖ್ಯ ಪಾತ್ರಗಳಿದ್ದು, ನೀರಾ ಆರ್ಯ ಪಾತ್ರವನ್ನು ನಾನು ನಿಭಾಯಿಸಿದ್ದೇನೆ. ದುರ್ಗಾ ಪಾತ್ರದಲ್ಲಿ ಹಿತಾ ಚಂದ್ರಶೇಖರ್ ನಟಿಸಿದ್ದಾರೆ. ಸರಸ್ವತಿ ರಾಜಾಮಣಿ ಎಂಬ ಪಾತ್ರದಲ್ಲಿ ಜನಪ್ರಿಯ ನಟಿಯೊಬ್ಬರು ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಸುರೇಶ್ ಒಬೆರಾಯ್, ಬಿರಾದಾರ್, ಸುಚೇಂದ್ರ ಪ್ರಸಾದ್, ಜೀ ವಾಹಿನಿಯ ಮುಖ್ಯಸ್ಥರಾದ ಸುಭಾಷ್ ಚಂದ್ರ ಮುಂತಾದವರು ಆಜಾದ್ ಭಾರತ್ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಸಂಗೀತ ನಿರ್ದೇಶನವನ್ನು ನನ್ನ ಪತಿ ಗೌತಮ್ ಶ್ರೀವತ್ಸ ನೀಡಿದ್ದಾರೆ. ಶ್ರಿ ಕ್ರೇಜಿ ಮೈಂಡ್ಸ್ ಅವರ ಸಂಕಲನವಿರುವ ಈ ಚಿತ್ರವನ್ನು ನಾನು, ಜಯಗೋಪಾಲ್ ಹಾಗೂ ರಾಜೇಂದ್ರ ರಾಜನ್ ನಿರ್ಮಿಸಿದ್ದೇವೆ" ಎಂದಿದ್ದಾರೆ ರೂಪಾ ಅಯ್ಯರ್.
ನೇತಾಜಿ ಕುಟುಂಬವನ್ನು ನಾನು ಭೇಟಿಯಾಗಿದ್ದೇನೆ
"ಪ್ರತಿ ವರ್ಷ ಜನವರಿ ತಿಂಗಳನ್ನು ಸುಭಾಷ್ ಚಂದ್ರ ಬೋಸ್ ಅವರ ಜನ್ಮ ಮಾಸ ಎಂದು ಆಚರಿಸಲಾಗುತ್ತದೆ. ಹಾಗಾಗಿ ಜನವರಿ 2ರಂದು ಈ ಚಿತ್ರವನ್ನು ತೆರೆಗೆ ತಂದಿದ್ದೇವೆ. ಈ ಚಿತ್ರವನ್ನು ನಿರ್ಮಾಣ ಮಾಡುವ ಮೊದಲು ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದವರನ್ನು ಸಂಪರ್ಕ ಮಾಡಿ ಅನೇಕ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಚಿತ್ರ ತೋರಿಸುವ ಆಲೋಚನೆ ಇದೆ. 2026ರ ಜನವರಿ 2 ರಂದು ಜೀ ಸ್ಟುಡಿಯೋಸ್ ಮೂಲಕ ಈ ಚಿತ್ರ ಬಿಡುಗಡೆಯಾಗಿದೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ" ಎಂದಿದ್ದಾರೆ ರೂಪಾ ಅಯ್ಯರ್.
ಇದೊಂದು ದೇಶಪ್ರೇಮ ಸಾರುವ ಚಿತ್ರ
'ಆಜಾದ್ ಭಾರತ್ ಚಿತ್ರದ ಮೂಲಕ ನಾನು (ರೂಪಾ ಅಯ್ಯರ್) ಅವರು ಒಂದು ಕಾಲದಲ್ಲಿ ರಹಸ್ಯವಾಗಿಟ್ಟ, ಯಾರಿಗೂ ಹೇಳದೇ ಹೋದ ಘಟನೆಗಳನ್ನು ತೆರೆಯ ಮೇಲೆ ತಂದಿದ್ದೇನೆ. ಇತಿಹಾಸದ ಅದೆಷ್ಟೋ ಘಟನೆಗಳು, ಕಥೆಗಳನ್ನು ಇತಿಹಾಸದ ಪುಟದಲ್ಲಿ ಉದ್ದೇಶಪೂರ್ವಕವಾಗಿ ಸೇರಿಸಿಲ್ಲ. ಅಂತಹ ಕಥೆಗಳು ಜನರನ್ನು ತಲುಪಲಿ ಎಂಬ ಸದುದ್ದೇಶದಿಂದ ಈ ಸಿನಿಮಾ ಮಾಡಿದ್ದೇನೆ. ಇಂದು ಸ್ವಾಂತಂತ್ರ್ಯ ಎಂಬುದು ಸ್ವೇಚ್ಛಾಚಾರದ ಎಂಬಂತೆ ಬದಲಾಗಿದೆ ಎನ್ನಬಹುದು.
ಅಜಾದ್ ಭಾರತ್ ಹಾಡಿಗೆ ಧ್ವನಿಯಾಗಿದ್ದಾರೆ ಸಿಎಂ ಪತ್ನಿ
ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಒಂದು ಹಾಡನ್ನು ಹಾಡಿದ್ದಾರೆ. ಬಾಲಿವುಡ್ನ ಯಶ್ ರಾಜ್ ಸ್ಟುಡಿಯೋದಲ್ಲಿ ರೀ-ರೆಕಾರ್ಡಿಂಗ್ ಕೆಲಸ ಮಾಡಿರುವುದು ವಿಶೇಷ. ಗೌತಮ್ ಶ್ರೀವತ್ಸ ನೀಡಿರುವ ಹಿನ್ನೆಲೆ ಸಂಗೀತ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ರೂಪಾ ಅಯ್ಯರ್ ಬಗ್ಗೆ:-
ಈ ಆಜಾದ್ ಭಾರತ್ ಸಿನಿಮಾದ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ರೂಪಾ ಅಯ್ಯರ್ ಅವರು ಈ ಚಿತ್ರದಲ್ಲಿ ನಟಿಸಿಲ್ಲ, ತುಂಬಾ ಶ್ರದ್ಧೆಯಿಂದ ಪಾತ್ರದಲ್ಲಿ ಜೀವಿಸಿದ್ದಾರೆ. ಉಳಿದ ಪಾತ್ರವರ್ಗಗಳ ಬಗ್ಗೆ ಹೇಳಬೇಕು ಎಂದರೆ- ಯಾವ ಪಾತ್ರಕ್ಕೆ ಯಾವ ಕಲಾವಿದರಿಂದ ಯಾವ ರೀತಿಯ ಅಭಿನಯವನ್ನು ತೆಗೆಸಬೇಕೋ ಅದನ್ನು ಚಿತ್ರದ ನಿರ್ದೇಶಕಿಯಾಗಿ ರೂಪಾ ಅಯ್ಯರ್ ಅವರು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಂಗೀತ, ಸಂಕಲನ ಹಾಗೂ ತಾಂತ್ರಿಕತೆ ಚಿತ್ರಕ್ಕೆ ಪೂರಕವಾಗಿದೆ.
ಈ ಚಿತ್ರದ ಪ್ರಾಮುಖ್ಯತೆ:- 'ಸ್ವಾತಂತ್ರ್ಯ ಪೂರ್ವದಲ್ಲಿ ಅಂತಲ್ಲ, ಈಗಲೂ ಕೂಡ ನಾವು ಜಾತಿ-ಧರ್ಮ-ರಾಜಕೀಯ ಅಂತ ಹೊಡೆದಾಡಿಕೊಂಡು ನಮ್ಮ ದೇಶದಲ್ಲಿ ನಾವು ಒಗ್ಗಟ್ಟು ಮರೆತು ದೇಶಭಕ್ತಿ ಮರೆತರೆ, ಅಮೆರಿಕಾ ಹಾಗೂ ಚೀನಾದಂತಹ ದೇಶಗಳು ನಮ್ಮ ಮೇಲೆ ಆಕ್ರಮಣ ಮಾಡಿ ಅಂದು ಇಂಗ್ಲೆಂಡ್ ಮಾಡಿದ್ದ ಕೆಲಸವನ್ನು ಇಂದು ಮಾಡಬಹುದು.
ನಾವು ಮತ್ತೆ ನಮ್ಮ ಸ್ಯಾತಂತ್ರಕ್ಕಾಗಿ ಹೋರಾಟ ಮಾಡುವ ಸಮಯ ಬರಬಹುದು. ಆದ್ದರಿಂದ ಇಂತಹ ನೈಜ ಘಟನೆಯಾಧಾರಿತ ಸಿನಿಮಾಗಳು ಹೆಚ್ಚುಹೆಚ್ಚು ಬರಬೇಕು, ಇಂದಿನ ಯುವಜನತೆಗೆ ಈ ಬಗ್ಗೆ ಹೆಚ್ಚುಹೆಚ್ಚು ಈ ಬಗ್ಗೆ ಮಾಹಿತಿ ತಲುಪಬೇಕು. ಈ ಕಾರಣಕ್ಕೆ ಈ ಆಜಾದ್ ಭಾರತ್ ಸಿನಿಮಾವನ್ನು ಹೆಚ್ಚು ಜನರು ನೋಡಬೇಕು' ಎಂದಿದ್ದಾರೆ ರೂಪಾ ಅಯ್ಯರ್.
'ಇಂತಹ ದೇಶಭಕ್ತಿಯನ್ನು ಸಾರುವ ಸಿನಿಮಾವನ್ನು ಹೆಚ್ಚುಹೆಚ್ಚು ಜನರು ನೋಡುವ ಮೂಲಕ ಜನರಲ್ಲಿ ದೇಶಭಕ್ತಿ ಹೆಚ್ಚಿಸುವ ಕೆಲಸ ಆಗಬೇಕಾಗಿದೆ. ಆದರೆ, ರೂಪಾ ಅಯ್ಯರ್ ಅವರಂತಹ ದೇಶಭಕ್ತರು ಮಾಡುತ್ತಿರುವ ಇಂತಹ ಸಿನಿಮಾಗಳಿಗೆ ಸೂಕ್ತ ಪ್ರತಿಕ್ರಿಯೆ ಸಿಗುತ್ತಿದೆಯೇ?' ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಬಹುದು..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

